Sunday, 27 September 2020

ಶರದ ಋತುವಿನ ಶನಿವಾರ

ಶುಕ್ರವಾರವಿಡೀ ಬಿಟ್ಟು ಬಿಡದೆ ಸುರಿದಿದ್ದ ಮಳೆ ವಾರಾಂತ್ಯದಲ್ಲಿ  ಸ್ವಲ್ಪ ಬಿಡುವು ನೀಡಿತ್ತು. ಎರಡು ವಾರದಿಂದಲೇ ಸಣ್ಣ ಚಾರಣವೊಂದನ್ನು ಮಾಡೋಣವೆಂದು ತಯಾರಿ ಮಾಡಿಕೊಳ್ಳುತ್ತಿದ್ದ ನಮಗೆ  ಮಳೆರಾಯನ ಗೈರುಹಾಜರಿ ಹುರುಪನ್ನೇ ನೀಡಿತ್ತು. ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ, ಮುಂಬರಲಿರುವ ಚಳಿಗಾಲದ ಆಗಮನವನ್ನು ಸ್ವಾಗತಿಸಲೋ ಎಂಬಂತೆ ಎಲ್ಲ ಗಿಡಮರಗಳು ಬಣ್ಣ ಬಣ್ಣದ ಎಲೆಗಳನ್ನು ಹೊತ್ತು ನಿಂತಿರುತ್ತವೆ. ಆ ಬಣ್ಣಗಳ ಜಾತ್ರೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಕಾಡು ದಾರಿಯಲ್ಲಿ ನಡೆಯುತ್ತಾ, ಆ ಹಸಿರ ಸಿರಿಯ ನಡುವೆ ಕಣ್ಣರಳಿಸುತ್ತಾ, ಗೆಳೆಯರ ಮಾತುಗಳಿಗೆ ಕಿವಿಯಾಗುತ್ತಾ, ಎಲ್ಲೋ ಕುಳಿತು ತಣ್ಣಗೆ ಬೀಸೋ ಗಾಳಿಯ ನಡುವೆ ಕಾಫಿ ಕುಡಿಯುತ್ತಾ ಕಳೆಯುವ ಸಮಯವಿದೆಯಲ್ಲ ಅದಂತೂ ಸ್ವರ್ಗ ಸದೃಶ. ಇಂತಹ ಅನುಭವಕ್ಕೆ ಸಾಕ್ಷಿಯಾಗಲೆಂದೇ  ಶ್ರೀಗಂಧ ಕನ್ನಡ ಬಳಗದ ವತಿಯಿಂದ ಡೆಲ್ಶ್ಯುನ್ ಸರೋವರದ ಸುತ್ತ ಚಾರಣ ಮಾಡೋಣವೆಂದು ನಿರ್ಧರಿಸಿದ್ದೆವು. 

ಪಚ್ಚೆ ಪರ್ಣಶೋಭಿತ!!

ಶನಿವಾರ ( ೨೬-೦೯-೨೦೨೦) ಮಧ್ಯಾಹ್ನ ೧:೩೦ ರ  ಸುಮಾರಿಗೆ ಹದಿನೈದು ಜನರ ನಮ್ಮ ಕನ್ನಡಿಗರ ಗುಂಪೊಂದು ಸ್ಪೊನ್ ತೊರ್ಯೆತ್ ನಿಂದ ಹೊರಟು ಅನಾಲಿಸ್ ವಾಗೇನ್ ತಲುಪುವ ಕಾಡು ದಾರಿಯಲ್ಲಿದ್ದೆವು. ಕೆಲ ದಿನಗಳಿಂದ ಆಗಾಗ ಸುರಿಯುತ್ತಿದ್ದ ಮಳೆ ದಾರಿಯಲ್ಲೆಲ್ಲ ಹಸಿರ ಹರಡಿತ್ತು. ನೀರಿನ ತೊರಗಳು ಜುಳುಜುಳು ನಿನಾದವನ್ನು ನುಡಿಸುತ್ತಾ ಹರಿಯುತ್ತಿದ್ದವು. ಶರದೃತುರಾಜ ಆಗಲೇ ಬಂದಾಗಿದೆ ಎಂಬುದನ್ನು ಕೂಗಿ ಹೇಳುವಂತೆ ಎಲೆಗಳೆಲ್ಲ ಹಳದಿ, ಕೇಸರಿ ಬಣ್ಣಕ್ಕೆ ತಿರುಗಿದ್ದವು. ಕೆಂಪು, ಅರಿಶಿಣ, ಕೆನೆ ಹಾಲು ಬಣ್ಣದ ಅಣಬೆಗಳು ಅಲ್ಲಲ್ಲಿ ತಲೆಯೆತ್ತಿ ನಿಂತಿದ್ದವು. ಸಣ್ಣ ಸಣ್ಣ ಕೆರೆಗಳಲ್ಲಿ ನೀರ ಹಕ್ಕಿಗಳು ಈಜಾಡುತ್ತಿದ್ದವು. 

ಹೀಗಿತ್ತು ನಾವು ನಡೆದ ದಾರಿ...


ವರ್ಣವೈಭವ !

ನೋಡಲು ವರ್ಣರಂಜಿತ ವಾಗಿದ್ದರೂ ವಿಷಪೂರಿತ ಅಣಬೆ 

ಮುಂದೆ  ಗಾಳಿಯ ಹೊಡೆತಕ್ಕೆ ಮರವೊಂದು  ಬುಡ ಮೇಲಾಗಿ ಬಿದ್ದಿತ್ತು. ಅದರ ಪಕ್ಕದಲ್ಲಿ ನಿಂತು ಎಲ್ಲರೂ ಫೋಟೋ ತೆಗೆಸಿಕೊಂಡೆವು. ದಾರಿಯಲ್ಲಿ ಸೈಕಲ್ ಸವಾರರು, ತಮ್ಮ ನಾಯಿಗಳೊಂದಿಗೆ ವಿಹಾರಕ್ಕೆ ಬಂದವರು, ಚಿಕ್ಕ ಮಕ್ಕಳನ್ನು ಕರೆತಂದ ತಂದೆ ತಾಯಿಗಳು, ಬೆವರಿಳಿಸುತ್ತಾ, ಏದುಸಿರು ಬಿಡುತ್ತಾ ಓಡುತ್ತಿದ್ದ ಓಟಗಾರರು ಎದುರಾದರು. ನಾವು ಅವರನ್ನೆಲ್ಲ ದಾಟಿಕೊಂಡು ನಿಧಾನವಾಗಿ ಲಿಲ್ಲಾ ಡೆಲ್ಶ್ಯುನ್  ಸರೋವರವನ್ನು ತಲುಪಿದೆವು. ಆ ತಿಳಿನೀರ ಕೆರೆಯ ದಡದಲ್ಲಿ ಕುಳಿತು ಚಂದನ್ ತಂದಿದ್ದ ಆಪಲ್ ಕೇಕ್ ಅನ್ನು ಬಾಯಿ ಚಪ್ಪರಿಸಿಕೊಂಡು ತಿಂದೆವು. ಆ ನೀರವ ವಾತಾವರಣದಲ್ಲಿ ಅರ್ಪಿತಾಳ ಸೊಗಸಾದ ಗಾಯನ ಕಾಫಿಗೆ ಬೆರೆಸಿದ ಸಕ್ಕರೆಯಷ್ಟೇ ಹಿತವಾಗಿತ್ತು. ದೂರದಲ್ಲೆಲ್ಲೋ ಹಾಯಿದೋಣಿಯ ಮೇಲೆ ಕುಳಿತಿದ್ದವರನ್ನು ಕಂಡ ನನ್ನ ಮನ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎಂಬ ಹಾಡನ್ನು ಗುನುಗಿತ್ತು.

ನೆಲಕ್ಕಚ್ಚಿದ ಮರದ ಎದುರು ನಾವು!

ಹೊಟ್ಟೆ ಪಾಡು -ಹಾಡು

ಸಂಜೆ ಸಮೀಪಿಸುತ್ತಿತ್ತು. ನಾವು ನಮ್ಮ ಹೊಟ್ಟೆ ತುಂಬಿಸಿಕೊಂಡು ನಿಧಾನವಾಗಿ ಚಾರಣದ ಕೊನೆಯ ಹಂತವನ್ನು ಕ್ರಮಿಸಿದೆವು. ಕೊನೆಯಲ್ಲಿ ಎಲ್ಲರೂ ಒಂದು ಸುಂದರ ಸಂಜೆಯನ್ನು ಜೊತೆಯಾಗಿ ಕಳೆದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಇಂತಹ ಯೋಜನೆಗಳಿಗೆ ಮುಂದೆಯೂ ಜೊತೆಯಾಗುವ ಇಚ್ಛೆ ಹಲವರಿಗಿತ್ತು. ಕೊನೆಯಬಾರಿ ನಮ್ಮ ಗುಂಪಿನ ಛಾಯಾಚಿತ್ರವೊಂದನ್ನು ತೆಗೆದುಕೊಂಡು ಮನೆಯ ದಾರಿ ಹಿಡಿದೆವು. ಶನಿವಾರದ ಅಪರಾಹ್ನವೊಂದನ್ನು ಖುಷಿ ಖುಷಿಯಾಗಿ ಕಳೆದ ಸಾರ್ಥಕತೆಯ ಭಾವ ನನ್ನ ಮನ ತುಂಬಿತ್ತು. 

Sunday, 9 August 2020

ಸ್ಲಾಟ್ ಸ್ಕೂಗೆನ್ ನಲ್ಲಿ ಪಕ್ಷಿವೀಕ್ಷಣೆ

ಆಗಸ್ಟ್ ತಿಂಗಳ ಎರಡನೇ ಶನಿವಾರ. ಶ್ರೀಗಂಧ ಕನ್ನಡ ಬಳಗದ ವತಿಯಿಂದ ಸ್ಲಾಟ್ ಸ್ಕೂಗೆನ್ ನಲ್ಲಿ ಪಕ್ಷಿವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾವು ಹತ್ತು ಗಂಟೆಗೆ ಸರಿಯಾಗಿ ಲಿನ್ನೆ ಪ್ಲಾಟ್ ಸೆನ್  ಬಳಿ ಇದ್ದ ಗಾಲ್ಫ್ ಅಂಗಣದ ಬಳಿ ಭೇಟಿಯಾಗಿ  ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಬಿಸಿಲು ಸ್ವಲ್ಪ ಹೆಚ್ಚೇ ಎನ್ನುವಂತಿತ್ತು. 
    
ಗ್ರೇ ವಾಗ್ ಟೈಲ್ ( ಚಿತ್ರ ಕೃಪೆ : ದೀಪಕ್ ವಸ್ತಾರೆ )

ಮೊದಲಿಗೆ ಹತ್ತಿರದಲ್ಲೇ ಇದ್ದ ಫಾಗೆಲ್ ಡಾಮೆನ್ ಎನ್ನುವ ಸಣ್ಣ ಕೊಳದಲ್ಲಿ ಮಲ್ಲಾರ್ಡ್, ಗದ್ವಾಲ್ , ಗ್ರೇ ವಾಗ್ ಟೈಲ್ ಮುಂತಾದ ಹಕ್ಕಿಗಳನ್ನು ನೋಡಿದೆವು. ಜೊತೆಗಿದ್ದ ಚಿಕ್ಕ ಮಕ್ಕಳು ಬಹಳ ಆಸಕ್ತಿಯಿಂದ ಹಕ್ಕಿಗಳನ್ನು ಗಮನಿಸುತ್ತಾ  ಹೆಸರುಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದದ್ದು ನಮ್ಮಲ್ಲೂ ಉತ್ಸಾಹ ಮೂಡಿಸಿತ್ತು. ಅಲ್ಲಿಂದ ಮುಂದೆ ನಮ್ಮ ಹದಿನಾಲ್ಕು ಜನರ ಗುಂಪು ನಡೆಯುತ್ತಾ ನಿಧಾನವಾಗಿ ಸ್ಟೂರ ಡಾಮೆನ್ ಕಡೆ ಹೊರಟೆವು. ದಾರಿಯಲ್ಲಿ ಜಾಕ್ ಡಾ, ವುಡ್ ಪಿಜನ್ ಗಳು ಕಂಡವು. ಸ್ಟೂರ ಡಾಮೆನ್ ಬಳಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿದ್ದ  ಕೆನಡಾ ಗೂಸ್, ಮೂರರಿಂದ ನಾಲ್ಕು ಕಾಮನ್ ಮೂರ್ ಹೆನ್ ಗಳು , ಹಸಿರ ನೆಲದ ಮೇಲೆಲ್ಲಾ ಹರಡಿದ್ದ ಬಿಳಿಯ ಸೀ ಗಲ್ಸ್ ಗಳು ಕಂಡು ಬಂದವು. ತನ್ನ ಕಾಲಿನಲ್ಲಿ ಏನನ್ನೋ ಬಲವಾಗಿ ಹಿಡಿದುಕೊಂಡು  ಹನಿ ಬಝರ್ಡ್ ಹಕ್ಕಿಯೊಂದು ತೀರಾ ಸಮೀಪದಲ್ಲೇ ಹಾರಿಹೋಯಿತು. 

ಲೆಸ್ಸರ್ ಬ್ಲಾಕ್ ಬ್ಯಾಕ್ಡ್ ಗಲ್ (ಚಿತ್ರ ಕೃಪೆ : ಅನೂಪ್ ಕೆ ಎಸ್ )

ಓರಿಯೆಂಟಲ್ ಹನಿ ಬಝರ್ಡ್ (ಚಿತ್ರ ಕೃಪೆ : ಅನೂಪ್ ಕೆ ಎಸ್ )

೧೧ ಗಂಟೆಯ ಸುಮಾರಿಗೆ ಎಲ್ಲರಿಗೂ ಹಸಿವಾಗಿದ್ದುದರಿಂದ  ಅಲ್ಲೇ ಮರಗಳ ನಡುವೆ ಕುಳಿತು ತಂದ ತಿಂಡಿ, ಹಣ್ಣುಗಳನ್ನು ತಿಂದೆವು. ಅಲ್ಲಿಂದ ಸ್ವಲ್ಪ ಮುಂದಿದ್ದ ಕೆರೆಯೊಂದರಲ್ಲಿ ಗ್ರೇ ಲ್ಯಾಗ್ ಗೂಸ್, ಬಾರ್ನಕಲ್ ಗೂಸ್, ಗೋಲ್ಡನ್ ಐ ಮುಂತಾದ ಹಕ್ಕಿಗಳು ನೀರಿನಲ್ಲಿ ಈಜಾಡುತ್ತಿರುವುದನ್ನು ಕಾಣಬಹುದಿತ್ತು. ನಮ್ಮ ಪಕ್ಷಿವೀಕ್ಷಣಾ ಕಾರ್ಯಕ್ರಮ ಇನ್ನೇನು ಮುಗಿಯುವ ಹಂತಕ್ಕೆ ತಲುಪಿತ್ತು. ಅಲ್ಲಿಂದ ಮರಳುವ ದಾರಿಯಲ್ಲಿ ಯುರೇಷಿಯನ್ ನಟಾಚ್, ಗ್ರೇಟ್ ಸ್ಪಾಟೆಡ್ ವುಡ್ ಪೆಕರ್ ಗಳು ಕಂಡವು. ಮರಕುಟಿಕ (ಗ್ರೇಟ್ ಸ್ಪಾಟೆಡ್ ವುಡ್ ಪೆಕರ್ ) ನೆಲಮಟ್ಟಕ್ಕೆ ಸಮೀಪವಾಗಿದ್ದು ಬರಿಕಣ್ಣಿಗೇ ಸ್ಪಷ್ಟವಾಗಿ ಕಂಡಿತು . 
ಕಾಮನ್ ವುಡ್ ಪಿಜನ್ (ಚಿತ್ರ ಕೃಪೆ : ದೀಪಕ್ ವಸ್ತಾರೆ )

ಪಕ್ಷಿವೀಕ್ಷಕರ ಗಹನವಾದ ಚರ್ಚೆ ! (ಚಿತ್ರ ಕೃಪೆ : ನಾಗರಾಜ್ )

ಒಂದು ಛಾಯಾಚಿತ್ರಕ್ಕಾಗಿ ಇಷ್ಟೆಲ್ಲಾ ಕಷ್ಟ (ಚಿತ್ರ ಕೃಪೆ : ನಾಗರಾಜ್ )

ನಮ್ಮ ಗುಂಪು (ಚಿತ್ರ ಕೃಪೆ : ದೀಪಕ್ ವಸ್ತಾರೆ )

ವಿರಾಮದ ಸಮಯ (ಚಿತ್ರ ಕೃಪೆ : ದೀಪಕ್ ವಸ್ತಾರೆ )

ಕೊನೆಯಲ್ಲೊಂದು ಗ್ರೂಪ್ ಫೋಟೋ ( ಚಿತ್ರ ಕೃಪೆ : ಆನಂದ್ )

ಕೊನೆಯಲ್ಲಿ ಲಿಲ್ಲಾ ಡಾಮೆನ್ ನಮ್ಮ ಕೊನೆಯ ಪಕ್ಷಿವೀಕ್ಷಣೆಯ ಸ್ಥಳವಾಗಿದ್ದು ಅಲ್ಲಿ ಹೆಚ್ಚಿನ ಹಕ್ಕಿಗಳೇನೂ ಕಾಣಲಿಲ್ಲ. ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಚಂದಗೊಳಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು. ಒಬ್ಬರಿಗೊಬ್ಬರು ವಿದಾಯ ಹೇಳಿ ಮನೆಯ ದಾರಿ ಹಿಡಿದೆವು. ನಮ್ಮ ಕನ್ನಡ ಬಳಗದ ವತಿಯಿಂದ ನಡೆದ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಬಹಳಷ್ಟು ಹೊಸ ಜನರ ಪರಿಚಯ ಸಂತಸ ತಂದಿತು. 

ನಾವು ನೋಡಿದ ಪಕ್ಷಿಗಳು ( ಕನ್ನಡದಲ್ಲಿ ಹೆಸರಿಸುವುದು ಕಷ್ಟವಾದ್ದರಿಂದ ಇಂಗ್ಲಿಷ್ನಲ್ಲಿ ಬರೆಯಲಾಗಿದೆ )

ದಿನಾಂಕ : ೦೮-೦೮-೨೦೨೦

Lesser Black-backed Gull
European Herring Gull
Mew Gull
Black-headed Gull
Mallard
Common Wood Pigeon
Common Moorhen
Common Goldeneye
Great Tit
Canada Goose
Barnacle Goose
Gadwall
Greylag Goose
Greater Spotted Woodpecker (male)
Grey Wagtail
Eurasian Nuthatch
Eurasian Tree Sparrow
Eurasian Magpie
Eurasin Blue Tit
Oriental Honey Buzzard (male)
Pied Flycatcher(female)

Sunday, 12 April 2020

ಮಿಂಚುಳ್ಳಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೧), ಹೆಜ್ಜೆ ಮೂಡದ ಹಾದಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೨)




ಚಿಕ್ಕಂದಿನಿಂದಲೂ ನನಗೆ ಪಕ್ಷಿಗಳೆಂದರೆ ಏನೋ ಕುತೂಹಲ. ನಮ್ಮನೆಯ ಎದುರಿಗಿದ್ದ ಟೊಳ್ಳಾದ ನಂದಿ ಮರದಲ್ಲಿ ಗುಂಪಾಗಿ ವಾಸವಾಗಿದ್ದ ಗಿಳಿಗಳು, ಜೊತೆಗೇ ಸಹಜೀವನ ನಡೆಸುತ್ತಿದ್ದ ಮೈನಾ ಹಕ್ಕಿಗಳು, ಗದ್ದೆ ಬದಿಯಲ್ಲಿ ಅಲೆದಾಡುತ್ತಿದ್ದ ಕೊಕ್ಕರೆಗಳು, ಕೆರೆಯಂಚಿನ ಕೊಂಬೆಯೊಂದರ ಮೇಲೆ ಕುಳಿತಿರುತ್ತಿದ್ದ ಮಿಂಚುಳ್ಳಿಗಳು ಇವೆಲ್ಲವನ್ನೂ ಕಣ್ಣರಳಿಸಿಕೊಂಡು ನೋಡುತ್ತಿದ್ದೆ. ವಾರಾಂತ್ಯದಲ್ಲಿ ಹಕ್ಕಿ ಗೂಡು ಹುಡುಕುವುದೇ ಕೆಲಸ. ಸಿಕ್ಕ ಖಾಲಿ ಗೂಡುಗಳನ್ನೆಲ್ಲ ಮನೆಯಲ್ಲಿ ಮಾವಿನ ಮರಕ್ಕೋ, ದಾಸವಾಳದ ಗಿಡಕ್ಕೋ ಸಿಕ್ಕಿಸಿ ಯಾವುದಾದರೂ ಹಕ್ಕಿ ಬಂದು ಮರಿಮಾಡುತ್ತದೆಂದು ಕಾಯುತ್ತಿದ್ದೆ!

ಎಂಟನೆಯ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಗೀಜುಗನ ಗೂಡು ಎಂಬ ಪಾಠವೊಂದಿತ್ತು. ಪೂರ್ಣಚಂದ್ರ ತೇಜಸ್ವಿಯವರ ಹೆಜ್ಜೆ ಮೂಡದ ಹಾದಿ ಎಂಬ ಅನುಭವ ಕಥನದಿಂದ ಆಯ್ದುದಾಗಿತ್ತು. ತೇಜಸ್ವಿ, ಗೀಜುಗ ಹಕ್ಕಿಯ ಬಗ್ಗೆ ಚಂದದ ವಿವರಣೆ ನೀಡಿದ್ದರು. ಅದಕ್ಕೆ ಸಮವಾಗಿ ನಮ್ಮ ಕನ್ನಡ ಮೇಷ್ಟ್ರು ಅದೆಷ್ಟು ಚನ್ನಾಗಿ ಪಾಠ ಮಾಡಿದ್ದರೆಂದರೆ ಆ ವರ್ಷದ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಹೆಜ್ಜೆ ಮೂಡದ ಹಾದಿ ಪುಸ್ತಕವನ್ನ ತೆಗೆದುಕೊಂಡೆ. ಅದನ್ನು ಓದುತ್ತಾ ಹೋದಂತೆ ಹೊಸದೊಂದು ಪರಿಸರ ನನ್ನೆದುರು ತೆರೆದುಕೊಂಡಿತು. ಅಲ್ಲಿಂದ ಹಕ್ಕಿಗಳ ಬಗೆಗಿನ ಆಸಕ್ತಿ ಹೆಚ್ಚಾಯಿತು. ತೇಜಸ್ವಿಯವರಂತೆ ನಾನು ಕೆರೆ ದಂಡೆಗಳಲ್ಲಿ ಗಂಟೆಗಟ್ಟಲೆ ಕೂರಲು ಶುರು ಮಾಡಿದೆ. ಕಾಗೆ, ಗಿಳಿ, ಗುಬ್ಬಿಗಳಲ್ಲದೆ ಮುನಿಯ, ಪಿಕಳಾರ, ಸೂರಕ್ಕಿ, ಮಡಿವಾಳ ಅವುಗಳ ಭಿನ್ನತೆ, ಸಾಮ್ಯತೆಗಳನ್ನು ಗುರುತಿಸಲು ಕಲಿತೆ. ಕೆಲಸ ಸಿಕ್ಕ ಮೇಲೆ ಒಂದು ದುರ್ಬೀನು ಕೊಂಡುಕೊಂಡು ಪಕ್ಷಿವೀಕ್ಷಣೆಯ ಹವ್ಯಾಸವನ್ನು ಮುಂದುವರೆಸಿದೆ. ಇವಳಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಇದೇನು ಊಟ ಹಾಕತ್ತಾ ಅಂತ ಎಷ್ಟೋ ಜನ ಬೈದದ್ದಿದೆ. 

ಕನ್ನಡ ನಾಡಿನ ಹಕ್ಕಿಗಳ ಬಗ್ಗೆ ಕನ್ನಡದಲ್ಲಿ ಬರೆದ ಬೆರಳೆಣಿಕೆಯಷ್ಟು ಜನರಲ್ಲಿ ತೇಜಸ್ವಿಯವರು ಅಗ್ರಗಣ್ಯರು. ಅವರ ಮಿಂಚುಳ್ಳಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೧), ಹೆಜ್ಜೆ ಮೂಡದ ಹಾದಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೨) ಈ ಎರಡು ಪುಸ್ತಕಗಳೂ ವಿಶಿಷ್ಟವಾಗಿವೆ. ನಮ್ಮೊಂದಿಗೇ ಇದ್ದು ನಾವು ಗಮನಿಸದೇ ಇರುವ ನೆರೆಹೊರೆಯವರ ಬಗ್ಗೆ ಮಾಹಿತಿ ನೀಡುತ್ತವೆ ಇವು. ತೇಜಸ್ವಿ ನದಿ ದಡಗಳಲ್ಲಿ ಮೀನು ಹಿಡಿಯಲು  ಕುಳಿತಾಗ ಕಂಡ ನೀರಿನ ಹಕ್ಕಿಗಳು, ಜವುಗಿನ ಹಕ್ಕಿಗಳು, ಹೂವಿನ ಗಿಡಗಳಲ್ಲಿ ಗೂಡು ಕಟ್ಟಿದ್ದ ಸೂರಕ್ಕಿಗಳು, ಪಿಕಳಾರಗಳು, ಜಗಳ ಕಾಯುವ ಕಾಜಾಣಗಳು, ಯಾರದೋ ಕೋವಿಯ ಗುಂಡಿಗೆ ಬಲಿಯಾದ ಟ್ರೊಗನ್ ಹಕ್ಕಿ, ತೇಜಸ್ವಿಯವರು ಹಕ್ಕಿ ಸಾಕಲು ಪ್ರಯತ್ನಿಸಿದ್ದು, ಜೇನುಮಗರೆ ಹಕ್ಕಿಗಳ ಕಿತಾಪತಿ, ಪಿಕಳಾರ ಸೂರಕ್ಕಿಗಳ ನಡುವಿನ ಜಗಳ ಇವೆಲ್ಲವೂ ಅವರ ನಿತ್ಯದ ಜೀವನದಿಂದ ಆಯ್ದ ಘಟನೆಗಳೇ. ಓದುಗರನ್ನು ಮೈಮರೆಯುವಂತೆ ಮಾಡುವ ಇಂತಹ ಪ್ರಸಂಗಳೆಷ್ಟೋ ಇವೆ  ಅದರಲ್ಲಿ. 

ಇನ್ನು ಈ ಪುಸ್ತಕಗಳ ಕೊರತೆಯ ಬಗ್ಗೆ ಹೇಳುವುದಾದರೆ ತೇಜಸ್ವಿಯವರೇ ಹೇಳುವಂತೆ ಈ ಪುಸ್ತಕಗಳು  ಪಕ್ಷಿವೀಕ್ಷಕರ ಮಾರ್ಗದರ್ಶಿಯಲ್ಲ. ಬದಲಿಗೆ  ಓದುಗರಲ್ಲಿ ಪಕ್ಷಿಪ್ರಪಂಚದೆಡೆಗೆ ಆಸಕ್ತಿ ಹುಟ್ಟುವಂತೆ ಮಾಡುವ ಒಂದು ಪ್ರಯತ್ನವಷ್ಟೇ. ಇದರಲ್ಲಿ ಹಕ್ಕಿಗಳ ಪ್ರಬೇಧಗಳ ಸ್ಥೂಲ ಹೆಸರುಗಳನ್ನು ನೀಡಲಾಗಿದೆಯೇ ಹೊರತು ಒಳಪ್ರಬೇಧಗಳನ್ನು ಗುರುತಿಸಲು, ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅವಕಾಶವಿಲ್ಲ. ಅದರಲ್ಲಿನ ವಿಷಯಗಳೂ ಅವರು ನಿತ್ಯ ಕಂಡ ಹಕ್ಕಿಗಳ ಬಗೆಗೆ ಮಾತ್ರ ಸೀಮಿತವಾಗಿವೆ. ಇದಲ್ಲದೆ ಬಹಳಷ್ಟು ಹಕ್ಕಿಗಳಿಗೆ ಕನ್ನಡದಲ್ಲಿ ಸರಿಯಾದ ಹೆಸರುಗಳಿಲ್ಲ. ಹಾಗಾಗಿ ಅವರು ಕನ್ನಡದಲ್ಲಿ ಹೆಸರಿಸಲು ಪ್ರಯತ್ನಿಸುವಾಗ ಕೆಲವಷ್ಟು ತಪ್ಪುಗಳು ನುಸುಳಿವೆ.ಇವುಗಳನ್ನು ಪಕ್ಷಿವೀಕ್ಷಣೆಯ ಗೈಡ್ ಬುಕ್ ಆಗಿ ಬಳಸಿಕೊಂಡಲ್ಲಿ ಗೊಂದಲಗಳೇಳುತ್ತವೆ. 

ಆದಾಗ್ಯೂ ಪರಿಸರ ಪ್ರೇಮಿಗಳಿಗೂ, ಪಕ್ಷಿಪ್ರೇಮಿಗಳಿಗೂ ಈ ಎರಡು ಪುಸ್ತಕಗಳು ಮುದ ನೀಡುವುದರಲ್ಲಿ ಸಂದೇಹವಿಲ್ಲ. ದಿನನಿತ್ಯದ ನಮ್ಮ ಧಾವಂತದ ಬದುಕಿನಲ್ಲಿ ನಿಮಿಷಗಳನ್ನೂ ಎಣಿಸಿ ಬದುಕುವಾಗ, ಕೆರೆಯ ದಂಡೆಯ ಮೇಲೆ ದಿನವಿಡೀ ಕುಳಿತು ಕಥೆ ಹೇಳುವ ತೇಜಸ್ವಿ ಅಚ್ಚರಿ ಹುಟ್ಟಿಸುತ್ತಾರೆ. ನಾವು ಕಾಣದ ಬೆರಗಿನ ಲೋಕವೊಂದನ್ನು ಅವರ ಕಣ್ಣುಗಳಲ್ಲಿ ಕಟ್ಟಿಕೊಡುತ್ತಾರೆ.  


Saturday, 28 March 2020

ಡಿಸೈನರ್ ಬೇಬೀಸ್

ಸಂತೆಯಲ್ಲಿ ತರಕಾರಿ ಕೊಳ್ಳುವ ಮೊದಲು ಬಣ್ಣ, ತೂಕ, ಎಳೆತಿದೆಯೋ, ಬಲಿತಿದೆಯೋ, ಕೊಳೆತಿದೆಯೋ ಹೀಗೆ ಎಲ್ಲವನ್ನು ಅಳೆದು ತೂಗಿ ಇದ್ದುದರಲ್ಲಿ ಉತ್ತಮವಾದುದನ್ನು ಆರಿಸುವಂತೆ ತಂದೆ ತಾಯಿಗಳು ತಮಗೆ ಹುಟ್ಟುವ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದರೆ? ಮದುವೆ ಸೀರೆಗಳನ್ನು ಬೇಕೆಂದ ರೀತಿಯಲ್ಲಿ ವಿನ್ಯಾಸ ಮಾಡಿಸಿಕೊಳ್ಳುವಂತೆ ಮಕ್ಕಳನ್ನೂ ಸಹ  ತಮ್ಮಿಷ್ಟದಂತೆ ವಿನ್ಯಾಸಗೊಳಿಸಿಕೊಳ್ಳುವ ಹಾಗಿದ್ದರೆ? ಇದ್ಯಾವುದೋ ಕಪೋಲಕಲ್ಪಿತ ಕಥೆಯೆಂದುಕೊಂಡಿರಾ! ಅಲ್ಲವೇ ಅಲ್ಲ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು, ಸಿಕ್ಕ ಯಶಸ್ಸುಗಳು ಹೊಸ ಅಲೆಯನ್ನೇ ಹುಟ್ಟುಹಾಕಿವೆ. ಜೆನೆಟಿಕ್ ಇಂಜಿನಿಯರಿಂಗ್ ಎಂಬ ಮಹಾ ವಟವೃಕ್ಷವು ತನ್ನ ಬೃಹತ್ ರೆಂಬೆಕೊಂಬೆಗಳನ್ನು ಊರಗಲ ಚಾಚಿ ಹರಡುತ್ತಿದೆ. ಜೀವಕೋಶಗಳನ್ನೂ ಹರಿದು ಒಳಗೇನಿದೆ ಎಂದು ನೋಡಿದ ಮೇಲೂ ಕುತೂಹಲ ಇಂಗದೆ ಮನುಷ್ಯ ವರ್ಣತಂತುಗಳ (ಕ್ರೋಮೋಸೋಮ್) ಆಳಕ್ಕಿಳಿದು ಡಿಎನ್ಎಗಳ ಗುಟ್ಟನ್ನು ತಿಳಿಯುವ ಪ್ರಯತ್ನದಲ್ಲಿದ್ದಾನೆ. ಅವನು ದಾಪುಗಾಲಿಡುತ್ತಾ ಓಡುತ್ತಿರುವ ವೇಗವನ್ನು ಕಂಡರೆ ಇಂತಹ ದಿನಗಳು ಬಹಳ ದೂರವಿಲ್ಲ ಎಂದೆನಿಸದಿರದು.

ಒಂದು ಕಾಲದಲ್ಲಿ ಅದ್ಬುತ ಎಂದೇ ಬಣ್ಣಿಸಲಾದ ಪ್ರನಾಳ ಶಿಶುಗಳ (ಟೆಸ್ಟ್ ಟ್ಯೂಬ್ ಬೇಬಿಸ್ ) ಹುಟ್ಟು ಈಗ ಸರ್ವೇ ಸಾಮಾನ್ಯ. ಮೊದಲ ಪ್ರನಾಳ ಶಿಶು ಲೂಯಿಸ್ ಬ್ರೌನ್ ಗೆ ಈಗ ೪೦ರ ಪ್ರಾಯ. ಪ್ರಪಂಚದಲ್ಲಿ ಆ ನಂತರ ಇಂತಹ ಲೆಕ್ಕವಿಲ್ಲದಷ್ಟು ಪ್ರನಾಳ ಶಿಶುಗಳು ಜನಿಸಿವೆ. ನಮ್ಮ ನಿಮ್ಮ ನಡುವೆಯೇ ಬೆಳೆಯುತ್ತಿವೆ. ಆದರೆ ವಿಜ್ಞಾನಿಗಳು ಈ ಗೆಲುವಿನ ಅಮಲಿನಲ್ಲಿ ಮೈಮರೆತಿಲ್ಲ. ಹೊಸದೇನನ್ನಾದರೂ ಕಂಡುಹಿಡಿಯುವ ಹಪಹಪಿಯೊಂದಿಗೆ ತಮ್ಮ ಅನುಭವ, ಜ್ಞಾನವನ್ನೆಲ್ಲ ಧಾರೆ ಎರೆದು ಹಗಲಿರುಳು ದುಡಿಯುತ್ತಿದ್ದಾರೆ. ಪ್ರಕೃತಿ ಲಕ್ಷಗಟ್ಟಲೆ ವರ್ಷಗಳಿಂದ ಪ್ರಯೋಗಾತ್ಮಕವಾಗಿ ಸಾಧಿಸಿದ ವಿಕಸನದ ಎಳೆಗಳನ್ನು ತುಂಡರಿಸಿ ತಮ್ಮದೇ ಹೊಸ ಸ್ಪರ್ಶ ನೀಡಲು ಕಾತರರಾಗಿದ್ದಾರೆ. ಇಂತಹ ಅವಿರತ ಪ್ರಯತ್ನದ ಫಲವಾಗಿ ಹುಟ್ಟಿದ್ದೇ ಡಿಸೈನರ್ ಬೇಬೀಸ್ ಎಂಬ ತಂತ್ರಜ್ಞಾನ. 

ಏನಿದು  ಡಿಸೈನರ್ ಬೇಬೀಸ್ ?
ಮನುಷ್ಯರ ಬ್ರೂಣದಲ್ಲಿನ ಅನುವಂಶಿಕ ಧಾತುಗಳನ್ನು(ಜೀನ್) ಬೇಕಾದ ರೀತಿಯಲ್ಲಿ ಮಾರ್ಪಡಿಸಿ ತಮ್ಮಿಷ್ಟದಂತೆ ಮಕ್ಕಳನ್ನು ವಿನ್ಯಾಸಗೊಳಿಸಿಕೊಳ್ಳುವ ಕ್ರಮಕ್ಕೆ ಡಿಸೈನರ್ ಬೇಬೀಸ್ ಎಂಬ ಆಕರ್ಷಕ ಹೆಸರು! ಈ ತಂತ್ರಜ್ಞಾನದ ಮೂಲಕ ತಂದೆ ತಾಯಿಗಳಿಂದ ಮಕ್ಕಳಿಗೆ ಯಾವುದೇ ಖಾಯಿಲೆಗಳು ಹರಿದು ಹೋಗದಂತೆ ತಡೆಯುವುದರಿಂದ ಹಿಡಿದು ಹುಟ್ಟುವ ಮಗು ಗಂಡಾಗಿರಬೇಕೋ ಹೆಣ್ಣೋ, ಮಗುವಿನ ಕಣ್ಣಿನ ಬಣ್ಣ, ತಲೆಕೂದಲು, ಧ್ವನಿ ಹೇಗಿರಬೇಕು ಎಂಬುದನ್ನೆಲ್ಲ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವಿರುತ್ತದೆ. ಇದು ನಿಜವೇ ಆದಲ್ಲಿ ಮುಂದಿನ ಕೆಲ ದಶಕಗಳಲ್ಲಿ ಈಗಿನ ಮನುಷ್ಯರಿಗಿಂತ ಹೆಚ್ಚು ದೃಢಕಾಯದ, ಬಲಿಷ್ಠ, ಸ್ಪುರದ್ರೂಪಿಯಾದ ನವೀನ ಜನಾಂಗವೊಂದು ಸೃಷ್ಟಿಯಾದೀತು.

ಪಿಜಿಡಿ (ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ )
ಈ ದಿಕ್ಕಿನಲ್ಲಿ ದೃಢವಾದ ಹೆಜ್ಜೆಗಳನ್ನಿಟ್ಟು ಮುಂಬರಿಯಲು ಊರುಗೋಲಾಗಿ ನಿಂತಿರುವುದು ಪಿಜಿಡಿ (ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ ) ಎಂಬೊಂದು ವಿಧಾನ. ಬಹಳಷ್ಟು ಯಶಸ್ಸು ಕಂಡಿರುವ, ಕೆಲ ಮುಂದುವರಿದ ದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಪ್ರಕ್ರಿಯೆ ಇದಾಗಿದೆ. ಇಲ್ಲಿ ತಂದೆ ತಾಯಿಯರ ಅಂಡಾಣು ವೀರ್ಯಾಣುಗಳನ್ನು ಪ್ರನಾಳಿಕೆಗಳಲ್ಲಿ ವಿಧವಿಧವಾಗಿ ಸಂಯೋಜನೆಗೊಳಪಡಿಸಿ ಕೆಲ ವಾರಗಳ ನಂತರ ಆ ಬ್ರೂಣವನ್ನು ತಪಾಸಣೆಗೊಳಪಡಿಸಲಾಗುತ್ತದೆ. ಮಗು ಹುಟ್ಟುವುದಕ್ಕೆ ಮೊದಲೇ ಜೀನ್ಸ್ ಗಳ ಮೂಲಕ ವಂಶವಾಹಿನಿಯಲ್ಲಿ ಹರಿದು ಬರಬಲ್ಲ ಸಿಕಲ್ ಸೆಲ್ ಅನೀಮಿಯಾ, ಥ್ಯಾಲ್ಲಸೆಮಿಯಾ ದಂತಹ ಕೆಲವು ವಿರಳ ರೋಗಗಳನ್ನು ಗುರುತಿಸಿ, ಅಂತಹ ಜೀವಧಾತುಗಳನ್ನು ಹೊಂದಿರುವ ಬ್ರೂಣಗಳನ್ನು ಬದಿಗಿರಿಸಿ ಆರೋಗ್ಯಕರವಾಗಿರುವ ಮಗುವನ್ನು ಆಯ್ದುಕೊಳ್ಳುವ ಅವಕಾಶ ತಂದೆತಾಯಿಯರಿಗಿರುತ್ತದೆ. ಹೀಗೆ ಆಯ್ಕೆಗೊಂಡ ಬ್ರೂಣವನ್ನು ತಾಯಿಯ ಗರ್ಭದಲ್ಲಿರಿಸಲಾಗುತ್ತದೆ. ಮಗುವಿನ ಲಿಂಗವನ್ನು ಸಹ ಇಲ್ಲಿ ಪೋಷಕರು ಆರಿಸಿಕೊಳ್ಳಬಹುದೆಂಬುದು ಗಮನಾರ್ಹ ಸಂಗತಿ.

ಕೆಲ ವರ್ಷಗಳ ಹಿಂದೆ ಸೇವಿಯರ್ ಸಿಬ್ಲಿಂಗ್ಸ್ ಎನ್ನುವ ಪದ ಬಹಳಷ್ಟು ಸುದ್ದಿ ಮಾಡಿತ್ತು. ತನ್ನ ಸಹೋದರ ಅಥವಾ ಸಹೋದರಿಯ ಬೀಟಾ-ಥ್ಯಾಲ್ಲಸೆಮಿಯಾ, ಲ್ಯೂಕೆಮಿಯಾದಂತಹ ಮಾರಣಾಂತಿಕ ಖಾಯಿಲೆಯನ್ನು ಗುಣಪಡಿಸಲೆಂದು ಜನ್ಮ ತಾಳುವ ಮಕ್ಕಳೇ ಸೇವಿಯರ್ ಸಿಬ್ಲಿಂಗ್ಸ್. ಆರೋಗ್ಯವಂತ ವ್ಯಕ್ತಿಯ ಕೆಲ ಜೀವಕೋಶಗಳನ್ನು ಬಳಸಿ ಇಂತಹ ಬೇನೆಗಳನ್ನು ಗುಣಪಡಿಸಬಹುದಂತೆ. ಆದರೆ ಅದಕ್ಕೆ ಆ ಜೀವಕೋಶಗಳಲ್ಲಿ ಅತಿ ಹೆಚ್ಚಿನ ಸಾಮ್ಯತೆ ಇರಬೇಕು. ತಮ್ಮ ಮಕ್ಕಳನ್ನುಳಿಸಲು ತಂದೆ ತಾಯಿಗಳು ಪಿಜಿಡಿ ತಂತ್ರಜ್ಞಾನದ ಮೂಲಕ ತಮಗೆ ಬೇಕಾದ ಬ್ರೂಣವನ್ನೇ ಮಗುವಾಗಿ ಪಡೆಯುತ್ತಾರೆ. ಇಂತಹ ಉದಾಹರಣೆಗಳು ಬಹಳಷ್ಟಿವೆ. ಪ್ರಪಂಚದ ಮೊದಲ ಸೇವಿಯರ್ ಸಿಬ್ಲಿಂಗ್ ಎಂದೇ ಹೆಸರು ಪಡೆದ ಆಡಮ್ ನ್ಯಾಶ್ ಹುಟ್ಟಿದ್ದು ಸಹ ತನ್ನ ಅಕ್ಕನಿಗಾಗಿ. ತಮ್ಮ ಮಗಳು ಮೋಲಿ ನ್ಯಾಶ್  ಫ್ಯಾಂಕೋನಿ-ಅನೀಮಿಯಾ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾಳೆ ಎಂಬ ವಿಷಯ, ಜಾಕ್ ಮತ್ತು ಲೀಸಾ ನ್ಯಾಶ್ ದಂಪತಿಗಳಿಗೆ ತಿಳಿದಾಗ ಇಬ್ಬರೂ ಆಘಾತಕ್ಕೊಳಗಾಗುತ್ತಾರೆ. ಫ್ಯಾಂಕೋನಿ-ಅನೀಮಿಯಾ ಅನುವಂಶಿಕವಾಗಿ ಬರುವ ವಿಚಿತ್ರ ರೋಗ. ಮೂಳೆ ಮಜ್ಜೆಯನ್ನು(ಬೋನ್ ಮ್ಯಾರೋ) ಗುರಿಯಾಗಿಸುವ ಇದು ರಕ್ತ ಕಣಗಳ ಉತ್ಪಾದನೆಯನ್ನೇ ಗಣನೀಯವಾಗಿ ಕಡಿಮೆಗೊಳಿಸುತ್ತದೆ. ಅಂತಿಮ ಸ್ಥರದಲ್ಲಿ ರೋಗಿ ಅಂಗವೈಕಲ್ಯ, ಮೂಳೆ ಮಜ್ಜೆಯ ಪೂರ್ಣ ವೈಫಲ್ಯ ಅಥವಾ ಲ್ಯೂಕೆಮಿಯಾದಂತಹ ಮಾರಣಾಂತಿಕ ಖಾಯಿಲೆಗಳಿಗೆ ಬಲಿಯಾಗಬಹುದು. ಇದಕ್ಕೆ ಮದ್ದು ಎಂದರೆ ಬೋನ್ ಮ್ಯಾರೋದ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವುದು. ರೋಗಿಯ ಜೀವಕಣಗಳಿಗೆ ಅತೀ ಸಮೀಪವಾಗಿ ಹೊಂದಾಣಿಕೆ ಆಗುವಂತಹ ಬೇರೆ ವ್ಯಕ್ತಿಯ ಬೋನ್ ಮ್ಯಾರೋದಿಂದ ತೆಗೆದ ಜೀವಕೋಶಗಳನ್ನು ವರ್ಗಾವಣೆ ಮಾಡುವುದರಿಂದ ಆ ಖಾಯಿಲೆಯನ್ನು ತಕ್ಕ ಮಟ್ಟಿಗೆ ಗುಣಪಡಿಸಬಹುದು. ಹೊಂದಾಣಿಕೆ ಇಲ್ಲದ ಪಕ್ಷದಲ್ಲಿ ಹೊಸ  ಜೀವಕೋಶಗಳನ್ನು ರೋಗಿಯ ದೇಹ ತನ್ನದೆಂದು ಒಪ್ಪಿಕೊಳ್ಳುವುದಿಲ್ಲ. ತಮ್ಮ ಮುದ್ದು ಮಗಳು ದಿನ ದಿನವೂ ಸಾವಿಗೆ ಸಮೀಪವಾಗುವುದನ್ನು ನೋಡಲಾರದೆ ಒದ್ದಾಡುತ್ತಿದ್ದ ಅಪ್ಪ ಅಮ್ಮನಿಗೆ ಆಶಾಕಿರಣವಾಗಿ ಬಂದಿದ್ದು ಡಿಸೈನರ್  ಬೇಬೀಸ್  ತಂತ್ರಜ್ಞಾನ. ಡಾಕ್ಟರ್ ನ ಸಲಹೆಯಂತೆ ಗಂಡ ಹೆಂಡತಿ ಇಬ್ಬರೂ ಮೋಲಿ ನ್ಯಾಶ್ ಗೆ  ಬೇಕಾಗುವ ಜೀವಕೋಶಗಳಿರುವ ಮಗುವನ್ನು ಹೆರಲು ಮುಂದಾದರು. ಕೆಲ ಬ್ರೂಣಗಳನ್ನು ಪರೀಕ್ಷಿಸಿದ ಮೇಲೆ ಇವರಿಗೆ ಬೇಕಾಗಿದ್ದಂತಹ ಮಗು ಸಿಕ್ಕಿತು. ಅದನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡ ಲೀಸಾ ನ್ಯಾಶ್ ಕೆಲ ತಿಂಗಳುಗಳ ನಂತರ ಮಗುವನ್ನು ಹೆತ್ತಳು. ಈ ಮಗುವೇ ಆಡಮ್ ನ್ಯಾಶ್. ಆಡಮ್ ನ್ಯಾಶ್ ನ ಜೀವಕಣಗಳು ಮೋಲಿ ಗೆ ಹೊಸ ಹುಟ್ಟು ನೀಡಿದ್ದು ಈಗ ಹಳೆಯ ಸಂಗತಿ.

ಕೆಲ ಅನುವಂಶಿಕ ಖಾಯಿಲೆಗಳಿಂದ ಮುಂದಿನ ಪೀಳಿಗೆಯನ್ನು ರಕ್ಷಿಸಲು ಪಿಜಿಡಿ ವಿಧಾನ ಸಹಾಯಕಾರಿ. ಆದರೆ ಪಿಜಿಡಿ ಇದ್ದುದರಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆಯೇ ಹೊರತು ಹೊಸದನ್ನು ಸೃಷ್ಟಿಮಾಡಲಲ್ಲ. ಮಕ್ಕಳ ಎತ್ತರ, ಬಣ್ಣ, ರೂಪ ಯಾವೊಂದನ್ನೂ ಇಲ್ಲಿ ಬದಲಾಯಿಸಲಾಗದು. ಮತ್ತು ಎಲ್ಲ ಖಾಯಿಲೆಗಳನ್ನೂ ಮುಂದಿನ ಪೀಳಿಗೆಗೆ ಜಾರದಂತೆ ತಡೆಯಲಾಗದು. ಪ್ರಪಂಚದೆಲ್ಲೆಡೆ  ಇದರ ಉಪಯೋಗ ನೈತಿಕ ಪ್ರಶ್ನೆಗೆ ಒಳಗಾಗಿದ್ದರೂ ಬ್ರಿಟನ್, ಜರ್ಮನಿಯಂತಹ ದೇಶಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಇದರ ಬಳಕೆಯನ್ನು ಸೀಮಿತಗೊಳಿಸಲಾಗಿದೆ. ಖಾಯಿಲೆಗೆ ಉತ್ತರವೆಂಬಂತೆ ಮಕ್ಕಳನ್ನು ಹೆರುವ ಮನಸ್ಥಿತಿಯ ತಂದೆ ತಾಯಿಯರು ನಾಳೆ ತಮ್ಮ ಮಕ್ಕಳಿಗೆ ಯಾವುದಾದರು ಅಂಗ ಬೇಕಾದಲ್ಲಿ ಇನ್ನೊಂದು ಬ್ರೂಣವನ್ನು ಬೆಳೆಸಿ ಅದರ ಅಂಗವನ್ನು ತಮ್ಮ ಮಕ್ಕಳಿಗೆ ಕೊಡಬಲ್ಲ ಸಾಧ್ಯತೆ ಇಲ್ಲವೇ ಎಂಬುದು ಹಲವರ ಪ್ರಶ್ನೆ! ಇದೇ ಪರಿಕಲ್ಪನೆಯನ್ನು ಆಧರಿಸಿ ೨೦೦೯ರಲ್ಲಿ  ಮೈ ಸಿಸ್ಟರ್ಸ್ ಕೀಪರ್ ಎನ್ನುವ ಚಲನಚಿತ್ರವೊಂದು ಬಂದಿದೆ.

ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್
ಇದಲ್ಲದೆ ಇನ್ನೂ ಮುಂದುವರೆದ, ಡಿಸೈನರ್ ಬೇಬೀಸ್ ಗಳ ಹುಟ್ಟಿಗೆ ಇಂಬು ಕೊಡಲೋಸುಗ ಕಂಡುಹಿಡಿದ ಬಹಳಷ್ಟು ಬಿಸಿ ಚರ್ಚೆಗೆ ಗುರಿಯಾಗುತ್ತಿರುವ ವಿಧಾನವೊಂದಿದೆ.   ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ಎಂದು ಕರೆಸಿಕೊಳ್ಳುವ ಇದರಲ್ಲಿ ಅಂಡಾಣು, ವೀರ್ಯಾಣುಗಳಲ್ಲಿನ ಜೀವಕೋಶಗಳ ಡಿಎನ್ಎ ಸೀಕ್ವೆನ್ಸ್ ಗಳನ್ನು ಬದಲಿಸಿ ಬೇಡದ ಜೀನ್ ಗಳನ್ನು ಕತ್ತರಿಸಿ ಹೊಸದನ್ನು  ಜೋಡಿಸಲಾಗುತ್ತದೆ. ಇದರ ಸಹಾಯದಿಂದ ಏಡ್ಸ್ ನಂತಹ ಗುಣಪಡಿಸಲಾಗದೆ ಉಳಿದ ಎಷ್ಟೋ ರೋಗಗಳನ್ನು ವಾಸಿಮಾಡಬಹುದೆಂಬ ನಂಬಿಕೆ ಇದೆ. ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ನ  ಮತ್ತೊಂದು ಸಂಭವನೀಯ ಬಳಕೆ ಎಂದರೆ ಈ ಕಾಲಕ್ಕೆ ಕಾಲ್ಪನಿಕ ಎನಿಸಿದರೂ ಮನುಷ್ಯರ ಗುಣಗಳನ್ನೇ ಬದಲಾಯಿಸಬಹುದಾದಂತಹ ಪ್ರಕ್ರಿಯೆ. ಉದಾಹರಣೆಗೆ ಉತ್ತಮ ದೇಹಧಾರ್ಡ್ಯ ಹೊಂದಿರುವ ಆರೋಗ್ಯವಂತ ಮನುಷ್ಯರನ್ನು ತಯಾರು ಮಾಡುವುದು ಅಥವಾ ಚರ್ಮದ, ಕೂದಲಿನ ಬಣ್ಣದ  ಆಯ್ಕೆ, ಹುಟ್ಟುವ ಮಕ್ಕಳ ಬುದ್ಧಿಶಕ್ತಿ ಹೆಚ್ಚುವಂತೆ ಮಾಡುವುದು ಇತ್ಯಾದಿ! ಜೀನ್ ಥೆರಪಿ ಎಂಬ ವಿಧಾನ ಹೆಚ್ಚು ಕಡಿಮೆ ಜೆರ್ಮ್ ಲೈನ್ ಇಂಜಿನಿಯರಿಂಗ್ ನಂತೆಯೇ ಇದ್ದರೂ ಜೀನ್ ಥೆರಪಿಯಲ್ಲಿ ಸಂತಾನೋತ್ಪತ್ತಿಯಲ್ಲಿ ಭಾಗವಹಿಸದ ಜೀವಕೋಶಗಳನ್ನು ಮಾರ್ಪಡಿಸುವ ಕಾರಣ ಅವುಗಳು ತರುವ ಬದಲಾವಣೆಗಳು ಕೇವಲ ಆ ವ್ಯಕ್ತಿಗೆ ಸೀಮಿತವಾಗಿರುತ್ತವೆಯೇ ಹೊರತು ಮುಂದಿನ ಮಕ್ಕಳಿಗೆ ದಾಟಲಾರವು.

ಕ್ರಿಸ್ಪರ್ /ಕ್ಯಾಸ್ ೯ (CRISPR /cas9)
ಡಿಎನ್ಎಗಳನ್ನು ನಮಗೆ ಬೇಕಾದಂತೆ ತಿದ್ದುವುದು ಅಷ್ಟು ಸುಲಭವಲ್ಲ. ಮೊದಲಿಗೆ ಎದುರಾಗುವ ಸಮಸ್ಯೆ ಎಂದರೆ ಇನ್ನೂ ಜೀವಧಾತುಗಳು ಮನುಷ್ಯನ ಹಿಡಿತಕ್ಕೆ ಸಂಪೂರ್ಣವಾಗಿ ಸಿಕ್ಕಿಲ್ಲ. ಆ ವರ್ಣತಂತುವೆಂಬ ಕಪ್ಪು ಪೆಟ್ಟಿಗೆಯ ಒಳಗೇನಿದೆ ಎಂದು ಸರಿಯಾಗಿ ತಿಳಿಯದೆ ಹೆಚ್ಚೇನನ್ನೂ ಮಾಡಲಾಗದು. ಆದರೂ ಛಲಬಿಡದ ತ್ರಿವಿಕ್ರಮರು ಇವುಗಳ ಗುಟ್ಟನ್ನು ಅರಿಯುವ ಸತತ ಪ್ರಯತ್ನದಲ್ಲಿದ್ದಾರೆ. ಈ ರೀತಿ ಡಿಎನ್ಎ ಗಳ ತಿದ್ದುಪಡಿ ಮಾಡಲೆಂದೇ ಕ್ರಿಸ್ಪರ್/ಕ್ಯಾಸ್೯ ಎಂಬ ಕ್ಲಿಷ್ಟಕರವಾದ ಆದರೆ ಕರಾರುವಾಕ್ಕಾದ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಕ್ರಿಸ್ಪರ್/ಕ್ಯಾಸ್೯ ಎಂಬುದು ಕಿಣ್ವಗಳ(ಎನ್ಜೈಮ್) ಗುಂಪು. ಕ್ರಿಸ್ಪರ್ ಎಂದರೆ ಯಾವ ಜೀನ್ ಗಳನ್ನು ಬದಲಿಸಬೇಕಿದೆಯೋ ಅವುಗಳ ಸೀಕ್ವೆನ್ಸ್ ಗೆ ಹೊಂದಾಣಿಕೆಯಾಗುವಂತಹ ಚಿಕ್ಕ ಆರ್ ಎನ್ಎ ತುಂಡು. ಕ್ಯಾಸ್೯ ಕಿಣ್ವ ಬದಲಿಸಬೇಕಾದ ಡಿಎನ್ಎ ಯನ್ನು ಕತ್ತರಿಸಲು ನೆರವಾಗುತ್ತದೆ. ಕ್ರಿಸ್ಪರ್/ಕ್ಯಾಸ್೯ ಸಂಕೀರ್ಣವು(ಕಾಂಪ್ಲೆಕ್ಸ್) ಮೊದಲಿಗೆ ಇಡಿಯ ಡಿಎನ್ಎ ಯನ್ನು ಹುಡುಕಿ ಕ್ರಿಸ್ಪರ್ ಆರ್ ಎನ್ಎ ಹೊಂದಿಕೆಯಾಗುವಂತಹ ಸೀಕ್ವೆನ್ಸ್ ಅನ್ನು ಗುರುತಿಸುತ್ತದೆ. ಕ್ಯಾಸ್೯ ಆ ಬೇಡದ ಡಿಎನ್ಎ ಯನ್ನು ಕತ್ತರಿಸಿ ತೆಗೆಯುತ್ತದೆ. ನಂತರದಲ್ಲಿ ಬೇಕೆಂದ ಹೊಸ ಡಿಎನ್ಎಯನ್ನು ಆ ಜಾಗದಲ್ಲಿ ಕೂರಿಸಲಾಗುತ್ತದೆ. ಕ್ರಿಸ್ಪರ್/ಕ್ಯಾಸ್೯ ನ ಮುಖ್ಯ ಉಪಯೋಗ ಪ್ರಯೋಗಾತ್ಮಕವಾಗಿದ್ದು ಡಿಎನ್ಎ ಗಳಲ್ಲಿನ ಬೇರೆ ಬೇರೆ ಜೀವಕೋಶಗಳನ್ನು ತೆಗೆದುಹಾಕಿ ಅವು ಯಾವ ಗುಣಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ನೋಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನುವಂಶಿಕ ಖಾಯಿಲೆಗಳಿಗೆ ಕಾರಣವಾಗುವ ಧಾತುಗಳನ್ನು ಗುರುತಿಸಿ ಅವುಗಳನ್ನು ಬೇರ್ಪಡಿಸಿ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದೇ ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ನ ಸಧ್ಯದ ಗುರಿ ಎಂದು ಹೇಳಬಹುದು.

ಈ ವಿಧಾನ ಸದ್ಯದ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂತಹ ಗೆಲುವನ್ನೇನೂ ಸಾಧಿಸದಿದ್ದರೂ ತೀವ್ರವಾಗಿ ಸಂಶೋಧನೆಗೊಳಗಾಗುತ್ತಿರುವುದಂತೂ ನಿಜ. ಈ ಹಾದಿಯಲ್ಲಿ ಮುಂಚೂಣಿಯಲ್ಲಿರುವ ಚೈನಾದ ವಿಜ್ಞಾನಿಗಳು ಕ್ರಿಸ್ಪರ್/ಕ್ಯಾಸ್೯ ವಿಧಾನ ಬಳಸಿ ಜೀನ್ ಗಳನ್ನು ಬದಲಿಸಲು ಪ್ರಯತ್ನಪಟ್ಟಿದ್ದಾರಾದರೂ ಪ್ರತಿಬಾರಿಯೂ ಪ್ರಯೋಗ ವಿಫಲವಾಗಿದೆ. ಮುಂದೊಂದು ದಿನ ಗಮ್ಯ ತಲುಪಿಯೇ ತೀರುತ್ತೇವೆ ಎನ್ನುವ ಆಶಾಭಾವನೆಯಿಂದ ವಿಜ್ಞಾನಿಗಳು ಮೇಲಿಂದ ಮೇಲೆ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.

ಲುಲು ಮತ್ತು ನಾನಾ :
೨೦೧೮ ರ ನವೆಂಬರ್ ತಿಂಗಳಲ್ಲಿ ಚೈನಾ ದೇಶದ ವಿಜ್ಞಾನಿ ಹೇ ಜಿಯಾನ್ಕ್ಯೂಯಿ ಎಂಬಾತ ತಾನು ಈಗಾಗಲೇ ಅವಳಿ ಹೆಣ್ಣುಮಕ್ಕಳಾದ ಲುಲು ಮತ್ತು ನಾನಾ ಎಂಬ ಹೆಸರಿನ ಡಿಸೈನರ್  ಬೇಬೀಸ್ ಗಳನ್ನು ತಯಾರು ಮಾಡಿದ್ದೇನೆ ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟ. ಉಳಿದೆಲ್ಲ ವಿವರಗಳನ್ನೂ ಗೌಪ್ಯವಾಗಿಟ್ಟ. ಇದು ಸತ್ಯವೆಂದು ಸಾಬೀತಾಗಲಿಲ್ಲ. ಆದರೆ ಸುಳ್ಳೆಂದು ಅಲ್ಲಗಳೆಯಲು ಪುರಾವೆಗಳೂ ಇಲ್ಲ. ಇದು ಎಲ್ಲೆಡೆ ವ್ಯಾಪಕವಾಗಿ ಟೀಕೆಗೆ ಒಳಗಾಯಿತು. ಚೈನಾದ ಸರಕಾರ ಕಾನೂನು ಉಲ್ಲಂಘನೆ ಮಾಡಿದನೆಂದು ಆತನ ಎಲ್ಲ ಸಂಶೋಧನೆಗಳನ್ನು ಮುಂದುವರೆಸದಂತೆ ತಡೆಹಿಡಿಯಿತು. ಆ ದೇಶದ ಸರಕಾರದಿಂದಲೇ ಈ ಸಂಶೋಧನೆಗೆ ಹಣ ಸಂದಾಯವಾಗಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದವು.

ಪಿಜಿಡಿಯ ಮೂಲಕ ತಂದೆ ತಾಯಿಗಳು ತಮ್ಮದೇ ಬ್ರೂಣಗಳಲ್ಲಿ ಆರೋಗ್ಯವಂತ ಬ್ರೂಣವೊಂದನ್ನು ಆಯ್ಕೆಮಾಡಿಕೊಳ್ಳಲು ಮಾತ್ರ ಸಾಧ್ಯ. ಅಕಸ್ಮಾತ್ ಎಲ್ಲ ಬ್ರೂಣಗಳಲ್ಲೂ ಅವರಿಗಿರುವ ಖಾಯಿಲೆ ಅನುವಂಶಿಕವಾಗಿ ಬಂದಿದ್ದಲ್ಲಿ ಅವರೇನೂ ಮಾಡುವ ಹಾಗಿಲ್ಲ. ಆದರೆ ಕ್ರಿಸ್ಪರ್/ಕ್ಯಾಸ್೯ ನ ಮುಖಾಂತರ ಅಂತಹ ಜೀನ್ ಗಳನ್ನೇ ತುಂಡರಿಸಿ ಎಸೆಯುವ ಮೂಲಕ ಮುಂದಿನ ಕೆಲ ಪೀಳಿಗೆಗಳಲ್ಲಿ ಈ ಪಿಡುಗುಗಳನ್ನೇ ನಾಮಾವಶೇಷ ಮಾಡುವ ಕನಸು ಕಾಣಲಾಗುತ್ತಿದೆ. ಆದರೆ ಇದು ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಲ್ಲ. ವಂಶವಾಹಿಗಳು ಅತೀ ಸಂಕೀರ್ಣವಾಗಿದ್ದು ಅವುಗಳನ್ನು ಬದಲಿಸುವ ಮೊದಲು ಅದರ ಒಳಹೊರಗನ್ನು ಅರಿತಿರಬೇಕು. ಈ ಬದಲಾವಣೆಗಳು ಕೇವಲ ಆ ವ್ಯಕ್ತಿಗಷ್ಟೇ ಸೀಮಿತವಾಗದೆ ಮುಂದಿನವರಿಗೂ ಹರಿಯುವುದರಿಂದ ಪ್ರಯೋಗದಲ್ಲಿ ಸ್ವಲ್ಪ ಎಡವಟ್ಟಾದರೂ ಅದು ಬಹಳಷ್ಟು ಜೀವಗಳನ್ನು ಆಹುತಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

ಇದನ್ನೆಲ್ಲಾ ಮಾಡಲು ಸಾಧ್ಯವೇ ಎನ್ನುವುದಕ್ಕಿಂತ ಇಂತಹ ಪ್ರಯೋಗಗಳನ್ನು ಮಾಡಬೇಕೆ ಬೇಡವೇ ಎನ್ನುವುದೇ ಇಂದಿನ ದೊಡ್ಡ ಸವಾಲು? ವೈದ್ಯಕೀಯ ವಲಯದಲ್ಲಿ ಇದು ಒಂದು ಅದ್ಭುತವನ್ನೇ ಮಾಡಬಹುದಾದರೂ ಸಮಾಜದ ಸ್ವಾಸ್ತ್ಯ ಕೆಡಿಸುವಲ್ಲಿಯೂ ಇದರ ಪ್ರಯೋಗವಾಗುವ ಸಾಧ್ಯತೆ ಇದೆ. ಹರಿತವಾದ ಕತ್ತಿಯಲುಗಿನಂತೆ ಬಳಸುವವರ ಕೈಗೊಂಬೆಯಾಗಬಲ್ಲದು. ಹಣ ಮಾಡುವ ಹೊಸ ದಾರಿಯಾಗಬಲ್ಲದು. ಇನ್ನು ಗುಣಗಳನ್ನು ಬದಲಾಯಿಸುವ ಪ್ರಯೋಗವಂತೂ ಮಾನವ ಸಂಕುಲವನ್ನು ಅಧಃಪತನದತ್ತ ಜಾರುವಂತೆ ಮಾಡುತ್ತದೆಯೇ? ಸಾವಿನ ಸಂಖ್ಯೆ ಇಳಿಮುಖವಾಗಿ ಜನಸಂಖ್ಯೆ ಇನ್ನಷ್ಟು ಏರುತ್ತದೆಯೇ? ಬಹಳಷ್ಟು ದೇಶಗಳಲ್ಲಿ ಇದರ ಬಳಕೆ ನಿಷೇಧವಿದ್ದರೂ, ತೀವ್ರ ವಿರೋಧ ವ್ಯಕ್ತವಾಗಿದ್ದರೂ ಕೆಲವಾರು ಕಂಪೆನಿಗಳು ಗುಟ್ಟಾಗಿ ತಮ್ಮ ಹಣವನ್ನು ಇಂತಹ ಸಂಶೋಧನೆಗಳಿಗೆ ಸುರಿಯುತ್ತಿವೆ. ಇದೊಂದು ಮಹತ್ಕಾರ್ಯ ಎಂಬ ಸಕಾರಾತ್ಮಕ ಭಾವನೆಯುಳ್ಳ ಹಲವರು ಈ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ನಮ್ಮೀ ಅತ್ಯಾಸೆ ಕೊನೆಗೆ ನಮ್ಮನ್ನು ಎಲ್ಲಿ ತಂದು ನಿಲ್ಲಿಸುವುದೋ ಕಾಲವೇ ಉತ್ತರಿಸಬೇಕಿದೆ.

[ ತರಂಗ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ ]

Saturday, 22 February 2020

ಗಲಿವರ್ಸ್ ಟ್ರಾವೆಲ್ಸ್ - ಜೊನಾಥನ್ ಸ್ವಿಫ್ಟ್



ಅಮ್ಮ ಅಮ್ಮ ಗಲಿವರ ಮತ್ತು ಲಿಲ್ಲಿಪುಟ್ ಗಳ ಕಥೆ ಹೇಳಮ್ಮ ಅಂತ ಆಗಾಗ ಅಮ್ಮನನ್ನು ಕೇಳುತ್ತಿದ್ದೆ ನಾನು. ಗಲಿವರನೆಂಬ ನಾವಿಕ ತನ್ನ ಸಮುದ್ರಯಾನದ ಸಮಯದಲ್ಲಿ ದಿಕ್ಕುತಪ್ಪಿ ಲಿಲ್ಲಿಪುಟ್ ಗಳೆಂಬ ಬೆರಳೆತ್ತರದ ಮನುಷ್ಯರ ನಾಡನ್ನು ತಲುಪುವ ಕಥೆ ಎಂದಿಗೂ ಸೋಜಿಗವನ್ನುಂಟುಮಾಡುತ್ತಿತ್ತು. ಗಲಿವರ, ಲಿಲ್ಲಿಪುಟ್ ಗಳು ನಮ್ಮವರೇ ಏನೋ ಎನ್ನುವಷ್ಟು ಆಳವಾಗಿ ನಮ್ಮ ಭಾಷೆಯಲ್ಲಿ ಆ ಪದಗಳು ಬೆರೆತುಹೋಗಿವೆ.  

ಗಲಿವರನ ಸಾಹಸಗಳನ್ನು ಮಕ್ಕಳ ಕಥೆಗಳೆಂದೇ ತಿಳಿದಿದ್ದ ನನಗೆ ಈಗ್ಗೆ ಹತ್ತು ವರ್ಷಗಳ ಹಿಂದೆ ಕನ್ನಡ ಅನುವಾದಿತ ಪುಸ್ತಕವೊಂದು ಸಿಕ್ಕಿತ್ತು ( ಹೆಸರು ಮರೆತಿದ್ದೇನೆ. ಗೆಳೆಯರೊಬ್ಬರು ಓದಲು ಕೊಂಡುಹೋಗಿದ್ದ ಪುಸ್ತಕ ವಾಪಸು ಬರಲೇ ಇಲ್ಲ) . ಅದನ್ನು ಓದಿದ ಮೇಲೆಯೇ ತಿಳಿದದ್ದು, ಅದು ಮಕ್ಕಳಿಗೆಂದು ಬರೆದ ಕಥೆಗಳಲ್ಲವೇ ಅಲ್ಲ. ಆಗಿನ ಬ್ರಿಟಿಷ್ ದೇಶದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನಿಲುವುಗಳನ್ನು ಪ್ರಶ್ನಿಸುವ, ಅಲ್ಲಿನ ಕುಂದುಕೊರತೆಗಳನ್ನು ಎತ್ತಿ ಹಿಡಿಯುವ ವಿಡಂಬನಾತ್ಮಕ ಪುಸ್ತಕ ಎಂದು. ಕನ್ನಡದಲ್ಲಿ ಓದಿದ ಮೇಲೆ ಇಂಗ್ಲಿಷ್ನಲ್ಲೂ ಓದಿ ನೋಡೋಣವೆಂದು ಇತ್ತೀಚೆಗೆ ಕಿಂಡಲ್ ನಲ್ಲಿ ಉಚಿತವಾಗಿ ದೊರೆತ ಗಲಿವರ್ಸ್ ಟ್ರಾವೆಲ್ಸ್  ಪುಸ್ತಕ ಓದಿದೆ. ಗಲಿವರ್ಸ್ ಟ್ರಾವೆಲ್ಸ್ ಹೊತ್ತಿಗೆ ಓದುಗರ ಕೈಸೇರಿ ಶತಮಾನಗಳೇ ಕಳೆದರೂ ಅದರ ಸೊಗಸು ಪ್ರಸ್ತುತಕ್ಕೂ ಮಾಸಿಲ್ಲ. 

ಗಲಿವರನ ಕಡಲಯಾನದ ಸಾಹಸಗಳನ್ನು ನಾವು  ಓದಿಯೇ ಸವಿಯಬೇಕು. ಮೊದಲ ಪರ್ಯಟನೆಯ ಸಮಯದಲ್ಲಿ ಅವನಿದ್ದ ಹಡಗು ಮುಳುಗಿ ಲಿಲ್ಲಿಪುಟ್ ಗಳ ಕೈಸೆರೆಯಾಗುತ್ತಾನೆ. ಅವರ ಪುಟ್ಟ ಕಣ್ಣುಗಳಿಗೆ ಗಲಿವರ ಬೆಟ್ಟಪ್ಪ. ಅಲ್ಲಿನ ರಾಜನ, ಪ್ರಜೆಗಳೊಂದಿಗಿನ ಒಡನಾಟ, ಬೆಂಕಿಪೊಟ್ಟಣಗನ್ನು ಜೋಡಿಸಿಟ್ಟಂತೆ ಪುಟ್ಟ ಕಟ್ಟಡಗಳು, ಪಾಳುಬಿದ್ದ ದೇವಸ್ಥಾನದಲ್ಲಿ ಇವನ ವಾಸ, ಅವರ ನಂಬಿಕೆಗಳು, ಆಚರಣೆಗಳು ಇವೆಲ್ಲವುಗಳ ವಿವರಣೆ ಇದೆ. ಮೊಟ್ಟೆಯನ್ನು ಯಾವ ತುದಿಯಿಂದ ಒಡೆಯಬೇಕೆಂಬ ವಿಚಾರಕ್ಕೆ ಪಕ್ಕದ ರಾಜ್ಯವಾದ ಬ್ಲೇಫುಸ್ಕು ಗಳೊಂದಿಗೆ ಲಿಲ್ಲಿಪುಟ್ ಗಳ ಕಾದಾಟ, ಕೆಲವೊಮ್ಮೆಕಾರಣವೇ ಇಲ್ಲದೆ ಹೊಡೆದಾಡುವ ನಮ್ಮನ್ನೇ ನೆನಪಿಸುತ್ತದೆ. ಕೊನೆಯಲ್ಲಿ ಗಲಿವರನ ವಿರುದ್ಧವೇ ಪಿತೂರಿ ನಡೆದು, ಅಲ್ಲಿನ ದೊರೆ ಅವನ ಕಣ್ಣುಗಳನ್ನು ಕೀಳುವ ಆಜ್ಞೆನೀಡಿದಾಗ ಬೆಟ್ಟಪ್ಪ ಸಣ್ಣ ಬೋಟಿನ ಸಹಾಯದಿಂದ ಪರಾರಿಯಾಗುತ್ತಾನೆ.  

ಇವನ ಪ್ರಯಾಣಗಳು ಕೇವಲ ಲಿಲ್ಲಿಪುಟ್ ಗಳ ನಾಡಿಗೆ ಸೀಮಿತವಲ್ಲ. ಅಲ್ಲಿಂದ ಮುಂದೆ ಬ್ರಾಬ್ದಿನ್ಗ್ ನಾಗ್ ದ್ವೀಪದಲ್ಲಿ ೫೦ ಅಡಿಗಳಿಗೂ ಎತ್ತರದ ಬೃಹತ್ ಮನುಷ್ಯರ ಕೈಗೆ ಸಿಕ್ಕಿಕೊಳ್ಳುವ ಸಂಗತಿ ಇದೆ. ಅಲ್ಲಿ ಗಲಿವರ ಅವರ ಪ್ರದರ್ಶನದ ಬೊಂಬೆಯಾಗುತ್ತಾನೆ. ಬೀದಿ ಬೀದಿಯಲ್ಲಿ ಇವನನ್ನು ನೋಡಲು ಬರುವ ಜನರೆದುರು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪ್ರದರ್ಶನಗಳನ್ನು ನೀಡುತ್ತಾ ಬಹಳ ಬಳಲುತ್ತಾನೆ. ಪ್ರಾಣಿಗಳನ್ನು ನಮ್ಮ ಹೊಟ್ಟೆಪಾಡಿಗಾಗಿ ದುಡಿಸಿಕೊಳ್ಳುವ ನಮ್ಮದೇ ಕಥೆ ಅದು ಎಂದೆನಿಸದೇ ಇರಲಾರದು. ಅದೃಷ್ಟವಶಾತ್ ಅಲ್ಲಿನ ರಾಣಿ ಹೆಚ್ಚಿನ ಬೆಲೆ ತೆತ್ತು ಇವನ್ನನ್ನು ಕೊಂಡುಕೊಂಡು ಜೊತೆಯಲ್ಲಿರಿಸಿಕೊಳ್ಳುತ್ತಾಳೆ. ಮುಂದೆ ಅರಮನೆಯಲ್ಲಿನ ಕುಬ್ಜನೊಬ್ಬನ ಕುತಂತ್ರಗಳು,  ಹೆಜ್ಜೇನುಗಳೊಂದಿಗೆ ಕಾದಾಟ, ಮಂಗನ ಕೈಗೆ ಸಿಕ್ಕಿಕೊಳ್ಳುವ ಕಥೆ, ಅಲ್ಲಿನ ರಾಜನ ಜೊತೆ ನಡೆವ ಮಾತು ಕಥೆಗಳು, ಯೂರೋಪಿನ ಜನರ ಯುದ್ದೋತ್ಸಾಹ, ಕೋವಿ ಫಿರಂಗಿಗಳ ಬಳಕೆಯ ಬಗ್ಗೆ ರಾಜನ ಅಸಮ್ಮತಿ ಎಲ್ಲವೂ ರಸಗವಳವೇ ಸರಿ. 

ಮೂರನೇ ಯಾನದಲ್ಲಿ ಕಡಲ್ಗಳ್ಳರ ಕೈಗೆ ಸಿಕ್ಕಿ ತೊಂದರೆಗೊಳಗಾಗಿ ಲ್ಯಾಪುಟ ಎಂಬ ತೇಲುವ ದ್ವೀಪ ಸೇರುತ್ತಾನೆ ಗಲಿವರ. ಆ ನಾಡಿನ ಪ್ರವಾಸದ ಸಂದರ್ಭದಲ್ಲಿ ಲಗಾಡೋ ಎಂಬಲ್ಲಿನ ಗ್ರಾಂಡ್ ಅಕಾಡೆಮಿಯಲ್ಲಿ ನಡೆಯುತ್ತಿದ್ದ ಸೌತೆಕಾಯಿಗಳಿಂದ ಸೂರ್ಯಕಿರಣಗಳನ್ನು ಹೊರತೆಗೆಯುವ ಬಗೆ ಹೇಗೆ, ಕಲ್ಲುಗಳನ್ನು ಮೃದುವಾಗಿಸಿ ದಿಂಬುಗಳನ್ನಾಗಿ ಉಪಯೋಗಿಸುವ ಮಾರ್ಗ, ಸಂಶಯಾಸ್ಪದ ವ್ಯಕ್ತಿಯ  ಮಲವಿಸರ್ಜನೆಯನ್ನು ಪರೀಕ್ಷಿಸಿ ಆತನ ಉದ್ದೇಶಗಳನ್ನು ತಿಳಿಯುವ ಬಗೆ ಮುಂತಾದ  ಅರ್ಥಹೀನ ವೈಜ್ಞಾನಿಕ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ, ಬ್ರಿಟಿಷರ ಅಂಧಶ್ರದ್ಧೆಯನ್ನು ಟೀಕಿಸುತ್ತಾನೆ. ಲುಗ್ಗ್ ನಾಗ್ಗ್ ದ್ವೀಪದಲ್ಲಿನ ಸ್ಟ್ರುಲ್ಡ್ ಬ್ರುಗ್ಸ್ ಗಳೆಂಬ ಸಾವಿಲ್ಲದ ಜನರ ಶೋಚನೀಯ ಸ್ಥಿತಿ, ಗ್ಲುಬ್ ಡುಬ್ ಡ್ರಿಬ್ ನಲ್ಲಿ ಜೂಲಿಯಸ್ ಸೀಸರ್, ಬ್ರುಟಸ್, ಅರಿಸ್ಟಾಟಲ್ ಮುಂತಾದ ಆತ್ಮಗಳ ಜೊತೆ ಸಂವಾದ ಇವನ ಪ್ರವಾಸದ ಮುಖ್ಯಾಂಶಗಳು. 

ಕೊನೆಯ ಭಾಗದಲ್ಲಿ ಕುದುರೆಗಳ ನಾಡಿನಲ್ಲಿ ಹ್ವಿನ್ ಹನ್ಮ್ಸ್ ಗಳ ಜೊತೆ ಕಳೆಯುವ ೫ ವರ್ಷಗಳ ರಸವತ್ತಾದ ವಿವರಣೆ ಇದೆ. ಮನುಷ್ಯರನ್ನೇ ಹೋಲುವ ಯಾಹೂಗಳೆಂಬ ಪ್ರಾಣಿಗಳು, ಮಣ್ಣಿನಲ್ಲಿ ಸಿಗುವ ಯಾವುದೋ ಬಣ್ಣದ ಕಲ್ಲಿಗಾಗಿ ಅವುಗಳ ಹೊಡೆದಾಟ, ಹೊಟ್ಟೆ ತುಂಬುವಷ್ಟು ಊಟ ಕೊಟ್ಟರೂ ಪಕ್ಕದವರ ತಟ್ಟೆಗೆ ಕೈಹಾಕುವ ಅತ್ಯಾಸೆ, ಅತಿಯಾಗಿ ತಿಂದು ಖಾಯಿಲೆ ಬರಿಸಿಕೊಂಡು ಒದ್ದಾಡುವ ಅವುಗಳ ಗುಣ ಅಲ್ಲಿನ ಕುದುರೆಗಳಿಗೆ ಅಸಹ್ಯ ಹುಟ್ಟಿಸಿರುತ್ತವೆ. ಅಲ್ಲಿ ಯಾಹೂಗಳೇ ಕೆಲಸಗಾರರು. ಇಲ್ಲಿನ ಕುದುರೆಗಳು ಮನುಷ್ಯರನ್ನು ಹೊತ್ತೊಯ್ಯುವಂತೆ ಅಲ್ಲಿ ಯಾಹೂಗಳು ಕುದುರೆಗಳ ಸೇವೆ ಮಾಡುತ್ತಿರುತ್ತವೆ. ಕೆಲ ವರ್ಷಗಳನ್ನು ಅಲ್ಲಿ ಕಳೆದ ಗಲಿವರನೂ ಒಬ್ಬ ಯಾಹೂ ಎಂದು ತಿಳಿದು ಅಲ್ಲಿನ ಕುದುರೆಗಳು ಅವನಿಗೆ ನಿನ್ನ ನಾಡಿಗೆ ವಾಪಸಾಗೆಂದು ಹೇಳುತ್ತವೆ. ಇಷ್ಟವಿಲ್ಲದಿದ್ದರೂ ಅವರಿಗೆ ವಿದಾಯ ಹೇಳಿ ಅಲ್ಲಿ ಇಲ್ಲಿ ಅಲೆದಾಡುತ್ತಾ ಕೊನೆಗೆ ಇಂಗ್ಲೆಂಡ್ ತಲುಪಿಕೊಳ್ಳುತ್ತಾನೆ. ಮನುಷ್ಯರೆಂಬ ಯಾಹೂಗಳೊಂದಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಾ, ಹೆಂಡತಿ ಮಕ್ಕಳನ್ನೇ ದೂರವಿಟ್ಟು ಕುದುರೆಗಳೊಂದಿಗೆ ಸಮಯ ಕಳೆಯುತ್ತಾ ತನ್ನ ಮುಂದಿನ ದಿನಗಳನ್ನು ಕಳೆಯುವ ಗಲಿವರನ ಮಾತುಗಳೊಂದಿಗೆ ಈ ಪುಸ್ತಕ ಕೊನೆಯಾಗುತ್ತದೆ.  

Saturday, 1 February 2020

ಕ್ಯಾರಿ - ಸ್ಟೆಫೆನ್ ಕಿಂಗ್


ಹಾರರ್ , ಥ್ರಿಲ್ಲರ್  ಕಥೆಗಳ ಮೂಲಕ  ಪ್ರಸಿದ್ದಿ ಪಡೆದ ಸ್ಟೆಫೆನ್ ಕಿಂಗ್ ರ ಕ್ಯಾರಿ ಪುಸ್ತಕವನ್ನ ಕೈಗೆತ್ತಿಕೊಂಡಿದ್ದೆ. ಕೆಲವು ಪುಟಗಳನ್ನ ತಿರುವಿಹಾಕುವುದರೊಳಗಾಗಿ ಪೂರ್ತಿ ಕಥೆಯ ಹಿಡಿತ ಸಿಕ್ಕಿಬಿಡುತ್ತದೆ. ಆದರೂ ಮುಂದೆ ಓದಿಸಿಕೊಂಡು ಹೋಗುತ್ತದೆಂಬುದು ಇದರ ಧನಾತ್ಮಕ ಅಂಶ. 

ಇದು ಅವರ ಮೊದಲ ಪುಸ್ತಕ. ಕ್ಯಾರಿ ಎನ್ನುವ ಪಾತ್ರದ ಸುತ್ತ ಸುತ್ತುವ ಕಥೆ. ತನ್ನ ತಾಯಿಯ ವಿಪರೀತ ಎನಿಸುವಂತಹ  ಧಾರ್ಮಿಕತೆಯ ಮಧ್ಯೆ ಬೆಳೆಯುವ ಆಕೆ, ಬೇರೆಲ್ಲ ಸ್ನೇಹ ಸಂಬಂಧಗಳಿಂದ ವಂಚಿತೆ. ನಿತ್ಯವೂ ಸಹಪಾಠಿಗಳಿಂದ ಕಿರುಕುಳ, ಅವಮಾನಕ್ಕೆ ಗುರಿಯಾಗುತ್ತಿರುತ್ತಾಳೆ. ಆದರೆ ಎಲ್ಲರಂತೆ ಸಾಮಾನ್ಯ ಹುಡುಗಿಯಲ್ಲ ಅವಳು. ತನ್ನ ಮನಸ್ಸಿನ ಮೂಲಕವೇ ವಸ್ತುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬಲ್ಲ ಟೆಲಿಕೈನೆಟಿಕ್ ಶಕ್ತಿ ಆಕೆಗೊಲಿದಿರುತ್ತದೆ. 

ಹೈಸ್ಕೂಲು ಕೊನೆಯ ವರ್ಷದ ಪ್ರಾಮ್ ನೈಟ್ ಗೆ ಸಹಪಾಠಿಯೊಂದಿಗೆ ಕ್ಯಾರಿ ವೈಟ್ ಗೆ ಕನಸೋ, ನಿಜವೋ ಎನ್ನುವಷ್ಟು ಸುಂದರವೆನಿಸುತ್ತದೆ ಆ ರಾತ್ರಿ. ಆದರೆ ಅಲ್ಲಾಗಲೇ ಆಕೆಯ ವಿರುದ್ಧ ಸಂಚೊಂದು ರೂಪುಗೊಂಡಿರುತ್ತದೆ. ಅದರ ಸುಳಿಗೆ ಸಿಕ್ಕಿಬಿದ್ದು ಅವಮಾನಿತಳಾದಾಗ ಕ್ಯಾರಿ ತನ್ನ ಅತಿಮಾನುಷ ಶಕ್ತಿಯ ಮೊರೆಹೋಗುತ್ತಾಳೆ. ಮುಂದೆ ? ಓದಿ ನೋಡಿ. 

ಮೇಲೆ ಹೇಳಿದಂತೆ ಮೊದಲ ಕೆಲ ಪುಟಗಳಲ್ಲೇ ಪೂರ್ತಿ ಸಾರಾಂಶ ಅಡಗಿದ್ದರೂ, ಕ್ಯಾರಿ ಕಾಡುವ ನೆನಪಿನಲ್ಲುಳಿಯುವ ಪಾತ್ರ. 

Saturday, 25 January 2020

ದ ಅನ್ ಎಕ್ಸ್ಪೆಕ್ಟೆಡ್ ಗೆಸ್ಟ್ - ಅಗಾಥಾ ಕ್ರಿಸ್ಟಿ




ನವೆಂಬರ್ ತಿಂಗಳ ಮಂಜು ಕವಿದ ಮಧ್ಯರಾತ್ರಿ. ಸೌತ್ ವೇಲ್ಸ್ ನ ಯಾವುದೋ ಹಳ್ಳಿಗಾಡಿನ ಕಿರಿದಾದ  ಹಾದಿಯ ತಿರುವೊಂದರಲ್ಲಿ ನಿಂತಿದ್ದ ಮೂರು ಅಂತಸ್ತಿನ ಸುಂದರ ಭವನ. ಅದರೆದುರಿಗೆ ವಿಶಾಲ ಉದ್ಯಾನ. ಸುತ್ತ ಮುತ್ತ ಹತ್ತಿರದಲ್ಲಿ ಮನೆಯೊಂದೂ ಕಾಣಲಾರದು. ಅಂತಹ ಚಳಿಗಾಲದ ರಾತ್ರಿಯಲ್ಲಿ, ಅದೇ ಮನೆಯ ಎದುರಿನ ದಾರಿಯಲ್ಲಿ, ಸುಮಾರು ಮೂವತ್ತೈದು ವರ್ಷದ ಯುವಕನೊಬ್ಬ ಹೂತುಹೋಗಿದ್ದ ತನ್ನ ಕಾರಿನ ಚಕ್ರಗಳನ್ನು ಹೊರಗೆಳೆಯುವ ಹರಸಾಹಸದಲ್ಲಿರುತ್ತಾನೆ. ತನ್ನ ಪ್ರಯತ್ನ ಫಲಿಸದೆ, ಇನ್ನೇನು ಮಾಡಲೂ ತೋಚದೆ ಸಹಾಯಕ್ಕಾಗಿ ಆ ಒಂಟಿ ಮನೆಯ ಬಾಗಿಲು ತಟ್ಟಬೇಕಾಗುತ್ತದೆ. ಒಳಗಿಂದ ಯಾವುದೇ ಉತ್ತರ ಬರದು. ಅಲ್ಲೇ ಪಕ್ಕದಲ್ಲಿದ್ದ ಫ್ರೆಂಚ್ ಕಿಟಕಿಗಳ ಸಹಾಯದಿಂದ ಒಳದಾಟಿದ ಕಾರಿನ ಚಾಲಕನಿಗೆ ಎದುರಾಗುವುದು ಮನೆಯೊಳಗೆ ಹರಡಿದ್ದ ನಿಶ್ಯಬ್ದತೆಯ ನಡುವಲ್ಲಿ, ಕುರ್ಚಿಯೊಂದರ ಮೇಲೆ ಕುಳಿತಲ್ಲೇ ನಿದ್ರೆಗೆ ಜಾರಿದ ಮಧ್ಯವಯಸ್ಕನನ್ನು ಕಂಡ ಕಾರಿನ ಚಾಲಕ ತನ್ನ ಪರಿಸ್ಥಿತಿಯನ್ನು ವಿವರಿಸಿ ಸಹಾಯ ಕೋರುತ್ತಾನೆ. ಆದರೆ ಆತನ ನಿದ್ರಾಭಂಗಿ ಬದಲಾಗದು . ಭುಜ ಹಿಡಿದು ಎಚ್ಚರಿಸಲು ನೋಡಿದಾಗ ಆತ ಹೆಣವಾಗಿದ್ದನೆಂದು ತಿಳಿಯುತ್ತದೆ.  ಹತ್ತಿರದಲ್ಲೇ ಕೈಯಲ್ಲಿ ಬಂದೂಕು ಹಿಡಿದು ನಿಂತ ಸುಂದರವಾದ ಯುವತಿ. ತಾನೇ  ತನ್ನ ಗಂಡನನ್ನು ಕೊಂದೆನೆಂದು ತಪ್ಪೊಪ್ಪಿಕೊಳ್ಳುತ್ತಾಳೆ. ಆಕೆಯ ಸೌಂದರ್ಯಕ್ಕೆ ಸೋತ ಕಾರಿನ ಚಾಲಕ, ಆಕೆಗೆ ಸಹಾಯ ಮಾಡಲು ಮುಂದಾಗುತ್ತಾನೆ. ಇಬ್ಬರೂ ಸೇರಿ ಹೊಸದೊಂದು ಸಂಚು ರೂಪಿಸುತ್ತಾರೆ. ಮುಂದೆ? ಆಕೆ ಹೇಳಿದ್ದು ನಿಜವೇ ? ಆ ಸೌಂದರ್ಯದ ಹಿಂದೆ ಮೋಸವಡಗಿದೆಯೇ? ಆ ಕಾರಿನ ಚಾಲಕ ಯಾರಿಗೋ ಸಹಾಯ ಮಾಡಲು ಹೋಗಿ ತಾನೇ ತೊಂದರೆಗೀಡಾಗುತ್ತಾನೆಯೇ? 

ಅಗಾಥಾ ಕ್ರಿಸ್ಟಿ ಯವರ ಎಲ್ಲ ಪತ್ತೇದಾರಿ ಕಥೆಗಳಂತೆ ಈ ಪುಸ್ತಕ ಸಹ ಕೊನೆಯವರೆಗೂ ತನ್ನ ಕುತೂಹಲ ಉಳಿಸಿಕೊಳ್ಳುತ್ತದೆ. ಮರ್ಡರ್ ಇನ್ ದಿ ಓರಿಯಂಟ್ ಎಕ್ಸ್ಪ್ರೆಸ್, ದೆನ್ ದೇರ್ ವರ್ ನನ್ ಗಳಂತಹ ಅದ್ಭುತ ಪುಸ್ತಕಗಳ ಸಾಲಿಗೆ ಸೇರಿಸಲಾಗದಿದ್ದರೂ, ಓದುಗರಲ್ಲಿನ ಪತ್ತೇದಾರನನ್ನು ಜಾಗೃತಗೊಳಿಸುವುದಂತೂ ನಿಜ. ಒಂದೇ ಪಟ್ಟಿಗೆ ಮುಗಿಸಬಹುದಾದ ಚಿಕ್ಕ ಪುಸ್ತಕವಿದು. 

Monday, 18 November 2019

ರೋಮ್ ಕೊಲೋಸಿಯಂನಲ್ಲಿ ಒಂದು ದಿನ

ಕೊಲೋಸಿಯಂನ ಎದುರು ನಾನು
ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ರೋಮ್ ಸಾಮ್ರಾಜ್ಯದ ಸುವರ್ಣಯುಗಕ್ಕೆ ಸಾಕ್ಷಿ ಎಂಬಂತೆ ಎದುರಿಗೆ ನಿಂತಿತ್ತು ಬೃಹತ್ ರಂಗಮಂದಿರ. ಪ್ಲಾವಿಯನ್ ಆಂಫಿಥಿಯೇಟರ್ ಎಂಬ ಹೆಸರಿದ್ದರೂ ಕೊಲೋಸಿಯಂ ಎಂದೇ ಕರೆಸಿಕೊಳ್ಳುವ ಜಗದ್ವಿಖ್ಯಾತ ಕಟ್ಟಡದ ಮುಂದೆ ಕುಬ್ಜರಂತೆ ನಿಂತಿದ್ದೆವು ನಾವು.ಚಳಿಗಾಲದ ಸಮಯ. ಶೀತಗಾಳಿ ರೊಯ್ಯನೆ ಬೀಸಿ ಮೈ ನಡುಗುವಂತೆ ಮಾಡುತಿತ್ತು.ಸೂರ್ಯ ಸಹ ಆಗಷ್ಟೇ ಕತ್ತಲಿನ ಹೊದಿಕೆಯೊಳಗಿಂದ ಹೊರದಾಟುತ್ತಿದ್ದ. ಮುಂಜಾನೆಯಲ್ಲಿ ಒಂದಷ್ಟು ಭದ್ರತಾ ಸಿಬ್ಬಂದಿಗಳನ್ನು ಬಿಟ್ಟರೆ ಬೇರಾರೂ ಇರದೆ ಪ್ರಶಾಂತವಾಗಿತ್ತು ಆ ಜಾಗ. ಬೆಳಕು ಬಿರಿದಂತೆಲ್ಲ ನಿಧಾನವಾಗಿ ಒಬ್ಬೊಬ್ಬರೇ ಹಾಜರಾಗತೊಡಗಿದರು.ಟಿಕೆಟ್ ನ ಸಾಲು ಬೆಳೆಯತೊಡಗಿತ್ತು.ನಾವು ಮೊದಲೇ ಗೈಡೆಡ್ ಟೂರ್ ಟಿಕೆಟ್ ಕೊಂಡುಕೊಂಡಿದ್ದರಿಂದ ಸರತಿಯಲ್ಲಿ ನಿಂತು ಕಾಯುವ ಪ್ರಮೇಯವೇ ಒದಗಲಿಲ್ಲ.

ಕೊಲೋಸಿಯಂನ ಪಕ್ಕದಲ್ಲಿ ಇರುವ ಆರ್ಚ್ ಆಫ್ ಕಾನ್ಸ್ಟೆಂಟೈನ್ 
ನಿಗಧಿತ ಸಮಯಕ್ಕೆ ಸರಿಯಾಗಿ ಕೈಲೊಂದು ಬಾವುಟ ಹಿಡಿದು ಎದುರಾದಳು ನಮ್ಮ ಮಾರ್ಗದರ್ಶಿ ಇಲಾರಿಯ.ಮುಂದಿನ ಸುಮಾರು ಒಂದೂವರೆ ಗಂಟೆಗಳ ಕಾಲ ಕೊಲೋಸಿಯಂನ  ರೋಚಕ ಹಾಗೂ ಭಯಾನಕ ಕಥೆಗಳಿಗೆ ಕಿವಿಯಾಗಲಿದ್ದೆವು ನಾವು. ಮೊದಲಿಗೆ ಇಲಾರಿಯ ನಮ್ಮನ್ನು ಮಧ್ಯ ವೇದಿಕೆಗೆ ಕರೆದೊಯ್ದಳು. ಅದನ್ನು ಅರೀನಾ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಅರೀನಾ ಎಂದರೆ ಮರಳು ಎಂದರ್ಥ. ಹಿಂದೆ ಗ್ಲಾಡಿಯೇಟರ್ ಕಾಳಗಗಳು ನಡೆದಾಗ ಸುರಿದ ರಕ್ತ ಇಂಗಿಹೋಗಲೆಂದು  ಅಂಕಣದ ತುಂಬ ಮರಳು ಚೆಲ್ಲುತ್ತಿದ್ದರಂತೆ. ಹಾಗಾಗಿ ಈ ಹೆಸರಂತೆ. ಕೊಲೋಸಿಯಂ ಖೈದಿಗಳನ್ನಿಡುವ ಬಂದೀಖಾನೆಯಲ್ಲ.ಅಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವೇ ಹೊರತು ಯಾರೂ ವಾಸವಾಗಿರಲಿಲ್ಲ. ಆದರೆ ಕೊಲೋಸಿಯಂ ಎಷ್ಟು ಭವ್ಯವಾಗಿತ್ತು, ಅಗಾಧವಾಗಿತ್ತು ಎಂದರೆ ಸುಮಾರು ೫೦೦೦೦ ಜನರಿಗೆ ಅಲ್ಲಿ ಒಮ್ಮೆಗೆ ಕೂರಲು ಸ್ಥಳಾವಕಾಶ ಇತ್ತು. ಸಮಾಜದ ಸ್ಥಿತಿಗತಿಗಳಿಗೆ ಅನುಗುಣವಾಗಿ ಐದು ಸ್ಥರಗಳಲ್ಲಿ ಆಸನದ  ವ್ಯವಸ್ಥೆ ಮಾಡಲಾಗಿತ್ತು. ಅತೀ ಗಣ್ಯ ವ್ಯಕ್ತಿಗಳ ಆಸನ ವೇದಿಕೆಗೆ ತೀರಾ ಸಮೀಪವಾಗಿದ್ದರೆ ಜನಸಾಮಾನ್ಯರು ಕೊನೆಯ ಹಂತದಲ್ಲಿ ಕುಳಿತುಕೊಳ್ಳಬೇಕಾಗಿತ್ತು. 

ಕ್ರಿಸ್ತ ಪೂರ್ವದಲ್ಲಿ ಪ್ರಾರಂಭವಾದ ಈ ಗ್ಲಾಡಿಯೇಟರ್ ಕಾಳಗಗಳು ಸಾಮಾನ್ಯವಾಗಿ ವಿದೇಶಗಳಿಂದ ಆಮದಾದ ಜೀತದಾಳುಗಳ ಮಧ್ಯೆ ನಡೆಯಲ್ಪಡುತಿತ್ತು. ಇದಕ್ಕಾಗಿ ವರ್ಷಗಟ್ಟಲೆ ತರಬೇತಿಯನ್ನು ಸಹ ನೀಡಲಾಗುತಿತ್ತು. ಮಾಡು ಇಲ್ಲವೇ ಮಡಿ ಎಂಬಂತೆ ಹೆಚ್ಚಿನ ಹೊಡೆದಾಟಗಳು ಸಾವಿನಲ್ಲಿ ಅಂತ್ಯವಾಗುತಿತ್ತು. ಗೆದ್ದವನಿಗೆ ಗ್ಲಾಡಿಯೇಟರ್ ಎಂಬ ಬಿರುದು ನೀಡಲಾಗುತ್ತಿತ್ತು. ನಂತರದ ಶತಮಾನಗಳಲ್ಲಿ ಈ ರೀತಿಯ ಸ್ಪರ್ಧೆಗಳು ಅಮಾನವೀಯವೆನಿಸಿ ಅವುಗಳನ್ನು ನಿರ್ಬಂಧಿಸಲಾಯಿತು. ಆದರೆ ಮನರಂಜನೆಗೆ ಬೇರೇನಾದರೂ ಬೇಕಲ್ಲ! ಹಾಗಾಗಿ ಕ್ರೂರ ಪ್ರಾಣಿಗಳ ನಡುವೆ ಕಾಳಗಗಳನ್ನು ಏರ್ಪಡಿಸುತ್ತಿದ್ದರು. ಯೂರೋಪಿಯನ್ನರು ಕಂಡರಿಯದ ಬೃಹತ್ ಪ್ರಾಣಿಗಳನ್ನು ಆಫ್ರಿಕಾದ ಕಾಡುಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ವೇದಿಕೆಯ ಕೆಳಭಾಗದಲ್ಲಿ ಈ ವನ್ಯಮೃಗಗಳನ್ನು ಬಂದಿಸಿಡಲೆಂದೇ ಕೊಠಡಿಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಇದನ್ನು ಉಪಯೋಗಿಸುತ್ತಿದ್ದದ್ದು ಕೇವಲ ಸ್ಪರ್ಧೆಯ ಸಂದರ್ಭಗಳಲ್ಲಿ ಮಾತ್ರ. ಅಲ್ಲಿದ್ದ ರಾಟೆಗಳ ಮೂಲಕ ಬಂದಿಸಿಡುತ್ತಿದ್ದ ಪ್ರಾಣಿಗಳನ್ನು ಮೇಲೆಳೆದು ವೇದಿಕೆಗೆ ಬಿಡಲಾಗುತ್ತಿತ್ತು. ಇದಲ್ಲದೆ ಕೊಳಚೆ ನೀರು, ತ್ಯಾಜ್ಯ ವಸ್ತುಗಳು  ಹೊರಹೋಗಲು ಕಾಲುವೆಗಳ ವ್ಯವಸ್ಥೆ ಮಾಡಲಾಗಿತ್ತು.
ಕೊಲೋಸಿಯಂನ ಎದುರಿರುವ ವೀನಸ್ ಮತ್ತು ರೋಮಾ ದೇವಾಲಯ 
ನಂತರದ ಕೆಲ ಶತಮಾನಗಳಲ್ಲಿ ಈ ರಂಗಮಂದಿರ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಮಧ್ಯಯುಗದ ಹೊತ್ತಿಗೆ ಇದನ್ನು ಸ್ಮಾರಕವೆಂದು ಸಂರಕ್ಷಿಸದೆ, ಇಲ್ಲಿದ್ದ ಕಲ್ಲುಗಳನ್ನು ಹೊತ್ತೊಯ್ದು ಇನ್ನಿತರ ದೇವಾಲಯಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತಿತ್ತು. ೧೮ನೇ ಶತಮಾನದಲ್ಲಿ ಧರ್ಮಗುರುಗಳು, ಅಲ್ಲಿನ ಕಲ್ಲುಗಳನ್ನು ಬೇರೆ ಯಾವುದಕ್ಕೂ ಬಳಸದಂತೆ ಕಟ್ಟಳೆ ನಿರ್ಮಿಸುವ ವರೆಗೂ   ಪ್ಲಾವಿಯನ್ ಆಂಫಿಥಿಯೇಟರ್  ಕೇವಲ ಕ್ವಾರಿಯಾಗಿತ್ತು.

ಕೊಲೋಸಿಯಂನ ಒಳಭಾಗ ಮೇಲಂತಸ್ತಿನಿಂದ ಕಂಡದ್ದು ಹೀಗೆ
ಕೊನೆಯಲ್ಲಿ ನಮ್ಮ ಗೈಡ್ ಇಲಾರಿಯ, ನಮ್ಮನ್ನು ಮೇಲಂತಸ್ತಿಗೆ ಕರೆದೊಯ್ದಳು. ಅಲ್ಲಿ ಕೊಲೋಸಿಯಂ ಪೂರ್ಣ ದರ್ಶನ ಪ್ರಾಪ್ತವಾಯಿತು. ಅದೆಷ್ಟೋ ವೈಭವಗಳಿಗೆ, ನೋವುಗಳಿಗೆ, ಕರುಣಾಜನಕ ಕಥೆಗಳಿಗೆ ಮೂಕಸಾಕ್ಷಿಯಾಗಿ ಶತಶತಮಾನಗಳಿಂದ ನಿಂತಿದ್ದ ಆ ವೈಭವೋಪೇತ ಕಟ್ಟಡವನ್ನು ದರ್ಶಿಸಿದ ಧನ್ಯತಾಭಾವವೊಂದು ನಮ್ಮನ್ನು ಆವರಿಸಿತು.

Sunday, 17 November 2019

ದೀಪಾವಳಿಯ ಉಡುಗೊರೆ


ಗೋಧೂಳಿ ವೇಳೆಯಾಗಿತ್ತು. ಹೊರಗೆ ಸುರಿಯುತ್ತಿದ್ದ ಸೋನೆ ಮಳೆಯ ಸದ್ದಿನ ವಿನಃ ಬೇರಾವ ಶಬ್ದವೂ ಕಿವಿಗೆ ಬೀಳುವಂತಿರಲಿಲ್ಲ.ನಾನು ಕಾಫಿ ಲೋಟ ಕೈಯಲ್ಲಿ ಹಿಡಿದು ಮೆಟ್ಟಿಲ ಮೇಲೆ ಕುಳಿತು ಸೂರಂಕಲಿನಿಂದ ಧಾರೆ ಧಾರೆಯಾಗಿ ಸುರಿಯುತ್ತಿದ್ದ ನೀರನ್ನೇ ನೋಡುತ್ತಿದ್ದೆ. ನಮ್ಮನೆಯ ನಾಯಿ ಮರಿ ಗುಂಡ ಮಳೆಯಲ್ಲಿ ನೆಂದು ಮೈ ನೆನೆಸಿಕೊಂಡು ಚಳಿಯೆಂದು ನಡುಗುತ್ತಾ ಗೋಣಿಯ ಮೇಲೆ ಮುದುರಿ ಮಲಗಿತ್ತು. ಹಕ್ಕಿಗಳೆಲ್ಲ ದಿನದ ಕೆಲಸ ಮುಗಿಸಿ ಗೂಡು ಸೇರಿಯಾಗಿತ್ತು. ದನ ಕರುಗಳೂ ಸಹ ಆಗಲೇ ಕೊಟ್ಟಿಗೆಗೆ ಬಂದಿರಬೇಕು. ಮನೆಯಂಗಳದಲ್ಲಿದ್ದ ರಂಗೋಲಿಯನ್ನು ಬಣ್ಣದ ಸಮೇತ ಮಳೆರಾಯ ಯಾವಾಗಲೋ ಹೊತ್ತೊಯ್ದಿದ್ದ. 

ಸ್ವಲ್ಪ ಹೊತ್ತಿಗೆ ಮಳೆರಾಯ ವಿಶ್ರಾಂತಿ ಪಡೆದ. ಅದೇನು ಕೆಲ ನಿಮಿಷಗಳಷ್ಟೇ ! ಏರು ಸ್ವರದಲ್ಲಿ ಹಾಡಿದ ಗಾಯಕ ಉಸಿರೆಳೆದುಕೊಳ್ಳಲು ಹಾಡು ನಿಲ್ಲಿಸುವ ಕೆಲ ಕ್ಷಣಗಳಂತೆ ಅದು. ನಂತರದಲ್ಲಿ ಆ ನೀರವತೆಯನ್ನು ಸೀಳುವಂತೆ ಒಂದೊಂದೇ ಶಬ್ದಗಳು ಕಿವಿಗೆ ತಲುಪುತ್ತಿದ್ದವು. ದೂರದಲ್ಲೆಲ್ಲೋ ಸಾಗುತ್ತಿದ್ದ ಬಸ್ಸಿನ ಶಬ್ದ, ಯಾರದೋ ಮನೆಯ ನಾಯಿಯ  ಕೂಗು, ಎಲೆಗಳ ಅಂಚಿನಿಂದ ತೊಟ್ಟಿಕ್ಕುತ್ತಿದ್ದ ಮಳೆ ಹನಿಗಳ ಟಪ್ ಟಪ್ ಶಬ್ದ, ಇದರೊಂದಿಗೆ ಕೇಳಿಬಂತು ನನ್ನಮ್ಮನ ಅಂಬೇ ಬಾ ಎನ್ನುವ ಕೂಗು, ಒಂದೆರಡು ಬಾರಿಯಲ್ಲ, ಹಿತ್ತಲಿನ ಕೊಟ್ಟಿಗೆಯ ಬಾಗಿಲಿನಾಚೆಗೆ ಕಪ್ಪು ಕೊಡೆಯಡಿ ನಿಂತು ಜೋರಾಗಿ ಅಂಬೇ ಬಾ ಎಂದು ಮತ್ತೆ ಮತ್ತೆ ಕರೆಯುತ್ತಿದ್ದಳು ಅಮ್ಮ. ಕೊಟ್ಟಿಗೆಗೆ ಹೋಗಿ ನೋಡಿದರೆ ಎಲ್ಲ ಗೌರಿ, ತುಳಸಿ, ಚಂದ್ರಿ, ಬೆಳ್ಳಿ ಎಲ್ಲವೂ ಇವೆ ಚಿನ್ನಿಯೊಂದನ್ನು ಬಿಟ್ಟು. ಅಷ್ಟರಲ್ಲಿ ಕೂಗಿ ಕೂಗಿ ಸಾಕಾಗಿ ಅಮ್ಮ ಕೊಟ್ಟಿಗೆಯ ಒಳಗೆ ಬಂದಳು. ಚಿನ್ನಿ ಮನೆಗೆ ಬಂದೇ ಇಲ್ಲ ಕಣೇ. ಒರತೆ ಹಳ್ಳದವರೆಗೂ ನೋಡಿ ಬಂದೆ. ಗಬ್ಬದ ದನ ಬೇರೆ. ಎಲ್ಲಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡು ದಾರಿ ತಪ್ಪಿಸಿಕೊಂಡಿದೆಯೋ ಎಂದು ನಿಡುಸುಯ್ದು ಬೇರೆ ಜಾನುವಾರುಗಳಿಗೆ ಮುರವಿಡಲು ಹೋದಳು. 

ಕತ್ತಲು ಕವಿಯತೊಡಗಿತ್ತು. ತೋಟದ ಜಾರುದಾರಿಯಲ್ಲಿ ಭಾರವಾಗಿದ್ದ ಹಸಿ ಹುಲ್ಲಿನ ಹೊರೆಯನ್ನು ತಲೆಯ ಮೇಲೆ ಹೊತ್ತ ಅಪ್ಪ ನಿಧಾನವಾಗಿ ಒಂದೊಂದೇ ಮೆಟ್ಟಿಲ ಹತ್ತುತ್ತಾ  ಹಿತ್ತಲಿಗೆ ಬಂದೊಡನೆ ಧೊಪ್ ಎಂದು ಹೊರೆಯನ್ನು ಕೆಳಗೆ ಹಾಕಿ ಉಸ್ಸಪ್ಪ ಎನ್ನುತ್ತಾ ಅಲ್ಲೇ ಇದ್ದ ಮೆಟ್ಟಿಲ ಮೇಲೆ ಕುಳಿತರು. ನೀರು ಬೆಲ್ಲ ಕುಡಿದು ಸುಧಾರಿಸಿಕೊಂಡರು. ಅದನ್ನೇ ಕಾಯುತ್ತಿದ್ದ ಅಮ್ಮ, ರೀ ಚಿನ್ನಿ ಮನೆಗೆ ಬಂದೇ ಇಲ್ಲ ಕಣ್ರೀ  ಎಂದು  ವರದಿ ಒಪ್ಪಿಸಿದಳು. ಅಪ್ಪ ಅದನ್ನು ಕೇಳಿದವರೇ ಟಾರ್ಚ್ ತಂದು ಕೊಡಲು ಹೇಳಿ ಕಂಬಳಿ ಕೊಪ್ಪೆಯನ್ನೇರಿಸಿ ಚಪ್ಪಲಿ ಮೆಟ್ಟಿ ಹೊರಟರು ಚಿನ್ನಿಯನ್ನು ಹುಡುಕಲೆಂದು. ನಿಧಾನವಾಗಿ ಅವರ ಕೈಲಿದ್ದ ದೀಪದ ಬೆಳಕು ಮನೆಯ ಮುಂದಿದ್ದ ಕತ್ತಲ ದಾರಿಯಲ್ಲಿ ಸರಿದುಹೋಯಿತು. ನಾವೂ ಸಹ ಮಾತಿಲ್ಲದೆ ಅಪ್ಪನ ದಾರಿ ಕಾದೆವು. ಅಪ್ಪ ವಾಪಸಾದಾಗ ಸರಿರಾತ್ರಿಯಾಗಿತ್ತು. ಅವರ ಮುಖವೇ ಹೇಳುತಿತ್ತು ಹೋದ ಕೆಲಸವಾಗಿಲ್ಲವೆಂದು. ಹೊಳೆಯ ನೀರು ಏರಿದೆ. ಅಲ್ಲಿವರೆಗೂ ಹೋಗಿ ಬಂದೆ. ಬೆಳಿಗ್ಗೆ ನೀರು ಕಡಿಮೆ ಇದ್ದಾಗ ದನ ಹೊಳೆಯಾಚೆ ದಾಟಿಕೊಂಡಿದ್ದರೆ ಈಗ ವಾಪಸು ಬರಲು ಸಾಧ್ಯವೇ ಇಲ್ಲ ಎಂದು ನಿಟ್ಟುಸಿರಿಟ್ಟರು. ಹೊರಗೆ ನೇತು ಹಾಕಿದ್ದ ಕಂಬಳಿ ಕೊಪ್ಪೆಯಿಂದ ನೀರು ತೊಟ್ಟಿಕ್ಕುತ್ತಿತ್ತು.

ಮರುದಿನ ಬೆಳಿಗ್ಗೆ ಎದ್ದವರೇ ಅಪ್ಪ ಹುಡುಕಲು ಹೋದರು. ಈ ಸಲ ಮಳೆ ಜೋರಾಗಿಯೇ ಸುರಿದಿತ್ತು. ಮೊನ್ನೆ ಮೊನ್ನೆ ಗಣಪತಿ ಹಬ್ಬದ ಮರುದಿನ ಗಣಪತಿಯನ್ನು ನೀರಿಗೆ ಬಿಡಲು ಹೋದ ನಮ್ಮ ಊರವರು ನೆರೆ ಕಂಡು ಹೆದರಿ ಹೆಚ್ಚೇನೂ ದೂರ ಹೋಗದೆ ದೇವರನ್ನು ದಾರಿಯಲ್ಲೇ ಬಿಟ್ಟು ಬಂದಿದ್ದರು. ಈಗ ಮತ್ತೆ ಅಂತದ್ದೇ ನೆರೆ ಬಂದಿತ್ತು. ಎರಡು ದಿನ ಅಪ್ಪ ಬೇರೆ ಕೆಲಸಗಳನ್ನೆಲ್ಲ ಬದಿಗಿಟ್ಟು ಹುಡುಕಿದರೂ ನಮ್ಮನೆ ದನ ಸಿಗಲಿಲ್ಲ. ದಾರಿ ತಪ್ಪಿತೋ ಅಥವಾ ನೀರಲ್ಲಿ ತೇಲಿಕೊಂಡು ಹೋಯಿತೋ ಎಂದೆಲ್ಲ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ಯೋಚನೆ ಮಾಡಿದೆವು. ದಾರಿಯಲ್ಲಿ ಸಿಕ್ಕವರಿಗೆಲ್ಲ ನಮ್ಮನೆಯ ಕೆಂಪು ದನವೊಂದು ಕಳೆದು ಹೋಗಿದೆ, ಎಲ್ಲಾದರೂ ಕಂಡರೆ ಹೇಳಿ ಎಂದು ಹೇಳಿದ್ದರು ಅಪ್ಪ.

ಇದಾಗಿ ಒಂದು ವಾರವಾಗಿರಬಹುದು. ಅವತ್ತೊಂದಿನ ಶೇಖರ ಮನೆಯ ಬಾಗಿಲಲ್ಲಿ ನಿಂತು ಜೋರಾಗಿ ಕರೆಯತೊಡಗಿದ್ದ. ಅಪ್ಪ ಏನಾಯ್ತೆಂದು ಕೇಳಿದರೆ ನಿಮ್ಮನೆಯ ಕೆಂಪು ದನ ನಮ್ಮ ಗದ್ದೆಗೆ ನುಗ್ಗಿದೆ. ಬೆಳೆಯನ್ನೆಲ್ಲ ಹಾಳು  ಮಾಡಿ ಹಾಕಿದೆ ಎಂದು ದೂಷಿಸುವ ಧ್ವನಿಯಲ್ಲಿ ಅಂದ. ಬೇಗ ಬಂದು ಎಳೆದುಕೊಂಡು ಹೋಗಿ ಎನ್ನುವ ಧಾಟಿಯಿತ್ತು ಅವನ ಮಾತಿನಲ್ಲಿ. ಸರಿ ಅಂತೂ ನಮ್ಮ ಚಿನ್ನಿ ಸಿಕ್ಕಿತಲ್ಲ ಎಂದು ಕಣ್ಣಿ ಹಿಡಿದುಕೊಂಡು ಅಪ್ಪ ಗದ್ದೆಗೆ ಹೊರಟರು. ಅಲ್ಲಿ ಹೋಗಿ ನೋಡಿದರೆ ಅದು ನಮ್ಮ ದನವೇ ಅಲ್ಲವಂತೆ. ಕೆಂಪು ಬಣ್ಣವಿದ್ದುದನ್ನು ನೋಡಿ ನಮ್ಮದೇ ಎಂದುಕೊಂಡು ಓಡಿ ಬಂದಿದ್ದ ಶೇಖರ! ಅಲ್ಲಿ ಇಲ್ಲಿ ಕೆಂಪು ದನ ಕಂಡೊಡನೆ ಕರೆ ಬರುವುದು, ಹೋಗಿ ನೋಡುವುದು  ಮತ್ತೆ ಅದು ನಮ್ಮ ಚಿನ್ನಿ ಅಲ್ಲವೆಂಬ ನಿರಾಶೆಯೊಂದಿಗೆ ವಾಪಸಾಗುವುದೂ ಕೆಲ ಸಾರಿ ನಡೆಯಿತು. ಹೀಗೆ ದನ, ಎಮ್ಮೆಗಳು ಕಳೆದು ಹೋದಲ್ಲಿ ನಮ್ಮೂರಿಗೆ  ಸಮೀಪದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹರಕೆ ಹೇಳಿಕೊಳ್ಳುವ ಪರಿಪಾಟವಿದೆ. ಅಪ್ಪ ಗಣಪತಿಯ ಮುಂದೆ ಹಣ್ಣು ಕಾಯಿ ಇರಿಸಿ ಚಿನ್ನಿಯನ್ನು ಹುಡುಕುವ ಜವಾಬ್ದಾರಿಯನ್ನು ದೇವರಿಗೆ ಒಪ್ಪಿಸಿ ಬಂದರು.

ಹೆಚ್ಚು ಕಡಿಮೆ ತಿಂಗಳಾಗುತ್ತಾ ಬಂದಿತ್ತು. ಬೇರೆ ಎಲ್ಲ ಜಾನುವಾರುಗಳು ಸಮಯಕ್ಕೆ ಸರಿಯಾಗಿ ಮನೆಗೆ ಬರುತ್ತಿದ್ದರೂ, ಚಿನ್ನಿಯ ಸುಳಿವಿರಲಿಲ್ಲ. ಎಲ್ಲೋ ದಾರಿ ಮರೆತು ಇವತ್ತಲ್ಲ ನಾಳೆ ಹುಡುಕಿಕೊಂಡು ಮನೆಗೆ ಬರಬಹುದೆಂಬ ಸಣ್ಣ ಆಸೆಯಿಂದ ಅಮ್ಮ ಪ್ರತಿದಿನವೂ ಚಿನ್ನಿಯ ಹಾದಿ ಕಾಯುತ್ತಿದ್ದಳು. ಒಂದು ದಿನ ದಾರಿಯಲ್ಲಿ ಕುಯಿರ ಸಿಕ್ಕಿ ನಿಮ್ಮ ದನ ಕಳೆದು ಹೋಗಿದೆಯಂತಲ್ಲ ಮರ್ರೆ. ಮೊನ್ನೆ ಇತ್ತಲಾಗೆ ಅದು ದೇವರ ಬನದ ಹತ್ತಿರವಿರುವ ಧರೆ ಕೆಳಗೆ ಉರುಳಿ ಬಿದ್ದು ಸತ್ತಿದೆ.  ನಾನೇ ಕಣ್ಣಾರೆ ನೋಡಿ ಬಂದೆ ಎಂದನಂತೆ. ಗಾಬರಿಯಿಂದ ಒಂದೇ ಮಾತಿಗೆ ಹೋಗಿ ನೋಡಿಕೊಂಡು ಬಂದರು ಅಪ್ಪ. ಅಷ್ಟರಲ್ಲಾಗಲೇ ಅದರ ದೇಹ ಕೊಳೆಯಲು ಆರಂಭಿಸಿತ್ತು. ಹಾಗಾಗಿ  ಮೇಲಿಂದ ನಿಂತು ನೋಡಿದವರಿಗೆ ಅರ್ಧಂಬರ್ಧ ಕೊಳೆತು ಉಳಿದ ಅದರ ಮುಖ ಮಾತ್ರವೇ ಕಾಣಸಿಗುವಂತಿತ್ತು ಎಂದು ಮನೆಗೆ ಬಂದ ಅಪ್ಪ ವಿಷಯ ತಿಳಿಸಿದಾಗ ಎಲ್ಲರಿಗೂ ಬೇಜಾರು. ಅಮ್ಮ ಅಂತೂ ಕಣ್ಣೀರು ಸುರಿಸಿದಳು.

ತಿಂಗಳುಗಳು ಸರಿದವು. ಮಳೆಗಾಲವೂ ಮುಗಿದು ಚಳಿಗಾಲ ಅಂಬೆಗಾಲಿಡುತ್ತಾ ಬರುತಿತ್ತು. ಮಲೆನಾಡ ಜನರು ಅಡಿಕೆ ಕೊಯ್ಲಿಗೆ ಅಣಿಯಾಗುವ ದಿನಗಳವು. ಅಡಿಕೆ ಬೇಯಿಸುವ ಒಲೆಯಿಂದ ಹಿಡಿದು ಚಪ್ಪರದವರೆಗೂ  ಎಲ್ಲವನ್ನು ಸಿದ್ದ ಮಾಡುವುದರಲ್ಲಿ ಅಪ್ಪ ನಿರತರಾಗಿದ್ದರು. ಅವೊತ್ತೊಂದು ಸಂಜೆ ದನ, ಕರುಗಳನ್ನೆಲ್ಲ ಸ್ವಸ್ಥಾನದಲ್ಲಿ ಕಟ್ಟಿ ಹುಲ್ಲು ಹಾಕುತ್ತಿದ್ದ ಅಮ್ಮನಿಗೆ ಕೊಟ್ಟಿಗೆಯ ಹೊರಗೆ ಯಾವುದೋ ದನ ಅಂಬೇ ಎಂದು ಕ್ಷೀಣ ಸ್ವರದಲ್ಲಿ ಕೂಗುವುದು ಕೇಳಿಸಿತಂತೆ. ಚಿನ್ನಿ ಇರಬಹುದೆಂದು ಒಳ ಮನಸಿಗೆ ಎನಿಸಿದರೂ, ಅದು ತಿರುಗಿ ಬರಲಾರದ ಜಾಗಕ್ಕೆ ಹೋಗಿತ್ತಲ್ಲ! ಯಾವುದೊ ದನ ದಾರಿ ತಪ್ಪಿರಬೇಕು ಎಂದುಕೊಂಡು ಹೊರದಾಟಿದರೆ ಏನಾಶ್ಚರ್ಯ  ನಮ್ಮನೆ ಚಿನ್ನಿ ಉಣುಗೋಲಿನಾಚೆ ನಿಂತು ಕೂಗುತ್ತಿದೆ. ಸಂಭ್ರಮದಿಂದ ಕೊಟ್ಟಿಗೆಗೆ ಕರೆತಂದು ಕಟ್ಟಿದಳು. ಕತ್ತಲಲ್ಲಿ ಕಾಣದ್ದು ಕೊಟ್ಟಿಗೆಯ ವಿದ್ಯುತ್ ದೀಪದ ಬೆಳಕಿನಲ್ಲಿ ನಿಚ್ಚಳವಾಗಿ ಕಂಡಿತು ಅದರ ಸ್ಥಿತಿ.  ಮೈತುಂಬಿ ಕಳೆಕಳೆಯಾಗಿ ಹೊಳೆಯುತ್ತಿರಬೇಕಿದ್ದ ತುಂಬು ಗಬ್ಬದ ದನ, ಸೋತು ನಿತ್ರಾಣವಾಗಿದೆ. ಮೈ ತುಂಬ ಗಾಯದ ಗುರುತುಗಳು. ನಿಲ್ಲೋಕೆ ಆಗದೆ ಇರುವಷ್ಟು ನಿಶ್ಯಕ್ತಿ. ಕುತ್ತಿಗೆಯ ಮೇಲೆಲ್ಲಾ ಗಾಯದ ಗುರುತುಗಳು. ಯಾರೋ ಅದನ್ನು ದಿನಗಟ್ಟಲೆ ಕಟ್ಟಿಹಾಕಿ ಹೊಟ್ಟೆಗೆ ಕೊಡದೆ ಹಿಂಸೆ ಮಾಡಿದ್ದಾರೇನೋ ಎನಿಸಿತು. ಅಲ್ಲಲ್ಲಿ ಈ ರೀತಿ ಜಾನುವಾರುಗಳನ್ನು ಕಳ್ಳತನದಲ್ಲಿ ಕಟ್ಟಿ ಹಾಕಿ ಮಾರುವುದು ಅಪರೂಪವಾಗಿದ್ದರೂ ಹೊಸದೇನಾಗಿರಲಿಲ್ಲ. ಪಾಪ ಅದೆಷ್ಟು ಕಷ್ಟದಿಂದ ದಾರಿ ಹುಡುಕಿಕೊಂಡು ಬಂದಿತೋ ಏನೋ? ಅದಕ್ಕೆ ಕುಡಿಯಲು ಬೆಲ್ಲ ನೀರಿಟ್ಟಳು ಅಮ್ಮ. ನಿಧಾನವಾಗಿ ಒಂದೊಂದೇ ಗುಟುಕು ಕುಡಿದಾಗ ಎಲ್ಲರಿಗೂ ಸಮಾಧಾನ. ಇಷ್ಟು ದಿನಗಳ ನಂತರವೂ ದಾರಿ ಮರೆಯದೆ ಮರಳಿದ ಹಸುವಿನ ಮೇಲೆ ಅಭಿಮಾನ. ಇನ್ನೆರಡು ದಿನಗಳಲ್ಲಿ ಗಾಯಗಳೆಲ್ಲ ಮಾಗಿ  ನಮ್ಮನೆ ಚಿನ್ನಾರಿ ಚೇತರಿಸಿಕೊಂಡು ಓಡಾಡಲು ಶಕ್ತವಾಯಿತು.

ಮತ್ತೆರಡು ದಿನಗಳಲ್ಲಿ ಒಂದು ಪುಟ್ಟ ಹೆಣ್ಣುಗರುವಿಗೆ ಜನ್ಮ ನೀಡಿತು ಚಿನ್ನಿ. ಅಮ್ಮನಂತೆಯೇ ಕೆಂಪು ಕೆಂಪು ಕರು. ಅದಕ್ಕಿಟ್ಟ ಹೆಸರು ನಂದಿನಿ. ಜಿಂಕೆಯ ಮರಿಯಷ್ಟೇ ಮುದ್ದಾಗಿದ್ದ ಅದು ಕೊಟ್ಟಿಗೆಯ ತುಂಬೆಲ್ಲ ಚೆಂಡಿನಂತೆ ಪುಟಿಯುತ್ತಿದ್ದರೆ ಮುದ್ದುಕ್ಕಿ ಬರುತ್ತಿತ್ತು. ನಂದಿನಿ  ಒಮ್ಮೊಮ್ಮೆ ಅಂಗಳಕ್ಕಿಳಿದು ಎಲ್ಲವನ್ನೂ ಬೆರಗುಗಣ್ಣಿನಿಂದ ಮೂಸಿ ಮೂಸಿ ನೋಡುತಿತ್ತು. ಆಗಾಗ ಕುತೂಹಲದಿಂದ ನನ್ನಮ್ಮನನ್ನು ಹಿಂಬಾಲಿಸಿ ಅಡಿಗೆಮನೆಯವರೆಗೂ ಪಾದ ಬೆಳೆಸುತ್ತಿತ್ತು. ನಮ್ಮನೆಯ ನಾಯಿಯನ್ನು ಕಂಡು ಮೊದಲು ಹೆದರಿದರೂ ಆಮೇಲೆ ಸ್ನೇಹ ಬೆಳೆಸಿತ್ತು.

ದೀಪಾವಳಿ ಹಬ್ಬ ಬಾಗಿಲಿಗೆ ಬಂದಿತು. ಎಲ್ಲೆಡೆ ಹಬ್ಬದ ಸಂಭ್ರಮ. ಮನೆಯೆದುರು ಬಣ್ಣದ ರಂಗೋಲಿ ಹರಡಿತು. ಬಾಗಿಲಿಗೆ ಹೊಸ ಮಾವಿನೆಲೆಯ ತೋರಣ. ಗೋಪೂಜೆಯ ಹಿಂದಿನ ದಿನ ಗೋವುಗಳಿಗೆಂದು ಚೆಂಡು ಹೂವಿನ ಹಾರಗಳು, ಉಗಣೆಕಾಯಿಯ ಸರಗಳು, ಅಡಿಕೆ, ಏಲಕ್ಕಿ, ಹಿಂಗಾರ,  ಪಚ್ಚೆ ತೆನೆ ಮುಂತಾದ ಹನ್ನೆರಡು ತರದ ಎಲೆ, ಹೂವು, ಹಣ್ಣುಗಳುಳ್ಳ ಮಾಲೆಗಳು ತಯಾರಾದವು. ಮರುದಿನ ದನ, ಕರು ಜೊತೆಗೆ ಎಮ್ಮೆಗಳಿಗೂ ಸ್ನಾನವಾಯಿತು. ಅವುಗಳ ಮೈಮೇಲೆ ಕೆಂಪು, ಹಳದಿ ಬಣ್ಣದ ಚಿತ್ತಾರ ಅರಳಿತು. ಆಗಷ್ಟೇ ಹನ್ನೊಂದು ದಿನದ ಸೂತಕ ಕಳೆದು ನಿಂತಿದ್ದ ಚಿನ್ನಿ ಮತ್ತವಳ ಮುದ್ದು ಮಗಳು ನಂದಿನಿಗೆ ಅಂದಿನ ಅಗ್ರ ಪೂಜೆ ಸಲ್ಲಿಸಿ ಸಂಭ್ರಮ ಪಟ್ಟೆವು ನಾವು.

Friday, 15 September 2017

ಗೊಥೆನ್ ಬರ್ಗ್ ನ ಸಾಂಸ್ಕೃತಿಕ ಹಬ್ಬ

ಎರಡು ವಾರಗಳ ಹಿಂದೆ ಗೊಥೆನ್ ಬರ್ಗ್ ನಲ್ಲಿ ಕಲ್ಚರ್  ಕಲಾಸೆಟ್ ನ ಸಂಭ್ರಮ. ನಾಲ್ಕು ದಿನಗಳ ಕಾಲ ವಿವಿಧ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ನಿವಲ್ ಗಳು ಜನಮನ ರಂಜಿಸಿದ್ದವು.ಇದು ಪ್ರಾರಂಭವಾಗಿದ್ದು ಗುರುವಾರವಾದರೂ, ವಾರದ ಮಧ್ಯದಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಕೆಲವು ಮಳಿಗೆಗಳನ್ನು ಬಿಟ್ಟರೆ ನೋಡುವಂತದ್ದೇನಿರಲಿಲ್ಲ. ಹಬ್ಬದ ಕೊನೆಯ ದಿನವಾಗಿದ್ದ ಭಾನುವಾರದಂದು ಮಾತ್ರ ಇಡಿಯ ಪಟ್ಟಣಕ್ಕೆ ಹೊಸ ಮೆರುಗು ಬಂದಿತ್ತು. ಎತ್ತ ನೋಡಿದರೂ ಜನವೋ ಜನ. ಸಾಮಾನ್ಯವಾಗಿ ಹೆಚ್ಚು ಜನರಿಲ್ಲದೆ ಖಾಲಿ ಎಂದೆನಿಸುವ ಬೀದಿಗಳು ಅಂದು ಮಾತ್ರ ಗಿಜಿಗಿಜಿಗುಟ್ಟುತ್ತಿದ್ದವು.

ಮಳೆಯ ಮುನ್ಸೂಚನೆ ಇದ್ದುದರಿಂದ ಜೊತೆಗೊಂದು ಕೊಡೆಯನ್ನು ಎತ್ತಿಕೊಂಡೇ ಭಾನುವಾರ ಮಧ್ಯಾಹ್ನ ಹೊರಹೊರಟೆವು. ಮೊದಲು ಭೇಟಿ ನೀಡಿದ್ದು ಪಟ್ಟಣದ ಮಧ್ಯದಲ್ಲಿಯೇ ಇದ್ದ ಅಂತರರಾಷ್ಟ್ರೀಯ ತಿಂಡಿ ತಿನಿಸುಗಳ ಮಾರುಕಟ್ಟೆ. ಹಾಲೆಂಡ್ , ಫ್ರಾನ್ಸ್, ಗ್ರೀಸ್ , ಥೈಲ್ಯಾಂಡ್ ಮುಂತಾದ ಹಲವು ದೇಶಗಳ ತಿನಿಸುಗಳು ಅಲ್ಲಿದ್ದವು. ಹೆಚ್ಚಿನವು ಮಾಂಸಾಹಾರವಾಗಿದ್ದರೂ, ಸಸ್ಯಾಹಾರಿಗಳಿಗೂ ಬಹಳಷ್ಟು ಆಯ್ಕೆಗಳಿದ್ದವು. ರಾಶಿ ರಾಶಿ ಸುರಿದುಕೊಂಡಿದ್ದ ಟ್ರಫಲ್ ಗಳು ಬಾಯಲ್ಲಿ ನೀರೂರಿಸಿದ್ದು ಸುಳ್ಳಲ್ಲ.ವೆನಿಲ್ಲಾ, ಚಾಕಲೇಟ್, ಲೆಮನ್, ರೋಸ್, ಆಪಲ್ ಹೀಗೆ ಅದೆಷ್ಟೋ ಬಗೆಯ , ನಾನಾ ವರ್ಣದ  ಮಕರೂನ್ ಗಳನ್ನು ಪೇರಿಸಿಟ್ಟಿದ್ದರು.ಬಣ್ಣ ಬಣ್ಣದ ಹೂಗಿಡಗಳು, ಬೋನ್ಸಾಯ್ ಗಿಡಗಳು, ಟುಲಿಪ್ ತಳಿಗಳು ಮುಂತಾದ ಬಹಳಷ್ಟು ಸಸಿಗಳು ಮಾರಾಟಕ್ಕಿದ್ದವು. ಹೂವು ಹಣ್ಣಿನ ಪರಿಮಳಯುಕ್ತ ಸೋಪುಗಳು ಸಹ ಮಾರಾಟಕ್ಕಿದ್ದವು



ಕಾರ್ನಿವಲ್ ನ ಸೊಬಗು 
ಸ್ವಲ್ಪ ಹೊತ್ತು ಅಲ್ಲಿ ಕಳೆದು ನಂತರ ಅಂದಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾದ ಕಾರ್ನಿವಲ್ ನೋಡಲು ಹೋದೆವು. ಬ್ರೆಜಿಲ್ ನಲ್ಲಿ ನಡೆಯುವ ಕಾರ್ನಿವಲ್ ಗೆ ಯಾವ ರೀತಿಯಲ್ಲೂ ಸಾಟಿ ಎನಿಸದಿದ್ದರೂ ಚಿಕ್ಕದಾಗಿ ಕೆಲದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳನ್ನು ಪ್ರದರ್ಶಿಸುತ್ತಾ ರಂಗುರಂಗಿನ ಉಡುಪುಗಳನ್ನು ತೊಟ್ಟ ಯುವಕ ಯುವತಿಯರು ಮೆರವಣಿಗೆ ನಡೆಸಿದರು. ರೆಕ್ಕೆ ಪುಕ್ಕಗಳಿಂದ, ಚಿತ್ರವಿಚಿತ್ರ ಮುಖವಾಡಗಳಿಂದ ವರ್ಣರಂಜಿತವಾಗಿದ್ದ ವಸ್ತ್ರಗಳನ್ನು ಧರಿಸಿ ನಡೆಯುತ್ತಿದ್ದ ಅವರನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿತ್ತು. 

ಕಥಕ್ ನೃತ್ಯ ಪ್ರದರ್ಶನ
ಭರತನಾಟ್ಯ ಪ್ರದರ್ಶನ ಗೀತಾ ಚಂದ್ರನ್ ಅವರಿಂದ 
ಕೊನೆಯದಾಗಿ ನಮ್ಮ ಪಟ್ಟಿಯಲ್ಲಿದ್ದದ್ದು ಭಾರತೀಯ ನೃತ್ಯ ಪ್ರದರ್ಶನ. ಮೊದಲಿಗೆ ಕಥಕ್ ನೃತ್ಯ ಪ್ರದರ್ಶನವಿತ್ತು. ನಾಲ್ವರು ನೀಲವರ್ಣದ ಉಡುಗೆ ಧರಿಸಿದ್ದ ನೀರೆಯರು ಅದ್ಭುತ ಪ್ರದರ್ಶನವನ್ನು ನೀಡಿದರು. ನಂತರದಲ್ಲಿ ಭರತನಾಟ್ಯ ಪ್ರದರ್ಶನ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಗೀತಾ ಚಂದ್ರನ್ ರವರಿಂದ ನೃತ್ಯ ಪ್ರದರ್ಶನವಿತ್ತು. ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ನೆನಪಿಸಲು ವಂದೇ ಮಾತರಂ ಎಂಬ ಗೀತೆಯನ್ನು ಮೊದಲಿಗೆ ಪ್ರಸ್ತುತ ಪಡಿಸಿದರು. ನಂತರದಲ್ಲಿ ಶಿವನ ಕುರಿತಾದ, ಕೃಷ್ಣ ನ ಕುರಿತಾದ ರೂಪಕ ಗಳನ್ನು ತೋರಿಸಿದರು. ಕೊನೆಯಲ್ಲಿ ಅಯಿಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಕೊನೆಯಲ್ಲಿ ರಾಜಸ್ಥಾನದ ತಂಡವೊಂದರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಇವಿಷ್ಟಲ್ಲದೆ  ಕೆಲವೆಡೆ ಉಚಿತವಾಗಿ ಬೋಟಿಂಗ್ ಕರೆದುಕೊಂಡು ಹೋಗಲಾಗುತಿತ್ತು. ಉಚಿತವಾಗಿ ಪರಿಣಿತರಿಂದ ೧೦ ನಿಮಿಷಗಳ ಸೇಲಿಂಗ್ ಕೂಡ ನಡೆಸಲಾಗುತ್ತಿತ್ತು. ವರ್ಚುಯಲ್ ರಿಯಾಲಿಟಿಯಾ ವಿಡಿಯೋ ಗಳನ್ನು ನೋಡಬಹುದಾಗಿತ್ತು. ಇನ್ನು ಮುಂತಾದ ಹಲವು ಆಕರ್ಷಣೆಗಳು ಅಲ್ಲಿದ್ದವು. ಇವೆಲ್ಲವನ್ನೂ ನೋಡಿಕೊಂಡು ಬಿಸಿಬಿಸಿಯಾಗಿ ಫಲಾಫಲ್ , ತಣ್ಣಗಿನ ಐಸ್ ಕ್ರೀಮ್ ತಿಂದು ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು.


Sunday, 6 August 2017

ಫ್ರಿಡಾ ಕಾಹ್ಲೋ

ಆಕೆ ಕುಂಚಗಳೊಂದಿಗೆ ಬದುಕ ಕಳೆದವಳು. ಬಣ್ಣಗಳನ್ನೇ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡವಳು. ತನ್ನನ್ನೇ ತಾನು ಚಿತ್ರಿಸಿಕೊಂಡು ಜನ ಮಾನಸವನ್ನು ತಲುಪಿದವಳು. ಬದುಕು ಬಳುವಳಿಯಾಗಿ ನೀಡಿದ ಸಂಕಷ್ಟಗಳ ಸರಮಾಲೆಗೆ ಎದೆಗೆಡದೆ ಕೊರಳು ನೀಡಿದ ಗಟ್ಟಿಗಿತ್ತಿಯವಳು.ಅವಳ ಮನೋಸ್ಥೈರ್ಯ ,ಆತ್ಮವಿಶ್ವಾಸವನ್ನು ಹತ್ತಿರದಿಂದ ಕಂಡ ಜನ ಅವಳನ್ನು"ಲಾ ಹೀರೋಯಿನಾ ಡೆಲ್ ಡೊಲೊರ್ " ಎಂದು  ಕರೆದರು. ಹಾಗೆಂದರೆ ನೋವಿಗೇ ನಾಯಕಿಯಾದವಳು ಎಂಬರ್ಥ. ಹೀಗೆ ತನ್ನ ಬದುಕನ್ನೇ ಅನ್ಯರಿಗೆ ಮಾದರಿಯಾಗಿಸಿ ಜನಪ್ರಿಯಳಾದವಳು ಮತ್ಯಾರೂ ಅಲ್ಲ ಖ್ಯಾತ ಚಿತ್ರಕಾರ್ತಿ ಫ್ರಿಡಾ ಕಾಹ್ಲೋ. ಅವಳ ಜೀವನದ ಯಶೋಗಾಥೆ ಇಲ್ಲಿದೆ. 

ಜನನ ಮತ್ತು ಬಾಲ್ಯ 

ಫ್ರಿಡಾ ಕಾಹ್ಲೋ ಹುಟ್ಟಿದ್ದು ಜುಲೈ ೬ , ೧೯೦೭ ನೇ ಇಸವಿಯಲ್ಲಿ, ಮೆಕ್ಸಿಕೋ ದೇಶದ ಕೋಯೋಅಕನ್ ಎಂಬ ಸ್ಥಳದಲ್ಲಿ. ಅವಳ ತಂದೆ ವಿಲ್ ಹೆಲ್ಮ್ ಕಾಹ್ಲೋ, ಮೂಲತಃ ಜರ್ಮನಿಯವರು. ಮೆಕ್ಸಿಕೋ ದೇಶಕ್ಕೆ ವಲಸೆ ಬಂದು, ಫ್ರಿಡಾಳ ತಾಯಿಯಾದ ಮಟಿಲ್ಡೆ ಕಾಲ್ಡೆರೋನ್ ನನ್ನು ವರಿಸುತ್ತಾರೆ. ಮಟಿಲ್ಡೆ ಮಕ್ಕಳನ್ನು ಧಾರ್ಮಿಕ ಕಟ್ಟಳೆಗಳಿಗೆ ,ನೇಮಗಳಿಗೆ ಒಳಪಡುವಂತೆ ಬಹಳ ಶಿಸ್ತಿನಿಂದ ಬೆಳೆಸಿರುತ್ತಾರೆ. ಫ್ರಿಡಾ ಕಾಹ್ಲೋ ಆರು ವರ್ಷದವಳಿದ್ದಾಗ ಪೋಲಿಯೊ ಖಾಯಿಲೆಗೆ ತುತ್ತಾಗುತ್ತಾಳೆ. ಇದರಿಂದಾಗಿ ಒಂಬತ್ತು ತಿಂಗಳುಗಳ ಕಾಲ ಹಾಸಿಗೆ ಹಿಡಿಯಬೇಕಾಗುತ್ತದೆ. ನಿಧಾನವಾಗಿ ಅದರಿಂದ ಚೇತರಿಸಿಕೊಂಡರೂ ಬಲಗಾಲು, ಎಡಗಾಲಿಗಿಂತ  ಚಿಕ್ಕದಾಗಿ ದುರ್ಬಲವಾಗಿರುತ್ತದೆ.ಫ್ರಿಡಾಳಿಗೆ ಇದೊಂದು ಅಡಚಣೆಯೇ ಆದರೂ ತಂದೆಯ ಬೆಂಬಲದಿಂದ ಆಗಿನ ಕಾಲದ ಹುಡುಗಿಯರಿಗೆ ಅಪರೂಪವೆನ್ನಬಹುದಾಗಿದ್ದ ಕಾಲ್ಚೆಂಡಿನಾಟ, ಈಜು, ಕುಸ್ತಿ ಮುಂತಾದ ಆಟಗಳನ್ನು ಕಲಿತು ದೈಹಿಕ ನ್ಯೂನತೆಯನ್ನು ಮೆಟ್ಟಿ ನಿಲ್ಲುತ್ತಾಳೆ. ಈ ಎಲ್ಲ ಅನುಭವಗಳು ಅವಳ ಮನಸಿನ ಮೇಲೆ ಮಾಸದ ಮುದ್ರೆಯೊತ್ತಿ ಮುಂಬರುವ ಬದುಕಿನ ಯುದ್ಧಗಳಿಗೆ ಅಣಿಗೊಳಿಸಿರುತ್ತವೆ. 

ಫ್ರಿಡಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ೧೯೨೨ರಲ್ಲಿ ಮೆಕ್ಸಿಕೋ ಸಿಟಿಯ ಪ್ರಖ್ಯಾತ ವಿದ್ಯಾಸಂಸ್ಥೆಯಾಗಿದ್ದ  ನ್ಯಾಷನಲ್ ಪ್ರಿಪರೇಟರಿ ಸ್ಕೂಲ್  ಸೇರಿಕೊಳ್ಳುತ್ತಾಳೆ.೨೦೦೦ ಜನ ವಿದ್ಯಾರ್ಥಿಗಳಿದ್ದ ಆ ಶಾಲೆಯಲ್ಲಿ ಹುಡುಗಿಯರ ಸಂಖ್ಯೆ ಕೇವಲ ಮೂವತ್ತೈದು! ಅವರಲ್ಲೊಬ್ಬಳಾಗುತ್ತಾಳೆ ಫ್ರಿಡಾ ಕಾಹ್ಲೋ.ವಿಜ್ಞಾನದಲ್ಲಿ ಅವಳಿಗೆ ಹೆಚ್ಚಿನ ಆಸಕ್ತಿ. ಸಸ್ಯಶಾಸ್ತ್ರ ಮತ್ತು ವೈದ್ಯಕೀಯವನ್ನು ತನ್ನ ಮುಂದಿನ ಅಭ್ಯಾಸಕ್ಕಾಗಿ ಆಯ್ದುಕೊಳ್ಳಬೇಕೆಂಬ ಉಮೇದಿರುತ್ತದೆ.ಈ ಸಮಯದಲ್ಲಿ ಅಲೆಜಾಂಡ್ರೋ ಗೋಮೆಜ್ ಎನ್ನುವ ಸಹ ವಿದ್ಯಾರ್ಥಿಯ ಪರಿಚಯವಾಗಿ, ನಂತರದಲ್ಲಿ ಪರಿಚಯ ಪ್ರೇಮಕ್ಕೆ ತಿರುಗುತ್ತದೆ.ಒಂದು ದಿನ ಮಧ್ಯಾಹ್ನ ಅವರಿಬ್ಬರೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿಗೆ ಬಂದ ಕಾರೊಂದು ಇವರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಬಸ್ಸು ಅಪಘಾತಕ್ಕೀಡಾಗುತ್ತದೆ. ಈ ಸಮಯದಲ್ಲಿ ಫ್ರಿಡಾ ತೀವ್ರವಾಗಿ ಗಾಯಗೊಳ್ಳುತ್ತಾಳೆ. ಸ್ಟೀಲಿನ ಕೈಗಂಬಿಯೊಂದು ಅವಳ ಹಿಂಬಾಗದಿಂದ ಒಳಹೊಕ್ಕಿ ಬೆನ್ನುಮೂಳೆ, ಪೆಲ್ವಿಸ್, ಜನನಾಂಗವನ್ನು ಛೇದಿಸಿಕೊಂಡು ಮುಂದಿನಿಂದ ಹೊರಬಂದಿರುತ್ತದೆ. ದೇಹದ ಹಲವೆಡೆ ಮಾರಣಾಂತಿಕ ಗಾಯಗಳಾಗಿರುತ್ತವೆ. ಆಗವಳಿಗೆ ಕೇವಲ ಹದಿನೆಂಟು ವರ್ಷ. ತಿಂಗಳುಗಳ ಕಾಲ, ಪ್ಲಾಸ್ಟರಿನ ಪಟ್ಟಿ ಕಟ್ಟಿಕೊಂಡು ಅಲ್ಲಾಡದೆ ಮಲಗಿರಬೇಕಾದ ವಿಷಮ ಪರಿಸ್ಥಿತಿ ಎದುರಾಗುತ್ತದೆ. ಈ ಸಮಯದಲ್ಲಿ ಫ್ರಿಡಾ ತನ್ನ ನೋವು ಮರೆಯಲು ಚಿತ್ರ ಬಿಡಿಸಲು ಪ್ರಾರಂಭಿಸುತ್ತಾಳೆ. ತನ್ನ ಪ್ರಿಯತಮನಿಗೆ, ತನ್ನದೇ ಒಂದು ಸುಂದರ ಭಾವಚಿತ್ರವನ್ನು ಮಲಗಿದ್ದಲ್ಲೇ ರಚಿಸಿ ಕಾಣಿಕೆಯಾಗಿ ನೀಡುತ್ತಾಳೆ. ಅಷ್ಟರಲ್ಲಾಗಲೇ ಇವಳ ದೈಹಿಕ ಸ್ಥಿತಿ, ಅಲೆಜಾಂಡ್ರೋಗೆ ಬೇಸರ ಮೂಡಿಸಿರುತ್ತದೆ.ಅವರಿಬ್ಬರ ಸಂಬಂದ ಅಲ್ಲಿಗೆ ಕೊನೆಗೊಳ್ಳುತ್ತದೆ.ಆದರೆ ಬಣ್ಣಗಳೊಂದಿಗೆ ಫ್ರಿಡಾಳ ಗೆಳೆತನ ಆಗಷ್ಟೇ ಪ್ರಾರಂಭವಾಗುತ್ತದೆ.ಬೇರೆ ಎಲ್ಲ ವಿಷಯಗಳಿಗಿಂತ ಹೆಚ್ಚಾಗಿ ಫ್ರಿಡಾ ತನ್ನನ್ನೇ ತಾನು ಚಿತ್ರಿಸಿಕೊಳ್ಳುತ್ತಾಳೆ. ಹಾಗೇಕೆಂದು ಕೇಳಿದವರಿಗೆ ಅವಳೊಮ್ಮೆ ಹೀಗೆನ್ನುತ್ತಾಳೆ. "ನಾನು ನನ್ನನ್ನೇ ಚಿತ್ರಿಸಿಕೊಳ್ಳುತ್ತೇನೆ. ಏಕೆಂದರೆ ನಾನು ಯಾವಾಗಲೂ ಒಬ್ಬಂಟಿಯಾಗಿರುತ್ತೇನೆ ಮತ್ತು ನನಗೆ ಚೆನ್ನಾಗಿ ತಿಳಿದಿರುವ ವಿಷಯವೆಂದರೆ ಅದು ನಾನು ಮಾತ್ರ". 

ಚಿತ್ರಗಳೊಂದಿಗೆ  ಮಿತ್ರತ್ವ 

ಇಷ್ಟೊತ್ತಿಗಾಗಲೇ ವೈದ್ಯಕೀಯ ಅಧ್ಯಯನ ಮಾಡಬೇಕೆಂಬ ಆಸೆ ಫ್ರಿಡಾಳ ಮನಸಿನಿಂದ ದೂರವಾಗಿರುತ್ತದೆ. ಪ್ರಸಿದ್ಧ ಮ್ಯುರಲ್ ಚಿತ್ರಕಾರನಾಗಿದ್ದ ಡಿಯೆಗೊ ರಿವೆರಾ ಎನ್ನುವಾತನ ಬಳಿ ತನ್ನ ಚಿತ್ರಗಳನ್ನು ವಿಶ್ಲೇಷಿಸಲು ಕೋರುತ್ತಾಳೆ. ಡಿಯೆಗೊಗೆ ಇವಳ ಚಿತ್ರಗಳು ಬಹಳ ಹಿಡಿಸುತ್ತವೆ. ಹಾಗಾಗಿ ಅವನು ಚಿತ್ರಕಲೆಯನ್ನು ಮುಂದುವರೆಸುವಂತೆ ಫ್ರಿಡಾಗೆ ಪ್ರೋತ್ಸಾಹ ನೀಡುತ್ತಾನೆ. ಸಮಾನ ಆಸಕ್ತಿ ಇಬ್ಬರನ್ನು ಹತ್ತಿರಕ್ಕೆಳೆಯುತ್ತದೆ. ಮುಂದಿನ ಒಂದು ವರ್ಷದಲ್ಲಿ ಅವರಿಬ್ಬರೂ ಮದುವೆಯಾಗುತ್ತಾರೆ. ಫ್ರಿಡಾ ಒಂದು ಸಂದರ್ಭದಲ್ಲಿ ಡಿಯೆಗೊನನ್ನು ಭೇಟಿಯಾಗಿದ್ದನ್ನು ನೆನೆಸಿಕೊಳ್ಳುತ್ತಾ ಹೀಗೆನ್ನುತ್ತಾಳೆ "ನನ್ನ ಜೀವನದಲ್ಲಿ ಎರಡು ಅಪಘಾತಗಳು ಸಂಭವಿಸಿದವು. ಒಂದು ಬಸ್ಸಿನಲ್ಲಾದ ಅಪಘಾತ. ಇನ್ನೊಂದು ಡಿಯೆಗೊ ರಿವೆರಾ". ಅವರಿಬ್ಬರ ನಡುವೆ ಸುಮಾರು ಇಪ್ಪತ್ತು ವರ್ಷಗಳ ವಯಸ್ಸಿನ ಅಂತರವಿರುತ್ತದೆ. ಹಾಗಾಗಿ ಈ ಮದುವೆಯ ಬಗ್ಗೆ ಹಿರಿಯರ ಅಸಮ್ಮತಿ ಇರುತ್ತದೆ. ಈ ಜೋಡಿಯ ಕುರಿತು ಫ್ರಿಡಾಳ ತಾಯಿ "ಆನೆ ಮತ್ತು ಪಾರಿವಾಳದ ಜೋಡಿ" ಎಂದು ನಿಷ್ಠುರದ ಮಾತನಾಡುತ್ತಾಳೆ. 

ಮುಂದೆ ಫ್ರಿಡಾ ತನ್ನ ಮನದಾಳದ ಭಾವನೆಗಳನ್ನೆಲ್ಲ ಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಾಳೆ. ಆಕೆಗೆ ತನ್ನದೇ ಆದ ಮಗುವೊಂದು ಬೇಕೆಂಬ ಆಸೆ ಇದ್ದರೂ, ಎಳೆಯ ಪ್ರಾಯದಲ್ಲಿ ಆದ ಅಪಘಾತದಿಂದ ಅದು ಸಾಧ್ಯವಾಗುವುದೆ ಗರ್ಭಪಾತವಾಗುತ್ತದೆ. ಮತ್ತೆ ಮತ್ತೆ ಇದು ಮರುಕಳಿಸಿದಾಗ ಮನನೊಂದ ಫ್ರಿಡಾ ತನ್ನ ಹತಾಶೆಯನ್ನು "ಹೆನ್ರಿಫೋರ್ಡ್ ಹಾಸ್ಪಿಟಲ್" ಎಂಬ ಕಲಾಕೃತಿಯಲ್ಲಿ ತೋರಿಸಿಕೊಳ್ಳುತ್ತಾಳೆ. ಆಸ್ಪತ್ರೆಯ ಹಾಸಿಗೆಯಲ್ಲಿ ನಗ್ನವಾಗಿ ಮಲಗಿರುವ ಫ್ರಿಡಾಳ ಸುತ್ತ ಬ್ರೂಣ, ಹೂವು, ಪೆಲ್ವಿಸ್ , ಬಸವನ ಹುಳು ಮುಂತಾದವು ತೇಲುತ್ತಿರುತ್ತವೆ. ಇವೆಲ್ಲಾ ರಕ್ತ ನಾಳಗಳ ಮೂಲಕ ಅವಳ ದೇಹಕ್ಕೆ ತಗುಲಿಕೊಂಡಿರುತ್ತವೆ. ಬ್ರೂಣ ಹುಟ್ಟಲಿದ್ದ ಅವಳ ಮಗುವಿನ ಚಿತ್ರವಾದರೆ, ಪೆಲ್ವಿಸ್ ಅವಳಿಗಿದ್ದ ದೈಹಿಕ ಅಸಾಮರ್ಥ್ಯದ ಚಿತ್ರಣ ನೀಡುತ್ತದೆ. ಬಗ್ಗಿದವನಿಗೆ ಒಂದು ಗುದ್ದು ಎಂಬಂತೆ ಅವಳ ಕಷ್ಟಗಳು ಅಲ್ಲಿಗೆ ಮುಗಿಯುವುದಿಲ್ಲ. ಮುಂದೆ ತನ್ನ ಗಂಡ ಡಿಯೆಗೊಗೆ ವಿವಾಹೇತರ ಸಂಬಂಧವಿರುವುದು ತಿಳಿಯುತ್ತದೆ. ಇವಲ್ಲದೆ ತನ್ನ ಸ್ವಂತ ಸಹೋದರಿ ಕ್ರಿಸ್ಟಿನಾ ಜೊತೆ ಕೂಡ ಸಂಬಂಧವಿದೆಯೆಂದು ತಿಳಿದಾಗ ಫ್ರಿಡಾ ವ್ಯಗ್ರಳಾಗಿ ತನ್ನ ಉದ್ದದ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡು ತನ್ನ ಅಸಮಾಧಾನ ಸೂಚಿಸುತ್ತಾಳೆ.ಅವರ ವಿವಾಹ ಸಂಬಂಧಗಳು ಮತ್ತೂ ಹದಗೆಟ್ಟಾಗ, ನಿರ್ವಾಹವಿಲ್ಲದೆ ಇಬ್ಬರೂ ವಿಚ್ಛೇದನಕ್ಕೆ ಒಳಪಡುತ್ತಾರೆ.

ನಂತರದ ದಿನಗಳಲ್ಲಿ ಕೆಲವು ಮೇರು ಕೃತಿಗಳೆನ್ನಬಹುದಾದಂತಹ ಚಿತ್ರಗಳನ್ನು ಫ್ರಿಡಾ ರಚಿಸುತ್ತಾಳೆ. ಅದರಲ್ಲೊಂದು "ದಿ ಟು ಫ್ರಿಡಾಸ್ " ಎಂಬ ಚಿತ್ರ ಎಲ್ಲರ ಆಸಕ್ತಿ ಕೆರಳಿಸುತ್ತದೆ. ಈ ಕಲಾಕೃತಿಯಲ್ಲಿ ಒಂದು ಬಿಳಿಯ ತೆಹುನಾ (ಮೆಕ್ಸಿಕೋ ದೇಶದ ಸಾಂಪ್ರದಾಯಿಕ ಉಡುಪು) ಧರಿಸಿದ ಮತ್ತು ನೀಲಿ ಹಾಗು ಕಂದು ಬಣ್ಣವಿರುವ ತೆಹುನಾ ಧರಿಸಿರುವ ಫ್ರಿಡಾಳದ್ದೇ ಎರಡು ಬೇರೆ ಬೇರೆ ಚಿತ್ರವಿದೆ. ಎರಡರಲ್ಲಿಯೂ ಹೃದಯಗಳನ್ನು ಹೊರಗೆಳೆದು ತೋರಿಸಲಾಗಿದೆ. ಬಿಳಿಯ ಉಡುಗೆಯಲ್ಲಿರುವ ಫ್ರಿಡಾಳ ರಕ್ತನಾಳವೊಂದು ಕತ್ತರಿಸಲ್ಪಟ್ಟಿದ್ದು, ಬಟ್ಟೆಯ ಮೇಲೆ ರಕ್ತದ ಕಲೆಗಳಿವೆ. ಇದು ಡಿಯೆಗೊ ನಿಂದ ದೂರವಾದ ಮೇಲೆ ಅವಳ ಮನಸಿಗೆ ಆದ ಆಘಾತದ ಚಿತ್ರಣ ನೀಡುತ್ತದೆ. ೧೯೩೮ರಲ್ಲಿ ಆಂಡ್ರೆ ಬ್ರೆಟನ್ ಎನ್ನುವ ಪ್ರಸಿದ್ಧ ಚಿತ್ರಕಾರ ಇವಳ ಕೃತಿಗಳನ್ನು ಬಹಳವಾಗಿ ಮೆಚ್ಚಿಕೊಂಡು ನ್ಯೂಯಾರ್ಕ್ ನಲ್ಲಿ ಅವುಗಳ ಪ್ರದರ್ಶನವನ್ನೇ ಏರ್ಪಡಿಸುತ್ತಾನೆ. ಇದು ಫ್ರಿಡಾ ಜೀವನದ ಮೊದಲ ಸಾರ್ವಜನಿಕ ಪ್ರದರ್ಶನ. ನಂತರದಲ್ಲಿ ಪ್ಯಾರಿಸ್ ನಲ್ಲಿ ಸಹ ಅವಳ ಚಿತ್ರಪ್ರದರ್ಶನವೇರ್ಪಡುತ್ತದೆ. ಫ್ರಿಡಾ ಅಲ್ಲಿಗೆ ತೆರಳಿ ಪಿಕಾಸೋ ಮುಂತಾದ ಹಲವು ಪ್ರಸಿದ್ಧ ಚಿತ್ರಕಾರರ ಪರಿಚಯ ಬೆಳೆಸಿಕೊಳ್ಳುತ್ತಾಳೆ. ಪ್ಯಾರಿಸ್ ನಿಂದ ಮೆಕ್ಸಿಕೋಗೆ ವಾಪಸಾದ ಮೇಲೆ ೧೯೪೦ರಲ್ಲಿ ಫ್ರಿಡಾ ಮತ್ತು  ಡಿಯೆಗೊ ರಿವೆರಾ ಮರುಮದುವೆಯಾಗುತ್ತಾರೆ. ಆದರೆ ಇಬ್ಬರೂ ಬೇರೆ ಬೇರೆ ಯಾಗಿ ಬದುಕುತ್ತಾರೆ. ಅಲ್ಲದೆ ವಿವಾಹೇತರ ಸಂಬಂಧವನ್ನೂ ಹೊಂದಿರುತ್ತಾರೆ.   

೧೯೪೪ ರಲ್ಲಿ ಅವಳ ಚಿತ್ರ "ಮೋಸೆಸ್" ಎಂಬ ಕೃತಿಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ. ಅದೇ ವರ್ಷ ಆಕೆ ಬೆನ್ನುಹುರಿಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾಳೆ. ಮುಂದಿನ ಹಂತಗಳಲ್ಲಿ ಫ್ರಿಡಾ ಬಹಳಷ್ಟು ದೈಹಿಕ ತೊಂದರೆಗಳನ್ನು ಅನುಭವಿಸುತ್ತಾಳೆ. ದೇಹಸ್ಥಿತಿ ಹದಗೆಡುತ್ತಾ ಹೋಗುತ್ತದೆ. ಕಾಹ್ಲೋ ರಚಿಸಿದ "ದಿ ಬ್ರೋಕನ್ ಕಾಲಂ" ಎಂಬ ಕಲಾಕೃತಿಯಲ್ಲಿ, ಎದೆಯನ್ನು ಬಗೆದು ಬೆನ್ನುಮೂಳೆಯನ್ನು ತೋರಿಸಲಾಗಿದೆ.ಪದೇ ಪದೇ ಕಾಡುತ್ತಿದ್ದ ಈ ನೋವು, ಯಾತನೆಗಳು ಅವಳನ್ನೆಷ್ಟು  ನುಜ್ಜುಗುಜ್ಜಾಗಿಸಿದ್ದವು ಎಂಬುದರ ಅರಿವನ್ನು ಈ ಕೃತಿ  ಉಂಟುಮಾಡುತ್ತದೆ. ಆದರೆ ಅವಳನ್ನು ವಿಮುಖಳಾನ್ನಾಗಿ ಮಾಡಲು ಬಂದ ಅಡೆತಡೆಗಳನ್ನೆಲ್ಲ ಎದುರಿಸಿ ಛಲಬಿಡದೆ ತನ್ನ ಸಾಧನೆಯನ್ನು ಮುಂದುವರಿಸುತ್ತಾಳೆ ಫ್ರಿಡಾ. "ವಿಥೌಟ್ ಹೋಪ್", "ದಿ ವೂಂಡೆಡ್ ಡೀರ್ " ಮುಂತಾದ ಸುಂದರ ಕೃತಿಗಳು ಈ ಸಮಯದಲ್ಲಿ ಅವಳಿಂದ ರಚಿಸಲ್ಪಡುತ್ತವೆ. ೧೯೫೦ ರಲ್ಲಿ ಅವಳ ಬಲಗಾಲು ಗ್ಯಾಂಗ್ರೀನ್ ಕಾಯಿಲೆಗೆ ತುತ್ತಾಗುತ್ತದೆ. ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ ಫ್ರಿಡಾ ಕೆಲವು ಆಂದೋಲನಗಳಲ್ಲಿ ಭಾಗವಹಿಸುತ್ತಾಳೆ. ಮೆಕ್ಸಿಕೋದ ಶಾಂತಿ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾಳೆ. 


ಕೊನೆಯ ಎರಡು ವರ್ಷಗಳು.. 

೧೯೫೩ ರಲ್ಲಿ ಗ್ಯಾಂಗ್ರೀನ್ ಖಾಯಿಲೆ ಉಲ್ಬಣಗೊಂಡು ಬಲಗಾಲನ್ನು ಫ್ರಿಡಾ ಕಳೆದುಕೊಳ್ಳಬೇಕಾಗುತ್ತದೆ.ಅದೇ ವರ್ಷ ಪ್ರಥಮ ಬಾರಿಗೆ ಅವಳ ಚಿತ್ರ ಪ್ರದರ್ಶನ  ಮೆಕ್ಸಿಕೋದಲ್ಲಿ ನಡೆಯುತ್ತದೆ. ಬ್ರೊನ್ಕಿಯಲ್ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಾ ಹಾಸಿಗೆ ಹಿಡಿದಿದ್ದ ಫ್ರಿಡಾ ತಾನು ಪ್ರದರ್ಶನಕ್ಕೆ ಹೋಗಲೇ ಬೇಕೆಂದು ಹಠ ಹಿಡಿಯುತ್ತಾಳೆ. ವೈದ್ಯರು ಈ ಸ್ಥಿತಿಯಲ್ಲಿ ಅಲ್ಲಿಗೆ ಹೋಗುವುದು ಒಳ್ಳೆಯದಲ್ಲವೆಂದರೂ ಆಂಬುಲೆನ್ಸ್ ನಲ್ಲಿ ತಾನು ಮಲಗಿದ್ದ ಮಂಚದ ಸಮೇತ ಆ ಸ್ಥಳ ತಲುಪಿ ಬಂದವರೆಲ್ಲರ ಜೊತೆ ಬೆರೆಯುತ್ತಾಳೆ. ೧೯೫೪ ಕಾಹ್ಲೋ ಬದುಕಿನ ಕೊನೆಯ ವರ್ಷ.ನೋವಿನ ಬದುಕಿನಿಂದ ಬಿಡಿಸಿಕೊಂಡು, ಜುಲೈ ೧೩ ರಂದು ತಾನು ಹುಟ್ಟಿ ಬೆಳೆದ ಮನೆಯಾದ "ದಿ ಬ್ಲೂ ಹೌಸ್ " ನಲ್ಲಿ ಚಿರನಿದ್ರೆಗೆ ಜಾರುತ್ತಾಳೆ. ನೂರಾರು ಜನ ಅಭಿಮಾನಿಗಳು ಅವಳ ಮನೆಗೆ ತೆರಳಿ ಅಂತಿಮ ದರ್ಶನ ಪಡೆಯುತ್ತಾರೆ. ಸಾವಿಗೆ ಕಾರಣ ಪಲ್ಮನರಿ ಎಂಬೋಲಿಸಂ ಎಂದು ಅಧಿಕೃತವಾಗಿ ದಾಖಲೆಯಾಗಿದೆಯಾದರೂ ಅವಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ  ಗುಮಾನಿಯೂ ಇಲ್ಲದಿಲ್ಲ. 

ಸಾವಿನ ನಂತರದ ದಿನಗಳಲ್ಲಿ ಫ್ರಿಡಾ ಳ ಜನಪ್ರಿಯತೆ ಹೆಚ್ಚುತ್ತಾ ಹೋಗಿದೆ. ಅವಳು ಹುಟ್ಟಿ ಬೆಳೆದ ಬ್ಲೂ ಹೌಸ್ ಇದೀಗ ಮ್ಯೂಸಿಯಂ ಆಗಿ ಪರಿವರ್ತನೆಯಾಗಿದೆ. ಮೊದಲೆಲ್ಲ ಖ್ಯಾತ ಮ್ಯುರಲ್ ಚಿತ್ರಕಾರ ಡಿಯೆಗೊ ಪತ್ನಿ ಫ್ರಿಡಾ ಎಂದು ಗುರುತಿಸಿಕೊಳ್ಳುತ್ತಿದ್ದ ಮಟ್ಟದಿಂದ ಬೆಳೆದು, ಫ್ರಿಡಾಳ ಪತಿ ಡಿಯೆಗೊ ಎಂದು ಹೇಳಿಸಿಕೊಳ್ಳುವ ಮಟ್ಟಕ್ಕೆ ಅವಳ ಖ್ಯಾತಿ ಬೆಳೆದಿದೆ. ೧೯೮೩ ರಲ್ಲಿ ಹೇಡನ್ ಹೆರೆರಾ ಬರೆದ "ಎ ಬಯಾಗ್ರಫಿ ಆ ಫ್ರಿಡಾ ಕಾಹ್ಲೋ " ಎಂಬ ಪುಸ್ತಕ, ಓದುಗರಲ್ಲಿ ಇವಳೆಡೆಗೆ ಆಸಕ್ತಿ ಮೂಡಿಸಿತು. ೨೦೦೨ ರಲ್ಲಿ ಸಲ್ಮಾ ಹಯೆಕ್ ನಾಯಕಿಯಾಗಿ ನಟಿಸಿದ "ಫ್ರಿಡಾ" ಚಲನಚಿತ್ರ ಹಲವು ಪ್ರಶಸ್ತಿಗಳಿಗೆ ಭಾಜನವಾಯಿತು. 

ಸುಮಾರು ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೇಲಿಂದ ಮೇಲೆ ಅನಾರೋಗ್ಯವನ್ನೆದುರಿಸುತ್ತಾ, ಸಂಕಷ್ಟಗಳನ್ನೆಲ್ಲ ಶೌರ್ಯದಿಂದ ಎದುರಿಸಿ ಕಣ್ಮರೆಯಾದ ಈ ಧೀರೆ ಫ್ರಿಡಾ ನಿಜಕ್ಕೂ "ಲಾ ಹೀರೋಯಿನಾ ಡೆಲ್ ಡೊಲೊರ್ " , ನೋವಿಗೇ ನಾಯಕಿಯಾದವಳು. 














Monday, 26 June 2017

ಮನಸೆಳೆದ ಮೊಸ್ಟಾರ್

ಯುಗೊಸ್ಲಾವಿಯ ಎಂಬ ಹೆಸರಿನಿಂದ ಒಟ್ಟಾಗಿದ್ದ ಪ್ರಾಂತ್ಯಗಳು, ೧೯೯೩ ರ ಹೊತ್ತಿಗೆ ಸಮರಕ್ಕಿಳಿದು ಹರಿದು ಚೂರಾದದ್ದು ಈಗ ಇತಿಹಾಸ.ಅವುಗಳಲ್ಲಿ ಒಂದಾದ ಬೋಸ್ನಿಯಾ ಮತ್ತು ಹೆರ್ಝಿಗೋವಿನಿಯ ದೇಶವನ್ನು ವೀಕ್ಷಿಸುವ ಯೋಜನೆ ನಮ್ಮದಾಗಿತ್ತು.ಅಲ್ಲಿಗೆ ಹೋಗುತ್ತೇವೆಂದು ಹೇಳಿದಾಗ, ಅಲ್ಲೇನಿದೆ! ಎಂದು ಮೂಗು ಮುರಿದವರೇ ಹೆಚ್ಚು.ಅಲ್ಲಿನ ಜನರು ಬಡವರು.ನೀವು ಓಡಾಡುತ್ತಿದ್ದರೆ ನಿಮ್ಮ ವಸ್ತುಗಳನ್ನೆಲ್ಲ ಕಿತ್ತುಕೊಂಡಾರು.ಬಾಲ್ಕನ್ ಯುದ್ಧದ ಅಡ್ಡ ಪರಿಣಾಮಗಳು ಇನ್ನೂ ಮಾಸಿಲ್ಲ. ಲ್ಯಾಂಡ್ ಮೈನ್ಸ್ ಗಳ ಭೀತಿ ಇದೆ.ಅಲ್ಲಿಗೆ ಹೋಗದಿದ್ದರೆ ಒಳಿತು ಎಂದು ಉಪದೇಶಿಸಿದವರೂ  ಇದ್ದರು.ಇಷ್ಟೆಲ್ಲಾ ಕೇಳಿ ನಮ್ಮ ಮನದಲ್ಲೂ ಅಳುಕು ಟಿಸಿಲೊಡೆದಿತ್ತು.ಆದರೆ ನಮ್ಮ ಪ್ರಯಾಣವನ್ನು ನಿಲ್ಲಿಸಲಿಚ್ಛಿಸದೆ ಬಂದದ್ದು ಬರಲಿ ಎಂದುಕೊಂಡೇ ಹೊರಟಿದ್ದೆವು. ಸ್ವೀಡನ್ ನಿಂದ ಹೊರಡುವಾಗಲೂ ಇಮಿಗ್ರೇಷನ್ ಕೌಂಟರ್ ನಲ್ಲಿ ಕುಳಿತಿದ್ದವನಿಗೆ ಆಶ್ಚರ್ಯ. ಅಲ್ಲಿಗೇಕೆ ಹೋಗುತ್ತಿರುವಿರಿ? ಮೊದಲ ಬಾರಿಯ ಪ್ರಯಾಣವೇ? ವೀಸಾದ  ನಿಯಮಗಳನ್ನೆಲ್ಲ ನೋಡಿಕೊಂಡಿರುವಿರಿ ತಾನೇ ಎಂದೆಲ್ಲ ಪ್ರಶ್ನಿಸಿಯೇ ನಮ್ಮ ಪಾಸ್ ಪೋರ್ಟ್ ನ ಮೇಲೆ ಅಚ್ಚೊತ್ತಿ ಮುಂದೆ ಹೋಗಲು ರಹದಾರಿ ನೀಡಿದ್ದ.



ಸ್ವೀಡನ್ ನಿಂದ ಹೊರಟು ಕೇವಲ ೩ ಗಂಟೆಯೊಳಗಾಗಿ ವಿಮಾನ ತುಜ್ಲಾ ಇಂಟರ್ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಇಳಿಯಿತು.ಒಂದು ಭಾರಿ ಮನೆಯಷ್ಟೇ ದೊಡ್ಡದಿತ್ತು ತುಜ್ಲಾ ವಿಮಾನ ನಿಲ್ದಾಣ. ಅಲ್ಲಿಂದ ಮೊಸ್ಟಾರ್ ತಲುಪುವುದು ನಮ್ಮ ಯೋಜನೆಯಾಗಿತ್ತದ್ದರಿಂದ ತುಜ್ಲಾದಿಂದ ಸರಯೇವೋ ಮುಖಾಂತರವಾಗಿ ಮೊಸ್ಟಾರ್ ನೆಡೆಗೆ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ರಸ್ತೆಯ ಪಕ್ಕೆಲದಲ್ಲಿ ಗುಡ್ಡಗಳು,ಮೇಲಣ ಹಸುರ ಹೊದಿಕೆ,ಗುಡ್ಡಗಳ ತುದಿಯಲ್ಲಿ ಒಂದೊಂದೇ ಮನೆ, ಮನೆಯ ಮುಂದೆ ಮಣ್ಣಿನ ಕಾಲುದಾರಿ, ಎಷ್ಟೋ ದೂರ ನಡೆದರೆ ಒಂದು ಬಸ್ ನಿಲ್ದಾಣ,ಅಲ್ಲಲ್ಲಿ ಜುಳು ಜುಳು ಹರಿಯುವ ತೊರೆಗಳು ಇದು ಯೂರೋಪಿನ ಇತರೆ ಮುಂದುವರಿದ ದೇಶಗಳಂತಿರದೆ ಬೇರೆಯದೇ ಛಾಪು ಮೂಡಿಸಿತ್ತು.ಒಮ್ಮೊಮ್ಮೆ ನಮ್ಮೂರಲ್ಲೇ ನಾನಿದ್ದೇನೆ ಎಂದೆನಿಸಿಬಿಡುತಿತ್ತು.ಅಂತೂ ಗಂಟೆಗಟ್ಟಲೆ ಬಸ್ಸಿನಲ್ಲಿ ಪ್ರಯಾಣ ಮಾಡಿ ರಾತ್ರಿಯ ವೇಳೆಗೆ ಹೆರ್ಝಿಗೋವಿನಿಯ ಪ್ರಾಂತ್ಯದ ಮೊಸ್ಟಾರ್ ಪಟ್ಟಣ ತಲುಪಿಕೊಂಡೆವು


ಮೊಸ್ಟಾರ್  ನೆರೇತ್ವಾ ನದಿಯ ಮಡಿಲಲ್ಲಿ ಬೆಳೆದು ನಿಂತ ನಗರಿ. ಆ ನದಿಗೆ ೧೬ ನೇ ಶತಮಾನದಲ್ಲಿ ಕಟ್ಟಲಾದ ಸೇತುವೆಯೇ ಸ್ಟಾರಿ ಮೋಸ್ಟ್. "ಸ್ಟಾರಿ ಮೋಸ್ಟ್ " ಎಂಬ ಪದವನ್ನು ಅನುವಾದಿಸಿದರೆ ಹಳೆಯ ಸೇತುವೆ ಎಂಬರ್ಥ ಬರುತ್ತದೆ. ಈ ಹೆಸರನ್ನೇ ತನ್ನದಾಗಿಸಿಕೊಂಡಿದೆ ಮೊಸ್ಟಾರ್ ಪಟ್ಟಣ. ೧೯೯೩ ರ ಬಾಲ್ಕನ್ ಯುದ್ಧದ ಸಮಯದಲ್ಲಿ ಈ ಸೇತುವೆ ನಾಶಹೊಂದಿತ್ತು.ಆದರೆ ೨೦೦೪ ರ ವೇಳೆಗೆ ಪುನರ್ನಿರ್ಮಾಣ ಮಾಡಲಾಗಿ ಅದೀಗ ಮೊಸ್ಟಾರಿಗರ  ಹೆಮ್ಮೆಯ ಪ್ರತೀಕವಾಗಿ ತಲೆ ಎತ್ತಿ ನಿಂತಿದೆ. ವರ್ಷವೂ ಅದನ್ನು ವೀಕ್ಷಿಸಲು ಪ್ರಪಂಚದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಾರೆ.ನಾವೂ ಬೆಳಗ್ಗೆ ಬೇಗನೆ ಎದ್ದು ಆ ಸೇತುವೆಯೆಡೆ ನಡೆದೆವು.ಆಗಿನ್ನೂ ಮುಂಜಾನೆಯ ಹಿತವಾದ ಬಿಸಿಲು ಅಲ್ಲಲ್ಲಿ ಹರಡಿತ್ತು.ಸುವೆನೀರ್ ಅಂಗಡಿಗಳು ಒಂದೊಂದಾಗೆ ತೆರೆದುಕೊಳ್ಳುತ್ತಿದ್ದವು.ನೆರೇತ್ವಾ ನದಿ ಹೆಚ್ಚು ಸೆಳವಿಲ್ಲದೆ ಶಾಂತವಾಗಿ ಹರಿಯುತಿತ್ತು. ಮಧ್ಯದಲ್ಲಿ ಕಮಾನಿನ ಆಕಾರದ ಸೇತುವೆ ಜನರ ಮನಸ್ಸನ್ನು ಬೆಸೆಯುವ ಸ್ನೇಹದ ಕೊಂಡಿಯಾಗಿ ನಿಂತಂತಿತ್ತು.ನಾವು ಮುಂಚಿತವಾಗಿ ಅಲ್ಲಿದ್ದುದರಿಂದ ನಮ್ಮನ್ನು ಹೊರತು ಪಡಿಸಿ ಬೇರೆ ಯಾವ ಪ್ರವಾಸಿಗರೂ ಇರಲಿಲ್ಲ. ಆಗಾಗ ಸೇತುವೆಯ ಮೇಲೆ ನಿಂತು ನದಿಗೆ ಹಾರುವ ಗಟ್ಟಿ ಗುಂಡಿಗೆಯ ಜನರನ್ನು ನೋಡಬಹುದು. ನದಿಯ ಆಚೆ ದಡ ಮೊಸ್ಟಾರ್ ನ ಇನ್ನೊಂದು ಮುಖ. ಹೊಸ ಕಟ್ಟಡಗಳು, ಪಾರ್ಕ್ ಗಳು, ಅಗಲವಾದ ರಸ್ತೆಗಳು,ಸಿಗ್ನಲ್ ಲೈಟುಗಳು ಹೀಗೆ ಆ ಸ್ಥಳ ನಾವಿನ್ಯತೆಯಿಂದ ತುಂಬಿತ್ತು. ಆದರೂ ಅಲ್ಲಲ್ಲಿ ಪಾಳುಬಿದ್ದ ಕಟ್ಟಡಗಳು, ಸ್ಮಶಾನಗಳು, ಡೋಂಟ್ ಫಾರ್ಗೆಟ್ ೯೩ ಎಂಬ ನಾಮ ಫಲಕಗಳು ಯುದ್ಧದ ಕರಾಳತೆಯನ್ನು ಎತ್ತಿ ತೋರಿಸುತಿತ್ತು.


ಅಲ್ಲಿಂದ ಒಂದು ಟ್ಯಾಕ್ಸಿ ತೆಗೆದುಕೊಂಡು ಕ್ರಾವಿಚ ಜಲಪಾತ ನೋಡಲು ಹೋದೆವು.ಎಲ್ಲೆಲ್ಲೂ ಚೆರ್ರಿ ಹಣ್ಣಿನ ಗಿಡಗಳು,ಕೆಂಪಾದ ಚಿಕ್ಕ ಚಿಕ್ಕ ಹಣ್ಣುಗಳನ್ನು ಹೊತ್ತುಕೊಂಡು ನಿಂತಿದ್ದವು.ಅಲ್ಲಲ್ಲಿ ದಾಳಿಂಬೆಯ ಗಿಡಗಳೂ ಕಂಡವು. ಎಲ್ಲಕ್ಕಿಂತ ಹೆಚ್ಚಿನ ಗಮನ ಸೆಳೆದದ್ದು, ವಿಶಾಲವಾದ ದ್ರಾಕ್ಷಿ ತೋಪುಗಳು.ಆ ಜಾಗಗಳೆಲ್ಲ ದ್ರಾಕ್ಷಾರಸ ತಯಾರಿಕೆಗೆ ಪ್ರಸಿದ್ದಿ.ಕಪ್ಪು ದ್ರಾಕ್ಷಿ ಹಣ್ಣುಗಳನ್ನು ಕೊಯ್ದು ದೊಡ್ಡ ಪ್ರಮಾಣದಲ್ಲಿ ವೈನ್ ತಯಾರಿಸಿ ಮಾರುತ್ತಾರೆ. ಪ್ರವಾಸಿಗರು ಲೀಟರುಗಟ್ಟಲೆ ವೈನ್ ಗಳನ್ನು ಅಲ್ಲಿಂದ ಹೊರುತ್ತಾರಂತೆ. ನಾವು ಕ್ರಾವಿಚ ಜಲಪಾತ ತಲುಪುವಷ್ಟರಲ್ಲಿ ಬಹಳಷ್ಟು ಜನ ಆಗಲೇ ಅಲ್ಲಿದ್ದರು. ಕೆಲವರಂತೂ  ಕೊರೆಯುವ ನೀರಿನಲ್ಲಿ ಈಜುವ ಸಾಹಸಕ್ಕಿಳಿದಿದ್ದರು. ಬಹಳ ಎತ್ತರದಿಂದ ಭೋರ್ಗರೆದು ಧುಮುಕುವ ಜಲಪಾತವಲ್ಲ ಅದು. ಆದರೆ ಇಷ್ಟಗಲ ಹರಡಿಕೊಂಡು ಗಿಡಗಂಟಿಗಳ ನಡುವಿನಿಂದ ಜಾರುತ್ತ ನೋಡಲು ಅಮೋಘವೆನಿಸುತ್ತದೆ. ಚಳಿಗಾಲದಲ್ಲಿ ಇಲ್ಲಿನ ಗಿಡಗಳೆಲ್ಲ ಎಲೆಯುದುರಿಸಿಕೊಂಡು ಬೋಳಾಗಿದ್ದರೆ, ವಸಂತದಲ್ಲಿ ಪೂರ್ತಿ ಹಸಿರಸಿರು. ಶರದೃತು ಬಂತೆಂದರೆ ಹಳದಿ,ಕೇಸರಿ,ಕೆಂಪು ಬಣ್ಣಗಳ ಮೇಳ. ಮೊಸ್ಟಾರ್ ನಿಂದ ಇಲ್ಲಿಗೆ ತಲುಪಲು ಯಾವುದೇ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಳಿಲ್ಲ. ಹಾಗಾಗಿ ಟ್ಯಾಕ್ಸಿ ಕಾಯ್ದಿರಿಸಿಕೊಂಡು ಹೋದರೆ ಒಳಿತು.



ನಮ್ಮ ಮುಂದಿನ ಪಯಣ ಮೊಸ್ಟಾರ್ ನಿಂದ ಸುಮಾರು ಮೂವತ್ತು ಕಿ. ಮೀ ದೂರದಲ್ಲಿದ್ದ ಪೋಚಿಟೆಲಿ ಎಂಬ ಮಧ್ಯಕಾಲೀನ ಪಟ್ಟಣದೆಡೆಗೆ ಸಾಗಿತ್ತು.ನೆರೇತ್ವಾ ನದಿಯೇ ಇವರಿಗೆ ಜೀವದಾತೆ. ಈ ನದಿಯ ದಡದಲ್ಲಿ ನಿರ್ಮಿತಗೊಂಡು ಇವತ್ತಿಗೂ ಪ್ರಾಚೀನ ವಾಸ್ತುಶಿಲ್ಪದ ಕುರುಹಾಗಿ ನಿಂತಿದೆ ಪೋಚಿಟೆಲಿ.ಮಧ್ಯಾಹ್ನದ ಬಿಸಿಲು ನೆತ್ತಿಯನ್ನು ಸುಡುತಿತ್ತು.ನಮ್ಮ ಟ್ಯಾಕ್ಸಿ ಚಾಲಕ ಅರ್ಥವಾಗದ ಇಂಗ್ಲಿಷ್ ನಲ್ಲಿ ಗುಡ್ಡದ ತುದಿಯೆಡೆ ಕೈ ತೋರಿಸಿ ಅಲ್ಲಿಗೆ ಹತ್ತಿ ಹೋಗಬೇಕೆಂದು ಹೇಳಿದ.ತಾನಿಲ್ಲೇ ಕೂತಿರುವೆನೆಂದು,ನೀವು ಹೋಗಿ ಬನ್ನಿರೆಂದು ನಮ್ಮನ್ನು ಬೀಳ್ಕೊಟ್ಟ.ನಾವು ಕಾಲೆಳೆಯುತ್ತಾ ಒಂದೊಂದೇ ಮೆಟ್ಟಿಲು ಹತ್ತತೊಡಗಿದೆವು.ಇಡಿಯ ಸಂಕೀರ್ಣವನ್ನು ಕಲ್ಲಿನ ಗೋಡೆಯೊಂದು ಆವರಿಸಿತ್ತು.ಅಲ್ಲಲ್ಲಿ ಹಾಳಾಗಿದ್ದರೂ ಬಹುಪಾಲು ಕೋಟೆಯ ಗೋಡೆಗಳು, ಬುರುಜುಗಳು, ಕಲ್ಲಿನ ಮನೆಗಳು ಎಲ್ಲವನ್ನೂ ಕಾಣಬಹುದಿತ್ತು.ಒಟ್ಟೋಮನ್ ತುರ್ಕರ ಕಾಲದಲ್ಲಿ ನಿರ್ಮಾಣವಾದ ಮಸೀದಿಗಳು, ಸ್ನಾನ ಗೃಹಗಳು (ಹಮ್ಮಾಮ್), ಮದರಸಾ ಗಳು ಹಾಳಾಗದೆ ಉಳಿದಿದ್ದವು.ಅಲ್ಲಿನ ಮನೆಗಳಲ್ಲಿ ಈಗಲೂ ಜನ ವಾಸವಾಗಿದ್ದಾರೆ. ಬೆಟ್ಟದ ತುದಿಯಲ್ಲಿ ನಿಂತು ನೋಡಿದರೆ ಕೆಳಗೆ ಹತ್ತಿರದ ಊರುಗಳೆಲ್ಲ ಮಲಗಿದ್ದವು. ನೆರೇತ್ವಾ ನದಿ ಮಂದವಾಗಿ ಹರಿಯುತಿತ್ತು.ಪೂರ್ತಿಯಾಗಿ ನೋಡಿ ಮುಗಿಸುವಷ್ಟರಲ್ಲಿ ಎರಡು ಗಂಟೆಗಿಂತ ಹೆಚ್ಚೇ ಸಮಯ ಬೇಕಾಯಿತು.ಕೆಳಗೆ ಬಂದಾಗ ಚೆರ್ರಿ ಹಣ್ಣುಗಳನ್ನು ಮಾರುತ್ತಿರುವುದು ಕಂಡು ಹಸಿವಿನ ನೆನಪಾಗಿ ಒಂದು ಕೆಜಿ ಯಷ್ಟು ಹಣ್ಣನ್ನು ಕೊಂಡುಕೊಂಡೆವು. ಕೆಂಪಗೆ ಗುಂಡಗಿದ್ದ ಹಣ್ಣುಗಳು ಬಹಳ ಸಿಹಿಯಾಗಿದ್ದವು. ಹಸಿವಿನ ಮಹಿಮೆಯೋ ಅಥವಾ ಆ ಹಣ್ಣು ನಿಜಕ್ಕೂ ಅಷ್ಟು ರುಚಿಯಾಗಿತ್ತೋ  ನನಗಂತೂ ಚೆರ್ರಿ ಹಣ್ಣೆಂದರೆ ಇಷ್ಟ ಎನ್ನುವಂತಾಯಿತು. 





ಬ್ಲಾಗಾಯ್ ಎನ್ನುವ ಸ್ಥಳ ನಮ್ಮ ಕೊನೆಯ ನಿಲ್ದಾಣ.  ಅದು ಬ್ಯುನ ನದಿಯ ಉಗಮ ಸ್ಥಾನ. ಬಾನೆತ್ತರಕ್ಕೆ ಎದ್ದು ನಿಂತ ಕಲ್ಲು ಪರ್ವತಗಳ ಬುಡದಲ್ಲಿ ಒಂದು ಸಣ್ಣ ಗುಹೆಯಿಂದ ನೀರು ಹೊರಬಂದು ಹಳ್ಳವಾಗಿ ಹರಿಯುತ್ತಿತ್ತು. ಬ್ಯುನ ಒಂದು ಚಿಕ್ಕ ನದಿ. ಬಹಳ ದೂರ ಒಬ್ಬಂಟಿಯಾಗಿ ಸಾಗಲಿಚ್ಛಿಸದೆ ಬ್ಯುನ ಎಂಬ ಹಳ್ಳಿಯಲ್ಲಿ ನೆರೇತ್ವಾ ನದಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ.ಅಲ್ಲಿ ಹರಿಯುತ್ತಿದ್ದ ನೀರು ಒಂದೊಂದೆಡೆ  ಮೈಲು ತುತ್ತದ ನೀಲಿ ಬಣ್ಣದಲ್ಲಿ ಕಂಡರೆ ಇನ್ನೊಂದೆಡೆ ಪಾಚಿ ಹಸಿರು ಬಣ್ಣದಲ್ಲಿದ್ದಂತೆ ಕಾಣುತ್ತಿತ್ತು.ಹಾಗಾಗಿ ನೀರು ನೀಲಿಯೊ ಹಸಿರೋ ಎಂದು ಗೊತ್ತಾಗದೆ ಗೊಂದಲದಲ್ಲಿದ್ದೆ ನಾನು. ನದಿಯ ಪಕ್ಕದಲ್ಲೇ ಬ್ಲಾಗಾಯ್ ತೆಕ್ಕೆ ಎನ್ನುವ ಹೆಸರಿನ ಡೆರ್ವಿಶ್ ಮೊನಾಸ್ಟರಿ ಇದೆ.೧೬ ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಯಿತು ಎನ್ನುವ ಅಂಶವನ್ನು ಹೊರತು ಪಡಿಸಿ ಅಲ್ಲಿ ನೋಡುವಂತದ್ದು ನನಗೇನೂ ಕಾಣಲಿಲ್ಲ. ಸುಮ್ಮನೆ ಇದ್ದ ಕೋಣೆಗಳನ್ನೆಲ್ಲ ಹೊಕ್ಕು ಹೊರಬಂದೆವು. ಇದನ್ನೊಂದು ಸ್ಮಾರಕವೆಂದು ಗುರುತಿಸಿ ಇಂದಿಗೂ ಸಂರಕ್ಷಿಸಲಾಗಿದೆ. 


ಅಲ್ಲಿಂದ ವಾಪಸು ಕರೆತಂದ ಟ್ಯಾಕ್ಸಿ ಡ್ರೈವರ್ ನಮ್ಮನ್ನು ಹೋಟೆಲ್ ಎದುರು ಇಳಿಸಿದ. ಇನ್ನು ಕತ್ತಲಾಗಲು ಬಹಳ ಸಮಯವಿತ್ತು. ಹಾಗಾಗಿ ಮೊಸ್ಟಾರ್ ನಲ್ಲಿರುವ ಹಳೆಯ ಟರ್ಕಿಷ್ ಹೌಸ್ ಎಂದೇ ಹೆಸರಾದ ಕೈತಾಜ್ ಹೌಸ್ ನೋಡಲು ಹೊರಟೆವು.ಇದು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿದೆ.ಆದರೆ ಇಂದಿಗೂ ಇದರ ಒಡೆತನ ಕೈತಾಜ್ ಮನೆತನದ ಸೊತ್ತು.ಕೈತಾಜ್ ಮನೆ ಅಲ್ಲಿನ ನ್ಯಾಯಾಧೀಶರೊಬ್ಬರ ನಾಲ್ಕು ಜನ ಹೆಂಡತಿಯರಿಗೆ ಸೇರಿತ್ತು. ಯಾವುದೋ ಸಂದಿಮೂಲೆಯಲ್ಲಿ ಅಲೆದು ದಾರಿಯಲ್ಲಿ ಸಿಕ್ಕವರನ್ನು ವಿಚಾರಿಸುತ್ತಾ ಆ ಮನೆಯನ್ನು ತಲುಪಿದೆವು. ಹೊರಾಂಗಣವನ್ನು ಸುತ್ತುವರಿದಿದ್ದ ಎತ್ತರೆತ್ತರದ ಗೋಡೆಗಳಿಗೆ ಬೃಹತ್ ಬಾಗಿಲೊಂದಿತ್ತು.ಕರೆಗಂಟೆಯ ಶಬ್ದ ಕೇಳಿ ಒಬ್ಬಾಕೆ ಬಂದು ಬಾಗಿಲು ತೆಗೆದಳು.ನಮ್ಮನ್ನು ಒಳಗೆ ಕರೆದು ಕೂರಲು ಹೇಳಿ ಗುಲಾಬಿ ಹೂವಿನ ಎಸಳಿನಿಂದ ಮನೆಯಲ್ಲೇ ಮಾಡಿದ ಪಾನಕ ತಂದುಕೊಟ್ಟಳು.ಬಿಸಿಲಲ್ಲಿ ಬಂದವರಿಗೆ ಅಮೃತ ಕೊಟ್ಟಷ್ಟು ತಂಪೆನಿಸಿತು. ಆಕೆಯ ಹೆಸರು ಇಂದಿರಾ. ತನ್ನ ತಂದೆಗೆ ಇಂದಿರಾ ಎನ್ನುವ ಹೆಸರು ಇಷ್ಟವೆನಿಸಿ ಅದನ್ನು ತನಗಿಟ್ಟರೆಂದು ತಿಳಿಸಿದಳು. ಮುಂದೆ ಮನೆಯನ್ನೊಮ್ಮೆ ಸುತ್ತಾಡಿಸಿ ನಮಗೆ ಅಲ್ಲಿದ್ದ ಪ್ರತಿಯೊಂದು ವಸ್ತುಗಳ ಬಗ್ಗೆಯೂ ಮಾಹಿತಿ ನೀಡಿದಳು. ನ್ಯಾಯಾಧೀಶರ ನಾಲ್ವರು ಹೆಂಡತಿಯರಿಗೆ ಪ್ರತ್ಯೇಕವಾದ ಒಂದೊಂದು ಕೋಣೆಗಳು,ಅದಕ್ಕೆ ಸೇರಿಕೊಂಡಿದ್ದ ಸ್ನಾನಗೃಹಗಳಿದ್ದವು. ಆದರೆ ಅವರಲ್ಲೊಬ್ಬಳಿಗೆ ಮೇಲಿನ ಸ್ಥಾನ. ಆಕೆಗೆ ಹೆಚ್ಚಿನ ಉಪಚಾರವನ್ನು ಉಳಿದವರು ಮಾಡಬೇಕಿತ್ತಂತೆ. ಅವಳ ಆಣತಿಯಂತೆ ಮನೆಯ ಆಗುಹೋಗುಗಳು ನಿರ್ಧಾರವಾಗುತ್ತಿದ್ದವಂತೆ. ಊಟೋಪಚಾರ, ಉಡುಗೆ ತೊಡುಗೆ ಎಲ್ಲದರಲ್ಲೂ ಅವಳದ್ದು ಮೇಲುಗೈ.ಇದೆಲ್ಲವನ್ನು ಇಂದಿರೆಯಿಂದ ಕೇಳಿ ತಿಳಿದುಕೊಂಡೆವು. ಕಲ್ಲಿನ ಮನೆಯಾದ್ದರಿಂದ ಬೇಸಿಗೆಯಲ್ಲಿ ಧಗೆಯಿಂದ ರಕ್ಷಣೆ ನೀಡುತಿತ್ತು. ಅಡಿಗೆ ಮನೆಯನ್ನು ಉಳಿದೆಲ್ಲ ಕೋಣೆಗಳಿಗಿಂತ ಹೆಚ್ಚಿಗೆ ತಂಪಾಗಿರುವಂತೆ ಮಾಡಲಾಗಿತ್ತು. ಇದಲ್ಲದೆ ಅವರು ಬಳಸುತ್ತಿದ್ದ ಬಟ್ಟೆಗಳು, ಚಪ್ಪಲಿ, ತಲೆಗೇರಿಸುತ್ತಿದ್ದ ಟೊಪ್ಪಿ,ಮಗುವನ್ನು ತೂಗುವ ತೊಟ್ಟಿಲು,ಕಾಫಿ ಬಟ್ಟಲು ಇವೆಲ್ಲವನ್ನೂ ನೋಡುವ ಅವಕಾಶ ಸಿಕ್ಕಿತು. 



ಇಂದಿರಾ ಸಣ್ಣವಳಿದ್ದಾಗಿನಿಂದ ಅಲ್ಲೇ ಪಕ್ಕದ ಮನೆಯಲ್ಲಿ ಬೆಳೆದವಳಂತೆ.ಯುದ್ಧದ ಭೀಕರತೆಯನ್ನು ವಿವರಿಸುತ್ತಾ ಹೀಗೆಂದಳು. ಒಂದು ದಿನ ಅವಳ ತಂಗಿ ಮಧ್ಯ ರಾತ್ರಿ ಏನೋ ಸದ್ದಾಯಿತು ಎಂದು ಮಲಗಿದ್ದ ಕೊಠಡಿಯ ಬಾಗಿಲು ತೆಗೆದರೆ,ಮನೆಯ ಅರ್ಧ ಭಾಗ ಹತ್ತಿ ಉರಿಯುತ್ತಿತ್ತಂತೆ. ಎಲ್ಲರೂ ಹೊರಗೆ ಬಂದು ಬೀದಿಯಲ್ಲಿ ನಿಲ್ಲಬೇಕಾಯಿತಂತೆ.ಆ ಘಟನೆ ನಡೆದ ಮೇಲೆ ಅವರ ತಂದೆ ಹೆಣ್ಣು ಮಕ್ಕಳಿಬ್ಬರನ್ನು ಬಸ್ಸಿನಲ್ಲಿ ಜರ್ಮನಿಗೆ ಕಳಿಸಿದರಂತೆ.ಆ ದಿನದ ನೆನಪು ಅವಳಿಗಿನ್ನೂ ಮಾಸಿರಲಿಲ್ಲ.ಬೆಳಿಗ್ಗೆ ಬಸ್ಸಿನಲ್ಲಿ ಕೂತವಳಿಗೆ ತಂದೆ ಹೇಳುತ್ತಿದ್ದರಂತೆ, ಇನ್ನೊಂದು ವಾರವಷ್ಟೇ ಯುದ್ಧ ಮುಗಿಯುತ್ತದೆ.ಎಲ್ಲರೂ ಜೊತೆಯಾಗಿ ಅದೇ ಮನೆಯಲ್ಲಿ ಇರಬಹುದು ಎಂದು.ಆದರೆ ನಾವು ಇನ್ನೊಂದು ವಾರದಲ್ಲಿ ವಾಪಸಾಗಲಾರೆವು ಎಂದು ಅವಳ ಮನಸಿಗೆ ಖಚಿತವಾಗಿತ್ತು.ಬಸ್ಸಿನಲ್ಲಿ ಕುಳಿತ ಪ್ರತಿಯೊಬ್ಬರೂ ರೋಧಿಸುತ್ತಿದ್ದರಂತೆ.ಅಂದು  ನನ್ನ ತಂದೆಯ ಕಣ್ಣಲ್ಲೂ ನೀರಿತ್ತು.ಈಗ ಯುದ್ದವೆಲ್ಲ ಮುಗಿದು ನಾವು ವಾಪಾಸಾದರೂ ನನ್ನ ಎಷ್ಟೋ ಸ್ನೇಹಿತರನ್ನು, ಪರಿಚಯಸ್ಥರನ್ನು ಕಳೆದುಕೊಂಡಿದ್ದೇನೆ.ನಮ್ಮವರು ಮಾನವೀಯತೆ, ಪ್ರೀತಿ, ಅಭಿಮಾನವನ್ನು ಕಳೆದುಕೊಂಡಿದ್ದಾರೆ. ಈಗ ನಮ್ಮಲ್ಲೇನೂ ಉಳಿದಿಲ್ಲ ಎಂದು ಹನಿಗಣ್ಣಾದಳು. ಅವಳ ದುಃಖದ ಕಥೆ ಕೇಳಿ ನಮಗೂ ಬೇಸರವಾಯಿತು. 




ಮಾರನೆಯ ದಿನ ಬೆಳಿಗ್ಗೆಯೇ ಹೊರಡಬೇಕಿದ್ದರಿಂದ ಇನ್ನೊಮ್ಮೆ ಸ್ಟಾರಿ ಮೋಸ್ಟ್ ಕಡೆಗೆ ಹೋದೆವು. ಮುಂಜಾನೆ ಜನರಿಲ್ಲದೆ ಖಾಲಿ ಖಾಲಿಯಾಗಿದ್ದ ಸೇತುವೆ ಸಂಜೆಯ ವೇಳೆಗೆ ಗಿಜಿಗಿಜಿಗುಡುತಿತ್ತು. ಎಲ್ಲ ಅಂಗಡಿಗಳು, ಹೋಟೆಲ್ ಗಳಲ್ಲಿ ಜನವೋ ಜನ. ಅಲ್ಲಾಉದ್ ದೀನನ ಅದ್ಭುತ ದೀಪಗಳು, ಹೂದಾನಿಗಳು, ತುರ್ಕರ ಮಾದರಿಯ ಕಾಫಿ ಹೂಜಿಗಳು, ಬಟ್ಟಲುಗಳು, ಹರಳಿನಿಂದ ಸಿಂಗರಿಸಿದ ಆಭರಣದ ಪೆಟ್ಟಿಗೆಗಳು, ಹೊಳೆಹೊಳೆವ ಸರಗಳು, ಹಳೆಯ ಅಂಚೆ ಚೀಟಿಗಳು, ನಾಣ್ಯಗಳು, ವಿದ್ಯುತ್ ತೂಗುದೀಪಗಳು ಎಲ್ಲವೂ  ಆ ಬೀದಿಯನ್ನು ಬಣ್ಣಬಣ್ಣದಿಂದ ಸಿಂಗರಿಸಿ ಅದಕ್ಕೊಂದು ನವವಧುವಿನ ಕಳೆಯನ್ನೇ ತಂದಿದ್ದವು.ನಾವೂ ಸಹ  ಮೊಸ್ಟಾರ್ ನ ನೆನಪಿಗೆಂದು ಒಂದೆರಡು ವಸ್ತುಗಳನ್ನು ಖರೀದಿಸಿ ವಾಪಾಸಾದೆವು.