Saturday 10 December 2016

ಮಳೆಗಾಲದ ಒಂದು ಸಂಜೆ

ತೆರೆದ ಕಿಟಕಿಯ ಕಂಬಿಗಳ ನಡುವಿನಿಂದ ಹೊರಗೆ ಮಳೆ ಬೀಳುವುದನ್ನೇ ನೋಡುತ್ತಿದ್ದೇನೆ. ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಹಸಿರೇ ಕಾಣುತ್ತಿದೆ. ಗಿಡ ಮರಗಳಿಗೆಲ್ಲಾ ಮಳೆ ನೀರಿನ ಅಭಿಷೇಕವಾಗುತ್ತಿದೆ. ಮನೆಯ ಮಾಡಿನ ಅಂಚಿನಿಂದ ಒಂದೇ ಸಮನೆ ಸುರಿಯುವ ನೀರು, ಮಳೆಯಲ್ಲಿ ತೊಯ್ದ ಕೆಸರು ನೆಲ. ಮಲೆಗಳಲ್ಲಿ ಮದುಮಗಳು ಪುಸ್ತಕ ಯಾಕೋ ತುಂಬಾ ಕಾಡುತ್ತಿದೆ. ಆ ಮಲೆ, ಮಳೆ ,ಮದುಮಗಳು  ಮತ್ತೆ ಮತ್ತೆ ನೆನಪಾಗುತ್ತಿದೆ. ನನ್ನ ಮದುವೆಯಾಗಿ ತಿಂಗಳು ಕಳೆಯಿತಷ್ಟೇ. ಈ ಮಳೆಗಾಲದಲ್ಲಿ ಮಲೆನಾಡಿನಲ್ಲಿ ಮದುಮಗಳಾಗಿ "ಅಬ್ಬಾ ಈ ಮಳೆಗಾಲದಲ್ಲೆಂತಾ ಮದುವೇನೇ" ಎಂದು ಹೇಳಿದವರೂ ಮಳೆಯಲ್ಲಿ ಸೀರೆ ನೆನೆಸಿಕೊಂಡು ಮದುವೆಗೆ ಬಂದು ಶುಭಾಶಯ ಹೇಳಿ ಹೋಗಿದ್ದು ಈಗ ಹಳೆಯದಾಗಿದೆ. 

ಮಳೆ ನಿಂತಿದೆ. ಮಳೆ ನಿಂತು ಹೋದ ಮೇಲೆ ಆ ನೀರವತೆಯ ಮಧ್ಯದಲ್ಲೂ ಎಲ್ಲವೂ ಜೀವ ತಳೆದಂತಿವೆ. ಹನಿಗಳ ಚಿಟಪಟ ಶಬ್ದವಿಲ್ಲ ನಿಜ, ಆದರೆ ನವಿಲೊಂದು ಏರುಸ್ವರದಲ್ಲಿ ಖುಷಿಯಿಂದ  ಕೂಗುತ್ತಿದೆ. ಅಲ್ಲೆಲ್ಲೋ  ಬೇಲಿಯ ಮೇಲೆ ಕುಳಿತ ಕಾಜಾಣ ತನ್ನ ನೀಳ ರೆಕ್ಕೆಗಳನ್ನು ಕೊಡವಿ ಮೈ ಒಣಗಿಸಿಕೊಳ್ಳುತ್ತಿದೆ. ನೀಲಿ ಬಣ್ಣದ ಮಿಂಚುಳ್ಳಿಯೊಂದು ತಪಸ್ಸಿಗೆ ಕುಳಿತಿದೆಯೇನೋ ಎಂಬಷ್ಟು ಸ್ತಬ್ಧವಾಗಿ ಗದ್ದೆಯ ಅಂಚಿನಲ್ಲಿರುವ ಕಲ್ಲುಕಂಬದ ಮೇಲೆ ಕುಳಿತಿದೆ. ಆಕಾಶದ ತುಂಬಾ ಮೋಡ.ಹಲವಾರು ದಿನಗಳಿಂದ  ಸೂರ್ಯನ ಮುಖ ಕಾಣುವುದಕ್ಕಿಲ್ಲ.ಕಪ್ಪು, ಮಳೆಹನಿಗೆ ಹೆದರಿ ಮರೆಯಾಗಿ ಕುಳಿತಿದ್ದ ನೀಲಿ ಬಣ್ಣದ ದೊಡ್ಡ ಗಾತ್ರದ ಚಿಟ್ಟೆಯೊಂದು ಈಗ ಗಿಡದಿಂದ ಗಿಡಕ್ಕೆ ಹಾರುತ್ತಿದೆ. ದಾಸವಾಳ ಗಿಡದ ತುಂಬಾ ಅರಳಿ ನಿಂತ ಕೆಂಪು ಕೆಂಪು ಹೂವುಗಳು.  ಕಿಟಕಿಯ ಸರಳುಗಳ ಮೇಲೆ ಸಣ್ಣ ಇರುವೆಗಳ ಸಾಲು. ಎದುರಿಗೊಂದು ನೆಲ್ಲಿಯ ಮರ. ಅದರ ಸಣ್ಣ ಎಲೆಗಳ ತುದಿಯಲ್ಲೆಲ್ಲಾ ನೀರ ಹನಿ ತೊಟ್ಟಿಕ್ಕುತ್ತಿದೆ. ಇಡಿಯ ಮರದ ತುಂಬ ಹನಿಗಳ ಚಿತ್ತಾರ. ಅದರ ಹತ್ತಿರ ತೆರಳಿ ಆ ಮರವನ್ನೊಮ್ಮೆ ಜೋರಾಗಿ ಅಲುಗಾಡಿಸಬೇಕೆನ್ನಿಸುತ್ತಿದೆ. ಆದರೆ ಕಟ್ಟಿಗೆ ಒಲೆಯ ಮುಂದೆ ಕಾಲು ಚಾಚಿ ಬೆಚ್ಚಗೆ ಚಳಿ ಕಾಯಿಸುತ್ತಾ ಕುಳಿತವಳಿಗೆ ಏಳುವ ಮನಸಿಲ್ಲ. ಕೂತು ಕೂತು ಒಂದು ಸುತ್ತು ದಪ್ಪಗಾಗಿದ್ದೇನೆ. ಚಿಕ್ಕಮ್ಮ ಕರಿದು ಕೊಟ್ಟ ಹಲಸಿನ ಕಾಯಿ ಹಪ್ಪಳ, ಬಿಸಿಬಿಸಿ ಕಾಫಿ ಕೈಯ್ಯಲ್ಲಿದೆ. ನಾನು ಡಯೆಟ್ ಮಾಡುತ್ತಿದ್ದೇನೆಂಬುದನ್ನೂ ಮರೆತು ನಾಲ್ಕನೇ ಹಪ್ಪಳದ ತುಂಡೊಂದನ್ನು ಬಾಯಿಗಿಡುತ್ತಿದ್ದೇನೆ. ದೂರದಲ್ಲೆಲ್ಲೋ ರಸ್ತೆಯಲ್ಲಿ ಸಾಗುತ್ತಿರುವ ಬಸ್ಸಿನ ಶಬ್ದ ಕೇಳಿಸುತ್ತಿದೆ.ಈಗ ಕಿಟಕಿಯ  ಬಳಿ ಹೊಗೆ ಸುರಳಿ ಸುರಳಿಯಾಗಿ ಸಾಗುತ್ತಿದೆ. ಕಣ್ಣ ತುಂಬಾ ಹೊಗೆಯಿಂದಾಗಿ ನೀರು ತುಂಬಿದೆ. ನನ್ನ ಆಲೋಚನಾ ಲಹರಿಯಿಂದ ಹೊರಬಂದು ನೋಡಿದರೆ ಒಲೆಯಲ್ಲಿನ ಬೆಂಕಿ ನಂದಿಹೋಗಿದೆ. ಊದುಗೊಳವೆಯಿಂದ ಗಾಳಿ ಹಾಕಿ, ಬೆಂಕಿ ಮಾಡಿ ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದೇನೆ.     

ಕತ್ತಲೆಯಾಗಿದೆ. ವರ್ಷಾಕಾಲವಿದು. ಮತ್ತೆ ಶುರುವಾಗಿದೆ ವರುಣನ ಅಬ್ಬರ. ಒಳಗಿನ ದೀಪದ ಬೆಳಕಿಗೆ ಹುಳಗಳು ಬರಬಹುದೆಂದು ಹೆದರಿ ಕಿಟಕಿಯ ಬಾಗಿಲು ಮುಚ್ಚಿದ್ದೇನೆ. ಹಕ್ಕಿಗಳೆಲ್ಲಾ ಗೂಡು ಸೇರಿರಬಹುದು ಈಗ. ಕೀಟಗಳ ಕೀ..ಪೀ..ಕೊಟರ್..ಕೊಟರ್ ಶಬ್ದ ಮಾತ್ರ ಬಿಟ್ಟೂ ಬಿಡದೆ ಬೀಳುವ ಮಳೆಹನಿಗಳ ನಡುವಿನಲ್ಲೂ ಸ್ಪಷ್ಟವಾಗಿಯೇ ಕೇಳಿಸುತ್ತಿದೆ.

Friday 16 September 2016

ತುಮಕೂರಿನ ಶಿವಗಂಗೆ..

  ಶಿವಗಂಗೆಯ ನಂದಿ ಎದುರು 
ವಿರಾಮದ ಒಂದು ಶನಿವಾರ ಗೆಳೆಯರೆಲ್ಲ ಸೇರಿ ತುಮಕೂರಿನ ಶಿವಗಂಗೆಗೆ ಹೋಗಿ ಬರುವುದೆಂದು ತೀರ್ಮಾನವಾಯಿತು. ಬೆಳ್ಳಂಬೆಳಗ್ಗೆ ಎಲ್ಲರೂ ಜೊತೆಯಾಗಿ ಬಸ್ಸಿನಲ್ಲಿ ತುಮಕೂರಿನ ಕಡೆಗೆ ಹೊರಟೆವು. ಬೆಂಗಳೂರಿನಿಂದ ತುಮಕೂರಿಗೆ ತಲುಪಿ ಅಲ್ಲಿಂದ ಶಿವಗಂಗೆ ಬೆಟ್ಟದ ಬುಡ ಸೇರುವಷ್ಟರಲ್ಲಿ ಗಂಟೆ ಹತ್ತು ದಾಟಿತ್ತು. ಅಲ್ಲಿ ಇಲ್ಲಿ ಚಂದ ಕಂಡದ್ದನ್ನೆಲ್ಲ ಛಾಯಾಚಿತ್ರವಾಗಿ ಸೆರೆಹಿಡಿಯುತ್ತಾ ನಿಧಾನವಾಗಿ ಮೆಟ್ಟಿಲೇರತೊಡಗಿದ್ದೆವು. ಬಿಸಿಲು ನಿಧಾನವಾಗಿ ತನ್ನ ಚುರುಕು ಮುಟ್ಟಿಸುತ್ತಿತ್ತು.ಸೂರ್ಯ ನಡುನೆತ್ತಿಯೆಡೆಗೆ ಬರಲಾರಂಭಿಸಿದ್ದ.ದಾರಿಯಲ್ಲಿ, "ಮಜ್ಜಿಗೆ ಬೇಕೇ? ಕುಡಿಯುವ ನೀರು ಬೇಕೇ? ತಾಜಾ ತಾಜಾ ಕಬ್ಬಿನ  ಹಾಲು ತಗೊಳ್ಳಿ! ಬಿಸಿಲು ಜೋರಾಗಿದೆ, ಇಲ್ಲಿ ಕೂತು ದಣಿವಾರಿಸಿಕೊಳ್ಳಿ!" ಎಂದೆಲ್ಲ  ಹೇಳಿ ತಮ್ಮ ಅಂಗಡಿಗೆ ಕರೆಯುವ ವ್ಯಾಪಾರಿಗಳ ಸಾಲು ಬಹಳವಿತ್ತು. ಅಲ್ಲಲ್ಲಿ ಮಜ್ಜಿಗೆ ಕುಡಿದು, ಸೌತೆಕಾಯಿಯನ್ನು ಮೆಲ್ಲುತ್ತಾ ಸುಮಾರು ಅರ್ಧ ದೂರ ಕ್ರಮಿಸಿದೆವು. ಮುಂದೆ ಕಡಿದಾದ ಮೆಟ್ಟಿಲುಗಳು.ನಮ್ಮೆಲ್ಲರ ಬೆನ್ನಿನಲ್ಲಿದ್ದ ಚೀಲದಲ್ಲಿ ಅಗತ್ಯಕ್ಕೆ ಬೇಕಾದ ತಿನಿಸುಗಳು, ನೀರಿನ ಬಾಟಲಿಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೆವು.ಅಲ್ಲಿ ಸುತ್ತ ಮುತ್ತೆಲ್ಲ ಕೋತಿಗಳ ಹಿಂಡೇ ಇತ್ತು. ನೋಡನೋಡುತ್ತಿದ್ದಂತೆಯೇ ಒಂದು ಗಡವ ಕೋತಿ ಬೀಡುಬೀಸಾಗಿ ಬಂದು ನನ್ನ ಮುಂದೆ ನಡೆಯುತ್ತಿದ್ದ ನನ್ನ ಗೆಳತಿಯ ಚೀಲಕ್ಕೇ ಕೈ ಹಾಕಿತು. ಅವಳು ಮೊದಲೇ ಹೆದರಿದ್ದವಳು, ಆ ಕೋತಿ ಬಂದ ರಭಸವನ್ನು ಕಂಡು ಇನ್ನೂ ಭಯಗೊಂಡು ಕಿರುಚಾಡತೊಡಗಿದಳು. ಹಿಂದುಮುಂದಿದ್ದವರೆಲ್ಲ ನಮ್ಮನ್ನೇ ಗಮನಿಸಲಾರಂಭಿಸಿದರು. ಅವರೆಲ್ಲರಿಗೂ ಅದು ಮೋಜಿನ ಸಂಗತಿಯಾಗಿತ್ತು. ನಾನು ಏನು ಮಾಡಲು ತೋಚದೆ ಚೀಲ ಹಿಡಿದು ನನ್ನೆಡೆಗೆ ಎಳೆಯತೊಡಗಿದೆ. ಆ ಮಂಗವೂ ಸಹ  ನಾನೇನು ಕಡಿಮೆ ಎಂಬಂತೆ ಇನ್ನೂ ಜೋರಾಗಿ ಚೀಲವನ್ನು ಎಳೆದುಕೊಂಡು,ಅದರ ಒಳಗಿದ್ದ ನೀರಿನ ಬಾಟಲಿ ತೆಗೆದುಕೊಂಡು ಪರಾರಿಯಾಯಿತು.ಆಗ ಹೋದ ಜೀವ ಬಂದಂತಾಗಿ ಬದುಕಿದೆಯಾ ಬಡಜೀವವೇ ಎಂದು ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಂಡೆವು. ಮುಂದೆ ಅಲ್ಲೇ ಇದ್ದ ಅಂಗಡಿಯ ಮಾಲೀಕರ ಸುಪರ್ದಿಯಲ್ಲಿ  ನಮ್ಮ ಸಾಮಾನುಗಳನ್ನೆಲ್ಲ  ಇರಿಸಿ ಧೈರ್ಯದಿಂದ ಚಾರಣ ಮುಂದುವರೆಸಿದೆವು. ಬೆಟ್ಟದ ತುದಿ ತಲುಪಿ ಅಲ್ಲಿಂದ ಕೆಳಗಿಳಿದು ಬರುವಾಗ ನಮ್ಮ ಕಣ್ಣೆದುರೇ ಒಂದು ಕೋತಿ  ಯಾರದೋ ದುಡ್ಡಿನ ಚೀಲವನ್ನೇ ಎತ್ತಿಕೊಂಡಿತ್ತು. ಸಧ್ಯ ನಮ್ಮ ಸ್ಥಿತಿ ಇದಕ್ಕಿಂತ ಎಷ್ಟೋ ಉತ್ತಮವೆಂದುಕೊಂಡು ಕೆಳಗಿಳಿದೆವು. ಎಂದಿಗೂ ಮರೆಯಲಾಗದಂತಹ ಪೇಚಿನ ಅನುಭವವಿದು. ನೆನೆಸಿಕೊಂಡಾಗೆಲ್ಲ ನಗೆ ತರಿಸುವ ಪ್ರಸಂಗವೂ ಹೌದು. 

ಮೇರ್ತಿ ಗುಡ್ಡ..

ಭಾನುವಾರ ಕಳೆದು ಸೋಮವಾರ ಬಂತೆಂದರೆ ಸಾಕು ಆಫೀಸ್ ಕೆಲಸಗಳು ಧುತ್ತೆಂದು ನೆನಪಾಗುತ್ತವೆ.ನಮಗೆ ಬೇಕೋ ಬೇಡವೋ ಅಂತೂ ಹೋಗಲೇಬೇಕು ಕಚೇರಿಗೆ. ಹಾಗೇ ಇನ್ನೆರಡು ದಿನ ಕಳೆಯುವಷ್ಟರಲ್ಲಿ ಅದೆಲ್ಲ ಬೋರ್ ಎನಿಸಿಬಿಡುತ್ತದೆ.ವಾಟ್ಸಪ್ಪ್ ಗುಂಪುಗಳಲ್ಲಿ ವಾರದ ಕೊನೆಯಲ್ಲಿ ಎಲ್ಲಿಗೆ ಹೋಗಬಹುದೆಂಬ ಚರ್ಚೆ ಪ್ರಾರಂಭವಾಗುತ್ತದೆ.ಇದು ಹೆಚ್ಚು ಕಡಿಮೆ ಪ್ರತೀ ವಾರದ ಕಥೆ. ಹೀಗೆ ಬೆಂಗಳೂರು ಬೇಜಾರೆನಿಸಿ ಎಲ್ಲಾದರೂ ಹೋಗೋಣವೆಂದುಕೊಂಡ ಸಮಯದಲ್ಲಿ ನಮ್ಮ ಗೆಳತಿ ಶಿಲ್ಪಳಿಂದ ಅವರ ಅಜ್ಜನ ಊರಾದ ಕವಿಲುಕುಡಿಗೆಗೆ ಹೋಗೋಣ ಎಂದು ಆಹ್ವಾನ ಬಂದಿತು.

ಮೇರ್ತಿ ಗುಡ್ಡ .. 
ಬಾಳೆಹೊನ್ನೂರಿನ ಸಮೀಪದ ಬಸಿರಿಕಟ್ಟೆಯ ಹತ್ತಿರದ ಊರು ಕವಿಲುಕುಡಿಗೆ.ಮೇರ್ತಿ ಗುಡ್ಡದ ಮಡಿಲಿನಲ್ಲಿದೆ.ಬಸಿರಿಕಟ್ಟೆಯಿಂದ ಅಲ್ಲೇ ತೋಟದಲ್ಲೆಲ್ಲೋ ಕೆಳಗೆ ಇಳಿದು,ಮತ್ಯಾವುದೋ ಗದ್ದೆ ಬಯಲ ದಾರಿ ದಾಟಿ ಸಾಗಿದರೆ ಸಾಕು ಶಿಲ್ಪನ ಅಜ್ಜನ ಮನೆ ಬರುತ್ತದೆ. ಅದು ಸಂದೀಪನ ಮನೆ ಕೂಡ ಹೌದು.ಸಂದೀಪ ಎಂದರೆ ನಮ್ಮ ಗೆಳೆಯರಲ್ಲೊಬ್ಬ.ಸಿಂಪಲ್ ಎನ್ನುವ ಹೆಸರಿನಿಂದ ಪ್ರಸಿದ್ದಿ ಇವನು. ಕಾರಣಾಂತರಗಳಿಂದ ಅವನು ನಮ್ಮೊಡನೆ ಬರಲಾಗಲಿಲ್ಲ.ಆದರೂ ನಾವು ೧೦ ಜನರ ಗುಂಪು ಶಿಲ್ಪನ ನೇತೃತ್ವದಲ್ಲಿ ಮೇರ್ತಿ ಗುಡ್ಡ ಹತ್ತುವ ತಯಾರಿಯೊಂದಿಗೆ ಕವಿಲುಕುಡಿಗೆಗೆ ಹೊರಟೆವು. ಅಂತಹ  ಸಂಭ್ರಮ ಏನಿರುತ್ತೆ ಚಾರಣದಲ್ಲಿ ಎಂದು ಹಲವರಿಗೆ ಅನ್ನಿಸಬಹುದು. ಎಲ್ಲ ಬೆಟ್ಟಗಳೂ ಹೆಚ್ಚು ಕಡಿಮೆ ಒಂದೇ ತರಹ ಇರುತ್ತದೆ.ಗುಡ್ಡ ಹತ್ತಿ ಇಳಿದಾಗ ಅದೇನು ಸಿಗುತ್ತದೆ ಎಂದೂ ಕೇಳಿದ್ದಾರೆ ಕೆಲವರು. ನಾವು ಗುಡ್ಡದ ತುದಿಯಲ್ಲಿ ಕಳೆಯುವುದು ಕೆಲವು ನಿಮಿಷಗಳು ಮಾತ್ರ ನಿಜ. ತುದಿ ಮುಟ್ಟಿದ ೧೫-೨೦ ನಿಮಿಷದಲ್ಲಿ ಕೆಳಗಿಳಿಯಲು ಪ್ರಾರಂಭಿಸಿರುತ್ತೇವೆ.ಆದರೆ ನಾವು ಗುರಿ ತಲುಪಲು ಸಾಗಿದ ಮಾರ್ಗ ಮಾತ್ರ ಪ್ರತಿ ಸಾರಿಯೂ ಭಿನ್ನ. ಅದು ಯಾವತ್ತೂ ನೆನಪಾಗಿ ಉಳಿಯುತ್ತದೆ.ಸೇರುವ ಗುರಿಗಿಂತ ಸಾಗುವ ದಾರಿಯಲ್ಲಿ ಸಿಗುವ ಅನುಭವಗಳ ಗುಚ್ಛವೇ ದೊಡ್ದದೆನಿಸುತ್ತದೆ. ಬೆಟ್ಟದ ತುದಿಯಲ್ಲಿ ನಿಂತಾಗ ಪಟ್ಟ ಕಷ್ಟಗಳೆಲ್ಲ ಮರೆಯಾಗಿ ಏನೋ ಸಾಧಿಸಿದ ಸಂತೃಪ್ತಿಯಿಂದ ಮನಸ್ಸು ಮುದಗೊಂಡಿರುತ್ತದೆ. ಇದಕ್ಕೇ ಏನೋ ಬೆಟ್ಟಗಳು ಸೂಜಿಗಲ್ಲಿನಂತೆ ನಮ್ಮನ್ನು ಸೆಳೆಯುವುದು. 

ಬೆಂಗಳೂರಿಂದ ಬಾಳೆಹೊನ್ನೂರು ಮಾರ್ಗವಾಗಿ ಬಸಿರಿಕಟ್ಟೆಗೆ ಹೊರಟಿದ್ದೆವು.ರಾತ್ರಿಯೆಲ್ಲಾ ಅಂತ್ಯಾಕ್ಷರಿ ಆಡುತ್ತಾ ಬೆಳಗಾಗಿದ್ದೆ ಗೊತ್ತಾಗಲಿಲ್ಲ.ಬೆಳಗಿನ ಜಾವದ ಹೊತ್ತಿಗೆ ಬಸಿರಿಕಟ್ಟೆ ತಲುಪಿದೆವು.ಅಲ್ಲಿಂದ ಕವಿಲುಕುಡಿಗೆಗೆ ಹೋಗುವ ದಾರಿಯನ್ನು ಶಿಲ್ಪ ಮರೆತಿದ್ದಳು(ಅವಳು ಪ್ರತೀ ವರ್ಷವೂ ಅಲ್ಲಿಗೆ ತಪ್ಪದೇ ಹೋಗುತ್ತಿದ್ದರೂ ಸಹ ದಾರಿ ತಪ್ಪಿತ್ತು).ಯಾವುದೋ ದಾರಿಯಲ್ಲಿ ನಮ್ಮ ಗಾಡಿಯನ್ನು ಕರೆದೊಯ್ದು,ಅಲ್ಲಿ ಮುಂದೆಲ್ಲೂ ಹೋಗಲಾರದೆ ವಾಹನದ ಚಾಲಕ ಎಲ್ಲರಿಗು ಬೈದುಕೊಳ್ಳುತ್ತಾ ಇಂತಹ ದಾರಿಯಲ್ಲಿ ನಾನು ಬರಲಾರೆ  ಎಂದು ಗೊಣಗುತ್ತಿದ್ದ. ಎಲ್ಲರಿಗೂ ಅವನ ಮಾತು ಕಿರಿಕಿರಿ ಎನಿಸಿತ್ತು. ಹಾಗು ಹೀಗೂ ಸರಿದಾರಿ ಸೇರಿ ಸಂದೀಪನ ಮನೆ ತಲುಪಿದೆವು.ಗುಡ್ಡದ  ತಪ್ಪಲಲ್ಲಿತ್ತು ಅವರ ಮನೆ.ಮನೆಯ ಮುಂದೆ ಅಡಿಕೆ ತೋಟ. ಸುತ್ತಲೂ ಹಸಿರು, ಇನ್ನೂ ಕೆಳಗಿಳಿದು ಸ್ವಲ್ಪ ಮುಂದೆ ಹೋದರೆ ಬತ್ತದ ಗದ್ದೆಗಳು.ತೆನೆಗಳು ಬಲಿತು ತೂಗಾಡುತ್ತಿದ್ದವು.ಅಲ್ಲಿ ಹೋದವರಿಗೆ ಸಂದೀಪನ ಅಪ್ಪ, ಅಮ್ಮನಿಂದ ಆತ್ಮೀಯ ಸ್ವಾಗತ ಸಿಕ್ಕಿತು.ಅಡಿಕೆ ಕುಯಿಲಿನ ಸಮಯ. ಆದರೂ ಆ ಕೆಲಸದ ಮಧ್ಯೆಯೂ  ಅವರು ನಮಗಾಗಿ ಅವಲಕ್ಕಿ ಕಲಿಸಿಕೊಟ್ಟರು.ಬೆಳಗಿನ ತಿಂಡಿಯ ಜೊತೆಗೆ ಚಿಕ್ಕಮಗಳೂರಿನ ಬೆಚ್ಚಗಿನ ಕಾಫಿ.ಮದ್ಯಾಹ್ನಕ್ಕೂ ಬುತ್ತಿ ತಯಾರಿಸಿ ನಮಗಾಗಿ ಕಟ್ಟಿಕೊಟ್ಟಿದ್ದರು. ಅಂತೂ ಹೊಟ್ಟೆಗೆ ಬಿದ್ದ ಮೇಲೆ ನಮ್ಮ  ಸೈನ್ಯ ಬೆಟ್ಟವನೇರಲು ಸನ್ನದ್ಧವಾಯಿತು.

ಮೊದಲೇ ದಾರಿ ತಪ್ಪಿಸಿದ್ದ ಶಿಲ್ಪನನ್ನ ನಂಬಿಕೊಂಡು ಗುಡ್ಡ ಹತ್ತಿ ಇಳಿಯುತ್ತೇವೆಂಬ ನಂಬಿಕೆ ಇದ್ದರೂ ಮೇರ್ತಿ ಗುಡ್ಡಕ್ಕೇ ಕರೆದೊಯ್ಯುತ್ತಾಳೆಂಬ ಭರವಸೆ ಎಳ್ಳಷ್ಟೂ ಇರಲಿಲ್ಲ. ಅದಕ್ಕಾಗಿ ಶಿಲ್ಪಳ ಮಾವ ಮಾರ್ಗದರ್ಶಿಯಾಗಿ ಬರುವರೆಂದಾಗ ನಾವು ಖುಷಿಯಾದೆವು.ಮೇರ್ತಿ ಚಿಕ್ಕ ಗುಡ್ಡ. ಒಟ್ಟು ಸುಮಾರು ೫ ಕಿ. ಮೀ ಅಷ್ಟೇ ಕ್ರಮಿಸಬೇಕಾಗಿದ್ದ ದೂರ.ಗುಡ್ಡ ಹತ್ತಲು ಅನುಮತಿ ಪತ್ರ ಬೇಕು.ಪ್ರಾರಂಭದಲ್ಲಿ ಎತ್ತ ನೋಡಿದರೆ ಅತ್ತ ಟೀ ಎಸ್ಟೇಟ್ ಗಳು.ಸ್ವಲ್ಪ ದೂರ ಸಮತಟ್ಟಾದ ದಾರಿಯಲ್ಲಿ ಟೀ ಗಿಡಗಳ ನಡುವೆ ಸಾಗಿದ ಮೇಲೆ ಅಲ್ಲಿದ್ದ ಕಚೇರಿಯಲ್ಲಿ ಮುಂದೆ ಸಾಗಲು ರಹದಾರಿ ಪಡೆದು ಚಾರಣ ಪ್ರಾರಂಭಿಸಿದೆವು.ಚಳಿಗಾಲ ಜೊತೆಗೇ ಬಿಸಿಲು ಪ್ರಖರವಾಗಿತ್ತು.ಅದು ಇದು ಹರಟೆ ಕೊಚ್ಚುತ್ತಾ ಸಾಗಿದವರಿಗೆ ಎದುರಾಯಿತೊಂದು ಚಿಕ್ಕ ಗುಹೆ.ಆ ಸ್ಥಳದ ಹೆಸರು ತಪಸಾಣ. ಗುಹೆಯ ಒಳಗೆ ಹೋದರೆ ಅಲ್ಲೊಂದು ಗಣಪತಿಯ ವಿಗ್ರಹ.ಯಾವ ಕಾಲದಲ್ಲಿ ಯಾರು ಪ್ರತಿಷ್ಟಾಪಿಸಿದ್ದೋ ಏನೋ.ಆ ಗುಹೆಯ ಒಳಗೆ ಯಾವುದೋ ಸುರಂಗ ಮಾರ್ಗವಿದೆಯಂತೆ. ನೋಡೋಣವೆಂದರೆ ಅಲ್ಲಿಂದ ಮುಂದೆ  ಸಾಗುವ ದಾರಿ ಮುಚ್ಚಿತ್ತು.ತಪಾಸಾಣದ ಬಳಿಯೊಂದು ನೀರಿನ ಚಿಲುಮೆ.ಮುಂದೆ ಎಲ್ಲೂ ನೀರು ಸಿಗುವುದಿಲ್ಲವಾದ್ದರಿಂದ ಅಲ್ಲೇ ನೀರು ತುಂಬಿಕೊಳ್ಳುವುದು ಒಳಿತು.ಅಲ್ಲಿ ಚಿಕ್ಕ ಚಿಕ್ಕ ಜಿಗಳೆಗಳು ಇದ್ದವು.ಸರಿಯಾಗಿ ಗಮನಿಸಿದರೆ ಮಾತ್ರ ಕಾಣುವಂತಹ ಗಾತ್ರದವು.ರಕ್ತ ಕುಡಿದು ಬೃಹದಾಕಾರಕ್ಕೆ ಬೆಳೆಯುವ ತ್ರಾಣ ಉಳ್ಳವು. ಜಾಗ್ರತೆಯಿಂದ ಅವುಗಳ ಆಹಾರವಾಗದೆ ಅಲ್ಲಲ್ಲಿ ನಮ್ಮ ನೆನಪನ್ನು  ಹಸಿರಾಗಿರಿಸುವ ಚಿತ್ರಗಳನ್ನು ತೆಗೆಯುತ್ತಾ, ಸೆಲ್ಫಿ ಅಂತ ಗುಂಪಿನಲ್ಲಿ ನಿಂತು ಚಿತ್ರಪಟಗಳಿಗೆ ಪೋಸು ಕೊಡುತ್ತಾ ಸಾಗಿದೆವು. ಚಿಕ್ಕ ಚಾರಣ ಆಗಿದ್ದರಿಂದ ಬೇಗ ಗುಡ್ಡದ ತುದಿ ತಲುಪಲು ಹೆಚ್ಚು ಹೊತ್ತಾಗಲಿಲ್ಲ.ಆದರೆ ಬಿಸಿಲು ಮಾತ್ರ ತೀಕ್ಷ್ಣವಾಗಿತ್ತು.ಕವಿಲುಕುಡಿಗೆಯ ಊರಿನ ಜಾತ್ರೆಯ ಸಮಯದಲ್ಲಿ  ಶಿಲ್ಪ,ಸಂದೀಪ ಎಲ್ಲರೂ ಮೇರ್ತಿ ಗುಡ್ಡ ಹತ್ತುತ್ತಾರಂತೆ (ಆದರೂ ಶಿಲ್ಪ ದಾರಿ ತಪ್ಪಿದ್ದು ಸೋಜಿಗದ ಸಂಗತಿ ). ಮೇಲೊಂದು ಚಿಕ್ಕ ಗಣಪತಿ ವಿಗ್ರಹ ಇದೆ. ದೇವರಿಗೊಂದು ನಮಸ್ಕಾರ ಮಾಡಿ ಸುಸ್ತಾಗಿ ಕುಳಿತು ಖರ್ಜೂರ ಮತ್ತು ಕಟ್ಟಿ ತಂದಿದ್ದ ಬುತ್ತಿಯನ್ನು ತಿಂದೆವು.ನೀರನ್ನು ದಾರಿಯಲ್ಲೇ ಖಾಲಿ ಮಾಡಿಕೊಂಡಿದ್ದರಿಂದ ಕೆಳಗಿಳಿದು ತಪಸಾಣ ತಲುಪುವಷ್ಟರಲ್ಲಿ ಎಲ್ಲರೂ ಬಾಯಾರಿ ನೀರು ಸಿಕ್ಕಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದರು. ಅಲ್ಲಿ ಹರಿಯುತ್ತಿದ್ದ ನೀರು ನೋಡಿ ಎಲ್ಲರಿಗೂ ಹೋದ ಜೀವ ಬಂದಂತಾಯಿತು.ಮನಸೋ ಇಚ್ಛೆ ನೀರು ಕುಡಿದು ಸುಧಾರಿಸಿಕೊಂಡು ಟೀ ಎಸ್ಟೇಟ್ಗಳಲ್ಲಿ ಸುತ್ತಾಡುತ್ತಾ ನಿಧಾನಕ್ಕೆ ಸಂದೀಪನ ಮನೆಗೆ ನಮ್ಮ ಸವಾರಿ ಸಾಗಿತು.

ತಪಸಾಣ.. 
 ನೆನಪಿನಂಗಳದಿಂದ.. 
ಟೀ ಎಸ್ಟೇಟುಗಳು..

ಅವರ ಮನೆಯಲ್ಲಿ ಆ ರಾತ್ರಿ ಬಾಳೆ ಎಲೆಯಲ್ಲಿ ಭರ್ಜರಿ ಊಟ.ಪಾಯಸದ ಸವಿ ನೆನೆದಾಗ ಇಂದು ಕೂಡ ಬಾಯಲ್ಲಿ ನೀರೂರುತ್ತದೆ. ಚಾರಣ ಮುಗಿಸಿ ವರ್ಷವೇ ಕಳೆದರೂ ಚಿಕ್ಕಮಗಳೂರು, ಮಲೆನಾಡು,ನಮ್ಮ ಗೆಳೆಯರ ಗುಂಪು, ಸಂದೀಪನ ಮನೆ, ಅವರ ತಂದೆ ತಾಯಿಯ ಆತ್ಮೀಯತೆ, ಮೇರ್ತಿ ಗುಡ್ಡದ  ಚಾರಣ, ಎಲ್ಲರ ಜೊತೆಯಲ್ಲಿ ನಲಿದ ಕ್ಷಣಗಳು  ಇದೆಲ್ಲವೂ ನಿನ್ನೆ ಮೊನ್ನೆಯದೇನೋ ಎಂಬಂತೆ ನೆನಪಿನ ಹಾಳೆಯಲ್ಲಿ ದಾಖಲಾಗಿವೆ.

Thursday 9 June 2016

ಹನುಮನಗುಂಡಿ ಮತ್ತು ಬೇಲೂರು

ಕುದುರೆಮುಖ ಚಾರಣ ಮುಗಿಸಿ ಮರುದಿನ ಹೊರಟಿದ್ದು  ಹನುಮನ ಗುಂಡಿ ಜಲಪಾತಕ್ಕೆ. ದಾರಿಯಲ್ಲಿ ಕಡಂಬಿ ಜಲಪಾತ ಕಂಡಿತು. ನಮ್ಮ ವಾಹನದ ಚಾಲಕ ಅಲ್ಲಿ ನಿಲ್ಲಗೊಡಲಿಲ್ಲ. ವಾಹನದೊಳಗಿಂದಲೇ ಕೆಲವು ಛಾಯಾಚಿತ್ರ ತೆಗೆದುಕೊಂಡೆವು. ಹನುಮನಗುಂಡಿ ಜಲಪಾತ ಹತ್ತಿರದಲ್ಲೇ ಇತ್ತು. ಕೆಳಗಿಳಿಯಲು ಮೆಟ್ಟಿಲುಗಳಿವೆ. ಸುಲಭವಾಗಿ ಎಲ್ಲರಿಗೂ ಹೋಗಿ ಬರಲು ಸಾಧ್ಯವಾಗುವಂತೆ ಅನುಕೂಲಗಳಿವೆ. ಹಾಗೆಯೇ ಜನ ಜಾಸ್ತಿಯಾದಂತೆಲ್ಲ ಸುತ್ತಮುತ್ತಲ ವಾತಾವರಣ ಕೆಡುವ ಅಪಾಯವೂ ಇಲ್ಲದಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುತ್ತಿತ್ತು ಸೂತನಬ್ಬಿ. ನೀರಿಗಿಳಿದು ಆಡುವ ಯೋಚನೆಯನ್ನು ಯಾರೂ ಮಾಡಲಿಲ್ಲ. 
ಕಡಂಬಿ ಜಲಪಾತ 

ಹನುಮನ ಗುಂಡಿ (ಸೂತನಬ್ಬಿ ) ಜಲಪಾತ 

ಅಲ್ಲಿಂದ ಬೆಂಗಳೂರಿನ ಕಡೆಗೆ ನಮ್ಮ ಪ್ರಯಾಣ ಸಾಗಿತು. ಕೊಟ್ಟಿಗೆ ಹಾರದಲ್ಲಿ ನಮ್ಮ ಊಟ. ದಾರಿಯಲ್ಲೇ ಇದ್ದ ಬೇಲೂರು ತಲುಪಿದೆವು. ಅಲ್ಲಿನ ಚನ್ನಕೇಶವನ ದೇವಸ್ಥಾನ, ಕರ್ನಾಟಕದ ವಾಸ್ತುಶಿಲ್ಪದ ಸೊಗಡಿಗೆ ಹಿಡಿದ ಕನ್ನಡಿ. ಶಿಲಾಬಾಲಿಕೆಯರ ಅಷ್ಟೂ ಚೆಲುವನ್ನು ಕಲ್ಲಿನಲ್ಲಿ ಕೆತ್ತಿ ಅದ್ಭುತವನ್ನೇ ತೋರಿಸಿದ ಶಿಲ್ಪಿಗೆ ನುಡಿನಮನ. ದರ್ಪಣ ಸುಂದರಿ ಎಲ್ಲಿದೆ ಎಂದು ಹುಡುಕಿದ್ದೆ ನಾನು. ದೇವಾಲಯದ ಮುಂಭಾಗದಲ್ಲೇ ಇತ್ತು ಅದು. ದೇವರ ದರ್ಶನ ಪಡೆದೆವು. ಅಲ್ಲಿಂದ ಹೊರಬಂದಾಗ ಏನೋ ಪ್ರಶಾಂತತೆ ಮನಸ್ಸನ್ನು  ತುಂಬಿತ್ತು.

ಬೇಲೂರಿನ ಗುಡಿಯಲ್ಲಿ ಕೇಶವನೆದುರಲ್ಲಿ..  

ಅಷ್ಟೇ ಅಲ್ಲಿಂದ ಮತ್ತೆ ಬೆಂಗಳೂರಿಗೆ ವಾಪಸು ಬಂದಿದ್ದು. ನಮ್ಮ ಪ್ರವಾಸದ ಕೊನೆಯ ಕೆಲವು ಗಂಟೆಗಳು  ಬಸ್ ಪ್ರಯಾಣದಲ್ಲಿ ಕಳೆಯಿತು. ಬೆಂಗಳೂರು ತಲುಪುವಷ್ಟರಲ್ಲಿ ೧೧ ಗಂಟೆಯ ಸುಮಾರು. ಎಲ್ಲರೂ ವಿದಾಯ ಹೇಳಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದೆವು. 


PC :ತೇಜಸ್ ಜಯಶೀಲ್ 




Tuesday 7 June 2016

ಮಳೆಗಾಲದ ಕುದುರೆಮುಖ..

ಮತ್ತೆ ಮಳೆಗಾಲ ಬಂದಿದೆ. ಮತ್ತೆ ಚಾರಣಗಳು. ಚಾರಣಿಗರೆಲ್ಲ ಈ ಸಲ ಮಳೆಗಾಲದಲ್ಲಿ ಎಲ್ಲಿ ಹೋಗೋದು ಅಂತ ಆಗಲೇ ಲೆಕ್ಕ ಹಾಕಿ ಕೂತಿದ್ದಾರೆ ಅನ್ಸತ್ತೆ.ಇವತ್ತು ಮತ್ತೆ ಆ ಹಸಿರಿನ ಸುಗ್ಗಿಯ ನೆನಪಿಗೆ ತನ್ನದೊಂದು ಪುಟವನ್ನು ಸೇರಿಸಿದ ಕುದುರೆಮುಖ ಪ್ರವಾಸದ ಬಗ್ಗೆ ಬರೆಯುತ್ತಿದ್ದೇನೆ. ಇದು ಸುಮಾರು ವರ್ಷದ ಹಿಂದಿನ ಅನುಭವ. ಜುಲೈ ತಿಂಗಳು ಬಂದರೆ ಪೂರ್ತಿ ಒಂದು ವರ್ಷವಾಗುತ್ತದೆ.ಕುದುರೆಮುಖದ ಜಾಡಿನಲ್ಲಿ ಉಳಿದ ನೆನಪಿನ ಚಿಹ್ನೆಗಳನ್ನು ಮಾಸುವ ಮುನ್ನ ಬರೆದಿಡಬೇಕಿದೆ.   

ಮಳೆಗಾಲದ ದಿನಗಳು ಚಾರಣಕ್ಕೆ ಹೇಳಿ ಮಾಡಿಸಿದಂತವು. ಬೇಸಿಗೆಯಲ್ಲಿ ಬಿಕೋ ಎನ್ನುವ ಭೂಮಿ, ರಣ ಬಿಸಿಲಲ್ಲಿ ಜನರಿಲ್ಲದೆ ಬರಡಾಗಿ, ಗಿಡ ಮರಗಳೆಲ್ಲ ಬೆಂದು, ಬಾಡಿರುತ್ತವೆ. ಅದೇ ಮಳೆಗಾಲ ಬರಲಿ ಯಾರೋ ಮಾಂತ್ರಿಕನ ಮಂತ್ರ ದಂಡಕ್ಕೆ ಸಿಕ್ಕಿದ ವಸ್ತುಗಳಂತೆ ಗಿಡ,ಮರ,ತರು,ಲತೆಗಳೆಲ್ಲ ನಳನಳಿಸುತ್ತಿರುತ್ತವೆ. ಗುರುತಿಸಲಾಗದಷ್ಟು ಬದಲಾವಣೆ. ಇಂತಹ ಸಮಯದಲ್ಲೇ ನಾವು ಹೊರಟಿದ್ದು ಕುದುರೆಮುಖಕ್ಕೆ. ಶ್ರೀಹರ್ಷ ಐತಾಳ್ ನಮ್ಮ ಚಾರಣದ ಆಯೋಜಕರಾಗಿದ್ದರು. ಆದರೆ ಅಲ್ಲಿ ನಮ್ಮನ್ನ ಕರೆದೊಯ್ದದ್ದು, ಎಲ್ಲ ಮೇಲ್ವಿಚಾರಣೆ ನೋಡಿಕೊಂಡಿದ್ದು ತೇಜಸ್. ನಾನು ಚಾರಣಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಹೊಸದಾಗಿ ಕೊಂಡಿದ್ದೆ.ಏನೋ ಒಂತರ ಸಂಭ್ರಮವಿತ್ತು.ಅಂತೂ ಹೊರಡುವ ದಿನ ಬಂತು. ಅವತ್ತು ಶುಕ್ರವಾರದ ರಾತ್ರಿ ನಾನು ಹೋಗಿ ಶಾಂತಲ ಸಿಲ್ಕ್ ಬೋರ್ಡ್ ಹತ್ತಿರ ಇಳಿಯುವ ವೇಳೆಗೆ ಸುಮಾರು ಜನ ಆಗಲೇ ಬಂದು ಕಾಯುತ್ತ ನಿಂತಿದ್ದರು. ಕೆಲವರು ನನಗೆ ಮೊದಲೇ ಪರಿಚಯವಿದ್ದವರು.ಇನ್ನು ಕೆಲವರು ಹೊಸತಾಗಿ ಪರಿಚಯವಾದರು.ಸ್ವಲ್ಪ ಹೊತ್ತಿಗೆ ನಮ್ಮನ್ನು ಕರೆದೊಯ್ಯಬೇಕಾಗಿದ್ದ ವಾಹನ ಬಂದಿತು. ನಾವಿದ್ದದ್ದು ಇಪ್ಪತ್ತು ಜನ. ಹತ್ತಿ ಕುಳಿತು ಹೆಚ್ಚು ಹರಟೆ ಹೊಡೆಯದೆ ನಿದ್ರೆ ಹೋದೆವು.೨:೩೦ ಗಂಟೆಯ ಸುಮಾರಿಗೆ ಕೊಟ್ಟಿಗೆ ಹಾರದ ದೋಸೆಯ ವಾಸನೆ ಎಲ್ಲರನ್ನೂ ಎಬ್ಬಿಸಿತ್ತು. ಬಿಸಿ ಬಿಸಿ ಕಾಫಿ ಜೊತೆಯಲ್ಲಿ ದೋಸೆ ತಿಂದದ್ದು ಅದ್ಭುತವಾಗಿತ್ತು.ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು. 

ಬೆಳಿಗ್ಗೆ ಎದ್ದು ಕಣ್ಣುಜ್ಜಿಕೊಂಡೆ. ಮಬ್ಬು ಕತ್ತಲೆಯ ಮಧ್ಯದಲ್ಲಿ ಆಗ ತಾನೇ ಹೊರಟಿದ್ದ ಬೆಳಕು ತಣ್ಣಗೆ ತನ್ನ ಕಿರಣಗಳನ್ನು ಪಸರಿಸತೊಡಗಿತ್ತು. ಅಲ್ಲಲ್ಲಿ ಟೀ ಎಸ್ಟೇಟ್ ಗಳು. ಚಿಕ್ಕಮಗಳೂರಿನ ಮಡಿಲಲ್ಲಿ ಇದ್ದೆವು ನಾವು. ಅಲ್ಲಿಂದ ಸಂಸೆಯವರೆಗಿನ ಪಯಣ.ಸಂಸೆಯಲ್ಲಿ ಇಳಿದಾಗ ಚನ್ನಾಗಿ ಬೆಳಕಾಗಿತ್ತು. ಹಕ್ಕಿಗಳ ಉಲಿಯ ,ಮಳೆರಾಯನ ಜಿನುಗುವ ಹನಿಯ ಸ್ವಾಗತ ನಮಗೆ. ಅಲ್ಲಿಂದ ಜೀಪೊಂದು ಮಣ್ಣು ದಾರಿಯ(ಕೆಸರು ದಾರಿ ಹೆಚ್ಚು ಸೂಕ್ತ) ಮೂಲಕ ನಮ್ಮನ್ನು ನಮ್ಮ ಚಾರಣದ ಮಾರ್ಗದರ್ಶಿಗಳ ಮನೆಗೆ ತಲುಪಿಸಿತು. ದಾರಿಯಂತೂ ದೇವರಿಗೆ ಪ್ರೀತಿ. ಅಷ್ಟು ಕಷ್ಟದ ಕುಲುಕಾಟದ ದಾರಿ. ಆ ಚಾಲಕನ ಹತ್ತಿರ ಬೇರೆ ಹಾಡು ಇರಲಿಲ್ಲ ಅನ್ಸತ್ತೆ, ಬರೀ  "ವೋನೆ ವೋನೆ" ಅಂತ ಹಾಡು ಹಾಕಿ ತಲೆನೋವು ಬರಿಸಿದ್ದ.ನಮ್ಮ ಚೀಲಗಳನ್ನು ಗೈಡ್ ಮನೆಯಲ್ಲಿ ಇಟ್ಟು ಬೆಳಗ್ಗಿನ ತಿಂಡಿ ತಿಂದೆವು.ಮದ್ಯಾಹ್ನದ ಊಟಕ್ಕೆಂದು ಮಾಡಿದ ಪುಳಿಯೋಗರೆ ಕಟ್ಟಿಸಿಕೊಂಡೆವು.
ದಾರಿಯಲ್ಲಿ ಕಾಣಿಸಿದ ಟೀ ಎಸ್ಟೇಟ್ 
 ನನ್ನ ಕನಸಿನ ಬಗ್ಗೆ ಹೇಳಲೇ ಬೇಕು ಇಲ್ಲಿ. ನಂಗೆ ಒಂದು ಕನಸು ಬಿದ್ದಿತ್ತು. ಯಾವುದೋ ಜಾಗಕ್ಕೆ ಚಾರಣಕ್ಕೆ ಹೋಗಿದ್ದೆವು ನಾವು. ಅಲ್ಲಿ ತುಂಬಾ ಇಂಬಳಗಳು. ಅದು ಕರ್ನಾಟಕದ ಅತಿ ಹೆಚ್ಚು ಇಂಬಳಗಳಿರುವ ಪ್ರದೇಶ ಎಂದು ಪ್ರಸಿದ್ದಿ ಪಡೆದಿತ್ತು. ಅಲ್ಲಿದ್ದ ಉದ್ದ ಉದ್ದದ ಇಂಬಳಗಳನ್ನು ನೋಡಿ ಭಯವಾಗಿತ್ತು ಎಂಬುದು ಕನಸಿನ ಸಾರಾಂಶ. Whatsapp ಗುಂಪಿನಲ್ಲಿ ನನ್ನ ಕನಸಿನ ಬಗ್ಗೆ ಹೇಳಿದೆ. ಅದಕ್ಕೆ ಶಿಲ್ಪನ ಉತ್ತರ  "ನನಗೆ ಮಾತ್ರ ಇಂತಹ ಕನಸು ಬೀಳುವುದು ಎಂದುಕೊಂಡಿದ್ದೆ. ನಿಂಗೂ ಈ ತರ ಕನಸು ಬೀಳತ್ತೆ ಅಂತ ಗೊತ್ತಾಯ್ತು " ಎಂದಳವಳು. ಹರ್ಷನ ಉತ್ತರ " ಕುದುರೆಮುಖ ಇರ್ಬೇಕು ಅದು. ನಾನು ಕುದುರೆಮುಖ ಹೋದಾಗ ಜಾರಿ ಬಿದ್ದು  ಇಡೀ  ಮೈಗೆಲ್ಲ ಇಂಬಳ ಹತ್ತಿತ್ತು " ಅಂದ. ಪವಿತ್ರ ಅಂತ ಇನ್ನೊಬ್ಬಳು ಗೆಳತಿ "ನನ್ನ ಕಾಲಿನಲ್ಲಿ ಕಾಲ್ಗೆಜ್ಜೆ ತರ ಒಂದು ಸುತ್ತು, ಕುತ್ತಿಗೆಯ ಬಳಿ ಸಹ ಸರದಂತೆ ಇಂಬಳಗಳಿದ್ದವು.ರಕ್ತ ತುಂಬಾ ಹೋಗಿ ನಾನು ಆಸ್ಪತ್ರೆಗೆ ಸೇರಬೇಕಾಯ್ತು. ಆಮೇಲೆ ೨ ಕೆ. ಜಿ ತೂಕ ಕಳೆದುಕೊಂಡೆ" ಎಂದಳು. ಇದಿಷ್ಟು ನನಗೆ ದೊರೆತಿದ್ದ ಮಾಹಿತಿ. ನಾನು ಎಲ್ಲದಕ್ಕೂ ತಯಾರಾಗಿ dettol, deoderant  ತೆಗೆದುಕೊಂಡು ಹೋಗಿದ್ದೆ. ನಶ್ಯದ ಪುಡಿ ಸಿಕ್ಕಿರಲಿಲ್ಲ. ನನ್ನ ಶೂ ಸಾಕ್ಸ್ ಎಲ್ಲವನ್ನು dettol ಅಲ್ಲಿ ಅದ್ಡಿ ತೆಗೆದು ಹಾಕಿಕೊಂಡು ಚಾರಣಕ್ಕೆ ಅಣಿಯಾದೆ. 

ಕುದುರೆಮುಖದ ಶೃಂಗ ತಲುಪುವುದಕ್ಕೆ ಸುಮಾರು ೮ ಕಿ. ಮೀ ನಡೆಯಬೇಕಿತ್ತು. ಮತ್ತೆ ತಿರುಗಿ ಬರಲು ಇನ್ನೆಂಟು ಕಿ.ಮೀ. ಒಟ್ಟು ೧೬ ಕಿ. ಮೀ ಒಂದು ದಿನದಲ್ಲಿ ನಡೆಯಬೇಕಾಗಿದ್ದ ದೂರ. ಮೊದಲೇ ಹೇಳಿಕೇಳಿ ಮಳೆಗಾಲ. ಮದ್ಯದಲ್ಲಿ ಇದ್ದ ೭-೮ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಮೊದಲಿನ ಒಂದೆರಡು ಹಳ್ಳಗಳ ದಾಟುವಷ್ಟರಲ್ಲೇ ನಾನು ಹಚ್ಚಿಕೊಂಡಿದ್ದ dettol ಎಲ್ಲ ಕೊಚ್ಚಿ ಹೋಗಿತ್ತು.ದಟ್ಟವಾಗಿ ಮರ ಬೆಳೆದ ದಂಡಕಾರಣ್ಯ ಅಲ್ಲ ಅದು. ಏರಾದ ದಾರಿಯೂ ಅಷ್ಟಾಗಿ ಇರಲಿಲ್ಲ. ಹಸಿರು ಹುಲ್ಲಿನ ಹೊದಿಕೆ ಹೊದೆದು ಸಾಲಾಗಿ ಸದ್ದಿಲ್ಲದೇ ಮಲಗಿದ್ದ ಚಿಕ್ಕ ಚಿಕ್ಕ ಗುಡ್ಡಗಳು ನಡುವೆ ಮಣ್ಣಿನ ಕಾಲು ದಾರಿ. ಮಳೆಹನಿಯ ನಡುವೆ ಅಲ್ಲಲ್ಲಿ ಮುಸುಕಿದ ಮಂಜಿನ ಜಾತ್ರೆ.ಕಡವೆಗಳ ದರ್ಶನವೂ ಸಿಕ್ಕಿತ್ತು.ಅವೆಲ್ಲದರ ನಡುವೆ ನಡುಗುತ್ತ, ಜೊತೆಗೊಂದಿಷ್ಟು ಫೋಟೋ ತೆಗೆದುಕೊಳ್ಳುತ್ತಾ ಬೆಟ್ಟದ ತುತ್ತ ತುದಿ ತಲುಪಿದಾಗ ಗಂಟೆ ೨ ರ ಆಸುಪಾಸು.ಅಲ್ಲಿಂದ ಕೆಳಗೆ ನೋಡಿದರೆ ಒಂದೇ ಗಾತ್ರದ ಮಡಿಕೆ ಮಡಿಕೆಯಾಗಿ ಮಲಗಿದ ಗುಡ್ಡಗಳು. ಹಸಿರು ಬಿಳಿ ಬಣ್ಣಗಳ ಸಮ್ಮೇಳನ. ಹೀಗಿತ್ತು ಕುದುರೆಮುಖ.

ಚಿಕ್ಕ ಚಿಕ್ಕ ಹಳ್ಳಗಳು 
ಒಂದು ಗುಂಪಿನಲ್ಲಿ ತೆಗಿಸಿಕೊಂಡ ಚಿತ್ರ 

ಹುಲ್ಲಿನ ನಡುವೆ ಹಾದಿ 
ಹೀಗಿತ್ತು ಕುದುರೆಮುಖ 

ಪರ್ವತ ಶೃಂಗದಲ್ಲಿ ಗೆಳೆಯರು 

ಅಡಿಬರಹ ಗೊತ್ತಾಗ್ತಿಲ್ಲ !!
ಮದ್ಯಾಹ್ನದ ಪುಳಿಯೋಗರೆ ಊಟ

ಮಳೆಯಲ್ಲಿ ನಿಂತು ಪುಳಿಯೋಗರೆ ತಿಂದು ಸ್ವಲ್ಪ ಹೊತ್ತಿನ ನಂತರ ಮರಳಿ ಬಂದ ದಾರಿ ಹಿಡಿದೆವು.ಗೈಡ್ ಮನೆ ತಲುಪಿದಾಗ ಸಂಜೆ ೭ ಗಂಟೆಯ ಸುಮಾರು. ಅದೃಷ್ಟಕ್ಕೆ ನನಗೆ ಇಡೀ ದಿನದಲ್ಲಿ ಒಂದೇ ಒಂದು ಇಂಬಳವೂ ಕಚ್ಚಿರಲಿಲ್ಲ. ಮಳೆಯಲ್ಲಿ ನೆನೆದು ಸುಸ್ತಾಗಿ ಬಂದಿದ್ದ ನಮಗೆ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿ ಕೊಳ್ಳುವ ಬೆಚ್ಚನೆಯ ಅನುಭವ ದೊರೆಯಿತು. ಅದರೊಂದಿಗೆ ಬಿಸಿ ಬಿಸಿ ಮೆಣಸಿನ ಕಾಯಿಯ ಬಜ್ಜಿ ಮತ್ತೆ ಕಾಫಿ ಕೂಡ ಬಂದಿತು. ಚಿಕ್ಕಮಗಳೂರಿನ ಕಾಫಿ ರುಚಿಯ ಬಗ್ಗೆ ಹೇಳುವುದು ಬೇಕಿಲ್ಲ ಅಲ್ಲವೇ? ಒಟ್ಟಿನಲ್ಲಿ ಎಲ್ಲವೂ ವಾಹ್ಹ್ ಎನಿಸುವಂತೆ ಇತ್ತು.ಅದನ್ನ ಚಪ್ಪರಿಸುತ್ತ ತಿಂದೆವು.ಆಮೇಲೆ ಬಿಸಿ ಬಿಸಿ ನೀರಿನ ಸ್ನಾನ ಆಯಿತು.ಕೊನೆಯಲ್ಲಿ ನಾನೊಂದು ಚೂರು ಊಟದ ಶಾಸ್ತ್ರ ಮುಗಿಸಿದೆ. ಎಲ್ಲರಿಗೂ ಸುಸ್ತಾಗಿತ್ತು. ಆದಷ್ಟು ಬೇಗ ತಂದಿದ್ದ ಮಲಗುವ ಚೀಲದ ಒಳಗೆ ಸೇರಿಕೊಂಡೆವು ನಾವು. 

PC  :Kumaran Mathivanan

Tuesday 5 April 2016

ಮರೆತ ದಾರಿಯ ಹುಡುಕುತ್ತಾ ...

ಮುಂಜಾನೆಯ ಸೂರ್ಯೋದಯವನ್ನು ನಿಂತು ಆಸ್ವಾದಿಸುವಷ್ಟೂ ಸಮಯದ ಅಭಾವ ನಮಗೆ. ಬೇಗ ಕೆಲಸಕ್ಕೆ ಹೊರಟರೆ ಆಯಿತು. ತಡವಾದಷ್ಟೂ ವಾಹನಗಳ ಸಂದಣಿ ಹೆಚ್ಚಾಗುತ್ತದೆ.ಹದಿನೈದು ನಿಮಿಷದಲ್ಲಿ ತಲುಪಬಹುದಾದ ದಾರಿಯನ್ನು ಕ್ರಮಿಸಲು ಎರಡು ಗಂಟೆಯಾದರೂ ಆದೀತು. ಹೀಗೆಂದುಕೊಂಡೇ ಪ್ರತಿದಿನವೂ ಗಡಿಬಿಡಿಯಲ್ಲಿ ಹೊರಡುವುದು ಅಭ್ಯಾಸವಾಗಿದೆ.ನಾನು ಆದಷ್ಟು ಬೇಗ ಹೊರಟು, ಒಂದು ಕಿಟಕಿ ಪಕ್ಕದ ಜಾಗ ಹಿಡಿದು ಕೂತರೆ ಸಾಕೆಂದುಕೊಂಡೇ ದಿನವೂ ಬಸ್ ಹತ್ತಿರುತ್ತೇನೆ.ಹಾಗೆ ಕೂತ ಮರುಕ್ಷಣವೇ ನೆನಪುಗಳು ಧಾಳಿ ಇಡಲು ಪ್ರಾರಂಭಿಸುತ್ತವೆ. ಕಿಟಕಿಗೆ ಆನಿಸಿ ಕುಳಿತು ರಸ್ತೆಯಲ್ಲಿನ ಕಾರುಗಳು, ಬಸ್ ,ಹೊಗೆ ,ಧೂಳು, ರಸ್ತೆ ದಾಟಲು ಪರದಾಡುವ ಜನರು ಇವೆಲ್ಲವುಗಳನ್ನು ನೋಡುವಾಗ  ನಡುವೆ ನನಗೆ ನೆನಪಾಗುವುದು ನನ್ನೂರು. 

ನನ್ನೂರು ಮಲೆನಾಡು.ತೀರ್ಥಹಳ್ಳಿಯ ಸಮೀಪದ ಒಂದು ಹಳ್ಳಿ. ವಿದ್ಯಾಭ್ಯಾಸಕ್ಕಾಗಿ ತೀರ್ಥಹಳ್ಳಿಗೆ ಹೋಗಬೇಕಿತ್ತು.ಬಸ್ಸಿನ ವ್ಯವಸ್ಥೆ ಸರಿಯಾಗಿ ಇರಲಿಲ್ಲದ ಕಾರಣ ಒಂದು ಆಟೋ ದಲ್ಲಿ ನಮ್ಮನ್ನು ಶಾಲೆಗೆ ಕಳಿಸುವ ಏರ್ಪಾಡು ಮಾಡಿದ್ದರು. ಆದರೂ ನಮಗೆ ನಡೆಯುವುದು ತಪ್ಪಿರಲಿಲ್ಲ. ಮೊದಲು ಸಾಲು ಸಾಲು ಅಡಿಕೆ ತೋಟಗಳು, ಚಿಕ್ಕ ಹಳ್ಳಗಳು ,ಅದನ್ನು ದಾಟಲು ಸಾರ.ಅಲ್ಲಲ್ಲಿ ಕಾಣುವ ಏಡಿಗಳನ್ನು,ಚಿಕ್ಕ ಹಾವುಗಳನ್ನು ನೋಡುತ್ತಾ  , ಹೆದರಿದರೂ ಪಕ್ಕದಲ್ಲಿದ್ದವರಿಗೆ ನಾವು ಕಂಡ ಅದ್ಭುತವನ್ನು ತೋರಿಸುತ್ತಾ ಮೆಲ್ಲಮೆಲ್ಲಗೆ ಅಡ್ಡಡ್ಡವಾಗಿ ಸಾರದ ಮೇಲೆ ಹೆಜ್ಜೆ ಇಡುತ್ತಾ,ಅಪರೂಪಕ್ಕೊಮ್ಮೆ ಕಾಣುವ ನವಿಲು,ಮೊಲಗಳ ನೋಡಿ ಖುಷಿ ಪಡುತ್ತಾ ತೋಟ ದಾಟುತ್ತಿದ್ದೆವು. ಬೇಸಿಗೆಯ ಕಥೆ ಇದಾದರೆ ಮಳೆಗಾಲದಲ್ಲಿ, ಮೇಲಿಂದ ದಬ ದಬ ಬೀಳುವ ಮಳೆಯಿಂದ ತಪ್ಪಿಸಿಕೊಂಡು ಹೋಗುವುದರೊಳಗೆ ಸಾಕೆನಿಸಿರುತ್ತಿತ್ತು. ಒದ್ದೆಯಾದ ಬಟ್ಟೆ, ಹೊರಲಾಗದಷ್ಟು ಭಾರದ ಶಾಲೆಯ ಚೀಲ, ಹಾವಸೆಗಳಿಂದ ಹಸುರಾದ ನೆಲ,ಅಲ್ಲೆಲ್ಲೋ ಜಾರಿ ಬಿದ್ದು ಯಾರಾದರು ನೋಡಿದರೆ ಅತ್ತು ಕಣ್ಣೀರು ತಂದುಕೊಂಡು ಸಮಾಧಾನ ಮಾಡಿಸಿಕೊಂಡು, ಯಾರೂ ಇರದಿದ್ದರೆ ಲಂಗ ಜಾಡಿಸಿಕೊಂಡು ಎನೂ ಆಗಿಲ್ಲವೆಂದು ನಮಗೆ ನಾವೇ ಸಾಂತ್ವನ ಹೇಳಿಕೊಂಡು ಮುನ್ನಡೆದಿದ್ದ ದಿನಗಳವು.ತೋಟ ದಾಟಿದರೆ ಗೇರು ಗುಡ್ಡ. ಗೇರು ಗುಡ್ಡದಲ್ಲಿ ಇನ್ನೊಂದಷ್ಟು ಕಾರುಭಾರು.ಹಾರಿದ ಹಕ್ಕಿಯ ಹಿಂದೆ ಗೂಡು ಹುಡುಕುತ್ತಾ ಹಿಂಬಾಲಿಸುತ್ತಿದ್ದೆವು.ಮರದ ತುಂಬೆಲ್ಲ ನೀಲಿ ಮಣಿಗಳಂತೆ ಜೊಂಪಾಗಿ ಬೆಳೆದ ನೇರಳೆ ಹಣ್ಣಿನ ಭಾರಕ್ಕೆ ತೂಗಿ ತೊನೆಯುತ್ತಿರುವ ರೆಂಬೆಗಳನ್ನು ಎಳೆದು ಹಣ್ಣು ಉದುರಿಸಿ ಬಾಯಿ ನೀಲಿ  ಮಾಡಿಕೊಳ್ಳುತ್ತಿದ್ದೆವು.ಗುಡ್ಡ ಹತ್ತಿಳಿದರೆ ಮತ್ತೆ ಸಿಗುವ ಅಡಿಕೆ ತೋಟ, ದೂರದಲ್ಲೊಂದು ಒಂಟಿ ಮನೆ ಇವೆಲ್ಲವನ್ನು  ದಾಟಿ ಸಾಗುವಷ್ಟರಲ್ಲಿ ತಡವಾಗಿ ಆಟೋದಲ್ಲಿ ನಮಗಾಗಿ ಕಾಯುತ್ತಿದ್ದ ಎಲ್ಲರೂ ನಮ್ಮನ್ನು ಬೈಯ್ಯುವಂತಾಗುತ್ತಿತ್ತು. ಬಸ್ ನಿಲ್ದಾಣಕ್ಕೆ ಹೋಗಲು ಸಹ ಅದೇ ದಾರಿಯಾಗಿತ್ತು. ಎಲ್ಲರೂ ಅದೇ ದಾರಿಯನ್ನು ಬಳಸುತ್ತಿದ್ದರು ಕೂಡ.




ವರ್ಷಗಳು ಕಳೆದಂತೆ ನಗರೀಕರಣದ ಪ್ರಭಾವ ಎಲ್ಲ ಕಡೆಯೂ ಪಸರಿಸತೊಡಗಿತು.ನಾವೆಲ್ಲ ಊರು ಬಿಟ್ಟು ಹೊರಗೆ ಬಂದು ಬೆಂಗಳೂರು ಸೇರಿಕೊಂಡೆವು. ಹಳ್ಳಿಗಳಲ್ಲಿ ಚಿಮಣಿ ದೀಪದ ಬದಲು ವಿದ್ಯುತ್ ದೀಪ ಬಂತು.ಹಿಂದೆ ಬರುತ್ತಿದ್ದ ಪತ್ರಗಳು ಮಾಯವಾದವು. ನಾವು ಕ್ಷೇಮ,ನೀವು ಕ್ಷೇಮವೇ ಎಂಬ ಮೊದಲ ಸಾಲುಗಳಿಗೆ ಬದಲಾಗಿ ದೂರವಾಣಿಯಲ್ಲಿ ಹಲೋ ಹೇಗಿದ್ದೀರ ಎನ್ನುವ ಮೊದಲ ಮಾತೇ ಅಪ್ಯಾಯವೆನಿಸತೊಡಗಿತು.ಎತ್ತಿನ ಗಾಡಿ ,ಸೈಕಲ್ ಗಳೆಲ್ಲ ಮಾಯವಾಗಿ ಮೋಟಾರ್ ಬೈಕ್  ಗಳು ಬಂದವು. ಊರಿಗೆ ಕಾಲು ದಾರಿ ಇರುವಂತೆಯೇ ಅಗಲವಾದ ಮತ್ತೊಂದು ರಸ್ತೆಯೂ ಆಯಿತು.ದೊಡ್ಡ ರಾಜಮಾರ್ಗವಿರುವಾಗ ಈ ಕಾಲುದಾರಿಯಲ್ಲಿ ನಡೆಯುವುದೆಂತು ಎಂದುಕೊಂಡರು ಎಲ್ಲರೂ. ಅಡಿಕೆ ಬೆಲೆ ಜಾಸ್ತಿ ಆದದ್ದೇ ಹೆಳೆ ಎಲ್ಲರ ಮನೆಗೊಂದು ದ್ವಿಚಕ್ರ ವಾಹನ ಬಂದೇ ಬಿಟ್ಟಿತು.ಆಗ ಗುಡು ಗುಡು ಸದ್ದು ಮಾಡುತ್ತಾ ಹೊಗೆಯುಗುಳುತ್ತಾ ಓಡುತ್ತಿದ್ದ ವಾಹನಗಳನ್ನು ನೋಡುವುದೇ ಮೋಜೆನಿಸಿತ್ತು.


ಈಗ ಎಲ್ಲರ ಮನೆಯಲ್ಲೂ ಸ್ವಂತ ವಾಹನವಿರುವವುದರಿಂದ ಯಾರೂ ಬಸ್ ನಿಲ್ದಾಣದವರೆಗೆ ನಡೆಯುವುದಿಲ್ಲ. ಬರುವ ಒಂದೇ ಬಸ್ಸಿಗಾಗಿ ಕಾಯುತ್ತಾ ಅದು ಬಾರದಿದ್ದಾಗ ದಾರಿಯಲ್ಲಿ ಸುಳಿದವರ ಬಳಿ "ಬಸ್ ಹೋಯ್ತಾ ಅವಾಗಿಂದ ಕಾಯ್ತಾ ಇದೀನಿ" ಅಂತ ಕೇಳುವ ಪ್ರಮೇಯವೂ  ಇಲ್ಲ. ಅಷ್ಟೊಂದು ವ್ಯವಧಾನವೂ ಇಲ್ಲ. ನಾವು ಶಾಲೆಗೆ ಹೋಗುತ್ತಿದ್ದ ಆ ದಾರಿಯಲ್ಲಿ ಗಿಡಗಳು,ಮುಳ್ಳುಪೊದೆಗಳು ಬೆಳೆದಿವೆ.ಮನುಷ್ಯರ ಸುಳಿವಿಲ್ಲದೇ ಕಾಲುದಾರಿಯಲ್ಲಿ ಹುಲ್ಲು ಚಿಗುರಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಸಿಗ್ನಲ್ ಇರುವ ದಾರಿಯನ್ನು ಬಿಟ್ಟು ಬೇರೆಡೆಯಿಂದ ಸಾಗುವಾಗ ಮನಸ್ಸು ಹೋಲಿಕೆಯನ್ನು ಹುಡುಕುತ್ತದೆ.ತೋಟಗಳಿಗೆ ನೀರು ಬಿಟ್ಟಾಗ ಚಿಲುಮೆಯಂತೆ ಹಾರುವ ನೀರಿನ ಹನಿಗಳಿಂದ ತಪ್ಪಿಸಿಕೊಳ್ಳಲು ನಾವು ಬೇರೆ ದಾರಿ ಹುಡುಕಿದ್ದು ನೆನಪಾಗುತ್ತಿದೆ.ಅಲ್ಲೀಗ ಗೊಂಚಲು ಗೊಂಚಲಾಗಿ ತುಂಬಿ ನಿಂತ ನೇರಳೆ ಹಣ್ಣು ಕೆಳಗೆ ಬಿದ್ದು ನೆಲವೆಲ್ಲಾ ನೀಲಿಯಾಗಿರಬಹುದೇನೋ.!ಯಾವುದೋ ಚಿಕ್ಕ ಪೊದೆಯಲ್ಲಿ ಸೂರಕ್ಕಿಯ ಗೂಡು ತೂಗುತ್ತಿರಬಹುದೆನೋ.!ಕುಣಿದ ನವಿಲ ಗರಿಯುದುರಿ ಆ ದಾರಿಯಲ್ಲೇ ಹೆಕ್ಕುವರಿಲ್ಲದೆ ಬಿದ್ದಿರಬಹುದೇನೋ.!ಇವತ್ತು ಮತ್ತೆ ಕಿಟಕಿಯ ಬದಿಗೆ ಜಾಗ ಸಿಕ್ಕಿದೆ.ಸಿಗ್ನಲ್ ಕೆಂಪು ದೀಪ ತೋರಿಸುತ್ತಿದೆ. ನೆನಪುಗಳು ನವಿರಾಗಿ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಿವೆ. ಮತ್ತೀಗ ನಾನು ಕಳೆದುಹೋದ ನೆನಪುಗಳೊಳಗಿಳಿದು ಆ ಮರೆತ ದಾರಿಯನ್ನು ಹುಡುಕುತ್ತಿದ್ದೇನೆ... 

Saturday 2 April 2016

ಶಿರಸಿಯನ್ನರಸಿ- ಭಾಗ ೪

ಸುಂದರ ಜಲಪಾತಗಳ ಸಿರಿಯ ಸವಿಯಲು ಶಿರಸಿಯನ್ನರಸಿ ಹೊರಟಿದ್ದೆವು ನಾವು. ಎರಡು ದಿನಗಳ ನಮ್ಮ ಪಯಣ ಮೂರು ದಿನಗಳಿಗೆ ಮುಂದುವರೆದಿತ್ತು. ಅಲ್ಲಿಂದ ಬರಲು ಮನಸ್ಸಿಲ್ಲದೆ ಮೂರು ದಿನಗಳು ಅಲ್ಲೇ ಅಲೆಮಾರಿಗಳಂತೆ ಅಲೆದದ್ದಾಯಿತು.ರಾತ್ರಿಯ ಕಪ್ಪಾದ ಆಕಾಶದಲ್ಲಿ ಹೊಳೆಯುವ ಹಾಲುಹಾದಿಯ (Milky Way) ಹಿಂಬಾಲಿಸಿ ನಕ್ಷತ್ರಗಳ ಹೆಸರು ಹುಡುಕುವ ಹರಸಾಹಸ ಮಾಡಿದ್ದಾಗಿತ್ತು. ಅದೇ ರಾತ್ರಿ ಕುಳಿತುಕೊಂಡು ನಾಳೆ ಎಲ್ಲಿಗೆ ಹೋಗುವುದು ಎಂದು ತಲೆ ಕೆಡಿಸಿ ಕೊಂಡಿದ್ದೆವು. ಎಲ್ಲೋ ಕಳೆದು ಹೋದ ಜಲಪಾತಗಳ ಹುಡುಕುತ್ತಾ ನಾವೂ ಕಳೆದು ಹೋಗುವ ಆಸೆ ಇದ್ದರೂ ಅಷ್ಟೆಲ್ಲಾ ಯೋಚನೆ ಮಾಡಲು ಹೋಗದೆ ಹತ್ತಿರದಲ್ಲಿದ್ದ ಒಂದು  ಜಲಪಾತಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. 

ಕಾಲು ಹಾದಿ 
ಬೆಳ್ಳಂಬೆಳಗ್ಗೆ ನಮ್ಮನ್ನು ಹೊತ್ತೊಯ್ದಿದ್ದ ಗಾಡಿ ಜಲಪಾತದ ಸಮೀಪದವರೆಗೂ ಕರೆದೊಯ್ದಿತ್ತು. ಅಲ್ಲಿಂದ ಹೆಚ್ಚೇನೂ ಅಲ್ಲದ ಹತ್ತು ನಿಮಿಷಗಳ ಕಾಲ್ನಡಿಗೆಯ ಪ್ರಯಾಣ. ಉಬ್ಬು ತಗ್ಗುಗಳ ಕಾಲುದಾರಿ. ಮಳೆಕಾಡಿನ ಹಸಿರಿನ ಸಿಂಚನ. ಅಪರೂಪಕ್ಕೊಮ್ಮೆ ಕೇಳಿ ಬರುತ್ತಿದ್ದ ಹಕ್ಕಿಗಳ ಉಲಿ ಬಿಟ್ಟರೆ ನಿಶ್ಯಬ್ದ ಆವರಿಸಿತ್ತು. ಮುನ್ನಡೆದಂತೆ  ಆ ನೀರವತೆಯ ಭೇದಿಸಿ  ಬರುವ ಜಲಪಾತದ ಧುಮ್ಮಿಕ್ಕುವ ಶಬ್ದ . ಅದರ ಜಾಡಿನಲ್ಲಿ ಮುನ್ನಡೆದೆವು. ಅದನ್ನು ಸಮೀಪಿಸಿದಾಗ ಸ್ವಲ್ಪ ಸ್ವಲ್ಪವಾಗಿ ತೆರೆದುಕೊಳ್ಳತೊಡಗಿತು

 ಜಲಪಾತದ ಇಣುಕುನೋಟ 
ಜಲಪಾತಗಳ ಬಗ್ಗೆ ವರ್ಣನೆ ಮಾಡುವುದು ಕಷ್ಟ.ಪ್ರತಿಯೊಂದು ಜಲಪಾತವೂ ವಿಭಿನ್ನವಾಗಿದ್ದರೂ ವರ್ಣಿಸಲು ಮಾತ್ರ ಪದಗಳೇ ಸಿಗವು. ಪ್ರತಿಬಾರಿಯೂ ಮೇಲಿಂದ ಕೆಳಗಿಳಿಯುವ ಆ ಜಲಧಾರೆಯ ಎದುರು ನಿಂತಾಗ ಮಾತು ಮೂಕವಾಗುತ್ತದೆ. ಅದರ ಧೀಮಂತಿಕೆಗೆ ತಲೆದೂಗುತ್ತದೆ. ಜನವರಿ ಸಮಯದಲ್ಲಿ ನಾವು ಹೋಗಿದ್ದರಿಂದ ನೀರಿಗಿಳಿಯಲು ಸಾಧ್ಯವಾಗಿತ್ತು. ಇದನ್ನು ಕೆಳಗಿಂದ ನೋಡುವುದಲ್ಲದೆ ಮೇಲಿನಿಂದಲೂ ನೋಡಬಹುದಾಗಿತ್ತು.ಪಾಚಿ ಕಟ್ಟಿದ ಕಲ್ಲುಗಳ ಮೇಲೆ ನಿಧಾನವಾಗಿ ಹೆಜ್ಜೆ ಹಾಕುತ್ತ ನೀರಿಗಿಳಿದೆವು. ತಣ್ಣನೆಯ ನೀರಿನಲ್ಲಿ ಕಾಲಹರಣ ಮಾಡಿ ಆದ ಮೇಲೆ ಅಲ್ಲೇ ಇದ್ದ ಕಲ್ಲು ಬಂಡೆಗಳ ಮೇಲೆ ಕುಳಿತೆ ನಾನು.
ಜಲಪಾತದ ಮೇಲ್ಭಾಗ
ಪಾಚಿ ಕಟ್ಟಿದ್ದ ಕಲ್ಲುಗಳು
 ಪೂರ್ಣ ನೋಟ 


ಯಾವುದೋ ಬಂಡೆಯ ಮೇಲೆ ಹತ್ತಿ ಜಲಪಾತದ ಫೋಟೋ ತೆಗೆದಿದ್ದ ಹರ್ಷ.ಅದರಲ್ಲೊಂದು ಕಾಮನಬಿಲ್ಲು.ನನಗಿನ್ನೂ ಆ ಛಾಯಾಚಿತ್ರ ಕೊಟ್ಟಿಲ್ಲ ಅವನು. ಹೆಚ್ಚು ಹೊತ್ತೇನೂ ಅಲ್ಲಿ ಇರದೆ ಅಲ್ಲಿಂದ ಹೊರಟು ಯಾವುದೋ ಹತ್ತಿರದ ಹೋಟೆಲ್ ನಲ್ಲಿ ಊಟ ಮಾಡಿದೆವು. ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗ ವಿನಾಯಕ ನವೋದಯ ಶಾಲೆಯ ಬಳಿ ಹೋಗಿ ಬರೋಣ ಅಂತ ಸಲಹೆ ಕೊಟ್ಟ. ಅಲ್ಲಿ ಅಣೆಕಟ್ಟಿನಿಂದ ನಿಂತ ನೀರಿದೆ. ಸೂರ್ಯ ಮುಳುಗುವುದು ನೋಡಲು ಚನ್ನಾಗಿ ಇರುತ್ತದೆ ಎಂದ. ಸರಿ ಹೇಗಿದ್ದರೂ ಬಸ್ ರಾತ್ರಿಗೆ ಇದ್ದುದರಿಂದ ನವೋದಯ ಶಾಲೆಗೆ ಹೊರಟೆವು .

ಶಾಲೆಯ ಒಳಗೆ ಹೋಗಿ ನೋಡುವ ಇಚ್ಛೆ ಯಾರಿಗೂ ಇರಲಿಲ್ಲ ಆದರೆ ನಮಗೆ ಆ ಹಿನ್ನೀರಿನ ಬಳಿ ಹೋಗಲೂ ಅಲ್ಲಿದ್ದ ಜನ ಬಿಡಲಿಲ್ಲ. ನಾವು ಕೊನೆಗೆ ಹಕ್ಕಿಗಳನ್ನ ನೋಡೋಕೆ ಬಂದವರು,ಹಕ್ಕಿಗಳ ಬಗ್ಗೆ  ಪ್ರಾಜೆಕ್ಟ್ ಮಾಡ್ತಾ ಇದೀವಿ ಅಂತ ಕ್ಯಾಮೆರಾ, tripod ಎಲ್ಲ ತೋರಿಸಿ ಅಲ್ಲಿಗೆ ಹೋಗಲು ಪರವಾನಗಿ ಪಡೆದುಕೊಂಡೆವು.ಹೋದದ್ದೇನೋ ಅಲ್ಲಿ ಗದ್ದೆ ಬಯಲಲ್ಲಿ ಕುಳಿತು ಕಾಲ ಕಳೆಯಲು. ನನಗೆ ಹಕ್ಕಿಗಳ ಬಗ್ಗೆ ಸ್ವಲ್ಪ ಆಸ್ಥೆ ಇತ್ತಾದರೂ ಪಕ್ಷಿವೀಕ್ಷಣೆ ಅಂತ ಯಾವತ್ತೂ ಮಾಡಿರಲಿಲ್ಲ. ದುರ್ಬೀನು ಇರಲಿಲ್ಲ. ಒಂದು ಹಕ್ಕಿಗಳ ಪುಸ್ತಕ ಸಹ ಇರಲಿಲ್ಲ. ಅಲ್ಲಿ ಗದ್ದೆಗೆ ಹೋಗಿ ನೋಡಿದರೆ ನೂರಾರು ಹಕ್ಕಿಗಳು. Plum Headed Parakeet, Black Shouldered Kite, River terns, Malabar pied Horn bills,Spotted Dove,Myna birds ಹೀಗೆ ಎಷ್ಟೊಂದು ಹಕ್ಕಿಗಳು. ಹೆಚ್ಚಿನವು ನಮಗೆ ಯಾವುದೆಂದೇ ತಿಳಿಯಲಿಲ್ಲ. ಅವತ್ತು ಎಲ್ಲರಿಗು ಅನ್ನಿಸಿತ್ತು ಪಕ್ಷಿ ವೀಕ್ಷಣೆ ಮಾಡಬೇಕು ಅಂತ. ಹರ್ಷ ಅಂತು ಬೇಜಾರು ಮಾಡ್ಕೊಂಡಿದ್ದ.ಅವನ ಕ್ಯಾಮೆರಾ ಲೆನ್ಸ್ ಪಕ್ಷಿಗಳ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಿರಲಿಲ್ಲ. "ಥೋ ನಂಗೆ ಬೆಜಾರಾಗ್ತಿದೆ ಕಣ್ರೋ.. ನಾಳೆ ಬೆಂಗಳೂರಿಗೆ ಹೋದ ತಕ್ಷಣ ಹೊಸ ಲೆನ್ಸ್ ತಗೊಳ್ತೀನಿ" ಅಂತ ಹೇಳ್ತಾನೆ ಇದ್ದ.
   ಹರ್ಷ: ಸಕತ್ತಾಗ್ ಬಂದಿದೆ ಕಣ್ರೋ sunset ಫೋಟೋ !!
   ತೇಜಸ್ : ತೋರಿಸು ತೋರಿಸು (ಮನಸಲ್ಲಿ ಇದಕ್ಕಿಂತ ಚನ್ನಾಗಿ ಬರತ್ತೆ ನನ್ ಕ್ಯಾಮೆರಾ ದಲ್ಲಿ !)
   ವಿನಾಯಕ : ನನ್ನ ಫೋನ್ ಅಲ್ಲಿ ತೆಗ್ದಿರೋ ಫೋಟೋ ಯಾರಿಗೇನು ಕಮ್ಮಿ ಇಲ್ಲ !!

 
ಸೂರ್ಯಾಸ್ತ
ಸಾಯಂಕಾಲವಾಯಿತು.ನೀರಲ್ಲಿ ಬಣ್ಣಗಳ ಪ್ರತಿಫಲನ. ಎಲ್ಲ ಹಕ್ಕಿಗಳಿಗೆ ಗೂಡು ಸೇರುವ ತವಕ. ರವಿ ಮುಳುಗಿದ. ಹೊತ್ತು ಮುಳುಗಿ ಕತ್ತಲಾದ  ಮೇಲೆ ನಾವೂ ಊರು ಸೇರಬೇಕ್ಕೆನುವ ಯೋಚನೆ ಬಂದಿದ್ದು. ಅಯ್ಯೋ ಹೋಗಬೇಕಲ್ಲ ಬೆಂಗಳೂರಿಗೆ ಅಂತ ಬೇಜಾರು ಮಾಡ್ಕೊಂಡೇ ಎಲ್ಲರೂ ಅಲ್ಲಿಂದ ಹೊರಟೆವು. ಬರುವಾಗ ಮಾತ್ರ ಹೊಸದೊಂದು ಹವ್ಯಾಸ ನಮ್ಮೊಳಗೆ ಮೊಳಕೆಯೊಡೆದಿತ್ತು. ಬೆಂಗಳೂರಿಗೆ ಬಂದ ತಕ್ಷಣ ಪಕ್ಷಿಗಳ ಬಗ್ಗೆ ಇರುವ ಸಲೀಂ ಅಲಿ ಅವರ "the book of Indian birds" ಎನ್ನುವ ಪುಸ್ತಕ ಕೊಂಡುಕೊಂಡೆ  ನಾನು. ವಿನಾಯಕ ದುರ್ಬೀನು ತೆಗೆದುಕೊಂಡ. ಹರ್ಷ ಮಾತ್ರ ಲೆನ್ಸ್ ಕೊಂಡುಕೊಳ್ಳಲೇ ಇಲ್ಲ. ಕೊನೆಗೆ ಅವನ ಮದುವೆಗೆ ಎಲ್ಲರೂ ಸೇರಿ ಲೆನ್ಸ್ ಅನ್ನೇ ಉಡುಗೊರೆಯಾಗಿ ಕೊಟ್ಟಿದ್ದು ಹಳೆಯ ವಿಷಯ.

Friday 1 April 2016

ಶಿರಸಿಯನ್ನರಸಿ - ಭಾಗ ೩

ಸಾತೊಡ್ಡಿ, ಮಾಗೋಡು ಜಲಪಾತ

ಚಾರ್ಮಾಡಿ ಚಾರಣಕ್ಕೆ ಹೋಗಿದ್ದಾಗ ಹರ್ಷನ ಹತ್ತಿರ ಕೇಳಿದ್ದೆ ಈ ಸಲ ಒಂದೂ ಜಲಪಾತಕ್ಕೆ ಕರೆದುಕೊಂಡು ಹೋಗಿಲ್ಲ ನೀನು ಅಂತ. ಅದನ್ನ ನೆನಪಿಟ್ಟುಕೊಂಡವನಂತೆ ಶಿರಸಿಗೆ ಹೋದಾಗ ಸಾಲು ಸಾಲು ಜಲಪಾತಗಳಿಗೇ ಕರೆದೊಯ್ದಿದ್ದ. ಹಸೆಹಳ್ಳ, ವಿಭೂತಿ ಆದಮೇಲೆ ಮರುದಿನ ಹೋಗಿದ್ದು ಸಾತೊಡ್ಡಿ ಮತ್ತೆ ಮಾಗೋಡಿಗೆ. ಕೊನೆಯಲ್ಲಿ ಜೇನುಕಲ್ಲು ಗುಡ್ಡದ ಸೂರ್ಯಾಸ್ತ.

ಸಾತೊಡ್ಡಿ ಜಲಪಾತ ತುಂಬಾ ಎತ್ತರವಾದದ್ದೇನೂ ಅಲ್ಲ.ಆದರೂ ಅಷ್ಟೊಂದು ಜನ ಬರಲು ಕಾರಣ ಅದರ ಸೌಂದರ್ಯ ಎಂದರೆ ಅತಿಶಯೋಕ್ತಿ ಆಗಲಾರದೇನೋ. ಎಷ್ಟೊಂದು ಚಲನಚಿತ್ರಗಳಲ್ಲಿ ಸಹ ಇದನ್ನು ನೋಡಬಹುದು. ಮಳೆಗಾಲದಲ್ಲಿ ಹತ್ತಿರ ಹೋಗುವುದು ಕಷ್ಟ. ಬೇಸಿಗೆಯಲ್ಲಿ ಮಾತ್ರ ಕಲ್ಲು ಬಂಡೆಗಳ ಸಹಾಯದಿಂದ ಜಲಪಾತವನ್ನು ತೀರ ಸಮೀಪಿಸಬಹುದು.ನಾವು ಹೋದಾಗ ಜನ ತುಂಬಿಕೊಂಡಿದ್ದರು. ಹೆಚ್ಚಾಗಿ ಯಾರೂ ಇಲ್ಲದೆ ಇರುವಂತಹಲ್ಲಿ ಹೋಗುತ್ತಿದ್ದ ನಮಗೆ ಅಷ್ಟೊಂದು  ಜನರನ್ನು ನೋಡಿ ಇಲ್ಲಿಂದ ಬೇಗ ಹೋಗೋಣವೆನಿಸಿತ್ತು.ನಾನು ಒಂದು  ಬಂಡೆಯ ಮೇಲೆ ಕುಳಿತು ಏನೋ ಬರೆಯುತ್ತಿದ್ದಾಗ ನನ್ನ ಲೇಖನಿ ನೀರಿನಲ್ಲಿ ಬಿದ್ದು ಬಿಟ್ಟಿತು.ಆಗ ಅಲ್ಲಿಗೆ ಬಂದ ಹರ್ಷ  ನಾನು ಬರೆದದ್ದನ್ನು ದೊಡ್ಡ  ದನಿಯಲ್ಲಿ ಓದಲು ಪ್ರಾರಂಭಿಸಿದ. ಸುಮಾರು ಹೊತ್ತಿನ ಅದೇ ಅವರೆಲ್ಲರಿಗೆ  ನಗೆಯ ವಸ್ತುವಾಗಿತ್ತು.  ಬಂದ ನೆನಪಿಗೆಂದು ಒಂದಷ್ಟು ಫೋಟೋ  ತೆಗೆದುಕೊಂಡು ಅಲ್ಲಿಂದ ಹೊರಟೆವು. 

ಜಲಪಾತದ ಒಂದು ನೋಟ 
ಸ್ಫಟಿಕ ಶುಭ್ರ ನೀರು 
                         
ತೇಜಸ್ ಮತ್ತವನ tripod
ವಿನಾಯಕನ ಮನೆಯಿಂದ ಊಟ ಕಟ್ಟಿಕೊಂಡು  ಬಂದಿದ್ದೆವು. ಸಾತೊಡ್ಡಿಯಿಂದ ವಾಪಾಸು ಬರುವಾಗ ದಾರಿಯಲ್ಲೆಲ್ಲೋ ಒಂದು ಬಸ್ ನಿಲ್ದಾಣ. ಹೆಗ್ಗಡೆ ಮನೆ ಅಂತೇನೋ ಬರೆದಿದ್ದ ನೆನಪು. ಅಲ್ಲಿ ಕುಳಿತು ಚನ್ನಾಗಿ ತಿಂದೆವು. ಜೊತೆಯಲ್ಲಿ ಪುನರ್ಪುಳಿ ಹಣ್ಣಿನ ರಸ ಬೇರೆ ಇತ್ತು. ಎಲ್ಲ ಮುಗಿಸಿ ಹೊರಡುವಾಗ ತಿಂದಿದ್ದು ಹೆಚ್ಚಾಗಿ ಕಣ್ಣು ಎಳೆಯುತ್ತಿತ್ತು ನನಗೆ. ಹೆಚ್ಚು ಹೊತ್ತೇನೂ ಮಲಗುವ ಅವಕಾಶ ಇರಲಿಲ್ಲ. ಸ್ವಲ್ಪ ಹೊತ್ತಲ್ಲೇ ಮಾಗೋಡು ಜಲಪಾತ ಬಂದೇ ಬಿಟ್ಟಿತ್ತು. ಮೆಟ್ಟಿಲುಗಳನ್ನೇರಿ ಹೋದರೆ ಸಾಕು, ದೂರದಿಂದ ಮಾಗೋಡು ಜಲಪಾತ ವೀಕ್ಷಿಸಬಹುದು.ಎಲ್ಲ ಕಡೆಯಿಂದಲೂ ಸುತ್ತುವರಿದ ಅಭೇದ್ಯ ಬಂಡೆಗಳು. ಅವುಗಳ ಮಧ್ಯದಲ್ಲಿ ಮೇಲಿಂದ ಜಾರುತ್ತಿರುವ ನೀರು. ಹತ್ತಿರ ಹೋಗಬೇಕಾದರೆ ಒಂದೇ ದಾರಿ, ನದಿಯಲ್ಲೇ ಬರಬೇಕು. ನಮ್ಮ ಗೆಳೆಯರಿಗೆಲ್ಲ  ಉತ್ಸಾಹ ಬಂದು "ಇದೊಂದು ಮಾಡಲೇಬೇಕು ಕಣ್ರೋ. ನದೀಲ್ಲಿ ಬಂದ್ರೆ ಜಲಪಾತ ಕಾಣತ್ತೆ. ಈ ಸಲ ಬೇಸಿಗೆ ಬರ್ಲಿ" ಅಂತೆಲ್ಲ ಅಲ್ಲೇ ನಿಂತು ನದಿಯ ಆಳ ಅಗಲ ಲೆಕ್ಕ ಹಾಕಲು ಶುರು ಮಾಡಿದರು.ನಾನು ಅವರ ಮಾತಿಗೆ ಮೂಕ ಪ್ರೇಕ್ಷಕಿ. 

ಮಾಗೋಡು ಜಲಪಾತ 
ಅಲ್ಲಿಂದ ಜೇನುಕಲ್ಲು ಗುಡ್ಡದ ಸೂರ್ಯಾಸ್ತ. ಅಲ್ಲೊಂದು ಆರಾಮಾಗಿ ಕುಳಿತುಕೊಂಡು ಸೂರ್ಯಾಸ್ತ ವೀಕ್ಷಿಸಲು ಅನುವಾಗುವಂತೆ ಮಾಡಿರುವ ಗೋಪುರ.ಚಾರ್ಮಾಡಿ ಹತ್ತಿರ ಜೇನುಕಲ್ಲು ಗುಡ್ಡ ಅಂತ ಕೇಳಿದ್ದು ನೆನಪಿತ್ತು. ಎಷ್ಟೊಂದು ಜೇನುಕಲ್ಲು ಗುಡ್ಡಗಳಿವೆ ಅಂತ ಯೋಚನೆ ಮಾಡ್ತಾ ಇದ್ದೆ ನಾನು. ಇನ್ನೂ ಸೂರ್ಯ ಮುಳುಗಲು ಸಮಯವಿತ್ತಾದ್ದರಿಂದ ಹರಟೆಯಲ್ಲಿ ಮುಳುಗಿದೆವು.ಶಿವಗಂಗಾ ಜಲಪಾತಕ್ಕೆ ನದಿ ದಡದಲ್ಲಿ ನಡೆದು ಎರಡು ದಿನಗಳ ಚಾರಣ ಮಾಡಿದ್ದು ನೆನಪಿಸಿಕೊಳ್ಳುತ್ತಾ, ಇಲ್ಲಿಂದಲೇ ಪ್ರಾರಂಭಿಸಿದ್ದು ನಮ್ಮ ಪ್ರಯಾಣ ಎಂದ ವಿನಾಯಕ. 


ಸೂರ್ಯ ಅಸ್ತಮಿಸಲು ತೊಡಗಿದ. ಹಸಿರಾಗಿ ಕಾಣುತ್ತಿದ್ದ ಬೆಟ್ಟಗಳೆಲ್ಲ ಕಪ್ಪಾಗತೊಡಗಿದವು. ಹರಿಯುತ್ತಿದ್ದ ಬೇಡ್ತಿ ನದಿ ಸೂರ್ಯನ ಬೆಳಕನ್ನು ಪೃಥಃಕ್ಕರಿಸುತ್ತ  ಬೆಂಕಿಯ ಬಣ್ಣದಲ್ಲಿ ಹೊಳೆಯುತ್ತಿತ್ತು.ನೀಲಾಕಾಶದಲ್ಲಂತೂ ಬಣ್ಣಗಳ ಜಾತ್ರೆ. ಎರಡು ಬೆಟ್ಟಗಳ ಮದ್ಯಕ್ಕೆ ಇಳಿಯತೊಡಗಿದ ನೇಸರನನ್ನು ಕಣ್ಣು ಮತ್ತು ಕ್ಯಾಮೆರಾ ಎರಡು ತುಂಬಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಚೆಂಡಿನಷ್ಟಿದ್ದ ಸೂರ್ಯ ಕಿತ್ತಳೆಯಷ್ಟಾಗಿ ಮತ್ತೆ ಅದರರ್ಧದಷ್ಟಾಗಿ, ಆಮೇಲೆ ಚುಕ್ಕೆಯಷ್ಟಾಗಿ ಕೊನೆಗೊಮ್ಮೆ ಕಣ್ಣಿಂದ ಮರೆಯಾಗಿ,ಆಕಾಶವೇ ಖಾಲಿಯಾಯಿತು. ಅಂದು ಮಾತನ್ನೂ ಮರೆತು ಅಭೂತಪೂರ್ವ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದೆವು ನಾವು. 



ಮಲೆಯ ಮಧ್ಯದಲಿ ಮರೆಯಾಗುವ ಮುನ್ನ
ಸಂದ್ಯಾರಾಗ
 ಇನ್ನೊಂದು ವಿಷಯ ಹೇಳಲು ಮರೆತಿದ್ದೆ ನಾನು. ಎರಡು ದಿನಗಳಿಗೆಂದು ಸಿರ್ಸಿ ಗೆ ಹೋಗಿದ್ದ ನಾವು ಇನ್ನೂ  ಒಂದು ದಿನ ಅಲ್ಲೇ ಉಳಿಯುವ ಯೋಚನೆ ಮಾಡಿದೆವು. ನನಗೆ ಹೇಗಿದ್ದರೂ ಕಾಲೇಜಿಗೆ ರಜ ಇತ್ತು. ಯಾವ ತೊಂದರೆಯೂ ಇರಲಿಲ್ಲ. ಹರ್ಷ ಸೋಮವಾರ ಬೆಳಿಗ್ಗೆ ಅವನ ಮ್ಯಾನೇಜರ್ ಗೆ ಕರೆಮಾಡಿ  ನಾನು ಊರಿಂದ ಬರುವಾಗ ಬಸ್ ಕೆಟ್ಟು ಹೋಗಿದೆ. ಏನು ಮಾಡಿದರೂ  ಬರುವುದು ಸಾಯಂಕಾಲ ಆಗುತ್ತದೆ ಎಂದ. ಅವರು ಉದಾರ  ಮನಸ್ಸಿನಿಂದ ಇವನ ರಜೆಯನ್ನು ಮಂಜೂರು ಮಾಡಿದರು. ವಿನಾಯಕ ಕರೆ ಮಾಡಲೇ ಇಲ್ಲ. ಆಮೇಲೆ ಏನು ಕಾರಣ ಕೊಟ್ಟ ಎಂದು ತಿಳಿಯಲಿಲ್ಲ. ತೇಜಸ್ ಮಾತ್ರ ನಾನು ಹೋಗ್ಬೇಕು, ನನ್ನ ಪ್ರಾಜೆಕ್ಟ್ ಮುಗಿದಿಲ್ಲ ಅಂತ ಗೋಳಾಡುತ್ತಿದ್ದ. ಆಮೇಲೆ ಒಂದು ಮೇಲ್ ಬರೆದು ಸುಮ್ಮನಾದ. ಅಂತೂ ಶಿರಸಿಯಲ್ಲಿ ಇನ್ನೂ ಒಂದು ದಿನ ಉಳಿಯಲು ಎಲ್ಲರಿಂದಲೂ  ಒಪ್ಪಿಗೆಯ ಮುದ್ರೆ ಬಿದ್ದಿತ್ತು. 

ಅವತ್ತು ಮಂಚಿಕೇರಿಯಲ್ಲಿರುವ ವಿನಾಯಕನ ಅಕ್ಕನ ಮನೆಗೆ ಹೋಗಿದ್ದೆವು.ಅಲ್ಲಿಂದ ಮನೆಗೆ ಬರುವಾಗ ರಾತ್ರಿ ೧೦ ದಾಟಿತ್ತು. ಊಟ ಮಾಡಿ ಹೊರಗೆ ಬಂದರೆ ಆಕಾಶದ ತುಂಬಾ ಕಿಕ್ಕಿರಿದ ಚಿಕ್ಕೆಗಳು. ಚಂದ್ರನಿರದ ರಾತ್ರಿ.ಎಷ್ಟೋ ನಕ್ಷತ್ರ ಪುಂಜಗಳ ಹೆಸರುಗಳನ್ನು ತಿಳಿಸಿದ ತೇಜಸ್.ಆಕಾಶ ಗಂಗೆಯು ಹರಿದ ದಾರಿಯನ್ನೂ ತೋರಿಸಿದ.ಮಧ್ಯರಾತ್ರಿಯ ವರೆಗೂ ನಕ್ಷತ್ರಗಳನ್ನು ನೋಡುತ್ತಾ ಕಳೆದೆವು.ಅಂದು ಎಷ್ಟೇ ಪ್ರಯತ್ನಿಸಿದರೂ ಒರಿಯನ್ ಪುಂಜ ಬಿಟ್ಟು ಬೇರೆ ಯಾವ ನಕ್ಷತ್ರಗಳೂ ಕ್ಯಾಮರಾಕ್ಕೆ ಸೆರೆಸಿಗಲಿಲ್ಲ. 

Wednesday 30 March 2016

ಶಿರಸಿಯನ್ನರಸಿ -ಭಾಗ ೨

ವಿಭೂತಿ ಜಲಪಾತ

ಹಸೆಹಳ್ಳ ನೋಡಿ ನಂತರ ಹೋದದ್ದು ಯಾಣದ ಸಮೀಪವಿರುವ ಇರುವ ವಿಭೂತಿ ಜಲಪಾತ. ಚಿರಪರಿಚಿತವಿದು. ಹಾಗೆಂದೇ ಅಲ್ಲಿಗೆ ಹೋಗುವ ಮೊದಲು ಜನ ತುಂಬಿರುತ್ತಾರೆ ಅಂದುಕೊಂಡಿದ್ದೆ.ನಡೆದು ಸಾಗುವ ದಾರಿ ಹೆಚ್ಚಿರಲಿಲ್ಲ. ಕೆಲವು ನಿಮಿಷಗಳ ದಾರಿ ಸಾಗಿದ ಮೇಲೆ ವಿಭೂತಿ ಜಲಪಾತದ ಎದುರ ನಿಂತಿದ್ದೆವು. ನಮ್ಮಣ್ಣ ಬಿಟ್ಟು ಬೇರೆ ಯಾರೂ ಇರಲಿಲ್ಲ ಆದರೆ ಎಲ್ಲೆಡೆ ಗಾಜಿನ ಒಡೆದ ಬಾಟಲಿಗಳ ಚೂರು, ಪ್ಲಾಸ್ಟಿಕ್ ಚೀಲಗಳು, ಕಾಗದದ ಚೂರುಗಳು ಕಾಣುತ್ತಿದ್ದವು.

ವಿಭೂತಿ ಜಲಪಾತ 

ವಿನಾಯಕ ಜಲಪಾತದಡಿಯಲ್ಲಿ .. 
ಅಲ್ಲಿನ ಗಲೀಜು ನೋಡಿಯೇ ನನಗೆ ಬೇಜಾರಾಗಿತ್ತು . ನೀರಲ್ಲಿ ಆಟವಾಡುವ ಮನಸ್ಸು ಇರಲಿಲ್ಲ . ನನ್ನ ಗೆಳೆಯರೆಲ್ಲ ಪಕ್ಕದಲ್ಲಿದ್ದ ಬಂಡೆಯ ಮೇಲೆ ಹತ್ತಿ ನೀರು ಬೀಳುವ ಜಾಗಕ್ಕೆ ಹೋಗಿ ನಿಂತರು. ಅಲ್ಲಿ ಎಷ್ಟು ಜಾರುತ್ತಿತ್ತು ಎಂದರೆ ನನ್ನ ಕಾಲು ಸಣ್ಣಗೆ ನಡುಗುತಿತ್ತು . ಭಯವಾಗಿ ನಾನು ದೂರದಲ್ಲೇ ಉಳಿದೆ. ಸುತ್ತ ಮುತ್ತ ಒಮ್ಮೆ ತಿರುಗಿ, ಮುಂದೆ ಹರಿದ ಹೊಳೆಯನ್ನು ನೋಡುತ್ತಾ ಕುಳಿತೆ. ಸಂಜೆಯ ಸಮಯವಾಗುತಿತ್ತು. ಮೇಲಿಂದ ಕೆಳಗೆ ಇಳಿಯುವಾಗ ಹರ್ಷ ಜಾರಿ ಬಿದ್ದ. ಬಿದ್ದದ್ದು ಬಂಡೆಯ ಮೇಲೆ. ಅದನ್ನು ನೋಡಿ ಎಷ್ಟು ಗಾಬರಿ ಆಯಿತು ಎಂದರೆ ಈಗಲೂ ಆ ದೃಶ್ಯ ಕಣ್ಣಿಗೆ ಕಟ್ಟಿದಂತೆ ಇದೆ . ಅದೃಷ್ಟವಶಾತ್ ಏನು ಆಗಿರಲಿಲ್ಲ. ಅಲ್ಲಿಂದ ಹೊರಟು  ವಿನಾಯಕನ ಮನೆ ತಲುಪಬೇಕಿತ್ತು ನಾವು. 
ಸೂರ್ಯಾಸ್ತ 
ಸೂರ್ಯ ಅಸ್ತಮಿಸಲು ತನ್ನ ತಯಾರಿ ಮಾಡಿಕೊಳ್ಳುತ್ತಿದ್ದ. ಯಾವುದೋ ಘಾಟಿಯ ಮದ್ಯದಲ್ಲಿ ನಿಂತು ಸೂರ್ಯಾಸ್ತ ನೋಡಿದೆವು. ಶಿರಸಿ ತಲುಪುವಾಗ ರಾತ್ರಿ ಆಗಿತ್ತು. ಅಲ್ಲಿಂದ ಬಿಸಿಲುಕೊಪ್ಪಕ್ಕೆ ಇನ್ನೊಂದು ಬಸ್. ನಂಗೆ ತುಂಬಾ ನಿದ್ರೆ ಬರುತಿತ್ತು. ವಿನಾಯಕನ ಮನೆ ತಲುಪುವಾಗ ೧೦ ಗಂಟೆಯ ಸುಮಾರು. ಎಲ್ಲರ ಜೊತೆ ಮಾತನಾಡುತ್ತಾ ಉಟವಾಯಿತು. ನಾನು ಬೆಚ್ಚಗೆ ಮಲಗಿ ನಿದ್ರೆ ಮಾಡಿದೆ. ಹೊರಗಿಂದ ಅಡಿಕೆ ಒಲೆಯ ಮುಂದೆ ಚಳಿ ಕಾಯಿಸುತ್ತಾ ಎಲ್ಲರೂ  ಮಾತನಾಡುತ್ತಿದ್ದದ್ದು ಕೇಳಿಸುತ್ತಿತ್ತು. 

Tuesday 29 March 2016

ಶಿರಸಿಯನ್ನರಸಿ- ಭಾಗ ೧

ಹಸೆಹಳ್ಳ ಜಲಪಾತ 

ಜನವರಿ ೨೦೧೫ರ ಶುಕ್ರವಾರ. ಗೆಳೆಯರೆಲ್ಲ ವಿನಾಯಕನ ಮನೆಗೆ ಹೋಗುವುದೆಂದು ನಿರ್ಧಾರವಾಗಿತ್ತು. ಕೊನೆಯಲ್ಲಿ ಗಳಿಗೆಯಲ್ಲಿ ಹೊರಟಿದ್ದು ಮಾತ್ರ ನಾನು,ಶ್ರೀಹರ್ಷ ,ತೇಜಸ್ ಮತ್ತೆ ವಿನಾಯಕ.ನನ್ನದು ಮೊದಲ ಬಾರಿಯ ಶಿರಸಿ ಪ್ರಯಾಣವಾಗಿತ್ತು.ಶಿರಸಿ ತಲುಪಿದಾಗ ಮರುದಿನ ಬೆಳಗ್ಗೆ ಸುಮಾರು ೭:೩೦. ಅಲ್ಲಿಂದ ಹತ್ತಿರದಲ್ಲೇ ಇದ್ದ ಹೋಟೆಲ್ ಒಂದರಲ್ಲಿ ತಿಂಡಿ ತಿಂದು ಹಸೆಹಳ್ಳ ಜಲಪಾತ ನೋಡಲು, ಮೊದಲೇ ಹೇಳಿ ಕರೆಯಿಸಿಕೊಂಡಿದ್ದ ವಾಹನದಲ್ಲಿ (Omni)  ಹೊರಟೆವು. 

ಆ ಜಲಪಾತ ಹೇಗಿರಬಹುದೆಂಬ ಕಲ್ಪನೆಯೂ ಇರಲಿಲ್ಲ ನನಗೆ. ಯಾರಿಗೂ ಇರಲಿಲ್ಲವೇನೋ. ಶಿರಸಿಯಿಂದ ಹೋರಾಟ ನಾವು ಸೇರಿದ್ದು ಹವ್ಯಕರೊಬ್ಬರ ಮನೆಗೆ. ನಾವು ಬರುವ ಮೊದಲೇ ಆ ಮನೆಯ ಗೇಟಿನ ಬಳಿ ಕಾಯುತ್ತ ನಿಂತಿದ್ದ ಮಹಿಳೆಯೊಬ್ಬರು ನಮ್ಮನ್ನು ಆದರದಿಂದ ಉಪಚರಿಸಿದರು.  ಅವರ ತೋಟದಂಚಿನಲ್ಲಿ ಇದ್ದದ್ದು ಈ ಜಲಪಾತ.ಸ್ವಲ್ಪ ಹೊತ್ತಿನಲ್ಲೇ ಅದು ನಮ್ಮ ಮುಂದೆ ತೆರೆದುಕೊಳ್ಳಲಿತ್ತು. ನಾವು ಆ ಅದ್ಭುತವನ್ನು ಕಣ್ಣು ತುಂಬಿಕೊಳ್ಳಲಿದ್ದೆವು.



ತೋಟ ಇಳಿದು ಜಲಪಾತ ಸಮೀಪಿಸಿದಾಗ,ಕಂಡ ದೃಶ್ಯ ನಯನಮನೋಹರವಾಗಿ ಕಾಣುತ್ತಿತ್ತು. ಅದೊಂದು ಅವರ್ಣನೀಯ ದೃಶ್ಯ. ನಾವು ಹೋಗಿದ್ದು ಜನವರಿ ಸಮಯ. ಮಳೆಗಾಲದ ರೌದ್ರತೆ ಇರಲಿಲ್ಲ. ಮೂರು ಮಜಲುಗಳಲ್ಲಿ ಎತ್ತರದಿಂದ ಬೀಳುತ್ತಿದ್ದ ಹಸೆಹಳ್ಳಕ್ಕೆ, ಸುತ್ತಲೂ ಕವಿದಿದ್ದ ಹಸಿರು, ನಿರ್ಜನತೆ ಹಾಗೂ ನಿಶ್ಯಬ್ದತೆ ಇನ್ನಷ್ಟು ಶೋಭೆ ನೀಡಿತ್ತು.ಅಲ್ಲಿ ಇದ್ದದ್ದು ನಾವು ಮತ್ತೆ ನಮ್ಮೊಡನೆ ಆ ಜಲಧಾರೆ  ಮಾತ್ರ. 
ಜಲಪಾತದ ದೂರ ದೃಶ್ಯ
ಈಜು ಬರದ ಕಾರಣ ನಾನು ಹೆಚ್ಚೇನೂ ನೀರಿನಲ್ಲಿ ಆಟವಾಡಲಿಲ್ಲ. ಅಲ್ಲೊಂದು ಸುಂದರ ರೆಪ್ಪೆ ಚಿಟ್ಟೆ (ಡ್ರ್ಯಾಗನ್ ಫ್ಲೈ)   ಇತ್ತು.ಹಸಿರು ಬಣ್ಣಕ್ಕಿದ್ದ ಅದು ನೋಡುತ್ತಿದ್ದಂತೆ ನೀಲಿ ಬಣ್ಣಕ್ಕೆ ತಿರುಗಿತು. ಹಸಿರಿನಿಂದ ನೀಲಿಗೆ , ನೀಲಿಯಿಂದ ಹಸಿರಿಗೆ ಬಣ್ಣ ಬದಲಿಸುತ್ತಿದ್ದ ಅದನ್ನು ನೋಡಿ ರೆಪ್ಪೆ ಚಿಟ್ಟೆ ಲೋಕದ ಊಸರವಳ್ಳಿ ಎಂದು ಕರೆದಿದ್ದ ತೇಜಸ್.
ರೆಪ್ಪೆ ಚಿಟ್ಟೆ (ಡ್ರ್ಯಾಗನ್ ಫ್ಲೈ )
ಇಲ್ಲೂ ಒಂದಷ್ಟು ಛಾಯಾಚಿತ್ರಗಳ ಸೆರೆ ಹಿಡಿದು , ಮದ್ಯಾಹ್ನ ಊಟದ ಹೊತ್ತಿಗೆ ಆ ತೋಟದ ಮನೆಗೆ ಹಿಂದಿರುಗಿದೆವು.ಅಲ್ಲೇ ನಮ್ಮ ಊಟವಾಯಿತು. ಅವರಿಗೆ ಧನ್ಯವಾದದ ಜೊತೆ ವಿದಾಯ ಹೇಳಿ ನಮ್ಮ ಪ್ರಯಾಣ ಮುಂದುವರಿಸಿದೆವು. 

Wednesday 2 March 2016

ಮಲೆನಾಡಿಗೆ ಬಾ...

ಬೆಂಗಳೂರಿನಲ್ಲಿ ಕುಳಿತುಕೊಂಡು ತೀರ್ಥಹಳ್ಳಿಯ ಮಳೆಗಾಲ ನೆನಪಿಸಿಕೊಳ್ಳುತ್ತಿದ್ದೇನೆ.ಯಾವತ್ತೂ ನೆನಪುಗಳ ನಡುವೆ ಕಳೆದುಹೋಗುವುದು ಅದೆಷ್ಟು ಚಂದ. ಮೊನ್ನೆ ಮೊನ್ನೆ ಮನೆಗೆ ಹೋಗಿ ಬಂದಿದ್ದೆ. ಅಲ್ಲಿ ಬಿಟ್ಟು ಬಿಡದೆ ಸುರಿಯುವ ಮಳೆ. ಇಲ್ಲಿಗೆ ವಾಪಸಾದ ಮೇಲೆ ಇಲ್ಲಿ ಮಳೆಯೇ ಇಲ್ಲ. ಆಗೊಮ್ಮೆ ಈಗೊಮ್ಮೆ ಇದು ಮಳೆಗಾಲ ಎಂದು ನೆನಪಿಸಲು ಭರ್ರ್ ಎಂದು ಸುರಿದು ಸುಮ್ಮನಾಗುತ್ತಾನೆ ಮಳೆರಾಯ.ಆದರೆ ನಮ್ಮ ಮಲೆನಾಡಿನಲ್ಲಿ ಹಾಗಲ್ಲ.ಅಲ್ಲಿಯ ಬದುಕು ಮಳೆಯೊಂದಿಗೆ ಬೆರೆತಿದೆ. ಮಲೆನಾಡನ್ನು ಮಳೆನಾಡು ಎಂದರೂ ತಪ್ಪಾಗಲಾರದು. ಕುವೆಂಪು ಕಥೆಗಳಲ್ಲಿ ಬರುವ ಮಳೆಗಾಲದ ವರ್ಣನೆ ಓದುವಾಗ ಮೈ ನವಿರೇಳುತ್ತದೆ. ಸಹ್ಯಾದ್ರಿ ಪರ್ವತಗಳ ಸಾಲು,ನಿತ್ಯ ಹರಿದ್ವರ್ಣ ಕಾಡುಗಳು,ಜಲಪಾತಗಳು..ಏನಿಲ್ಲ ಮಲೆನಾಡಿನಲ್ಲಿ!! ಅದಕ್ಕೇ ಏನೋ ಕುವೆಂಪು "ಮಲೆನಾಡಿಗೆ ಬಾ ನಾನಿಹೆನಿಲ್ಲಿ " ಎಂದು ಕರೆದದ್ದು. ಆದರೂ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಿ ಮಳೆ ಕಡಿಮೆಯಾಗಿರುವುದು ವಿಪರ್ಯಾಸ.

ಏಪ್ರಿಲ್, ಮೇ ತಿಂಗಳು ಬಂತೆಂದರೆ ಬೇಸಿಗೆ ಕಾಲ.ಸುಡು ಬಿಸಿಲು.ಆ ಬಿಸಿಲಿನ ಝಳಕ್ಕೆ ಬಾವಿ,ಕೆರೆಗಳೆಲ್ಲ ಬತ್ತಿ ಮಳೆರಾಯನಿಗೆ ಕಾಯುವ ಸಮಯ. ಈಗ ನೆನಪಿಸಿಕೊಂಡರೆ ಬೇಸಿಗೆ ಅಸಹನೀಯ ಎನಿಸುತ್ತದೆ. ಆದರೆ ಆಗ ಬೇಸಿಗೆ ರಜೆಯ ಸಮಯ.ಮೇ ತಿಂಗಳಲ್ಲಿ ಆಗಾಗ  ಗುಡುಗು ಬಿಸಿಲಿನ ಸಹಿತ ಮಳೆಯಾಗುತ್ತದೆ.ಭೂಮಿಯೆಲ್ಲಾ ತಂಪು ತಂಪು. ಅಲ್ಲಲ್ಲಿ ಹೂವುಗಳರಳಿ  ನಿಲ್ಲುತ್ತವೆ. ನಮ್ಮ ಮನೆಯ ಸುತ್ತಲೂ ಇದ್ದ ಮೈಸೂರು ಮಲ್ಲಿಗೆಯ ಬಳ್ಳಿಗಳು ಒಂದೆರಡು ಮಳೆಯಾದರೆ ಸಾಕು  ಮೈತುಂಬಿ ಮೊಗ್ಗಾಗುತ್ತವೆ. ಆಮೇಲೆ ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದಂತೆ ಎಲೆಗಳೇ ಕಾಣದಷ್ಟು ಹೂವುಗಳು.ಅತ್ತ ಸುಳಿದರೆ ಸಾಕು ಘಮ್ಮೆನುವ ಸುವಾಸನೆ.ಅವುಗಳನ್ನು ಕಟ್ಟಿ ಮುಡಿಯುವುದೊಂದು ಸಂಭ್ರಮ.

ಮುಂದೆ ಬರುವುದು ಮಳೆಗಾಲ ಎಂದು ಘೋಶಿಸುವುದಕ್ಕೇನೋ ಮುಂಗಾರು ಮಳೆಯಾಗುವುದು.ಮಳೆಗಾಲಕ್ಕೆ ಎಲ್ಲರ ತಯಾರಿಯೂ ಭರ್ಜರಿಯಾಗೇ ಇರುತ್ತದೆ.ಹಲಸಿನ ಹಪ್ಪಳ ಮಾಡಿಟ್ಟುಕೊಳ್ಳುವುದು,ಗೇರು ಬೀಜ ಸಂಗ್ರಹಿಸಿಟ್ಟುಕೊಳ್ಳುವುದು,ಒಲೆ ಉರಿ ಹಾಕುವುದಕ್ಕೆ ಬೇಕಾದ ಕಟ್ಟಿಗೆ, ಹಾಳೆ,ತೆಂಗಿನ ಗರಿ,ಗರಟ ಎಲ್ಲವನ್ನು ಕೂಡಿಟ್ಟುಕೊಳ್ಳುವುದು ಹೀಗೆ ಸಾಗುತ್ತದೆ ಮಳೆಯ ಸ್ವಾಗತಿಸುವ ಪರಿ.ಬೇಸಿಗೆಯಲ್ಲಿ ಯಾರಿಗಾದರೂ ಎಂತ ಕೆಲಸ ಅಂತ ಕೇಳಿ ನೋಡಿ ! ಕಟ್ಟಿಗೆ ಕಡಿಯುವುದು,ದರಗು ಗುಡಿಸುವುದು ಇಲ್ಲ ಹಪ್ಪಳ ಮಾಡ್ತಿದೀವಿ ಅಂತನೋ ಹೀಗೆ ಏನಾದ್ರೂ ಇರತ್ತೆ ಅವರ ಉತ್ತರ.

ಜೂನ್ ನಿಂದ ಸೆಪ್ಟೆಂಬರ್ ವರೆಗೂ ಬಿಟ್ಟೂ ಬಿಡದೆ ಸುರಿಯುವ ಮಳೆಯದು.ಇವತ್ತಿಗೂ ಮಳೆಗಾಲ ಎಂದರೆ ಅನಿರ್ವಚನೀಯ ಆನಂದ. ಪ್ರತಿ ಮಳೆಗಾಲವೂ ನನ್ನ ನೆನಪಿನ ಬುತ್ತಿಗೆ  ತನ್ನ ಕೊಡುಗೆಯನ್ನು ನೀಡುತ್ತಲೇ ಬರುತ್ತಿವೆ. ಮಳೆಯ ಮೊದಲ ಹನಿಗಳು ಭೂಮಿಗೆ ತಾಕಿದಾಗ ಬರುವ ಸುವಾಸನೆಯನ್ನು ಹಿಡಿದಿಟ್ಟುಕೊಳ್ಳುವ ಹಾಗಿದ್ದರೆ ಎಂದು ಎಷ್ಟೋ ಬಾರಿ ಅನಿಸಿದ್ದಿದೆ. ಆಮೇಲೆ ಹರಿದ್ವರ್ಣ ಪರ್ಣ ಗಳ ಮೆರವಣಿಗೆ. ಅಲ್ಲಲ್ಲಿ ಸಣ್ಣ ಸಣ್ಣ ಜಲಧಾರೆಗಳು. ಬೇಸಿಗೆಯಲ್ಲಿ ಉಸಿರೇ ಇಲ್ಲದೆ ಮಲಗುವ ಇವು ಮಳೆಗಾಲದಲ್ಲಿ ಮೈದುಂಬಿದಾಗ  ನೋಡಲು ಸೊಗಸು.

ಜೂನ್  ಬಂದರೆ ಮಳೆಗಾಲ ಜೊತೆಗೆ ನಮಗೆ ಶಾಲೆ ಪ್ರಾರಂಭ.ಮಳೆಗಾಲದಲ್ಲಿ ಶಾಲೆಗೆ ಹೋಗುವುದು ದೊಡ್ಡ ಪಡಿಪಾಟಲು ನಮಗೆ. ಸಾಹಸಗಾಥೆಯದು. ಪಾಚಿ ಕಟ್ಟಿ ಜಾರುವ ದಾರಿಯಲ್ಲಿ ಎದ್ದು ಬಿದ್ದು ನಡೆಯುತ್ತಾ ,ಬಿಳಿ ಬಣ್ಣದ ಕಾಲುಚೀಲಗಳನ್ನು ಕೆಂಪಗೆ ಮಾಡಿಕೊಂಡು ದಾರಿಯಲ್ಲಿ  ಸಿಗುವ ಏಡಿ, ಹಾವುಗಳಿಂದ ತಪ್ಪಿಸಿಕೊಂಡು ಮುನ್ನಡೆಯುತ್ತಿದ್ದೆವು.ನಾವು  ಹೆದರುತ್ತಿದ್ದುದು ಇಂಬಳಗಳಿಗೆ.ಈ ರಕ್ತ ದಾಹಿಗಳ ಕಾಟ ತಡೆಯುವಂತಿರಲಿಲ್ಲ.ಛತ್ರಿ, ಹೊಸ ಪುಸ್ತಕಗಳು, ಒಮ್ಮೊಮ್ಮೆ ಹೊಸ ಸಮವಸ್ತ್ರ ಎಲ್ಲ ಜೋಡಿಸಿಕೊಂಡು ಶಾಲೆಗೆ ಹೊರಟರೆ ಯಾಕಾದರೂ ಈ ಮಳೆ ಬರುತ್ತದೆಯೋ ಎನ್ನಬೇಕು. ಬಟ್ಟೆ ಎಲ್ಲ ಒದ್ದೆ. ಹೊಸ ಪುಸ್ತಕಗಳೂ ಅಷ್ಟೇ ನೀರಲ್ಲಿ ಅದ್ದಿ ತೆಗೆದಂತೆ. ಸ್ಲೇಟಿನಲ್ಲಿ ಬರೆದಿದ್ದ ಮನೆಕೆಲಸ ಎಷ್ಟೋ ಬಾರಿ ಒರೆಸಿ ಹೋಗಿರುತ್ತಿತ್ತು.ಅದಕ್ಕೊಂದು ಬೈಗುಳ ತಿಂದು ಒಂದು ಮೂಲೆಯಲ್ಲಿ ನಡುಗುತ್ತ ಕುಳಿತು ಪಾಠ ಕೇಳುವುದು. ಬಟ್ಟೆ ಒಣಗಿತು ಎನ್ನುವಷ್ಟರಲ್ಲಿ ಸಾಯಂಕಾಲ ಆಗಿರುತ್ತಿತ್ತು. ಮತ್ತೆ ಮನೆಗೆ ಹೋಗುವಷ್ಟರಲ್ಲಿ ಬಟ್ಟೆ ನೆನೆದಿರುತಿತ್ತು. ಮನೆಗೆ ಹೋದಮೇಲೆಯಾದರೂ ಬೆಚ್ಚಗಿನ ವಸ್ತ್ರ ಸಿಗುವುದೆಂಬ ಖಾತ್ರಿ ಇಲ್ಲ. ಬಿಸಿಲೇ ಇಲ್ಲದೆ ಬಟ್ಟೆ ಒಣಗುವ ಮಾತೆಲ್ಲಿ?ಒಲೆ ಮೇಲೆ ಇಟ್ಟುಕೊಂಡು ಒಂದೊಂದು ಸಲ ಒಣಗಿಸಿಕೊಳ್ಳುತ್ತಿದ್ದೆವು. ಆದರೆ ಹೇಗಿದ್ದರೂ ಮತ್ತೆ ಮಳೆಗೆ ಇಳಿಯುವುದು ನಿಜವೇ.

ಗುಡ್ಡ,ತೋಟಗಳನ್ನು ದಾಟಿ ಮುನ್ನಡೆಯುವಾಗ ಮಧ್ಯದಲ್ಲಿ ಸಣ್ಣ ಸಣ್ಣ ಹಳ್ಳಗಳು ಅಥವಾ ಸಣ್ಣಗೆ ನೀರು ಹರಿಯುವ ದಾರಿ. ಮಳೆಗಾಲದಲ್ಲಿ  ತುಂಬಿ, ಸಂಭ್ರಮದಿಂದ ಹರಿಯುವ ಅವುಗಳ ಆರ್ಭಟ ನೋಡಬೇಕು. ಕಾಲು ಜಾರಿ ಹಳ್ಳದಲ್ಲಿ ಬಿದ್ದರೆ ಮೇಲೆ ಬರುವುದು ಕಷ್ಟ.ಅದೊಂದು ಮಹಾಯಾನ.ನಾನು ಎಷ್ಟೋ ಸಾರಿ ಬಿದ್ದಿದ್ದೆನಾದರೂ ಅವೆಲ್ಲ ಬೇಸಿಗೆಯಲ್ಲಿ. ಒಂದು ಕೈಯಲ್ಲಿ ಛತ್ರಿ,ಇನ್ನೊಂದು ಕೈಯಲ್ಲಿ ಊಟದ ಡಬ್ಬಿ,ನೀರಿನ ಬಾಟಲಿ,ಜೊತೆಗೆ ಶಾಲೆಯ ಬ್ಯಾಗ್ ಬೆನ್ನಿನಲ್ಲಿ  ಹೊತ್ತುಕೊಂಡು, ಇಂಬಳಗಳಿಂದ ಕಾಪಾಡಿಕೊಳ್ಳುತ್ತ ಮುನ್ನಡೆಯುವ ಕಾರ್ಯ ಹೇಳುವಷ್ಟು ಸುಲಭವಾಗಿರಲಿಲ್ಲ.

ಇದೆಲ್ಲ ಮಲೆನಾಡಿಗರಿಗೆ ಸಿಗುವ ಅಪರೂಪದ ಅನುಭವ. ನಮ್ಮ ತೀರ್ಥಹಳ್ಳಿಯ ಜೀವನದಿ ತುಂಗೆ. ಗಂಗಾ ಸ್ನಾನ ತುಂಗಾ ಪಾನ ಎನ್ನುವ ನಾಣ್ನುಡಿಯಂತೆ ಅದರ ನೀರು ಕುಡಿಯಲು ಸವಿ . ತುಂಗೆಯ ತಟದಲ್ಲಿ ರಾಮೇಶ್ವರ ದೇವಸ್ಥಾನ. ನದಿಯ ಮದ್ಯದಲ್ಲಿ ರಾಮನಕೊಂಡ ಇದೆ. ಪರಶುರಾಮ ತನ್ನ ತಾಯಿ ರೇಣುಕೆಯ ತಲೆ ಕತ್ತರಿಸಿದ ಮೇಲೆ ತನ್ನ ಕೊಡಲಿಗೆ ಅಂಟಿದ ರಕ್ತದ ಕಲೆಯನ್ನು ಎಲ್ಲಿ ತೊಳೆದರೂ ಹೋಗಲಿಲ್ಲವಂತೆ. ತುಂಗಾ ನದಿಯಲ್ಲಿ ತೊಳೆದಾಗ ಅಂಟಿದ ರಕ್ತದ ಕಲೆ ಮಾಯವಾಯಿತೆಂದು ಪ್ರತೀತಿ ಇದೆ. ಈ ಜಾಗವೇ ರಾಮನಕೊಂಡ.ಎಳ್ಳಮವಾಸ್ಯೆಯ ಸಮಯದಲ್ಲಿ ಇಲ್ಲಿ ಭಕ್ತಾದಿಗಳು ಸ್ನಾನ ಮಾಡುತ್ತಾರೆ.ರಾಮನಕೊಂಡದ ಪಕ್ಕದ ಒಂದು ಬಂಡೆಯ ಮೇಲೆ ಇರುವುದು ರಾಮ ಮಂಟಪ. ಇದು ಪೂರ್ತಿಯಾಗಿ ಮುಳುಗಿದಾಗ ನೆರೆ ಬಂದಿದೆ ಎಂದರ್ಥ. ೮೪ ಅಡಿಗಿಂತಲೂ ಹೆಚ್ಚು ನೀರು ಇರುತ್ತದೆ ನದಿಯಲ್ಲಿ ಆಗ. 

ಮಳೆಗಾಲದ ಪ್ರತಿದಿನವೂ ನಮ್ಮದು ಒಂದೇ ಬೇಡಿಕೆ, ರಾಮ ಮಂಟಪ ಮುಳುಗಲಿ ಎಂದು. ಅದು ಮುಳುಗಿದಾಗ ಎಲ್ಲ ಕಡೆ ರಸ್ತೆಯಲ್ಲಿ ನೀರು. ಆಗ ನಮಗೆ ಶಾಲೆಗೆ ಹೆಚ್ಹು ಕಡಿಮೆ ಮೂರು ದಿನಗಳ ರಜೆ ದೊರಕುತ್ತಿತ್ತು. ಬೇರೆ ಬೇರೆ ಹಳ್ಳಿಗಳಿಂದ ತೀರ್ಥಹಳ್ಳಿ ತಲುಪಲು ಬಸ್ ವ್ಯವಸ್ತೆ ಇರುತ್ತಿರಲಿಲ್ಲ. ಶಿವಮೊಗ್ಗೆ ಯಿಂದ ತೀರ್ಥಹಳ್ಳಿಗೆ, ಆಗುಂಬೆಯಿಂದ ತೀರ್ಥಹಳ್ಳಿಗೆ ಬರುವ ಬಸ್ ಗಳೆಲ್ಲವೂ ಸ್ಟಾಪ್. ದ್ವೀಪದಂತಾಗುತ್ತಿತ್ತು ನಮ್ಮೂರು. ಅಂತೂ ಬೆಚ್ಚಗೆ ಮನೆಯಲ್ಲಿರುತ್ತಿದ್ದೆವು. ಆಗ ನಾ. ಡಿಸೋಜ ಅವರ ಆನೆ ಬಂತೊಂದಾನೆ ಎನ್ನುವ ಮಕ್ಕಳ ಕಾದಂಬರಿ ಓದುತ್ತಿದ್ದೆ. ಅದರಲ್ಲಿ ಮಳೆ ಹೆಚ್ಚಾಗಿ ಶಾಲೆಯಲ್ಲೆಲ್ಲ ನೀರು ಬಂದು ರಜೆ ಘೋಷಿಸುತ್ತಾರೆ. ತುಂಗೆಯಲ್ಲಿ ನೀರು ಎಷ್ಟಿದೆ ಅಂತ ಮಕ್ಕಳು ನೋಡೋಕೆ ಹೋಗುವುದು ಮೊದಲಾದ ಸನ್ನಿವೇಶಗಳು ಬರುತ್ತದೆ. ನಮ್ಮ ಶಾಲೆಯಲ್ಲೂ ಮಳೆ ಹೆಚ್ಚಾದಾಗ ಸಭಾಭವನ ಕಾಲು ಮುಚ್ಚುವಷ್ಟು ನೀರಿನಿಂದ ತುಂಬಿರುತ್ತಿತ್ತು. ನಾವೂ ತುಂಗೆಯ ಸೆಳವು ಎಷ್ಟಿದೆ ಅಂತ ನೋಡೋಕೆ ಹೋಗುತ್ತಿದ್ದೆವು. ಬೆಳಗ್ಗೆ ಎದ್ದು ರೇಡಿಯೋ ಹಾಕಿಕೊಂಡು ,ಶೃಂಗೇರಿ ತೀರ್ಥಹಳ್ಳಿ ಸುತ್ತ ಮುತ್ತ ಭಾರಿ ಮಳೆಯಾಗುತ್ತಿದ್ದು ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುದ್ದಿ ಬಿತ್ತರಿಸುವರೇನೋ ಎಂದು  ಕಾಯುತ್ತಿದ್ದೆವು. 

ಜೋರಾಗಿ ಸುರಿಯುವ ಮಳೆ ಹೊರಗೆ, ಬೆಚ್ಚಗೆ  ಓಲೆ ಮುಂದೆ ಕೂತು ಗೇರು ಬೀಜ ಸುಟ್ಟುಕೊಂಡು ತಿನ್ನುವ ಸಂಭ್ರಮ, ಹಲಸಿನ ಕಾಯಿ ಹಪ್ಪಳ ಜೊತೆಗೆ ತುರಿದ ತೆಂಗಿನ ಕಾಯಿಯ ಹೂವು , ಪತ್ರೊಡೆ, ಕಳಲೆ ಪಲ್ಯ ಆಹಾ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತಿದೆ. ಮುಂದಿನ ಮಳೆಗಾಲಕ್ಕಾಗಿ ಕಾಯುತ್ತಿದ್ದೇನೆ..



ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ..