Friday 16 September 2016

ತುಮಕೂರಿನ ಶಿವಗಂಗೆ..

  ಶಿವಗಂಗೆಯ ನಂದಿ ಎದುರು 
ವಿರಾಮದ ಒಂದು ಶನಿವಾರ ಗೆಳೆಯರೆಲ್ಲ ಸೇರಿ ತುಮಕೂರಿನ ಶಿವಗಂಗೆಗೆ ಹೋಗಿ ಬರುವುದೆಂದು ತೀರ್ಮಾನವಾಯಿತು. ಬೆಳ್ಳಂಬೆಳಗ್ಗೆ ಎಲ್ಲರೂ ಜೊತೆಯಾಗಿ ಬಸ್ಸಿನಲ್ಲಿ ತುಮಕೂರಿನ ಕಡೆಗೆ ಹೊರಟೆವು. ಬೆಂಗಳೂರಿನಿಂದ ತುಮಕೂರಿಗೆ ತಲುಪಿ ಅಲ್ಲಿಂದ ಶಿವಗಂಗೆ ಬೆಟ್ಟದ ಬುಡ ಸೇರುವಷ್ಟರಲ್ಲಿ ಗಂಟೆ ಹತ್ತು ದಾಟಿತ್ತು. ಅಲ್ಲಿ ಇಲ್ಲಿ ಚಂದ ಕಂಡದ್ದನ್ನೆಲ್ಲ ಛಾಯಾಚಿತ್ರವಾಗಿ ಸೆರೆಹಿಡಿಯುತ್ತಾ ನಿಧಾನವಾಗಿ ಮೆಟ್ಟಿಲೇರತೊಡಗಿದ್ದೆವು. ಬಿಸಿಲು ನಿಧಾನವಾಗಿ ತನ್ನ ಚುರುಕು ಮುಟ್ಟಿಸುತ್ತಿತ್ತು.ಸೂರ್ಯ ನಡುನೆತ್ತಿಯೆಡೆಗೆ ಬರಲಾರಂಭಿಸಿದ್ದ.ದಾರಿಯಲ್ಲಿ, "ಮಜ್ಜಿಗೆ ಬೇಕೇ? ಕುಡಿಯುವ ನೀರು ಬೇಕೇ? ತಾಜಾ ತಾಜಾ ಕಬ್ಬಿನ  ಹಾಲು ತಗೊಳ್ಳಿ! ಬಿಸಿಲು ಜೋರಾಗಿದೆ, ಇಲ್ಲಿ ಕೂತು ದಣಿವಾರಿಸಿಕೊಳ್ಳಿ!" ಎಂದೆಲ್ಲ  ಹೇಳಿ ತಮ್ಮ ಅಂಗಡಿಗೆ ಕರೆಯುವ ವ್ಯಾಪಾರಿಗಳ ಸಾಲು ಬಹಳವಿತ್ತು. ಅಲ್ಲಲ್ಲಿ ಮಜ್ಜಿಗೆ ಕುಡಿದು, ಸೌತೆಕಾಯಿಯನ್ನು ಮೆಲ್ಲುತ್ತಾ ಸುಮಾರು ಅರ್ಧ ದೂರ ಕ್ರಮಿಸಿದೆವು. ಮುಂದೆ ಕಡಿದಾದ ಮೆಟ್ಟಿಲುಗಳು.ನಮ್ಮೆಲ್ಲರ ಬೆನ್ನಿನಲ್ಲಿದ್ದ ಚೀಲದಲ್ಲಿ ಅಗತ್ಯಕ್ಕೆ ಬೇಕಾದ ತಿನಿಸುಗಳು, ನೀರಿನ ಬಾಟಲಿಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೆವು.ಅಲ್ಲಿ ಸುತ್ತ ಮುತ್ತೆಲ್ಲ ಕೋತಿಗಳ ಹಿಂಡೇ ಇತ್ತು. ನೋಡನೋಡುತ್ತಿದ್ದಂತೆಯೇ ಒಂದು ಗಡವ ಕೋತಿ ಬೀಡುಬೀಸಾಗಿ ಬಂದು ನನ್ನ ಮುಂದೆ ನಡೆಯುತ್ತಿದ್ದ ನನ್ನ ಗೆಳತಿಯ ಚೀಲಕ್ಕೇ ಕೈ ಹಾಕಿತು. ಅವಳು ಮೊದಲೇ ಹೆದರಿದ್ದವಳು, ಆ ಕೋತಿ ಬಂದ ರಭಸವನ್ನು ಕಂಡು ಇನ್ನೂ ಭಯಗೊಂಡು ಕಿರುಚಾಡತೊಡಗಿದಳು. ಹಿಂದುಮುಂದಿದ್ದವರೆಲ್ಲ ನಮ್ಮನ್ನೇ ಗಮನಿಸಲಾರಂಭಿಸಿದರು. ಅವರೆಲ್ಲರಿಗೂ ಅದು ಮೋಜಿನ ಸಂಗತಿಯಾಗಿತ್ತು. ನಾನು ಏನು ಮಾಡಲು ತೋಚದೆ ಚೀಲ ಹಿಡಿದು ನನ್ನೆಡೆಗೆ ಎಳೆಯತೊಡಗಿದೆ. ಆ ಮಂಗವೂ ಸಹ  ನಾನೇನು ಕಡಿಮೆ ಎಂಬಂತೆ ಇನ್ನೂ ಜೋರಾಗಿ ಚೀಲವನ್ನು ಎಳೆದುಕೊಂಡು,ಅದರ ಒಳಗಿದ್ದ ನೀರಿನ ಬಾಟಲಿ ತೆಗೆದುಕೊಂಡು ಪರಾರಿಯಾಯಿತು.ಆಗ ಹೋದ ಜೀವ ಬಂದಂತಾಗಿ ಬದುಕಿದೆಯಾ ಬಡಜೀವವೇ ಎಂದು ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಂಡೆವು. ಮುಂದೆ ಅಲ್ಲೇ ಇದ್ದ ಅಂಗಡಿಯ ಮಾಲೀಕರ ಸುಪರ್ದಿಯಲ್ಲಿ  ನಮ್ಮ ಸಾಮಾನುಗಳನ್ನೆಲ್ಲ  ಇರಿಸಿ ಧೈರ್ಯದಿಂದ ಚಾರಣ ಮುಂದುವರೆಸಿದೆವು. ಬೆಟ್ಟದ ತುದಿ ತಲುಪಿ ಅಲ್ಲಿಂದ ಕೆಳಗಿಳಿದು ಬರುವಾಗ ನಮ್ಮ ಕಣ್ಣೆದುರೇ ಒಂದು ಕೋತಿ  ಯಾರದೋ ದುಡ್ಡಿನ ಚೀಲವನ್ನೇ ಎತ್ತಿಕೊಂಡಿತ್ತು. ಸಧ್ಯ ನಮ್ಮ ಸ್ಥಿತಿ ಇದಕ್ಕಿಂತ ಎಷ್ಟೋ ಉತ್ತಮವೆಂದುಕೊಂಡು ಕೆಳಗಿಳಿದೆವು. ಎಂದಿಗೂ ಮರೆಯಲಾಗದಂತಹ ಪೇಚಿನ ಅನುಭವವಿದು. ನೆನೆಸಿಕೊಂಡಾಗೆಲ್ಲ ನಗೆ ತರಿಸುವ ಪ್ರಸಂಗವೂ ಹೌದು. 

No comments:

Post a Comment