ನಾವು ಕುಳಿತಿರುವ ರೈಲು,ನಾರ್ವೆಯ ಕಡಲ ತೀರದಲ್ಲಿರುವ ಬಂದರು ಪಟ್ಟಣವಾದ ಬರ್ಗೆನ್ ನ ನಸುಗತ್ತಲ ಬೀದಿಗಳನ್ನು ದಾಟಿ,ರಾಜಧಾನಿ ಓಸ್ಲೋ ಕಡೆಗೆ ಚಲಿಸುತ್ತಿದೆ.ಗಂಟೆ ಒಂಭತ್ತಾಗುತ್ತಾ ಬಂತು.ಈಗಷ್ಟೇ ನಿಧಾನವಾಗಿ ಬೆಳಕಾಗುತ್ತಿದೆ.ನೆಲದ ತುಂಬೆಲ್ಲಾ ಬಿಳಿಯ ಜಮಖಾನ ಹಾಸಿದಂತೆ ಬೆಳ್ಮಂಜು,ಚಳಿರಾಯನ ಹೊಡೆತಕ್ಕೆ ಹೆದರಿ ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ನಿಂತ ಕಪ್ಪು ಕಪ್ಪು ಮರಗಳು ಕಣ್ಣಿಗೆ ಬೀಳುತ್ತಿವೆ.ಹತ್ತಿರತ್ತಿರವಾಗಿ ಹರಡಿಕೊಂಡಿರುವ ಗುಡ್ಡಗಳ ಮದ್ಯದಲ್ಲಿ ನಮ್ಮ ಪುಟ್ಟ ರೈಲು ಹೆಚ್ಚು ಸದ್ದಿಲ್ಲದೇ ಸಾಗುತ್ತಿದೆ.ಎಲ್ಲವೂ ಹಿಮದ ಹೊದಿಕೆಯಡಿ ಹೂತು ಹೋಗಿವೆ. ಹಲವೆಡೆ ಮೇಲಿಂದ ಕೆಳಗೆ ಧುಮುಕಲೆತ್ನಿಸಿದ್ದ ನೀರ ಹನಿಗಳು,ನೆಲ ತಲುಪಲಾಗದೆ ಸೋತು ಅಲ್ಲೇ ಹರಳುಗಟ್ಟಿ ಚೂಪಾದ ಕೋನಾಕೃತಿಗಳನ್ನು ನಿರ್ಮಿಸಿವೆ.ಆದರೂ ಅಪರೂಪಕ್ಕೊಮ್ಮೆ ಸುಂದರ ಜಲಪಾತಗಳ ದರ್ಶನವಾಗುತ್ತಿದೆ.ಈಗ ವಾಸ್ಸ್ ಎಂಬ ನಿಲ್ದಾಣದಲ್ಲಿ ರೈಲು ನಿಂತಿದೆ.ಹೊರಗೆ ಮಂಜಿನ ಮಳೆಯಾಗುತ್ತಿದೆ.ಒಳಗೆ ಹತ್ತಿದವರು ತಮ್ಮ ಬೂಟಿಗೆ, ಕೋಟಿಗೆ, ಹ್ಯಾಟಿಗೆ ಅಂಟಿಕೊಂಡ ಹಿಮದ ಹರಳುಗಳನ್ನು ಕೊಡವಿಕೊಳ್ಳುತ್ತಿದ್ದಾರೆ.
|
ಫಿಯೋರ್ಡ್ |
ನಿನ್ನೆ ಕೂಡ ಇದೇ ರೈಲಿನಲ್ಲಿ ಪ್ರಯಾಣಿಸಿ ವಾಸ್ಸ್ ನಲ್ಲಿಳಿದು ಫಿಯೋರ್ಡ್ ಪ್ರವಾಸ ಹೊರಟಿದ್ದೆವು. ನಮ್ಮ ಜೊತೆಗೇ ಇಲ್ಲಿ ಇಳಿದವರು ಅದೆಷ್ಟೋ ಮಂದಿ.ಆದರೆ ಹೆಚ್ಚಿನವರು ಸ್ಕೀಯಿಂಗ್ ಮಾಡಲು ಬಂದವರಾಗಿದ್ದರು.ನಾವು ಅಲ್ಲಿಂದ ಬಸ್ ಹತ್ತಿಕೊಂಡು ಗುಡ್ ವಾಂಗೇನ್ ಎನ್ನುವ ಸ್ಥಳ ತಲುಪಬೇಕಿತ್ತು.ಮೊದಲೇ ಬುಕ್ ಮಾಡಿಕೊಂಡು ಹೋಗಿದ್ದರಿಂದ ಬಸ್ ಸಿಗುವುದು ಕಷ್ಟವಾಗಲಿಲ್ಲ.ಬಸ್ ಚಾಲಕನಿಗೆ ಟಿಕೆಟ್ ತೋರಿಸಿ ಒಳಹೊಕ್ಕು ಆರಾಮಾಗಿ ಆಸೀನರಾಗಿ,ಮುಂದಿನ ಪ್ರಯಾಣದ ಆರಂಭಕ್ಕಾಗಿ ಕಾಯುತ್ತಾ ಕುಳಿತೆವು.ಸುತ್ತಲೂ ಹತ್ತಿ ಮೆತ್ತಿದಂತಹ ಬಟ್ಟಬಯಲುಗಳ ನಡುವೆ, ಸ್ವಚ್ಛಗೊಳಿಸಿದ್ದ ಡಾಂಬರು ರಸ್ತೆಯಲ್ಲಿ ಬಸ್ಸು ಹೊರಟಿತು.ಇಲ್ಲಿನ ವಾಹನಗಳ ಒಳಗೆ ಹೀಟರ್ ಗಳು ಇರುತ್ತದೆಯಾದ್ದರಿಂದ ಎಲ್ಲೂ ಚಳಿಯ ಅನುಭವವಾಗಲಿಲ್ಲ.ಅಲ್ಲಲ್ಲಿ ಇದ್ದ ಸರೋವರಗಳು ಗಡ್ಡೆಕಟ್ಟಿಕೊಂಡು ಗಟ್ಟಿಯಾಗಿದ್ದವು.ನಮ್ಮ ಪಠ್ಯ ಪುಸ್ತಕದಲ್ಲಿದ್ದ ಒಂದು ಪದ್ಯ ನೆನಪಾಯಿತು.ಧುರ್ಯೋಧನ ಭೀಮಸೇನನಿಂದ ತಪ್ಪಿಸಿಕೊಳ್ಳಲು ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಾಗ ಅದನ್ನು ತಿಳಿದ ಭೀಮಾರ್ಜುನರು ಅವನನ್ನು ಹೀಯಾಳಿಸುತ್ತಾರೆ.ಇದರಿಂದ ಸುಯೋಧನ ಕುಪಿತನಾಗುತ್ತಾನೆ.ಅವನ ಸಿಟ್ಟಿನ ಬಿಸಿಗೆ,ನೀರು ಕುದಿಯಲಾರಂಭಿಸಿ ಅಲ್ಲಿದ್ದ ಜಲಚರಗಳೆಲ್ಲ ಬೆಂದುಹೋಗುತ್ತವಂತೆ.ಈ ಕೊಳಗಳಲ್ಲಿ ನೀರು ಪೂರ್ತಿ ಹೆಪ್ಪುಗಟ್ಟಿದರೆ ಮೀನುಗಳ ಕಥೆ ಏನಾಗಬಹುದೆಂಬ ಯೋಚನೆ ಬಂತು.ಆದರೆ ಇಲ್ಲಿ ನೀರಿನ ಮೇಲ್ಪದರವಷ್ಟೇ ಗಟ್ಟಿಯಾಗಿರುತ್ತದೆ, ಒಳಗೆ ತಕ್ಕ ಮಟ್ಟಿಗೆ ಬೆಚ್ಚಗಿದ್ದು ನೀರು ದ್ರವರೂಪದಲ್ಲೇ ಇರುತ್ತದೆ.
|
ಗುಡ್ ವಾಂಗೇನ್ ನಲ್ಲಿ ಅನೂಪ್ |
ಗುಡ್ ವಾಂಗೇನ್ ಬೆಟ್ಟಗುಡ್ಡಗಳಿಂದ ಆವೃತವಾದ,ಪುಟ್ಟ ಹಳ್ಳಿ.ಕೆಲವು ಚಿಕ್ಕ ಮನೆಗಳು,ಸುವೆನೀರ್ ಅಂಗಡಿ ಕಂಡದ್ದು ಬಿಟ್ಟರೆ ಬೇರೇನಿಲ್ಲ.ನಮ್ಮ ಮುಂದಿನ ಫಿಯೋರ್ಡ್ ಪ್ರವಾಸ ಅಲ್ಲಿಂದಲೇ ಪ್ರಾರಂಭವಾಗುತ್ತಿತ್ತು.ಫಿಯೋರ್ಡ್ ಎಂದರೆ ಕಡಿದಾದ ಪರ್ವತ ಶ್ರೇಣಿಗಳ ನಡುವಿನ ಕಿರಿದಾದ ಜಾಗಗಳಲ್ಲಿ ಸಮುದ್ರದ ನೀರು ಒಳಪ್ರವೇಶಿಸಿ ಖಾರಿಗಳನ್ನು ನಿರ್ಮಿಸಿರುತ್ತದೆ.ನಾರ್ವೆಯಲ್ಲಿ ಇಂತಹ ಖಾರಿಗಳು ಬಹಳಷ್ಟಿವೆ ಮತ್ತು ಪ್ರವಾಸಿಗರು ಅವುಗಳ ಸೌಂದರ್ಯ ಸವಿಯಲೆಂದು ಬೋಟುಗಳ ವ್ಯವಸ್ಥೆ ಮಾಡಲಾಗಿದೆ. ಸುವೆನೀರ್ ಅಂಗಡಿಯಲ್ಲಿ ಸುಮ್ಮನೆ ಒಂದು ಸುತ್ತು ಹಾಕಿ, ಅಲ್ಲಲ್ಲಿ ಛಾಯಾಚಿತ್ರಗಳ ಸೆರೆ ಹಿಡಿಯುತ್ತಾ ಅಡ್ಡಾಡುವಷ್ಟರಲ್ಲಿ ಬೋಟ್ ಬಂದು ನಿಂತಿತು. ನಮ್ಮ ಟಿಕೆಟ್ ನೋಡಿ ಒಳಗೆ ಹೋಗಲು ಅನುಮತಿ ನೀಡಿದ ಬಾಗಿಲಲ್ಲಿ ನಿಂತಿದ್ದಾತ. ಎತ್ತರದ ಜಾಗದಲ್ಲಿ ಹೋಗಿ ನಿಂತುಕೊಂಡೆವು.ನೆರೊಯ್ ಫಿಯೋರ್ಡ್ ನಮ್ಮೆದುರು ಉದ್ದಕ್ಕೆ ಹರಡಿತ್ತು.ನಿಧಾನವಾಗಿ ನೀರಲೆಗಳನ್ನು ಹಿಂದೆ ಜೀಕಿ ನಮ್ಮ ಜಲ ಸಾರಿಗೆ ಮುಂದಡಿಯಿಡುತಿತ್ತು.ಬಕ್ಕನೋಸಿ ಎನ್ನುವ ಪರ್ವತದ ತಪ್ಪಲಿನಲ್ಲಿ ಇದ್ದ ಬಕ್ಕ ಎನ್ನುವ ಪುಟ್ಟ ಹಳ್ಳಿ ಮೊದಲಿಗೆ ಎದುರಾಯಿತು.ಸುಮಾರು ಹತ್ತು ಜನರು ವಾಸವಾಗಿದ್ದಾರಂತೆ ಇಲ್ಲಿ. ಮುಂದೆ ಹೋದಂತೆಲ್ಲ ಹಿಮಾಚ್ಚಾದಿತ ಪರ್ವತ ಶ್ರೇಣಿಗಳು,ಒಂದೆರಡು ಸಣ್ಣ ಹಳ್ಳಿಗಳು ಕಂಡವು.ಕುಳಿರ್ಗಾಳಿ ಜೋರಾಗಿ ಬೀಸುತಿತ್ತು,ಚಳಿ ಹೆಚ್ಚಾಯಿತು.ಬೆರಳುಗಳೆಲ್ಲ ನೋಯಲು ಪ್ರಾರಂಭವಾಯಿತು.ಕೈಚೀಲ ಧರಿಸಿ ಬೆಚ್ಚಗೆ ಒಂದೆಡೆ ಕುಳಿತೆ.ನಂತರದಲ್ಲಿ ನಮ್ಮ ಎಡ ಭಾಗದಲ್ಲಿದ್ದ ಸುಮಾರು ೫೦೦ ಮೀಟರ್ ಎತ್ತರದ ಸಾಗ್ ಫಾಸ್ಸೆನ್ ಜಲಪಾತ ಜಾರಿ ಕೆಳಗಿದ್ದ ಖಾರಿಗೆ ಸೇರುತಿದ್ದ ನೋಟ ಕಣ್ಮನ ಸೆಳೆಯಿತು.ಹಲವು ಕ್ಯಾಮೆರಾ ಗಳು ಕ್ಲಿಕ್ ಕ್ಲಿಕ್ ಎಂದು ಸದ್ದು ಮಾಡಿದವು. ಮುಂದೆ ಪುಟ್ಟ ತಿರುವಿನಲ್ಲಿ ನೆರೊಯ್ ಫಿಯೋರ್ಡ್ ಮತ್ತು ಆರ್ಲ್ಯಾಂಡ್ಸ್ ಫಿಯೋರ್ಡ್ ಸಂಗಮವಾಗುತಿತ್ತು.ಬೋಟು ತನ್ನ ದಿಕ್ಕು ಬದಲಿಸಿ ಆರ್ಲ್ಯಾಂಡ್ಸ್ ಫಿಯೋರ್ಡ್ ನೆಡೆ ಸಾಗಿತು.ಮತ್ತದೇ ಧವಳಗಿರಿಗಳ ಸಾಲು, ಅಗಾಧ ಜಲರಾಶಿ,ಹಿಮಕರಗಿ ಧುಮುಕುತ್ತಿದ್ದ ಅಲ್ಪಕಾಲದ ಜಲಧಾರೆಗಳು ನಮ್ಮನ್ನು ಮೂಕವಿಸ್ಮಿತರಾಗುವಂತೆ ಮಾಡಿದ್ದವು.
ನಿನ್ನೆ ಮಿರ್ಡಾಲ್ ನಿಂದ ಬರ್ಗೆನ್ ನ ದಾರಿ ಹಿಡಿದಾಗಲೇ ಕತ್ತಲಾಗಿತ್ತು.ಏನೂ ನೋಡಲು ಸಾಧ್ಯವಾಗಿರಲಿಲ್ಲ.ಆದರೆ ಇಂದು ಅದೇ ದಾರಿಯಲ್ಲಿ ಮತ್ತೆ ಪಯಣ.ಕಿಟಕಿಯಾಚೆಗಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಬೆಚ್ಚಗೆ ಒಳಗೆ ಕುಳಿತು, ಬರೆಯುತ್ತಿದ್ದೇನೆ.ಹೊರಗೆ ದೊಡ್ಡ ಹತ್ತಿಯ ಉಂಡೆಗಳಂತೆ ಕಾಣುತ್ತಿರುವ ಮಂಜು ಎಷ್ಟು ಢಾಳಾಗಿ ಸುರಿಯುತ್ತಿದೆಯೆಂದರೆ,ರೈಲು ಹಳಿಯ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳ ಕೂಡ ಮುಚ್ಚಿಹೋಗಿದೆ.ಸೇತುವೆಗಳ ಮೇಲೆ ಪದರ ಪದರಗಳಾಗಿ ಶೇಖರವಾದ ಹಿಮ ಮನುಷ್ಯರ ಹೆಜ್ಜೆ ಗುರುತೂ ಕಾಣದಂತೆ ಎಲ್ಲವನ್ನೂ ಅಳಿಸಿ ಹಾಕಿದೆ.ಎದುರು ಕಾಣುತ್ತಿರುವ ಮನೆಗಳ ಬಾಗಿಲುಗಳು ತೆರೆಯಲಾಗದಂತೆ ಹುಗಿದು ಹೋಗಿವೆ.ಹಿಮ ಪಾತ ತಡೆಯಲು ಗುಡ್ಡಗಳ ಇಳಿಜಾರಿನಲ್ಲಿ ಕೆಲವೆಡೆ ತಡೆಗಳನ್ನು ನಿರ್ಮಿಸಲಾಗಿದೆ.ಅವೂ ಭಾರಕ್ಕೆ ಕೆಳಗೆ ಬಾಗಿದಂತೆ ಕಾಣುತ್ತಿದೆ.ಈಗ ಮತ್ತೆ ಮಿರ್ಡಾಲ್ ನಿಲ್ದಾಣದಲ್ಲಿದ್ದೇವೆ.ಇಳಿಯುವವರು,ಇಳಿದಾಯಿತು. ಹತ್ತುವವರು ಹತ್ತುತ್ತಿದ್ದಾರೆ.ಬಾಗಿಲಲ್ಲಿ ನಿಂತು ಹೊರಗೊಮ್ಮೆ ನೋಡುತ್ತಿದ್ದೇನೆ.ಕೆಳಗೆ ಇಳಿದು ಆಡುವ ಮನಸ್ಸಾದರೂ ಅದು ಸಾಧ್ಯವಾಗದು.ಖಂಡಿತ ಮತ್ತೊಮ್ಮೆ ಬರುವೆ ಎಂದು ಆ ಊರಿಗೆ ವಿದಾಯ ಹೇಳಿದೆ.ಈಗ ಉಗಿಬಂಡಿ ಹೊರಟಿದೆ ಓಸ್ಲೋ ನಗರಿಯೆಡೆಗೆ...