Wednesday 11 November 2015

ರಂಗವಲ್ಲಿ ಇಡಲು ಬಾ..


ಉಷೋದಯವಾಗುತ್ತಿದೆ. ಅಗೋ ಅಲ್ಲಿ ಬೆಟ್ಟಗಳ ನಡುವೆ
ನಿಶೆ ಕಳೆಯುವ ಹೊತ್ತು.
ಇಬ್ಬನಿಯೋ ಮುಸಲ ಧಾರೆಯೋ !
ಹನಿಗರೆಯುತ್ತಿದೆ,ನಿನಗಾಗಿ ಹಂಬಲಿಸುವಂತೆ..
ದಾಸವಾಳದ ಪೊದೆಯಲ್ಲೊಂದು
ರಕ್ತ ವರ್ಣದ ಹೂಗಳ ನಡುವೆ
ಪುಟ್ಟದೊಂದು  ಹಕ್ಕಿಗೂಡು..
ಬೇಲಿ ಬದಿಯ ಮಲ್ಲಿಗೆ ಬಳ್ಳಿಯ ಸಾಲ ತುಂಬಾ
ತುಂಬಿವೆ ಹೂಗಳು ಅರಳು ಬಿರಿದಂತೆ.
ಬಾರಕ್ಕೆ ಬಾಗಿ ತೊನೆಯುತ್ತಿವೆ
ಕಟ್ಟಿ ಮುಡಿಯುವವರಿಲ್ಲ..
ಹೂತೋಟದ ತುಂಬಾ ಕಳೆ ಹುಲ್ಲು ,ಹಳು
ಮದ್ಯದಲ್ಲೆಲ್ಲೋ ಸರಸರ ಸರ್ಪ ಸರಿದ ಸದ್ದು..
ಮಳೆ ಸುರಿಯುತ್ತಿದೆ
ನಿನ್ನ ಹೆಸರಿಟ್ಟು ಕರೆವಂತೆ..
ನಿನ್ನ ಹಣೆಗೆ ಹೂ ಮುತ್ತನಿಡುವಂತೆ.
ದಾರಿ ಕಾಣದೆ ಕಂಗೆಟ್ಟಿರುವೆ.
ಹೆಜ್ಜೆಗಳನ್ನು ಹಿಂಬಾಲಿಸೋಣ ಎಂದರೆ
ನನ್ನ ಮುಂದೆ ನೀನಿಲ್ಲ.!
ದೀಪಾವಳಿ ಹತ್ತಿರವಾಗುತ್ತಿದೆ.
ಮನೆಯಂಗಳ ಸಾರಿಸಿ ಓರಣವಾಗಿದೆ.
ರಂಗವಲ್ಲಿ ಇಡಬೇಕಿದೆಯಷ್ಟೆ.
ಬೆಳದಿಂಗಳ ದೋಣಿಯಲ್ಲಿ
ಒಂಟಿ ಚಂದ್ರನನ್ನು ದಿಟ್ಟಿಸುತ್ತಾ ಕುಳಿತಿರುವೆ.
ಪಕ್ಕದಲ್ಲಿ ಖಾಲಿ ಜಾಗ.!
ಧರೆಯಂಚಿನ ಮರದ ಕೆಳಗೆ
ಹರಳುಗಳಂತೆ ಉದುರಿರುವ ನೀಲಿ ಬೀಜಗಳು.
ಅವುಗಳನ್ನು ಹೆಕ್ಕಿ ಜೋಪಾನವಾಗಿ
ಕಾಯ್ದಿರಿಸಿದ್ದೇನೆ ನಿನಗಾಗಿ..
ಗೆಳತಿ ನೀನೆಂದು ಬರುವೆ .?






Saturday 5 September 2015

ಚಾರ್ಮಾಡಿ ಮುಡಿಯಲ್ಲಿ- ಭಾಗ ೨

ಏರಿಕಲ್ಲು ಹತ್ತಿಳಿದಿದ್ದು  ಒಂದು ಅದ್ಭುತ ಅನುಭವವಾಗಿತ್ತು.ಏನೋ ಸಾಧಿಸಿದ ಅನಿರ್ವಚನೀಯ ತೃಪ್ತಿಯಿತ್ತು . ಆದರೆ ಮರುದಿನದ ಚಾರಣಕ್ಕೆ ಮಾತ್ರ ಸ್ವಲ್ಪವೂ ಶಕ್ತಿ ಉಳಿದಿರಲಿಲ್ಲ. ಬಿದ್ದು ಕಾಲು ನೋವು ಮಾಡಿಕೊಂಡಿದ್ದೆ ನಾನು.ಇನ್ನು ಹೇಗೆ ನಡೆಯುವುದು..? ರಾತ್ರಿ ಊಟವಾದ ಮೇಲೆ ಅವರವರ ಮಲಗುವ ಚೀಲದ ಒಳಗೆ ಎಲ್ಲರೂ ತೂರಿಕೊಂಡಿದ್ದಾಗ ನಮ್ಮ ಚಾರಣದ ಸಂಘಟಕ  ಹರ್ಷ  ಕೇಳಿದ ನಾಳೆ  trek ಯಾರ್ಯಾರು ಬರ್ತೀರ ? ಅಂತ . ಎಲ್ಲೋ ಒಂದಿಬ್ಬರನ್ನ ಬಿಟ್ಟು ಯಾರೂ ದನಿ ಎತ್ತಲಿಲ್ಲ. ಅಷ್ಟು ಸುಸ್ತಾಗಿದ್ದರು ಎಲ್ಲರು.  

ಬೆಳಗಾಯಿತು.ಒಂದೇ ಒಂದು ಗಾಢ ನಿದ್ರೆ ಸಾಕಾಗಿತ್ತು  ಹಿಂದಿನ ದಿನದ ಸುಸ್ತನ್ನೆಲ್ಲ ಮಾಯ ಮಾಡೋಕೆ.ಹೆಚ್ಚು ಕಡಿಮೆ ಎಲ್ಲ ಗುಡ್ಡ ಹತ್ತಲು  ಹೊರಟು ನಿಂತಿದ್ದರು.ಹೊರಗೆ ಬಂದರೆ  ಚಾರ್ಮಾಡಿ ಬೆಟ್ಟಗಳ ಸಾಲು ಸಾಲು ಕೈ ಬೀಸಿ ಕರೆಯುತ್ತಿತ್ತು. ತಡ ಮಾಡದೆ ಬೇಕಾದ ವಸ್ತುಗಳನ್ನೆಲ್ಲ ತುಂಬಿಸಿಕೊಂಡು ಬೆಟ್ಟದ ತಪ್ಪಲಿನಲ್ಲಿ ಇರುವ  hotel ಒಂದರಲ್ಲಿ ನೀರು ದೋಸೆ ತಿಂದು, ಟೀ ಕುಡಿದು ಹೊರಡಲನುವಾದೆವು.ಇಂಬಳಗಳಿಂದ ರಕ್ಷಣೆಗೆ  ಬೇವಿನ ಎಣ್ಣೆ ,ನಶ್ಯವನ್ನು ಬೆರೆಸಿ ಲೇಪಿಸಿಕೊಂಡಿದ್ದಾಯಿತು.

group pic ..:)

ನಾವು ಎರಡನೇ ದಿನ ಹತ್ತಬೇಕಾಗಿದ್ದಿದ್ದು  ಕೊಡೆಕಲ್ಲು , ಬಾಳೆಕಲ್ಲು ಗುಡ್ಡ.ಸ್ವಲ್ಪ ದೂರ ಬಸ್ ನಲ್ಲಿ ಕ್ರಮಿಸಿ ಮುಂದೆ ಹತ್ತಬೇಕಾಗಿತ್ತು.ಒಂದೆರಡು ಗ್ರೂಪ್ ಪಿಕ್ ತೆಗೆದುಕೊಂಡು ನಮ್ಮ ತುದಿ ತಲುಪುವ ಯತ್ನ ಮೊದಲಾಯಿತು.ಮೊದಮೊದಲು ಕಷ್ಟದ ಹಾದಿ ಎಂದೆನಿಸಿದರೂ ಹೆಚ್ಚೇನೂ ತೊಂದರೆಗಳಾಗಲಿಲ್ಲ. ಸಣ್ಣಗೆ ಜಿನುಗೋ ಮಳೆ, ಜೊತೆಯಲ್ಲಿ ಚಳಿ, ಎತ್ತ ಕತ್ತೆತ್ತಿದರೂ ಕಾಣುವುದು ಕಾವಳ, ಕೆಳಗೆ ಹಸುರು ಹುಲ್ಲಿನ ಹೊದಿಕೆ,ಚಿಕ್ಕ ಕಾಲುದಾರಿ. ದೂರದಲ್ಲೆಲ್ಲೋ ಕಾಣುವ ,ತುಂಬಿ ಹರಿಯುವ ಜಲಪಾತಗಳು.! ಹೀಗಿತ್ತು ನಾವು ಹೊರಟಿದ್ದ ದಾರಿ. ಒಬ್ಬರ ಹಿಂದೆ ಒಬ್ಬರು ಸಾಲಾಗಿ ಇರುವೆಗಳಂತೆ ಸಾಗುತ್ತಿದ್ದೆವು.ಮುಂದೆ ಸಾಗುತ್ತಿದ್ದ ಒಂದೆರಡು ಜನರನ್ನು ಬಿಟ್ಟು ಬೇರೆ ಏನೂ ಕಾಣುತ್ತಿರಲಿಲ್ಲ.
     
ಮಳೆಯಲಿ ಜೊತೆಯಲಿ.. :)
ಕೊಡೆಕಲ್ಲು ಗುಡ್ಡದ ನೆತ್ತಿಯಲ್ಲಿ ನಾನು..:)
ಕೊಡೆಕಲ್ಲು ಗುಡ್ಡದ ನೆತ್ತಿಯಲ್ಲಿ ಗೆಳೆಯರೊಂದಿಗೆ .. 
ಹಾಗೆ ಮುಂದೆ ನಡೆದು  ಕೊಡೆಕಲ್ಲು ಗುಡ್ಡದ ನೆತ್ತಿ ಮುಟ್ಟಿದೆವು. ಅಲ್ಲೊಂದು ದೊಡ್ಡ ಬಂಡೆ. ಕೊಡೆಯಂತೆ ವಿಶಾಲವಾಗಿ ಅಷ್ಟೂ ಜನರನ್ನು ತನ್ನ ಕೆಳಗೆ ನಿಲ್ಲಲು ಅವಕಾಶ ಮಾಡಿಕೊಟ್ಟಿತ್ತು ಅದು. ಅಲ್ಲಿಂದ ಕೆಳಗೆ ನೋಡಿದರೆ ಪ್ರಪಾತ. ಮಂಜಿನ ಪರದೆ ಮುಸುಕಿತ್ತು.ಸ್ವಲ್ಪ ಹೊತ್ತು ಹಾಗೆ ಕುಳಿತು ನೋಡುತ್ತಿದ್ದೆ.ನಿಧಾನವಾಗಿ ಮಂಜಿನ ಪರದೆ ಸರಿಯತೊಡಗಿತ್ತು.ಅದರ ಕೆಳಗೆ ಅಡಗಿ ಕುಳಿತ ವನರಾಶಿ ದೃಗ್ಗೋಚರವಾಗಿತ್ತು.ಎಷ್ಟು camera ಗಳು ಛಾಯಾಚಿತ್ರ ಸೆರೆಹಿಡಿದವೋ ಏನೋ. ಆದರೆ ಆ ಅಸೀಮ ಸೌಂದರ್ಯಕ್ಕೆ ಚೌಕಟ್ಟು ಹಾಕಿ ಬಂದಿಸಲು ಸಾಧ್ಯವೇ.? ನಾವು ಮುಂದೆ ಹತ್ತಬೇಕಾಗಿದ್ದ ಬಾಳೆಕಲ್ಲು ಗುಡ್ಡ ಕಣ್ಣೆದುರೇ ಅಗಾಧವಾಗಿ ನಿಂತಿತ್ತು.  ಮಾತು ಬೇಡವಾಗಿತ್ತು. ಕುಳಿತಲ್ಲಿಂದ ಏಳಲು ಮನಸ್ಸಿರಲಿಲ್ಲ.ಹರ್ಷ ಬಿಡಲಿಲ್ಲ. ಊಟಕ್ಕೆ ತಡವಾಗುತ್ತದೆ ಎಂದು ಎಲ್ಲರನ್ನು ಮುಂದೆ ಕಳಿಸಿದ.
ಮಂಜಿನ ಪರದೆ ಸರಿದಾಗ..:)

ಬಾಳೆಕಲ್ಲು ಗುಡ್ಡ 

ಬಾಳೆಕಲ್ಲು ಗುಡ್ಡ ಎದುರಿಗೇ ಇತ್ತು.ಇನ್ನು ಹತ್ತುವುದೊಂದೇ ಬಾಕಿ. ಇಂಬಳಗಳ ತೊಂದರೆ ಇರಲಿಲ್ಲ.chocolate ತಿನ್ನುತ್ತಾ ಹರ್ಷನ ಹುರಿದುಂಬಿಸುವ ಮಾತು ಕೇಳುತ್ತ ಹೆಜ್ಜೆಗಳನ್ನೆಣಿಸುತ್ತಾ ದಾರಿ ಸಾಗಿದ್ದು ಗೊತ್ತೇ ಆಗಲಿಲ್ಲ.ಮಳೆ ಜೋರಾಗಿ ಅಲ್ಲದಿದ್ದರೂ ಹನಿಗರೆಯುತ್ತಿತ್ತು.ಮಂಜು ಮುಸುಕಿದ್ದರಿಂದ ಗುಡ್ಡದ ತುದಿಯಲ್ಲಿ ನಿಂತು ನೋಡಿದಾಗ ಏನು ಕಾಣಲಿಲ್ಲ.ಸ್ವಲ್ಪ ಹೊತ್ತಿನ ನಂತರ ಕೆಳಗಿಳಿಯಲು ಪ್ರಾರಂಭಿಸಿದೆವು.ಕೆಳಗಿಳಿದಿದ್ದು ಜೇನುಕಲ್ಲು ಗುಡ್ಡದ ಕಡೆಯಿಂದ.ಬಸ್ ನಮಗಾಗಿ ಕಾಯುತ್ತಿತ್ತು. ಅಂತ ಅದ್ಭುತ ಅನುಭವ ಕೊಟ್ಟ ಚಾರ್ಮಾಡಿ ಬೆಟ್ಟಗಳ ಸಾಲಿಗೆ, ಇಂಬಳಗಳಿಗೆ ,ಆ ಹಳ್ಳಿಯ ಜನರಿಗೆ, ಮಳೆಕಾಡಿಗೆ ,ಕಣ್ಮನ ತಣಿಸಿದ ಹಸುರಿಗೆ,ಸ್ವರ್ಗ ಸದೃಶ  ಮಲೆನಾಡಿಗೆ ಒಂದು ಮೌನ ವಿದಾಯ ಹೇಳಿ  ಕೊಟ್ಟಿಗೆಹಾರದ ಕಡೆಗೆ ಪ್ರಯಾಣಿಸಿದೆವು.   

  

Monday 23 February 2015

ನುಡಿ ನಮನ

ಕಾಲೇಜು ಜೀವನ, ಪ್ರತಿಯೊಬ್ಬರ ಬದುಕಿನಲ್ಲೂ ನವಿರಾದ ನೆನಪುಗಳನ್ನು ಉಳಿಸಿರುತ್ತದೆ.ಆ ನೆನಪುಗಳು ಮೊದಲ ಮಳೆಯಿಂದ ನೆಂದ ಮಣ್ಣಿನ ನೆಲದಿಂದ ಬರುವ ಪರಿಮಳದಷ್ಟೇ ಘಮ ಘಮ.ಮತ್ತೆ ಮತ್ತೆ  ಮೆಲುಕು ಹಾಕಬೇಕಿನ್ನಿಸುವ ಮಧುರ ಕವಿತೆಯಂತೆ ಅದು.

ಇಂಜಿನಿಯರಿಂಗ್  ಸೇರಿದ ಮೊದಮೊದಲು ಅಪ್ಪ,ಅಮ್ಮನಿಂದ ದೂರವಾಗಿ ಇರಬೇಕಾದ ಅನಿವಾರ್ಯತೆ.ಭಯ, ದುಗುಡ ಎಲ್ಲವೂ ಇತ್ತು.ಆದರೆ ಆಮೇಲೆ ದಿನ ಕಳೆದದ್ದು ಗೊತ್ತಾಗಲೇ ಇಲ್ಲ.ಕಾಲೇಜಿಗೆ ಹೊಸಬರಾಗಿದ್ದ ನಾವು ಸೀನಿಯರ್ಸ್ ಆದೆವು.ಅಲ್ಲಿ ನಮಗೊಬ್ಬರು ಪ್ರೊಫೆಸರ್. ತಮ್ಮ ನಡೆ ನುಡಿಯಲ್ಲಿ ಅತಿಯಾದ  ಶಿಸ್ತನ್ನು ಪಾಲಿಸುವ,ಯಾವಾಗಲೂ ನಗದ ಅಪರೂಪದ ವ್ಯಕ್ತಿ. ಎಲ್ಲವೂ ಕರಾರುವಾಕ್ಕಾಗಿ ನಡೆಯಬೇಕೇಂದು ಬಯಸುತ್ತಿದ್ದರು.ಪ್ರತಿ ಸೆಮಿಸ್ಟರ್ನಲ್ಲೂ ಒಂದೊಂದು ವಿಷಯ ಕಲಿಸಲು ಬರುತ್ತಿದ್ದ ಅವರ ಕ್ಲಾಸ್ ಯಾವಾಗ ಆರಂಭವಾಗುತ್ತದೆ ಎಂಬುದು ಮಾತ್ರ ನಮಗೆ ತಿಳಿದಿರುತ್ತಿತ್ತು. ಮುಗಿಯುವುದು ೩-೪ ಗಂಟೆಗಳಾದ ಮೇಲೆಯೇ.! ಬೇರೆ ಎಲ್ಲಾ ಅಧ್ಯಾಪಕರ ಕ್ಲಾಸ್ ಬಿಟ್ಟು ಅಡ್ಡಾಡಿ ರೂಢಿಯಾಗಿದ್ದ ನಮಗೆ ಇವರ ಉಪನ್ಯಾಸ ಕೇಳುವುದು ಕಷ್ಟವಾಗುತ್ತಿತ್ತು.ಬಿಸಿ ಕಲ್ಲಿನ ಮೇಲೆ ಕುಳಿತಂತೆ ಯಾವಾಗ ಮುಗಿಯುವುದೋ ಎಂದು ಕಾಯುತ್ತಾ ಕುಳಿತಿರುತ್ತಿದ್ದೆವು.

ಒಂದು ದಿನ ೮ ಗಂಟೆಯ ಮೊದಲ ಪಿರಿಯಡ್ ಗೆ ಬಂದ ಪ್ರೊಫೆಸರ್ ಅವರನ್ನು  ನೋಡಿ ನಾವೆಲ್ಲ ಇವರು ಯಾಕೆ ಬಂದರು ಈಗ ಗಂಟೆ ಹನ್ನೊಂದಾದರೂ ನಮ್ಮನ್ನ ಬಿಡುವುದಿಲ್ಲ ಎಂದುಕೊಂಡೆವು.ಅಸ್ತು ದೇವತೆಗಳು ಕೇಳಿಸಿಕೊಂಡಿರಬೇಕು.! ೧೦ ರಿಂದ ೧೦:೩೦ರ ಇಂಟರ್ವಲ್ ನಲ್ಲೂ ಬಿಡದೆ ೧೨ ಗಂಟೆಯ ವರೆಗೂ ಅವರ ವಾಗ್ಝರಿ ಸಾಗಿತು.ಆಮೇಲೆ ನಾವು ಕೇಳಲಾಗದೆ ಸರ್,ಸರ್ ಎಂದು ಕರೆಯಲಾರಂಬಿಸಿದೆವು. ನಮ್ಮ ಅವಿಧೇಯ ವರ್ತನೆ ಅವರಿಗೆ ಸಿಟ್ಟು ತರಿಸಿತು. ಇವತ್ತು ನಿಮಗೆ ಊಟಾನೂ ಬೇಡ ಏನೂ ಬೇಡ,ಆಗ ನಿಮಗೆ ಬುದ್ದಿ ಬರುತ್ತದೆ ಅಂತ ೨ ಗಂಟೆಯವರೆಗೂ ಉಪನ್ಯಾಸ ಮುಂದುವರೆಸಿದರು.ಅವತ್ತು  ಕ್ಲಾಸ್ ಮುಗಿಸಿ ಹೊರಬಂದಾಗ ಮಾತ್ರ ಪಂಜರದಿಂದ  ಹೊರಬಂದ ಹಕ್ಕಿಯಂತಾಗಿತ್ತು ಮನಸ್ಸು.

 ನಮ್ಮ ಕೊನೆಯ ವರ್ಷದ ಪ್ರಾಜೆಕ್ಟ್ ಗೆ ಅವರನ್ನೇ  ಗೈಡ್  ಆಗಿ ಆರಿಸಿಕೊಂಡಿದ್ದೆವು ನಾವು. ನಾಲ್ಕು ತಿಂಗಳು ಸಾಕಪ್ಪಾ ಸಾಕು ಎನ್ನಿಸುವಷ್ಟು ಬೈಗುಳಗಳು.ಅದು ಸರಿಯಾಗಿಲ್ಲ,ಇದನ್ನ ಮಾಡಿಲ್ಲ ಯಾಕೆ.?ಹೀಗೇನಾ ರಿಪೋರ್ಟ್ ಬರೆಯೋದು ಅಂತ ಬೈತಿದ್ರು.ನಮಗೆ ಅದು ಅಭ್ಯಾಸವಾಗಿತ್ತು.ಕೊನೆಯ ದಿನ ಮಾತ್ರ ನಮ್ಮ ಪ್ರಾಜೆಕ್ಟ್ ನೋಡಿ, ಚನ್ನಾಗಿ ಮಾಡಿದ್ದೀರಿ ಎಂಬ ಮಾತಿನೊಂದಿಗೆ ಸಹಿ ಹಾಕಿದ್ದರು.ಅದೇ ಕೊನೆ ನಾನವರನ್ನು ನೋಡಿದ್ದು. ನಂತರ ಪರೀಕ್ಷೆಗಳು ಮುಗಿದವು. ಇಂಜಿನಿಯರಿಂಗ್ ನಾಲ್ಕು ವರ್ಷಗಳು ಕೂಡ ಒಂದಿಷ್ಟು ನೆನಪುಗಳನ್ನುಳಿಸಿ ಮುಗಿದೇ ಹೋಯಿತು. ಇನ್ನೇನು ಹಾಸ್ಟೆಲ್ ಖಾಲಿ ಮಾಡಿಕೊಂಡು  ಮನೆಗೆ ಬಂದದ್ದಾಯಿತು.

ಇದಾದ ಸುಮಾರು ಒಂದು ವರ್ಷದ ನಂತರ ಫೇಸ್ ಬುಕ್ ನ ಅವರ ಪ್ರೊಫೈಲ್ ನಲ್ಲಿ ರೆಸ್ಟ್ ಇನ್ ಪೀಸ್ ಎನ್ನುವ ಕಾಮೆಂಟ್ ಗಳು.ಅದನ್ನು ನೋಡಿ ನಂಬಿಕೆಯೇ ಬರಲಿಲ್ಲ. ಕಣ್ಣು ತೇವವಾಗಿತ್ತು. ಎಲ್ಲ ಸ್ನೇಹಿತರಿಗೆ ಕಾಲ್ ಮಾಡಿ ವಿಚಾರಿಸಿದೆ.ನನ್ನಂತೆಯೇ ಕೆಲವರು ನಂಬಲಾಗದ ಸ್ಥಿತಿಯಲ್ಲಿ ಇದ್ದರೆ ಇನ್ನು ಕೆಲವರು ರಾತ್ರಿ ಎಲ್ಲಾ ನಿದ್ರೆ ಮಾಡದೆ ಕಳೆದಿದ್ದರು.ನನ್ನ ಸ್ನೇಹಿತನೊಬ್ಬ ಕಣ್ಣು ಮುಚ್ಚಿದರೆ ಅವರೇ ನೆನಪಾಗುತ್ತಾರೆ ಎಂದಿದ್ದ.

ಇದಾಗಿ ತುಂಬ ದಿನ ಕಳೆದಿದ್ದರೂ ಅವರಿನ್ನೂ ಆ ಕ್ಲಾಸ್ ರೂಂ ಗಳಲ್ಲಿ ದಿನಕ್ಕೆ ೩-೪ ಗಂಟೆಗಳ ಕಾಲ ನಿಂತುಕೊಂಡು ಪಾಠ ಹೇಳಿಕೊಡುತ್ತಾ, ಲ್ಯಾಬ್ ಗಳಲ್ಲಿ   ಪ್ರೋಗ್ರಾಮ್ ಗಳನ್ನು ವಿವರಿಸುತ್ತಾ ಇನ್ನೂ ಅಲ್ಲಿಯೇ ಇದ್ದಾರೆ ಎಂದೆನಿಸುತ್ತದೆ.ಇನ್ನೊಮ್ಮೆ ಆ ದಿನಗಳು ಮರಳಿ ಬಾರದೇ ಎಂದೆನಿಸುತ್ತದೆ.ಅವರ ನೆನಪು ಇಂದಿಗೂ ಎಲ್ಲರ ಮನದಲ್ಲೂ ಹಸಿರಾಗಿದೆ.