Monday 12 May 2014

ಅರಮನೆ ತೋಟದಲ್ಲಿ..

ಇಂಜಿನಿಯರಿಂಗ್ ಮುಗಿಸಿಕೊಂಡು ಯಾವ ಯೋಚನೇನೂ ಇಲ್ದೆ ,ಎನೂ ಕೆಲಸ ಇಲ್ದೆ  ಮನೆಯಲ್ಲಿ ಕೂತಿದ್ದೆ. ಮಳೆಗಾಲದ ದಿನಗಳವು.ಅಮ್ಮ ಹಾಸ್ಟೆಲ್ ನಿಂದ ಬಂದ ಮೊದಲೆರಡು ದಿನಗಳು ಚನ್ನಾಗಿ ನೋಡಿಕೊಂಡರು (ಯಾವ ಕೆಲಸವನ್ನೂ ಹೇಳದೆ..!!). ಆಮೇಲೆ ಅಡಿಗೆ ಕಲಿ,ಹೊಸ್ಲಿಗೆ ರಂಗೋಲಿ ಹಾಕು,ನಂಗೆ ಕೆಲಸ ಮಾಡ್ಕೊಡು ಅಂತೆಲ್ಲ  ಹೇಳೋಕೆ ಶುರು ಮಾಡಿದ್ರು.ಹೇಳಿದ ಕೆಲಸ ಮಾಡಿಲ್ಲ ಅಂದ್ರೆ "ಅಯ್ಯೋ ನಾನು ನಿನ್ನ ಒಳ್ಳೇದಕ್ಕೆ ಹೇಳೋದು. ನಾಳೆ ಮದ್ವೆ ಆದ್ಮೇಲೆ ಇದೆಲ್ಲ ಕೆಲಸ ಮಾಡಬೇಕಲ್ವ?.ಎಲ್ಲ ಕೆಲಸ ಕಲ್ತಿರ್ಬೇಕು ಹೆಣ್ಣುಮಕ್ಕಳು. ಇಲ್ಲಾಂದ್ರೆ ನಿಮ್ಮಮ್ಮ ಇದೇ ಕಲ್ಸಿದ್ದ ಅಂತ ನಂಗೆ ಬೈತಾರೆ"  ಅಂತ ರಗಳೆ ಶುರು ಮಾಡ್ತಿದ್ರು. ಇನ್ನೇನು ಬೇಜಾರಾಗಿ ವಿರಕ್ತಿ ಹುಟ್ಟಬೇಕು ಜೀವನದಲ್ಲಿ,ಅಷ್ಟರಲ್ಲಿ  ಚಿಕ್ಕಮ್ಮ ಫೋನ್ ಮಾಡಿ "ಮನೇಲಿ ಒಬ್ಳೆ ಕೂತ್ಕೊಂಡು ಏನ್ಮಾಡ್ತಿ.?ಬಾ ನಮ್ಮನೆಗೆ. ಎಲ್ಲ ಕಡೆ ಸುತ್ತಬಹುದು" ಅಂತ ಕರೆದರು. ವೈದ್ಯ ಹೇಳಿದ್ದು ಹಾಲು ಅನ್ನ ,ರೋಗಿ ಬಯಸಿದ್ದು ಹಾಲು ಅನ್ನ ಅನ್ನೋ ಹಾಗೆ ನಂಗು ಅದೇ ಬೇಕಾಗಿತ್ತು. ತಕ್ಷಣ ಹೊರಟೆ ಅವರೂರ ಕಡೆಗೆ.

ಮಳೆಗಾಲದಲ್ಲಿ ಮಲೆಕಾಡು  ಹೇಗಿರುತ್ತದೆ ಎಂದರೆ ಯಾರೋ ಆಗಷ್ಟೇ ರಂಗೋಲಿ ಬಿಡಿಸಿ ಬೇರೆ ಬಣ್ಣ ಹಾಕಲು ಮರೆತು ಬರೀ ಹಸಿರನ್ನೇ ಚೆಲ್ಲಿದ್ದಾರೇನೋ  ಎನ್ನಿಸುತ್ತದೆ.ಧೋ ಎಂದು ಸುರಿಯುವ ಮಳೆ.ಕೆಸರು ತುಂಬಿಕೊಂಡ ಮಣ್ಣಿನ ರಸ್ತೆಗಳು. ಆ ಸಮಯದಲ್ಲಿ ಹಕ್ಕಿಗಳೂ ಕೂಡ ಗೂಡು ಸೇರಿ ಬೆಚ್ಚಗೆ ಮುದುಡಿ ಮಲಗಿರುತ್ತವೆ. ಬೇಸಿಗೆಯಲ್ಲಿ ಉಸಿರೇ ಇಲ್ಲದೆ ಮಲಗಿರುವ ಹೊಳೆ,ಹಳ್ಳಗಳು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ.ಆ ಕೆಂಪು ನೀರನ್ನೂ,ಅದರ ರಭಸವನ್ನೂ ನೋಡಬೇಕು ಆಗ.. ನಮ್ಮೂರಿನ ಈ ಹಳ್ಳ ಕೊಳ್ಳಗಳು ನೀರನ್ನೆಲ್ಲ ಹೊತ್ತೊಯ್ದು ಸುರಿಯುವುದು ತುಂಗೆಗೆ. ತನ್ನ ಇಕ್ಕೆಲಗಳನ್ನು ವಿಸ್ತರಿಸಿಕೊಳ್ಳುತ್ತಾ ಗಂಭೀರೆಯಾಗುತ್ತಾಳೆ, ಮಂದಗಮನೆಯಾಗುತ್ತಾಳೆ ನಮ್ಮ ತುಂಗೆ.                                             
                            
 ಹರಿಹರಪುರದಲ್ಲಿ ತುಂಗೆ..
ಚಿಕ್ಕಮ್ಮನ ಮನೆ ಇದ್ದದ್ದು ಶೃಂಗೇರಿಗೆ ಸಮೀಪದ ಬಿಳುವಿನಕೊಡಿಗೆಯಲ್ಲಿ. ಮಲೆನಾಡಿನ ಸೆರಗಿನಲ್ಲಿ ಇರುವ ಒಂದು ಪುಟ್ಟ ಹಳ್ಳಿ ಅದು.ಅವತ್ತು ಅವರ ಮನೆಯ ಹತ್ತಿರ ಇರುವ ಬಸ್ ಸ್ಟಾಪ್ ನಲ್ಲಿ ಇಳಿದಾಗ ಸೂರ್ಯನಾಗಲೇ ಅಸ್ತಮಿಸಿದ್ದ. ಮಳೆ ಮಾತ್ರ ಒಂದೇ ಸಮನೆ ಸುರಿಯುತ್ತಿತ್ತು. ನನ್ನನ್ನು ಕರೆದೊಯ್ಯಲು ಬಂದಿದ್ದ  ತಮ್ಮ,ತಂಗಿ  ಕಾಯುತ್ತಾ ನಿಂತಿದ್ದರು.ಕತ್ತಲು ಆಗಲೇ ನಿಧಾನವಾಗಿ ಪಸರಿಸತೊಡಗಿತ್ತು.ದಾರಿ ಕಾಣದಿದ್ದರೂ,ಅಭ್ಯಾಸ ಬಲದಿಂದ ಅವರಿಬ್ಬರು ಮುಂದೆ ನಡೆಯುತ್ತಿದ್ದರು.ಅವರ ಹಿಂದೆ ನಾನು ಇಂಬಳಗಳಿಗೆ ಹೆದರಿ ಹೆದರಿ ಹೆಜ್ಜೆ ಇಡುತ್ತಿದ್ದೆ. ಮನೆಗೆ ಬಂದ  ತಕ್ಷಣ ಮೊದಲು ಮಾಡಿದ ಕೆಲಸವೆಂದರೆ  ಕಾಲಿನಲ್ಲಿ ಇಂಬಳಗಳಿಗಾಗಿ ಹುಡುಕಿದ್ದು. ಸಧ್ಯ ಒಂದೂ ಸಿಗಲಿಲ್ಲ.ಅವರ ಮನೆಯಲ್ಲಿ ಚಿಕ್ಕಮ್ಮ,ಚಿಕ್ಕಪ್ಪ,ಅಜ್ಜ,ದೊಡ್ಡಮ್ಮ ಎಲ್ಲರೂ ಆದರದಿಂದ ಬರಮಾಡಿಕೊಂಡರು. ಪ್ರಯಾಣದ ಆಯಾಸ,ಸುಸ್ತು  ಊಟವಾದ ತಕ್ಷಣ ನಿದ್ರೆಗೆ ಶರಣಾಗುವಂತೆ ಮಾಡಿತ್ತು. 

ಅಲ್ಲಿದ್ದ ಅಜ್ಜ ..
ಅಲ್ಲಿ ಸುತ್ತ ಮುತ್ತ ತಿರುಗಾಡಲು ಹೋಗುವುದೆಂದು ಮೊದಲೇ  ತೀರ್ಮಾನವಾಗಿತ್ತಲ್ಲ.! ಮರುದಿನ ಬೆಳಿಗ್ಗೆ  ಶೃಂಗೇರಿ ದೇವಸ್ಥಾನ, ಮದ್ಯಾಹ್ನ ಹರಿಹರಪುರದ ಮಠ, ತೂಗುಸೇತುವೆ ಹಾಗೂ ಅಲ್ಲಿಯ ಗುರುಕುಲವನ್ನು ನೋಡಿಕೊಂಡು ಬಂದಿದ್ದೆವು.ಅದರ ಮಾರನೇ ದಿನ, ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ  ಸಿರಿಮನೆ ಜಲಪಾತಕ್ಕೆ ನಮ್ಮ ಪಯಣ. ಕಿಗ್ಗದ ಋಷ್ಯಶೃಂಗ ದೇವಾಲಯದ ಒಳಹೊಕ್ಕು, ನಮಸ್ಕರಿಸಿ ಸಿರಿಮನೆ ಜಲಪಾತದತ್ತ ನಮ್ಮ ಚಾರಣ ಪ್ರಾರಂಭಿಸಿದೆವು. "ಇಲ್ಲೆಲ್ಲಾ ನಕ್ಸಲೈಟ್ಸ್ ಇರ್ತಾರೆ ಕಣೆ" ಅಂತ ಹೆದರಿಸಿದ್ದ  ನನ್ನ ತಮ್ಮ. ಆದರೆ ಯಾರೂ ಕಣ್ಣಿಗೆ ಬೀಳಲಿಲ್ಲ. ಸುಮಾರು  ೫ ಕಿ.ಮೀ ದೂರವನ್ನು ಕಾಲುನಡಿಗೆಯಲ್ಲಿ ಕ್ರಮಿಸಿ ಜಲಪಾತವನ್ನು ತಲುಪಿದ್ದು ಅವಿಸ್ಮರಣೀಯ ಅನುಭವ. ಜಲಪಾತ ಸಮೀಪಿಸಿದಾಗ ಅದರ ಭೋರ್ಗರೆತ ಕೇಳಿ ಭಯವಾದದ್ದು ನಿಜವಾದರೂ, ಹತ್ತಿರದಿಂದ ನೋಡಿದಾಗ ಮಾತ್ರ ಮನಸ್ಸು ಮೂಕವಾಗಿತ್ತು.                      
     
ಮೈದುಂಬಿರುವ ಜಲಧಾರೆ
ಮೂರನೇ ದಿನ ಚಿಕ್ಕಮ್ಮನ ಹಿಂದೆ ಅಡಿಗೆ ಮನೆ ಸೇರಿಕೊಂಡು ಬಿಟ್ಟಿದ್ದೆ. ಆಗ ಚಿಕ್ಕಮ್ಮ ಅರಮನೆತೋಟಕ್ಕೆ ಹೋಗಿ ಬನ್ನಿ. ಹಾಗೇ ಕಮ್ಮರಡಿಯ ಬೆಣ್ಣೆ ಗುಡ್ಡ ನೋಡಿಕೊಂಡು,ದೇವಸ್ಥಾನಕ್ಕೆ ಹೋಗಿ ಬನ್ನಿ ಅಂದರು.ನನಗೆ ಅರಮನೆ ತೋಟದಲ್ಲಿ ಏನಿದೆ ಅಂತ ಗೊತ್ತಿರಲಿಲ್ಲ.ಅದು ಆ ಮನೆಯಲ್ಲಿದ್ದ ದೊಡ್ಡಮ್ಮನ ತಂಗಿಯ ಮನೆ. ಇಷ್ಟೇ ಆಗಿದ್ದಿದ್ದರೆ ಬರೆಯಲು ಏನೂ ಇರುತ್ತಿರಲಿಲ್ಲ.ಆದರೆ ಅವರ ಮನೆ ಇನ್ನೂರು ವರುಷಗಳಿಗಿಂತ ಹಳೆಯದು.ಅದನ್ನು ಯಾವ ಕಾಲದಲ್ಲಿ ಕಟ್ಟಿದರು ಎಂಬ ಮಾಹಿತಿ ಮನೆಯವರಿಗೂ ತಿಳಿದಿರಲಿಲ್ಲ. ಅವರ ಅಜ್ಜನ ಅಜ್ಜ ಕಟ್ಟಿಸಿದ ಮನೆ ಇರಬಹುದು ಎಂಬುದು ಅವರ ಹೇಳಿಕೆ. ಅದನ್ನೊಂದು ನೋಡೇ ಬಿಡುವ ಎಂದು ಅರಮನೆ ತೋಟಕ್ಕೆ ಹೊರಟೆವು. 

ಮನೆಯ ಮುಂಬಾಗ
ತೀರ್ಥಹಳ್ಳಿಯ ಸುತ್ತಮುತ್ತ ಇಂತಹ ಮನೆಗಳು ಕೆಲವಾರು ಇವೆ. ಆದರೆ ಅವುಗಳಲ್ಲಿ ಹೆಚ್ಚಿನ ಮನೆಗಳಿಗೆ ಹೆಂಚು ಹೊದೆಸಲಾಗಿದೆ. ಈ ಮನೆ ಮಾತ್ರ ಇನ್ನೂ ಸೋಗೆ ಗರಿಗಳಿಂದ ಮುಚ್ಚಲ್ಪಟ್ಟಿತ್ತು.ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಮನೆಯ ಎಲ್ಲ ಸದಸ್ಯರೂ ಬಂದು ಮಾಡು ಬಿಚ್ಚಿ ಸೋಗೆ ಹೊದೆಸುತ್ತಾರಂತೆ. ಹೀಗೆ ದೀಪಾವಳಿ, ಗೌರಿ ಹಬ್ಬಗಳು ಬಂದಾಗ ಮಾತ್ರ ಮನೆ ತುಂಬಾ ಜನಗಳು. ಉಳಿದ ಸಮಯದಲ್ಲಿ ಇರುವವರು ಇಬ್ಬರೇ.!!

ಮುಂಚೆಕಡೆಯಲ್ಲಿ ನಾನು
ಅಲ್ಲಿಗೆ ಹೋಗುವಷ್ಟರಲ್ಲಿ ಹೆಚ್ಚು ಕಡಿಮೆ ಊಟದ ಸಮಯವಾಗಿತ್ತು.ಕೆಲವೊಂದು ಛಾಯಚಿತ್ರಗಳನ್ನು ತೆಗೆದುಕೊಂಡೆ.ಊಟ ಆದ ಮೇಲೆ, ಮನೆಯವರು ತುಂಬಾ ಆಸ್ಥೆಯಿಂದ ಇಡೀ ಮನೆಯನ್ನು ತೋರಿಸಿದರು. ಮುಂಚೆಕಡೆ, ನಡುಮನೆ, ಕಡಿಮಾಡು, ಉಪ್ಪರಿಗೆ, ಅಡಿಗೆ ಮನೆ, ದೇವರಕೋಣೆ ಹೀಗೆ ಇಡೀ ಮನೆ ಸುತ್ತಿದ್ದಾಯ್ತು. ಹೆಚ್ಚಿನ ಕೋಣೆಗಳಲ್ಲಿ ಗವ್ ಎನ್ನುವ ಕತ್ತಲೆ ಹಾಗೂ ನಿಶ್ಯಬ್ದ. ದಪ್ಪ ದಪ್ಪದ ಮಣ್ಣಿನ ಗೋಡೆಗಳು.ಬೃಹತ್ ಗಾತ್ರದ ಕಂಬಗಳು.ಸಣ್ಣ ಸಣ್ಣ ಕಿಟಕಿಗಳು,ಹೊಗೆ ಅಟ್ಟ (ಹೊಗೆ ಅಟ್ಟ ಎಂದರೆ  ಹಿಂದೆಲ್ಲ ಕಟ್ಟಿಗೆ ಒಲೆಗಳು ಇದ್ದ ಕಾರಣ ಹೊಗೆ ಮನೆಯಿಂದ ಹೊರಗೆ ಹೋಗಲು ಬಿಟ್ಟಿರುತ್ತಿದ್ದ ಸ್ವಲ್ಪ ಜಾಗ ), ಪಣತ (ಭತ್ತ ಶೇಖರಿಸುವ ಗೂಡು), ಹಳೆಯ ಗಡಿಯಾರ, ಶಂಖ, ಸಂದೂಕ  ಹೀಗೆ ಎಷ್ಟೋ ನಮಗೆ ತಿಳಿಯದ ವಸ್ತುಗಳು.!! ಅವನ್ನೆಲ್ಲ ನೋಡಿ ಖುಷಿ ಆಗಿತ್ತು. ಬಂದಿದ್ದು ವ್ಯರ್ಥವಾಗಲಿಲ್ಲವಲ್ಲ ಎಂದು ಸಮಾಧಾನವೂ ಆಯಿತು.                                       
                     
ಚಿಕ್ಕ ಕಿಟಕಿ
                   
ಹಳೆಯ ಗಡಿಯಾರ
ಇಡೀ ಮನೆ ನೋಡುವಷ್ಟರಲ್ಲಿ ಸುಮಾರು ಒಂದು ಗಂಟೆಗಿಂತ ಹೆಚ್ಚೇ ಆಗಿತ್ತು. ಆಮೇಲೆ ಆ ಮನೆಯ ಆಂಟಿ, ಅವರೇ ಮಾಡಿದ ಗೆಜ್ಜೆ ವಸ್ತ್ರಗಳನ್ನು ತೋರಿಸಿದರು.ಇನ್ನು ಹೊರಡೋಣವೆಂದು ನಾವು ಮಾತನಾಡಿಕೊಂಡೆವು. ಆಗ ಆ ಮನೆಯವರು ಹೇಳಿದರು "ನೀವು ಇನ್ನೊಂದ್ಸಲ ಬರೋವಷ್ಟ್ರಲ್ಲಿ ಈ ಮನೆ ಇರತ್ತೋ ಇಲ್ವೋ ಗೊತ್ತಿಲ್ಲ.! ಕಮ್ಮರಡಿ ಹತ್ರ ಒಂದು ಮನೆ ಕಟ್ಟಿಸ್ತಾ  ಇದೀವಿ. ಈ ಮನೆಯನ್ನ ಕೆಡವಿ ಉಪಯೋಗಕ್ಕೆ ಬರುವ ವಸ್ತುಗಳನ್ನೆಲ್ಲ ತೆಗೆದುಕೊಳ್ತೀವಿ" ಅಂತ. ನನಗೆ ಬೇಜಾರಾಯಿತು. ಅಯ್ಯೋ ಪುರಾತನ ಕಾಲದಿಂದ ಬಂದಿದ್ದು. ನಮ್ಮಂತಹವರು ನೋಡಬೇಕಾದ ಮನೆ. ಯಾಕೆ ಇದನ್ನು ಉಳಿಸಿಕೊಳ್ಳಲಾರರು ಎಂದುಕೊಂಡೆ. ಆಮೇಲೆ ಮತ್ತೆ ಯೋಚಿಸಿದಾಗ, ಅವರಿಗೇನು ಹುಟ್ಟಿ ಬೆಳೆದ ಮನೆಯ ಮೇಲೆ ಅಭಿಮಾನ ಇರುವುದಿಲ್ಲವೇ.! ಒಂದು ಕಾಲದಲ್ಲಿ ಜನ ನಿಬಿಡವಾಗಿದ್ದ ಮನೆಯಲ್ಲಿ ಇವತ್ತು ಇರುವುದು ಇಬ್ಬರೇ.ಮಕ್ಕಳೂ ಬೆಂಗಳೂರು ಸೇರಿ ಸುಮಾರು ವರ್ಷಗಳೇ ಕಳೆದಿವೆ.ಇನ್ನು ಅಲ್ಲಿ ಬಂದು ಇರುವವರು ಯಾರು.? ಯಾವುದೂ ಶಾಶ್ವತವಲ್ಲ. ಎಲ್ಲವೂ ಒಂದು ದಿನ ಈ ಭೂಮಿಯ ಬಿಟ್ಟು ತೆರಳಬೇಕಲ್ಲವೇ.? ಅವರ ನಿರ್ಧಾರ ಸರಿಯಾದದ್ದೇ ಎಂದೆನ್ನಿಸಿತು.

ಮಳೆಯಲ್ಲಿ ತೋಯುತ್ತಿರುವ ಮನೆಯ ಹೊರನೋಟ
ಅವತ್ತು ಅಲ್ಲಿಂದ ಹೊರಟು ಕಮ್ಮರಡಿಯ ಬೆಣ್ಣೆ ಗುಡ್ಡ ಹತ್ತಿದೆವು. ಎಷ್ಟು ಜಾಗರೂಕಳಾಗಿದ್ದರೂ ಒಂದು ಇಂಬಳ ಕಚ್ಚಿಯೇ ಬಿಟ್ಟಿತ್ತು. ಅದನ್ನು ಕಿತ್ತೆಸೆದು, ಬೆಣ್ಣೆ ಗುಡ್ಡದಲ್ಲಿ ಒಂದಷ್ಟು ಹೊತ್ತು ಮಳೆಯಲ್ಲಿ ನೆನೆದು, ಇನ್ನೊಂದಷ್ಟು ಛಾಯಾಚಿತ್ರಗಳನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೊರಟೆವು. 
                         
ಬಿಸಿ ಬಿಸಿ ತಿಂಡಿ ಮಾಡುತ್ತಿದ್ದ ಚಿಕ್ಕಮ್ಮ.. 
ದೇವಸ್ಥಾನ ನೋಡಿ ಬಸ್ ಹತ್ತಿ ಮನೆ ಕಡೆ ನಡೆದವರಿಗೆ ಚಿಕ್ಕಮ್ಮ ಮಾಡಿದ ಬಿಸಿ ಬಿಸಿ ನಿಪ್ಪಟ್ಟು ಕಾಯುತ್ತಿತ್ತು. ಬಿಸಿ ಕಾಫಿಯ ಜೊತೆ ನಿಪ್ಪಟ್ಟು ತಿನ್ನುತ್ತಾ ಹರಟುತ್ತಾ ಕುಳಿತೆವು  ಆ ಆಹ್ಲಾದಕರ ವಾತಾವರಣದಲ್ಲಿ... 

7 comments:

  1. dide..manadaalaadinda banda odide .....maathugalu sariyada shabdada roopa padedive.... Photo jathe militha vaada anisikegalu , soge gariya mane ,munche kade ...nannannu namma ura hatirakke karedoyyutthave.....Aramaneyantha manegalu indu malenaadininda kaaneyaagutthiruvudu novina
    vishaya...Nimma photogalu ,baravanige nodidiaaga nanage gotthillade Malenaadige jaarirutthene....it is a special feeling...
    congratulations.....Muche kade alla..munche kade antha....naanu omme aa mane iddare nodabeku...Bennegudda kke hogabeku..Photo galu chennagi artha garbhitha vaagi bandive.....

    ReplyDelete
    Replies
    1. nanu munche kade antane andkondidde..nanna doddamma hage helidru ond sala..adre google nalli nodidaga muchekade anno prayoga kaanisitu..

      dhanyavaadagalu..ivagale sari padisikolluttene..:)

      Delete
    2. sari madi barediddene..:)

      Delete
  2. Bisi bisi thindi photo naanu thinnutthiruva haage annisithu..Sirimane jalapaatha da photo jalala jalala jaladhaare yanthide. Ajja ra nota aa maneya mundina sthithia bagge yochisutthiruvanthide.Paper odutthiruvavaru ee peeligeya yuva yochaneya pratheeka ...

    Baravanige chennagide..Namagu kalisuttha munduvaresi...Ella ondu sankalana maadi ondu samputa hora thanni...

    ReplyDelete
    Replies
    1. tumba khushiyaguttade,neevishtu savivaravaagi barediruvudakke..:) protsaaha heegeye irali.:)

      Delete
  3. :) really, it was very nice reading...Keep up.

    ReplyDelete