ಇಂತಹದೇ ಘಟನೆಯೊಂದನ್ನು ಬಹಳ ವರ್ಷಗಳ ಹಿಂದೆ ಎಲ್ಲೋ ಓದಿದ ನೆನಪು.ಇದು ನನ್ನ ಅನುಭವಕ್ಕೂ ಬಂದಿರುವುದು ಕಾಕತಾಳೀಯ.
ನಾನು ಆಫೀಸ್ ಗೆ ಹೊರಟಿದ್ದ ಒಂದು ಬೆಳಿಗ್ಗೆ. ಕುಂದಲಹಳ್ಳಿಯಿಂದ ವೈದೇಹಿಗೆ ಹೋಗಬೇಕಾಗಿತ್ತು.ವೋಲ್ವೋ ಬಸ್ ಗೆ ದಿನವೂ ೭೦ ರೂಪಾಯಿ ಮೀಸಲಿಡಬೇಕು. ಅದಕ್ಕಾಗಿ ಅವತ್ತು ವೋಲ್ವೋ ಬೇಡವೆಂದು ತೀರ್ಮಾನಿಸಿ ಬೇರೆ ಬಸ್ ಹತ್ತಿದ್ದೆ.ವೈದೇಹಿಗೆ ಕುಂದಲಹಳ್ಳಿಯಿಂದ ೧೩ ರೂಪಾಯಿ ಎಂದ ಕಂಡಕ್ಟರ್. ಚಿಲ್ಲರೆ ಇಲ್ಲವೆಂದು ಹತ್ತು ರೂಪಾಯಿಯ ನೋಟೊಂದನ್ನು, ೫ ರೂಪಾಯಿಯ ನಾಣ್ಯವೊಂದನ್ನು ಕೊಟ್ಟೆ. ೨ ರೂಪಾಯಿ ಚಿಲ್ಲರೆ ಕೊಡಬೇಕಾಗಿದ್ದ ನಿರ್ವಾಹಕ ಅದು ದೊಡ್ಡ ಮೊತ್ತವೇ ಅಲ್ಲವೆಂಬಂತೆ ಮುಂದೆ ಹೋದ, "ಯಾರ್ರೀ ಟಿಕೆಟ್ ಅಲ್ಲಿ" ಎಂದೆನ್ನುತ್ತಾ..!
ಮುಂದಿನ ಒಂದು ಸ್ಟಾಪ್ ನಲ್ಲಿ ಹತ್ತಿದ ಮಹಿಳೆಯೊಬ್ಬಳು ೧೦ ರೂಪಾಯಿಯ ಒಂದು ನೋಟ್ ಒಂದನ್ನು ಕೊಟ್ಟು ಎಲ್ಲಿಗೆ ಟಿಕೆಟ್ ಬೇಕೆಂದು ಕೇಳಿದಳು.ಅಲ್ಲಿಗೆ ೧೨ ರೂಪಾಯಿ,ಇನ್ನೆರಡು ರೂಪಾಯಿ ಕೊಡಮ್ಮ ಎಂದು ಕೇಳಿದ ಕಂಡಕ್ಟರ್. ಅವಳು ಇಲ್ಲಿಂದ ಅಲ್ಲಿಗೆ ಹತ್ತೇ ರೂಪಾಯಿ.ಹನ್ನೆರಡಲ್ಲ.! ನಾನು ಇನ್ನೆರಡು ರೂಪಾಯಿ ಕೊಡಲ್ಲ ಎಂದಳು.ಕಂಡಕ್ಟರ್ ಬಿಡುತ್ತಾನೆಯೇ .? ಏನೇನೋ ಒಂದಿಷ್ಟು ಬೈಗುಳಗಳನ್ನು ಬೈದು ಎರಡು ರೂಪಾಯಿ ಕೊಡದಿದ್ದರೆ ಇಳಿ ಕೆಳಗೆ ಎಂದು ಕೂಗಿದ.ಆದರೂ ಅವಳು ಜಗ್ಗಲಿಲ್ಲ.ಅವಳ ಹಟಕ್ಕೆ ಸೊಪ್ಪು ಹಾಕದೆ, ಡ್ರೈವರ್ ಬಸ್ ನಿಲ್ಲಿಸಿ ಕೆಳಗಿಳಿಯಲು ಹೇಳಿದ.ಆ ಮಹಿಳೆ ಕೊನೆಯಲ್ಲಿ ನಿರ್ವಾಹವಿಲ್ಲದೆ ಕೊಡಬೇಕಾಯಿತು.
ನಾನು ಇಳಿಯುವ ವೈದೇಹಿ ಸ್ಟಾಪ್ ಬಂದಿತು. ೨ ರೂಪಾಯಿ ಚಿಲ್ಲರೆ ನನಗೆ ಬರಬೇಕಾಗಿದ್ದುದರಿಂದ ಹೋಗಿ ಕೇಳಿದರೆ, ಕಂಡಕ್ಟರ್ ಎರಡೇ ರೂಪಾಯಿ ಎಂಬ ಅಸಡ್ಡೆಯಿಂದ ಸ್ವಲ್ಪ ಜೋರಾಗೆ ಚಿಲ್ಲರೆ ಇಲ್ಲಾರೀ ಅಂತ ಹೇಳಿಕೊಂಡು ಹೊರಟೇ ಹೋದ. ಬೆಳಿಗ್ಗೆ ಬೆಳಿಗ್ಗೆ ಎರಡು ರೂಪಾಯಿಗೋಸ್ಕರ ಅವನ ಬೈಗುಳ ಕೇಳುವ ಮನಸಿಲ್ಲದೆ, ವೋಲ್ವೋ ಬಸ್ ಹತ್ತಿದ್ದರೆ ಮೂವತ್ತೈದು ಕೊಡಬೇಕಾಗಿತ್ತು, ಇದು ಹದಿನೈದು ರೂಪಾಯಿಯಲ್ಲೇ ಮುಗಿಯಿತು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ.ಆದರೂ ಅವರಿಗೆ ಬರಬೇಕಾಗಿದ್ದ ಎರಡು ರೂಪಾಯಿಗೆ ಅಷ್ಟು ರಾದ್ದಾಂತ ಮಾಡಿದ ಅವರು ನನಗೇಕೆ ಎರಡು ರೂಪಾಯಿ ಕೊಡಲಿಲ್ಲವೋ ತಿಳಿಯಲಿಲ್ಲ.
No comments:
Post a Comment