Thursday 9 June 2016

ಹನುಮನಗುಂಡಿ ಮತ್ತು ಬೇಲೂರು

ಕುದುರೆಮುಖ ಚಾರಣ ಮುಗಿಸಿ ಮರುದಿನ ಹೊರಟಿದ್ದು  ಹನುಮನ ಗುಂಡಿ ಜಲಪಾತಕ್ಕೆ. ದಾರಿಯಲ್ಲಿ ಕಡಂಬಿ ಜಲಪಾತ ಕಂಡಿತು. ನಮ್ಮ ವಾಹನದ ಚಾಲಕ ಅಲ್ಲಿ ನಿಲ್ಲಗೊಡಲಿಲ್ಲ. ವಾಹನದೊಳಗಿಂದಲೇ ಕೆಲವು ಛಾಯಾಚಿತ್ರ ತೆಗೆದುಕೊಂಡೆವು. ಹನುಮನಗುಂಡಿ ಜಲಪಾತ ಹತ್ತಿರದಲ್ಲೇ ಇತ್ತು. ಕೆಳಗಿಳಿಯಲು ಮೆಟ್ಟಿಲುಗಳಿವೆ. ಸುಲಭವಾಗಿ ಎಲ್ಲರಿಗೂ ಹೋಗಿ ಬರಲು ಸಾಧ್ಯವಾಗುವಂತೆ ಅನುಕೂಲಗಳಿವೆ. ಹಾಗೆಯೇ ಜನ ಜಾಸ್ತಿಯಾದಂತೆಲ್ಲ ಸುತ್ತಮುತ್ತಲ ವಾತಾವರಣ ಕೆಡುವ ಅಪಾಯವೂ ಇಲ್ಲದಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುತ್ತಿತ್ತು ಸೂತನಬ್ಬಿ. ನೀರಿಗಿಳಿದು ಆಡುವ ಯೋಚನೆಯನ್ನು ಯಾರೂ ಮಾಡಲಿಲ್ಲ. 
ಕಡಂಬಿ ಜಲಪಾತ 

ಹನುಮನ ಗುಂಡಿ (ಸೂತನಬ್ಬಿ ) ಜಲಪಾತ 

ಅಲ್ಲಿಂದ ಬೆಂಗಳೂರಿನ ಕಡೆಗೆ ನಮ್ಮ ಪ್ರಯಾಣ ಸಾಗಿತು. ಕೊಟ್ಟಿಗೆ ಹಾರದಲ್ಲಿ ನಮ್ಮ ಊಟ. ದಾರಿಯಲ್ಲೇ ಇದ್ದ ಬೇಲೂರು ತಲುಪಿದೆವು. ಅಲ್ಲಿನ ಚನ್ನಕೇಶವನ ದೇವಸ್ಥಾನ, ಕರ್ನಾಟಕದ ವಾಸ್ತುಶಿಲ್ಪದ ಸೊಗಡಿಗೆ ಹಿಡಿದ ಕನ್ನಡಿ. ಶಿಲಾಬಾಲಿಕೆಯರ ಅಷ್ಟೂ ಚೆಲುವನ್ನು ಕಲ್ಲಿನಲ್ಲಿ ಕೆತ್ತಿ ಅದ್ಭುತವನ್ನೇ ತೋರಿಸಿದ ಶಿಲ್ಪಿಗೆ ನುಡಿನಮನ. ದರ್ಪಣ ಸುಂದರಿ ಎಲ್ಲಿದೆ ಎಂದು ಹುಡುಕಿದ್ದೆ ನಾನು. ದೇವಾಲಯದ ಮುಂಭಾಗದಲ್ಲೇ ಇತ್ತು ಅದು. ದೇವರ ದರ್ಶನ ಪಡೆದೆವು. ಅಲ್ಲಿಂದ ಹೊರಬಂದಾಗ ಏನೋ ಪ್ರಶಾಂತತೆ ಮನಸ್ಸನ್ನು  ತುಂಬಿತ್ತು.

ಬೇಲೂರಿನ ಗುಡಿಯಲ್ಲಿ ಕೇಶವನೆದುರಲ್ಲಿ..  

ಅಷ್ಟೇ ಅಲ್ಲಿಂದ ಮತ್ತೆ ಬೆಂಗಳೂರಿಗೆ ವಾಪಸು ಬಂದಿದ್ದು. ನಮ್ಮ ಪ್ರವಾಸದ ಕೊನೆಯ ಕೆಲವು ಗಂಟೆಗಳು  ಬಸ್ ಪ್ರಯಾಣದಲ್ಲಿ ಕಳೆಯಿತು. ಬೆಂಗಳೂರು ತಲುಪುವಷ್ಟರಲ್ಲಿ ೧೧ ಗಂಟೆಯ ಸುಮಾರು. ಎಲ್ಲರೂ ವಿದಾಯ ಹೇಳಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದೆವು. 


PC :ತೇಜಸ್ ಜಯಶೀಲ್ 




No comments:

Post a Comment