Friday 6 June 2014

ತಿಗಣೆ ಪುರಾಣ

ಈಗ್ಗೆ ಆರು ಸಂವತ್ಸರಗಳ ಹಿಂದೆ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವರೆದುರು ನಿಂತು ಕಣ್ಮುಚ್ಚಿ ಕೈ ಮುಗಿದು ಪರಮ ಭಕ್ತಿ ಇಂದ ಕೇಳಿಕೊಂಡಿದ್ದೆ, "ಇಂಜಿನಿಯರಿಂಗ್ ಬೇಗ ಮುಗಿದು ಒಂದು ಕೆಲಸ ಅಂತ ಸಿಕ್ಕಿಬಿಟ್ಟರೆ ಸಾಕು ಇನ್ನೇನು ಆಸೆ ಇಲ್ಲ ದೇವರೇ. ನೀನು ಇದೊಂದು ಬೇಡಿಕೆ ಪೂರ್ತಿ ಮಾಡಿದ್ರೆ ನಾನು ನಿಂಗೆ ಆಯುರ್ಕೊಡ ಮಾಡಿಸ್ತೀವಿ" ಅಂತ. (ಆಯುರ್ಕೊಡ :ಸಾವಿರ ಕೊಡಗಳ ನೀರಿನಿಂದ ದೇವರಿಗೆ ಮಾಡುವ  ಅಭಿಷೇಕ).ಆಸೆ ಎನ್ನುವುದು ಆ ಕ್ಷಣಕ್ಕೆ ಅದೊಂದೇ ಆಗಿತ್ತು. ಇನ್ನೊಂದೇ ಮತ್ತೊಂದೇ ಅಂತ  ಪ್ರತಿ ಬಾರಿ ದೇವರೆದುರು ಅರ್ಜಿ ಹಾಕುವಾಗಲೂ ಇದು ಕೊನೆಯದು ಅಂತಲೇ ಪ್ರಾರ್ಥಿಸುತ್ತೇನೆ. (ಸುಳ್ಳು ಎಂದು ಅರಿವಿದ್ದರೂ ಸಹ !!) ಬೇಡಿಕೆ ಎಷ್ಟು ದೊಡ್ಡದು ಎನ್ನುವುದರ ಮೇಲೆ ಹಣ್ಣುಕಾಯಿ ಮಾಡಿಸುವುದೋ, ಕಾಣಿಕೆ ಹಾಕುವುದೋ ಅಥವಾ ಆಯುರ್ಕೊಡದಂತಹ ಅಭಿಷೇಕ ಮಾಡಿಸುವುದೋ ಎಂಬುದು  ನಿರ್ಧಾರವಾಗುತ್ತದೆ.ಇದು ಲಂಚದ ಅವತಾರ.ಹಾಗೆ ಕೇಳಿಕೊಂಡ ಅವತ್ತು  ದೇವರಿಗೆ ನನ್ನ ಮೊರೆ ಕೇಳಿಸಿತೇನೋ.! ಕೃತಯುಗ, ತ್ರೇತಾಯುಗವಾಗಿದ್ದ ಪಕ್ಷದಲ್ಲಿ ಪ್ರತ್ಯಕ್ಷವಾಗುತ್ತಿದ್ದ ದೇವರು ಕಲಿಯುಗವೆಂದು ಅಲ್ಲಿಂದಲೇ ನನ್ನ ಬೇಡಿಕೆಗೆ ಅಸ್ತು ಎಂದಿದ್ದನೆನಿಸುತ್ತದೆ. ಅಂದುಕೊಂಡಿದ್ದೆಲ್ಲ ಆಗಿದ್ದರೂ ಇವತ್ತಿನವರೆಗೂ ಆ ಹರಕೆ ತೀರಿಸಲಾಗಿಲ್ಲ ನನಗೆ. 


ಎರಡು ವರುಷಗಳ ಹಿಂದೆ ಇಂಜಿನಿಯರಿಂಗ್ ಮುಗಿದಿತ್ತು. ಯಾವುದೇ ಯೋಚನೆ ಇಲ್ಲದೆ ಮೂರು ತಿಂಗಳು ಕಳೆದ ಮೇಲೆ ಕೆಲಸಕ್ಕೆ ಕರೆ ಬಂದಿತ್ತು.ಕೆಲಸ ದೂರದ ಹೈದರಾಬಾದಿನಲ್ಲಿ.ಅಪ್ಪ,ಅಮ್ಮನಿಗೆ ಚಿಂತೆಯಾದರೆ ನನಗೋ ಸಂಭ್ರಮ.ಬೇರೆ ರಾಜ್ಯ,ಅದರಲ್ಲೂ  ಆಂಧ್ರ ಪ್ರದೇಶ. ನಾಲ್ಕು ವರ್ಷ  ಹಾಸ್ಟೆಲ್ನಲ್ಲಿ ಲೆಕ್ಕವಿಲ್ಲದಷ್ಟು ತೆಲುಗು ಸಿನಿಮಾ ನೋಡಿ, ತೆಲುಗು ಕಲಿತುಕೊಂಡಿದ್ದ ನನಗೆ ಅದನ್ನು  ಮಾತನಾಡುವವರ  ಜೊತೆ ನನ್ನ ಭಾಷಾಪ್ರಾವಿಣ್ಯತೆಯ ಪ್ರದರ್ಶನ ಮಾಡಬೇಕೆಂಬ ಹಂಬಲವಿತ್ತು.ಅದಕ್ಕಾಗಿ ಸಿಕ್ಕ ಅವಕಾಶಕ್ಕೆ ಖುಷಿ ಪಟ್ಟಿದ್ದೆ.ನನ್ನ ಧೈರ್ಯ ನೋಡಿ ಅಪ್ಪ,ಅಮ್ಮನಿಗೂ ಧೈರ್ಯ ಬಂದಿರಬೇಕು.ಸರಿ ಹೊರಡಲು ಎಲ್ಲ ತಯಾರಿಯೂ ನಡೆಯಿತು.ತೀರ್ಥಹಳ್ಳಿಯಿಂದ  ಹೈದರಾಬಾದ್ ಗೆ  ರಾಜಹಂಸ ಬಸ್ ಇದೆ.ಅದರಲ್ಲಿ ಹೈದರಾಬಾದ್ ಹೋಗುವುದೆಂದೂ,ಮೊದಲ ಬಾರಿಯ ಪ್ರಯಾಣವಾದ್ದರಿಂದ ಅಪ್ಪ,ತಮ್ಮ ಜೊತೆಗೆ ಬರುವುದೆಂದೂ ಒಟ್ಟಿಗೆ ಮೂರು ಟಿಕೆಟ್ ತೆಗೆದುಕೊಂಡದ್ದಾಯಿತು.ಹೊರಡುವ ಕೊನೆ ದಿನದವರೆಗೂ ಇದ್ದ ಉತ್ಸಾಹ ಹೊರಡುವ ದಿನ ಮಾತ್ರ ಬತ್ತಿಹೋಗಿತ್ತು.ಏನೋ ಹೇಳಲಾಗದ ಚಡಪಡಿಕೆ.ಮತ್ತೆ ಬರುವುದೇ ಇಲ್ಲವೇನೋ ಹಿಂದಿರುಗಿ ಎನ್ನುವ ಭಾವ.ಬಸ್ ಸ್ಟಾಂಡ್ ಗೆ ಬಂದ ಎಲ್ಲರಿಂದ ಬೀಳ್ಕೊಂಡು ಹೊರಡುವಾಗ ಮನಸ್ಸು ಖಾಲಿ ಖಾಲಿ .. 

ಹೊರಡುವ ಮೊದಲು ಮನೆಯಲ್ಲಿ ಅಮ್ಮ ಹೇಳಿದ್ದರು "ಬಸ್ನಲ್ಲಿ ತಿಗಣೆಗಳು ಇರ್ತವೆ ಕಣೇ. ಅಲ್ಲಿಗೆ ಹೋದಮೇಲೆ ಸ್ವಲ್ಪ ಬ್ಯಾಗ್ ಎಲ್ಲ ಸರಿಯಾಗಿ ನೋಡಿಕೋ. ಒಂದು ಸಲ ರೂಂನಲ್ಲಿ ಸೇರಿಕೊಂಡರೆ ಮತ್ತೆ ಅವು ಹಾಗೆ ಜಾಸ್ತಿ ಆಗ್ತಾವೆ" ಅಂತ. "ಸರಿ ಅಮ್ಮ ಹೋದ ತಕ್ಷಣ ಎಲ್ಲ ನೋಡಿ ಜೋಡಿಸಿ ಇಟ್ಕೊಳ್ತಿನಿ " ಅಂತ ಅಂದಿದ್ದೆ ನಾನು.ಬಸ್ನಲ್ಲಿ ನಂಗೆ ತಿಗಣೆಗಳದ್ದೇ ಚಿಂತೆ. ಎಷ್ಟು ಸೇರಿಕೊಂಡಿದೆಯೋ ಬ್ಯಾಗಿನಲ್ಲಿ ಅಂತ. ಶುಕ್ರವಾರ ೩:೩೦ಗೆ ಬಸ್ ಹತ್ತಿದ್ದ ನಾವು ಹೈದರಾಬಾದ್ ತಲುಪುವಷ್ಟರಲ್ಲಿ ಮಾರನೇ ದಿನ ಬೆಳಿಗ್ಗೆ ಸರಿಯಾಗಿ ೮ ಗಂಟೆ.ಹಾಸ್ಟೆಲ್ ಇನ್ನು ಹುಡುಕಿರಲಿಲ್ಲವಾದ್ದರಿಂದ ಎರಡು ದಿನ ಮುಂಚಿತವಾಗಿಯೇ ಹೊರಟು ಒಂದು ವಸತಿಗೃಹದಲ್ಲಿ ಕೊಠಡಿಯೊಂದನ್ನು ತೆಗೆದುಕೊಂಡಿದ್ದೆವು.ಎಲ್ಲ ವಸ್ತುಗಳನ್ನು ಎಸೆದು  ಹಾಸಿಗೆಯ ಮೇಲೆ ಮೈಚೆಲ್ಲಿದವಳಿಗೆ ಮತ್ತೆ ಬಂತು ತಿಗಣೆಯ ಯೋಚನೆ. ತಕ್ಷಣ ಎಲ್ಲ  ಬ್ಯಾಗ್ ಗಳನ್ನೂ ಪರಿಶೀಲಿಸಿದೆ.ಅಲ್ಲಲ್ಲಿ ಒಂದೊಂದು ನಾವಿರುವುದು ನಿಜವೆಂದು ಹೇಳುವಂತೆ ಹರಿಯುತ್ತಿದ್ದವು.ಅಪ್ಪನ ಕೈ ಗಡಿಯಾರದಲ್ಲೊಂದು,ಬ್ಯಾಗಿನ ಅಂಚಿನಲ್ಲೊಂದು ಅವಿತು ಮಲಗಿದ್ದವು. ಅವನ್ನೆಲ್ಲ ಹುಡುಕಿ ಹುಡುಕಿ ಕೊಂದ ಮೇಲೆ ಮನಸ್ಸಿಗೆ ನಿರಾಳವೆನಿಸಿತ್ತು. 



ನಮ್ಮ ಆಫೀಸ್ ಇದ್ದದ್ದು ವಿಪ್ರೊ ಸರ್ಕಲ್ ಹತ್ತಿರದ  ಕ್ಯು ಸಿಟಿ (Qcity ) ಯಲ್ಲಿ.ನನ್ನ ಸ್ನೇಹಿತೆಯರೆಲ್ಲ ಮೊದಲೇ ಹೈದರಾಬಾದಿಗೆ ಬಂದಿಳಿದಿದ್ದರು. ಆಫೀಸ್ ಹತ್ತಿರದಲ್ಲೇ ಯಾವುದಾದರೂ PG ಹುಡುಕುವುದೆಂದು ಅವರ ಜೊತೆಯಾಗಿ ನಾವೂ, ಸುತ್ತ ಮುತ್ತ ಒಂದಿಷ್ಟು PG ಎಂದು ಹೆಸರಿಟ್ಟುಕೊಂಡ ಕಟ್ಟಡಗಳನ್ನು ನೋಡಿದೆವು.ಇದ್ದುದರಲ್ಲಿ ಒಂದು ಚನ್ನಾಗಿತ್ತು.ಎಲ್ಲರಿಗೂ ಹಿಡಿಸಿತ್ತು.ಅಲ್ಲೇ ಸೇರಿಕೊಳ್ಳೋಣವೆಂದರೆ ಅಲ್ಲಿ ಖಾಲಿ ಕೊಠಡಿ ಇರಲಿಲ್ಲ.ಆಗ ಅಲ್ಲಿನ ಮ್ಯಾನೇಜರ್ ನಮ್ಮದೇ ಇನ್ನೊಂದು PG ಇದೆ. ಅಲ್ಲಿ ಒಂದು ವಾರ ಇರಿ. ಆಮೇಲೆ ಇಲ್ಲಿ  ನಿಮಗೆ ವ್ಯವಸ್ತೆ ಮಾಡುತ್ತೇನೆ ಎಂದರು. ಅವರು ಹೇಳಿದ ಇನ್ನೊಂದು PG ನೋಡಲು ಸುಮಾರಾಗಿ ಇತ್ತು.ಸರಿ ಒಂದು ಹತ್ತು ದಿನಗಳೇ ತಾನೇ ಅಂತ ಒಪ್ಪಿಕೊಂಡು ನಮ್ಮ ವಸ್ತುಗಳನ್ನೆಲ್ಲ ಅಲ್ಲಿಗೆ ತಂದಿಟ್ಟುಕೊಂಡ ಮೇಲೆ  ಅಪ್ಪ,ತಮ್ಮ ಹೊರಡುತ್ತೇವೆಂದರು.ಅವರನ್ನು ಕಳಿಸಿ ವಾಪಾಸು ಬಂದಾಗ ರಾತ್ರಿ ಆಗಿತ್ತು. ಊಟ ಮಾಡಿ ಎಲ್ಲವನ್ನೂ ಜೋಡಿಸಿಟ್ಟುಕೊಳ್ಳಲು ರೂಮಿಗೆ ಹೋದೆ. 


ಇಲ್ಲೇ ಇರುವುದು ನಾನು ಇಷ್ಟೊತ್ತು ಹೇಳಿದ ಕಥೆಯ ಸ್ವಾರಸ್ಯ.ರೂಮಿಗೆ ತೆರಳಿ ಲೈಟ್ ಹಾಕಿ ನೋಡಿದವಳು ಬೆಚ್ಚಿಬಿದ್ದೆ.ನಾನು ನನ್ನ ಗೆಳತಿ ಮಲಗುವ ಮಂಚದ ಮೇಲೆಲ್ಲಾ ರಾಶಿ ರಾಶಿ ತಿಗಣೆಗಳು.ಎಲ್ಲೆಲ್ಲಿ ನೋಡಿದರೂ ತಿಗಣೆ.ನಾನು ಅಷ್ಟು ಮುತುವರ್ಜಿಯಿಂದ ನನ್ನ ಬ್ಯಾಗ್ ಗಳ ಸಂದಿಗೊಂದಿಗಳನೆಲ್ಲ ಹುಡುಕಿ, ಇದ್ದ ಕ್ರಿಮಿಗಳನ್ನೆಲ್ಲ ಸಾಯಿಸಿದ್ದೆ. ಆದರೆ ಇಲ್ಲಿ ನೋಡಿದರೆ ಸಾವಿರಾರು ತಿಗಣೆಗಳು. !! ರಣರಂಗದಲ್ಲಿ ಬಡಪಾಯಿ ಸೈನಿಕನೊಬ್ಬ ಒಮ್ಮೆಗೇ ಮೂರು ನಾಲ್ಕು ಎದುರಾಳಿಗಳೊಂದಿಗೆ ಸೆಣಸಿ ಗೆದ್ದು ಹಮ್ಮಿನಿಂದ ಮುಂದುವರೆಯುವಾಗ ಕಣ್ಣ ಮುಂದೆ ಸಾವಿರಾರು ಶತ್ರುಗಳು ಬಂದಂತೆ ಆಗಿತ್ತು ನನಗೆ.ಏನು ಮಾಡಲೂ ತೋಚದೆ ಸುಮ್ಮನೆ ನಿಂತುಬಿಟ್ಟೆ.ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ಕಸ ಗುಡಿಸಲು ಇದ್ದ ಹೆಂಗಸನ್ನು ಕರೆದು ಅವುಗಳನ್ನು ಹೊರಹಾಕಲು ಹೇಳಿದೆನಾದರೂ ಹಾಸಿಗೆಯ ಕೆಳಗೆ,ಕಿಟಕಿ,ಬಾಗಿಲು ಎಲ್ಲೆಂದರಲ್ಲಿ ಅಷ್ಟೇಕೆ  ಇದ್ದ ದೇವರ ಗೂಡಿನಲ್ಲೂ ಅವೇ ಇರುವಾಗ ಅವುಗಳನ್ನು ನಿರ್ನಾಮ ಮಾಡುವುದಾದರೂ ಹೇಗೆ.?? ಅವತ್ತು ರಾತ್ರಿ ತಿಗಣೆ ಕೊಂದ ಜಾಣೆಗೆ ಜಾಗರಣೆ.!

ಒಂದೆರಡು ದಿನ ಹಾಗೇ ಕಳೆಯಿತು.ಬರುಬರುತ್ತಾ ಆ ತಿಗಣೆಗಳ ಇರುವಿಕೆ ಅಭ್ಯಾಸವಾಗಿ ಹೋಯಿತು. ಅವುಗಳ ಕೋಣೆಗೆ ನಾವು ಹೋಗಿ ಇದ್ದುದರಿಂದ ಎಲ್ಲಾ  ಉಪಟಳವನ್ನೂ ಸಹಿಸಲೇಬೇಕಾಗಿತ್ತು. ಶತ್ರುವನ್ನು ಗೆಲ್ಲಲಾಗದಿದ್ದಲ್ಲಿ ರಾಜಿಯಾಗುವುದು ಜಾಣತನ. ಹಾಗೆ ನಡೆದುಕೊಂಡೆವು ಕೂಡ. ೫-೬ ದಿನಗಳಲ್ಲಿ ನಮಗೆ ಹೊಸ PG ಯಲ್ಲಿ ರೂಂ ಸಿಕ್ಕಿತು. ಅಂತೂ ಬಿಡುಗಡೆ ಹೊಂದಿ ಹೊಸ PG ಯಲ್ಲಿ ಸೇರಿಕೊಂಡ ಮೇಲೆ ಒಂದು ತಿಗಣೆಯೂ ಕಾಣಲಿಲ್ಲ ನನಗೆ. 

ಅಪರೂಪಕ್ಕೊಮ್ಮೆ ಇದು ನೆನಪಾಗುತ್ತದೆ.ಕೆಲವೊಮ್ಮೆ ಜೀವನದಲ್ಲಿ ನಾವು ಬೇಡವೆಂದುಕೊಂಡಿದ್ದು ಆಗಿರುತ್ತದೆ.ಅದಕ್ಕೆ ಈ ತಿಗಣೆ ಕಥೆಯೇ ಉದಾಹರಣೆ. ಬೇಡ ಬೇಡ ಎಂದುಕೊಂಡು ಅವುಗಳೊಂದಿಗೇ ಹೊಂದಿಕೊಂಡದ್ದು ಯೋಚಿಸಿದಾಗ ಮಾತ್ರ ಸಣ್ಣ ಮೆಚ್ಚುಗೆಯೊಂದು ಮೂಡುತ್ತದೆ. 

9 comments:

  1. He he ....simply superb story dear...but it has inner meaning abt life too...sometimes wat we dont expect, life gives us d same..:-)

    ReplyDelete
    Replies
    1. Yea..this is what i always think..most of the times we get something which we don't want..:) thank you..:)

      Delete
    2. Appa kooda odidru...chennagide...:)

      Delete
  2. It is very beautiful.. you have written and explained very eloquently.. i was able to imagine while reading it quite horrible no when you see them.. :)

    ReplyDelete
  3. This comment has been removed by the author.

    ReplyDelete
  4. This comment has been removed by the author.

    ReplyDelete