Wednesday 30 March 2016

ಶಿರಸಿಯನ್ನರಸಿ -ಭಾಗ ೨

ವಿಭೂತಿ ಜಲಪಾತ

ಹಸೆಹಳ್ಳ ನೋಡಿ ನಂತರ ಹೋದದ್ದು ಯಾಣದ ಸಮೀಪವಿರುವ ಇರುವ ವಿಭೂತಿ ಜಲಪಾತ. ಚಿರಪರಿಚಿತವಿದು. ಹಾಗೆಂದೇ ಅಲ್ಲಿಗೆ ಹೋಗುವ ಮೊದಲು ಜನ ತುಂಬಿರುತ್ತಾರೆ ಅಂದುಕೊಂಡಿದ್ದೆ.ನಡೆದು ಸಾಗುವ ದಾರಿ ಹೆಚ್ಚಿರಲಿಲ್ಲ. ಕೆಲವು ನಿಮಿಷಗಳ ದಾರಿ ಸಾಗಿದ ಮೇಲೆ ವಿಭೂತಿ ಜಲಪಾತದ ಎದುರ ನಿಂತಿದ್ದೆವು. ನಮ್ಮಣ್ಣ ಬಿಟ್ಟು ಬೇರೆ ಯಾರೂ ಇರಲಿಲ್ಲ ಆದರೆ ಎಲ್ಲೆಡೆ ಗಾಜಿನ ಒಡೆದ ಬಾಟಲಿಗಳ ಚೂರು, ಪ್ಲಾಸ್ಟಿಕ್ ಚೀಲಗಳು, ಕಾಗದದ ಚೂರುಗಳು ಕಾಣುತ್ತಿದ್ದವು.

ವಿಭೂತಿ ಜಲಪಾತ 

ವಿನಾಯಕ ಜಲಪಾತದಡಿಯಲ್ಲಿ .. 
ಅಲ್ಲಿನ ಗಲೀಜು ನೋಡಿಯೇ ನನಗೆ ಬೇಜಾರಾಗಿತ್ತು . ನೀರಲ್ಲಿ ಆಟವಾಡುವ ಮನಸ್ಸು ಇರಲಿಲ್ಲ . ನನ್ನ ಗೆಳೆಯರೆಲ್ಲ ಪಕ್ಕದಲ್ಲಿದ್ದ ಬಂಡೆಯ ಮೇಲೆ ಹತ್ತಿ ನೀರು ಬೀಳುವ ಜಾಗಕ್ಕೆ ಹೋಗಿ ನಿಂತರು. ಅಲ್ಲಿ ಎಷ್ಟು ಜಾರುತ್ತಿತ್ತು ಎಂದರೆ ನನ್ನ ಕಾಲು ಸಣ್ಣಗೆ ನಡುಗುತಿತ್ತು . ಭಯವಾಗಿ ನಾನು ದೂರದಲ್ಲೇ ಉಳಿದೆ. ಸುತ್ತ ಮುತ್ತ ಒಮ್ಮೆ ತಿರುಗಿ, ಮುಂದೆ ಹರಿದ ಹೊಳೆಯನ್ನು ನೋಡುತ್ತಾ ಕುಳಿತೆ. ಸಂಜೆಯ ಸಮಯವಾಗುತಿತ್ತು. ಮೇಲಿಂದ ಕೆಳಗೆ ಇಳಿಯುವಾಗ ಹರ್ಷ ಜಾರಿ ಬಿದ್ದ. ಬಿದ್ದದ್ದು ಬಂಡೆಯ ಮೇಲೆ. ಅದನ್ನು ನೋಡಿ ಎಷ್ಟು ಗಾಬರಿ ಆಯಿತು ಎಂದರೆ ಈಗಲೂ ಆ ದೃಶ್ಯ ಕಣ್ಣಿಗೆ ಕಟ್ಟಿದಂತೆ ಇದೆ . ಅದೃಷ್ಟವಶಾತ್ ಏನು ಆಗಿರಲಿಲ್ಲ. ಅಲ್ಲಿಂದ ಹೊರಟು  ವಿನಾಯಕನ ಮನೆ ತಲುಪಬೇಕಿತ್ತು ನಾವು. 
ಸೂರ್ಯಾಸ್ತ 
ಸೂರ್ಯ ಅಸ್ತಮಿಸಲು ತನ್ನ ತಯಾರಿ ಮಾಡಿಕೊಳ್ಳುತ್ತಿದ್ದ. ಯಾವುದೋ ಘಾಟಿಯ ಮದ್ಯದಲ್ಲಿ ನಿಂತು ಸೂರ್ಯಾಸ್ತ ನೋಡಿದೆವು. ಶಿರಸಿ ತಲುಪುವಾಗ ರಾತ್ರಿ ಆಗಿತ್ತು. ಅಲ್ಲಿಂದ ಬಿಸಿಲುಕೊಪ್ಪಕ್ಕೆ ಇನ್ನೊಂದು ಬಸ್. ನಂಗೆ ತುಂಬಾ ನಿದ್ರೆ ಬರುತಿತ್ತು. ವಿನಾಯಕನ ಮನೆ ತಲುಪುವಾಗ ೧೦ ಗಂಟೆಯ ಸುಮಾರು. ಎಲ್ಲರ ಜೊತೆ ಮಾತನಾಡುತ್ತಾ ಉಟವಾಯಿತು. ನಾನು ಬೆಚ್ಚಗೆ ಮಲಗಿ ನಿದ್ರೆ ಮಾಡಿದೆ. ಹೊರಗಿಂದ ಅಡಿಕೆ ಒಲೆಯ ಮುಂದೆ ಚಳಿ ಕಾಯಿಸುತ್ತಾ ಎಲ್ಲರೂ  ಮಾತನಾಡುತ್ತಿದ್ದದ್ದು ಕೇಳಿಸುತ್ತಿತ್ತು. 

No comments:

Post a Comment